ಉತ್ತರ ಪ್ರದೇಶದ ಆಗ್ರಾದ ಜರಾರ್ ಪಟ್ಟಣದಲ್ಲಿ ಹುಚ್ಚು ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿ ಮತ್ತು ಆಕೆಯ ತಾಯಿಯನ್ನು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ಪೊಲೀಸರು 5 ತಂಡಗಳನ್ನು ರಚಿಸಿದ್ದಾರೆ.
ಮೃತರನ್ನು ಶಾರದಾ ದೇವಿ (50) ಮತ್ತು ಕಾಮಿನಿ (19) ಎಂದು ಗುರುತಿಸಲಾಗಿದೆ. ಜರಾರ್ ಪಟ್ಟಣದ ನಿವಾಸಿ ಶಾರದಾ ತನ್ನ ಮಗಳೊಂದಿಗೆ ಭಾನುವಾರ ರಾತ್ರಿ ತಮ್ಮ ಮನೆಯಲ್ಲಿ ಮಲಗಿದ್ದರು. ತಡರಾತ್ರಿ ತಮ್ಮದೆ ಗ್ರಾಮದ ನಿವಾಸಿ ಗೋವಿಂದ್ ಎಂಬುವವರು ಮನೆಗೆ ಬಂದು, ಮಲಗಿದ್ದ ಶಾರದಾ ದೇವಿ ಮತ್ತು ಕಾಮಿನಿ ಮೇಲೆ ಚಾಕುವಿನಿಂದ ಮುಖ ಮತ್ತು ಕುತ್ತಿಗೆಗೆ ದಾಳಿ ಮಾಡಿದ್ದಾನೆ.
ಇಬ್ಬರು ಮಲಗಿದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ, ಇಬ್ಬರ ಕೂಗು ಕೇಳಿ ಓಡಿ ಬಂದ ಹಿರಿಯ ಮಗ ರಾಹುಲ್ ಮತ್ತು ಅವರ ಪತ್ನಿ ಮೇಲೂ ಆರೋಪಿ ಗೋವಿಂದ್ ದಾಳಿ ಮಾಡಿ, ಪರಾರಿಯಾಗಿದ್ದಾನೆ. ಯುವತಿಯ ಅತ್ತಿಗೆಗೂ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಪಾತಕ್ಕಿಳಿದ ಉತ್ತರ ಪ್ರದೇಶ ಪರಿಸ್ಥಿತಿ: ಮಗಳ ತಲೆ ಕಡಿದು ರಸ್ತೆಯಲ್ಲಿ ಪ್ರದರ್ಶಿಸಿದ ಕ್ರೂರ ತಂದೆ
ಮನೆಯಲ್ಲಿ ಕೂಗು ಕೇಳಿ, ಇತರ ಗ್ರಾಮಸ್ಥರು ಸೇರುತ್ತಿರುವುದನ್ನು ನೋಡಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಾಯಿ ಮತ್ತು ಮಗಳ ಜೋಡಿ ಕೊಲೆ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಗ್ರಾಮಸ್ಥರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ತಲುಪಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಗೋವಿಂದ್, ಸಂತ್ರಸ್ತ ಕುಟುಂಬದ ನೆರೆ ಮನೆಯವನಾಗಿದ್ದಾನೆ. ಆತ 19 ವರ್ಷದ ಕಾಮಿನಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಲು ಬಯಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜೋಡಿ ಕೊಲೆಯ ಮಾಹಿತಿ ಬಂದ ಕೂಡಲೇ ಸ್ಥಳದಲ್ಲೇ ಎಡಿಜಿ /ಐಜಿ ಆಗ್ರಾ ರೇಂಜ್ ಎ. ಸತೀಶ್ ಗಣೇಶ್, ಎಸ್ಎಸ್ಪಿ ಆಗ್ರಾ ಬಬ್ಲು ಕುಮಾರ್, ಎಸ್ಪಿ ಪೂರ್ವ ಅಶೋಕ್ ವೆಂಕಟ್ ಸೇರಿದಂತೆ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ.
ಅದೇ ಸಮಯದಲ್ಲಿ, ವಿಧಿವಿಜ್ಞಾನ ಮತ್ತು ಶ್ವಾನ ದಳದ ತಂಡವು ಸ್ಥಳಕ್ಕೆ ತಲುಪಿ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಪೊಲೀಸರು ಇಬ್ಬರ ಶವಗಳನ್ನು ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಗೋವಿಂದ್ನನ್ನು ಬಂಧಿಸಲು 5 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ಗೋವಿಂದ್ ಯುವತಿ ಕಾಮಿನಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಇಬ್ಬರ ಗೆಳತನದಿಂದ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿತ್ತು. ಆರೋಪಿ ಪ್ರೀತಿಸುತ್ತಿದ್ದ ಕಾಮಿನಿ ಎರಡು ವಾರಗಳ ಹಿಂದೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಈ ವಿಷಯದಿಂದ ಕೋಪಗೊಂಡಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಮಹಿಳೆಯರ ಗೌರವದ ಬದುಕಿಗಾಗಿ ಜಾಗೃತಿ ಮೂಡಿಸುವ ರಾಯಚೂರಿನ ಚಿನ್ನಮ್ಮ