ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಇಂದು (ಮಾ.8) ಆರಂಭವಾಗಿದ್ದು, ಸತತವಾಗಿ ಏರುತ್ತಿರುವ ಇಂಧನ ಬೆಲೆಗಳ ಕುರಿತು ಚರ್ಚೆ ನಡೆಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಗಾಗಿ ಪ್ರಶ್ನಾವಳಿ ಅವಧಿ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ರಾಜ್ಯಸಭೆಯನ್ನು 10 ಗಂಟೆಗೆ ಮುಂದೂಡಲಾಗಿತ್ತು.
ಮುಂಬರುವ ವಿಧಾನಸಭಾ ಚುನಾವಣೆ, ರೈತರ ಪ್ರತಿಭಟನೆ ಮತ್ತು ಪ್ರಮುಖವಾಗಿ ಏರುತ್ತಿರುವ ತೈಲ ಬೆಲೆ, ಎಲ್ಪಿಜಿ ಬೆಲೆಗಳ ನಡುವೆ ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದೆ.
ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಇಂಧನ ಬೆಲೆ ಏರಿಕೆಯಾಗುತ್ತಿರುವ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. “ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ಕ್ರಮವಾಗಿ ₹100 ಮತ್ತು ₹80 ತಲುಪಿದೆ. ಎಲ್ಪಿಜಿ ಬೆಲೆ ಸಹ ಹೆಚ್ಚಳವಾಗಿದೆ” ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ಪ.ಬಂಗಾಳ: 3 ರೈಲು ಬಾಡಿಗೆಗೆ ಪಡೆದು ಪ್ರಧಾನಿಯ ರ್ಯಾಲಿಗೆ ಜನ ಸೇರಿಸಿದ ಬಿಜೆಪಿ!
“ಅಬಕಾರಿ ಸುಂಕ/ಸೆಸ್ ವಿಧಿಸುವ ಮೂಲಕ ₹21 ಲಕ್ಷ ಕೋಟಿ ಸಂಗ್ರಹಿಸಲಾಗಿದೆ, ಇದರಿಂದಾಗಿ ರೈತರು ಸೇರಿದಂತೆ ಇಡೀ ರಾಷ್ಟ್ರವೇ ಸಂಕಷ್ಟಕ್ಕೆ ಸಿಲುಕಿದೆ” ಎಂದು ಆರೋಪಿಸಿದರು.
ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಸಂಸದರು ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಕಾಂಗ್ರೆಸ್ ಸಂಸದರನ್ನುದ್ದೇಶಿಸಿ, “ಮೊದಲ ದಿನವೇ ತೀವ್ರವಾದ ಕ್ರಮಕೈಗೊಳ್ಳಲು ಇಚ್ಛಿಸುವುದಿಲ್ಲ” ಎಂದು ಹೇಳಿದರು.
ನಂತರ ರಾಜ್ಯಸಭೆ ಕಲಾಪವನ್ನು ಬೆಳಿಗ್ಗೆ 11ರ ವರೆಗೂ ಮುಂದೂಡಲಾಯಿತು. ಮತ್ತೆ ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್ ಸಂಸದರು ಘೋಷಣೆ ಮುಂದುವರಿಸಿದ್ದರಿಂದ ಮಧ್ಯಾಹ್ನ 1ರ ವರೆಗೂ ಸದನದ ಕಲಾಪ ಮುಂದೂಡಲಾಗಿದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಪುರುಷರ ದಿನ ಆಚರಿಸಬೇಕು: ಹೇಳಿಕೆ ನೀಡಿ ಟೀಕೆಗೊಳಗಾದ ಬಿಜೆಪಿ ಸಂಸದೆ!