ದುಡಿಯುವ ವರ್ಗದ ಜನರು, ರೈತರು ಮತ್ತು ಕಾರ್ಮಿಕರನ್ನು ಬೀದಿಗೆ ತಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ನೀಡಿದ್ದ ಎಲ್ಲಾ ಭರವಸೆಗಳನ್ನು ಮರೆತು, ಕೇವಲ ಗ್ಯಾರಂಟಿ ಯೋಜನೆಗಳಲ್ಲೇ ತೇಲಾಡುತ್ತಿದೆ ಎಂದು ರೈತ ಹೋರಾಟಗಾರ ಬಸವರಾಜಪ್ಪ ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ‘ದುಡಿಯುವ ಜನರ ಮಹಾಧರಣಿ’ಯಲ್ಲಿ ಮಾತನಾಡಿದ ಅವರು, ” ಮೋದಿ ಸರ್ಕಾರ ಬಡವರ ವಿರೋಧಿ, ಬಂಡವಾಳಶಾಹಿ ಪರವಾದ ನೀತಿಗಳನ್ನು ಜಾರಿಗೆ ತಂದು ಅಸಮಾನತೆಯನ್ನು ಸೃಷ್ಠಿ ಮಾಡಿದೆ. ಅಸಮಾನತೆ ತೊರೆದು ಸಮಾನತೆ, ಸಮತಾವಾದ ಆಶಯದೊಂದಿಗೆ ದೇಶದ ಜನರು ಬದುಕಬೇಕೆಂಬ ಆಶಯ ಸ್ವಾತಂತ್ರ್ಯ ಹೋರಾಟದ್ಧಾಗಿತ್ತು. ಅದರೆ, ಇಂದಿನ ಸರ್ಕಾರ ಸ್ವಾತಂತ್ರ್ಯದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ” ಎಂದರು.
ವಿದ್ಯುತ್ ಖಾಸಗೀಕರಣ ನೀತಿಯನ್ನು ಜಾರಿಗೆ ತರಲ್ಲವೆಂದು ಲಿಖಿತವಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಈಗ ತನ್ನ ಮಾತನ್ನು ತಪ್ಪುತ್ತಿದೆ. ಕೇಂದ್ರವು ರಾಮ ಮಂದಿರದ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದೆ. 2014ರಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದಿದ್ದರು. ಈಗ ಅದನ್ನು ಉದ್ಘಾಟನೆ ಮಾಡ್ತೀವಿ, ಉಚಿತವಾಗಿ ಅಯೋಧ್ಯೆಗೆ ಕರೆದುಕೊಂಡು ಹೋಗ್ತಿವಿ ಎಂದು ಹೇಳಿಕೊಳ್ಳುತ್ತಿದೆ. ಮಂದಿರ ಕಟ್ಟುವುದರಿಂದ ರೈತರ, ಬಡವರ ಸಮಸ್ಯೆಗಳ ಪರಿಹಾರ ಆಗುತ್ತವೆ ಎನ್ನುವುದಾದರೆ ಜಿಲ್ಲೆಗೊಂದು, ತಾಲೂಕಿಗೊಂದು ಮಂದಿರ ಕಟ್ಟಬಹುದು. ಆದರೆ, ಮಂದಿರ ಕಟ್ಟುವುದರಿಂದ ಸಂಪತ್ತು ಸೃಷ್ಟಿಯಾಗುವುದಿಲ್ಲ. ದೇಶದ ಜನರ ದುಡಿಮೆಯಿಂದ ಸಂಪತ್ತು ಬರುತ್ತದೆ. ಆ ಸಂಪತ್ತು ಮೋದಿ ಸ್ನೇಹಿತರ ಬಳಿ ಕ್ರೋಢೀಕರಣ ಆಗುತ್ತದೆ” ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಜನರನ್ನು ಬೀದಿ ಪಾಲು ಮಾಡುವಂತಹ ನೀತಿಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಕಳೆದ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ಮುಂದೆ 35 ಹಕ್ಕೊತ್ತಾಯಗಳನ್ನು ಸಂಯುಕ್ತ ಹೋರಾಟ ಸಮಿತಿ ಮುಂದಿಟ್ಟಿತ್ತು. ಅವುಗಳನ್ನು ತಮ್ಮ ಭರವಸೆಗಳಲ್ಲಿ ಸೇರಿಸಿಕೊಳ್ಳುವವರಿಗೆ ಮತವೆಂದು ಕರೆ ಕೊಟ್ಟಿತ್ತು. ನಮ್ಮ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಬಂದು ಆರು ತಿಂಗಳಾಗಿವೆ. ಅದರೂ, ರೈತ, ಕಾರ್ಮಿಕ, ದಲಿತ, ಯುವಜನ ವಿರೋಧಿ ನೀತಿಗಳನ್ನು ಹಿಂಪಡೆಯುವಲ್ಲಿ, ಜನಪರ ನೀತಿಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇವಲ ಗ್ಯಾರಂಟಿ ಯೋಜನೆಗಳಲ್ಲೇ ತೇಲಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರ ಉಂಟಾಗಿದೆ. ಇನ್ನೂ ಬರ ಪರಿಹಾರ ನೀಡಿಲ್ಲ. ಒಂದು ಹೆಕ್ಟೇರ್ಗೆ ಕನಿಷ್ಠ 40,000 ರೂ. ಪರಿಹಾರ ನೀಡಬೇಕು. ರೈತರು, ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಿ, ಆಯಾ ಗ್ರಾಮಗಳಲ್ಲಿ ಉದ್ಯೋಗ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು. ಜಾತಿ ಪ್ರಮಾಣ ಪತ್ರ, ಪಹಣಿ, ಆದಾಯ ದೃಢೀಕರಣ ಪತ್ರ ಪಡೆಯಲು ಶುಲ್ಕವನ್ನು ಹೆಚ್ಚಿಸಲಾಗಿದೆ. ಅದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ರಾಮಮಂದಿರ ತೆರೆದ ತಕ್ಷಣ ಮತ್ತೆ ಅಧಿಕಾರಕ್ಕೆ ಬರ್ತೀವಿ ಅಂತ ಬಿಜೆಪಿ ಭಾವಿಸಿದೆ. ಅದರೆ, ಅವರು ಜನರನ್ನು ಕಡೆಗಣಿಸಿದರೆ ಅವರಿಗೆ ರಾಜ್ಯದಲ್ಲಾದ ಪರಿಸ್ಥಿತಿಯೇ ಎದುರಾಗುತ್ತದ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : 2024ರಲ್ಲಿ ಬಿಜೆಪಿ ಗೆದ್ದರೆ ಭಾರತ ಸೋಲುತ್ತದೆ: ಬಡಗಲಪುರ ನಾಗೇಂದ್ರ


