ಮೊಗಲ್ ದೊರೆ ಔರಂಗಜೇಬ್ ಕುರಿತು ಹೇಳಿಕೆ ನೀಡಿದ್ದಕ್ಕೆ ಮಹಾರಾಷ್ಟ್ರದ ವಿಧಾನಸಭೆಯಿಂದ ಸಮಾಜವಾದಿ ಪಕ್ಷದ (ಎಸ್ಪಿ) ಶಾಸಕ ಅಬೂ ಅಝ್ಮಿ ಅವರನ್ನು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ಅಂತ್ಯದವರೆಗೆ ಅಮಾನತುಗೊಳಿಸಲಾಗಿದೆ.
ಕಳೆದ ವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾಸಕ ಅಝ್ಮಿ, “ಔರಂಗಜೇಬ್ರನ್ನು ಒಬ್ಬ ಕ್ರೂರ ಆಡಳಿತಗಾರ ಎಂದು ನೋಡಬಾರದು, ಬದಲಾಗಿ ದೇವಾಲಯಗಳನ್ನು ನಿರ್ಮಿಸಿದ ಮಹಾನ್ ಆಡಳಿತಗಾರ ಎಂದು ನೋಡಬೇಕು. ಔರಂಗಜೇಬರ ಆಳ್ವಿಕೆಯಲ್ಲಿ, ಭಾರತದ ಗಡಿ ಅಫ್ಘಾನಿಸ್ತಾನ ಮತ್ತು ಬರ್ಮಾವರೆಗೆ (ಈಗ ಮ್ಯಾನ್ಮಾರ್) ವಿಸ್ತರಿಸಿತ್ತು” ಎಂದು ಹೇಳಿದ್ದರು.
ಅಲ್ಲದೆ, “ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ಔರಂಗಜೇಬ್ ನಡುವಿನ ಯುದ್ಧವು ಧರ್ಮದ ವಿಷಯಕ್ಕೆ ನಡೆದಿರುವುದು ಎಂದು ನಾನು ನಂಬುವುದಿಲ್ಲ; ಅದೊಂದು ರಾಜಕೀಯ ಯುದ್ಧವಾಗಿತ್ತು” ಎಂದಿದ್ದರು.
ತನ್ನ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ್ದ ಅಝ್ಮಿ, “ಇತಿಹಾಸಕಾರರು ಏನು ಹೇಳಿದ್ದಾರೋ, ಅದನ್ನೇ ನಾನು ಹೇಳಿದ್ದೇನೆ. ಅದು ಛತ್ರಪತಿ ಶಿವಾಜಿ ಮಹಾರಾಜ್ ಅಥವಾ ಸಂಭಾಜಿ ಮಹಾರಾಜ್ ವಿರುದ್ಧ ನೀಡಿದ್ದ ಹೇಳಿಕೆಯಾಗಿರಲಿಲ್ಲ” ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಅಝ್ಮಿಯ ಹೇಳಿಕೆಯನ್ನು ಖಂಡಿಸಿದ್ದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ‘ಅಝ್ಮಿ ದೇಶದ್ರೋಹಿ’ ಎಂದಿದ್ದರು.
“ಅಝ್ಮಿ ಒಬ್ಬರು ದೇಶದ್ರೋಹಿ. ಅವರಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ. ಅವರು ಯಾವಾಗಲೂ ಛತ್ರಪತಿ ಶಿವಾಜಿ ಮತ್ತು ಸಂಭಾಜಿ ಮಹಾರಾಜರನ್ನು ಅವಮಾನಿಸುತ್ತಲೇ ಬಂದಿದ್ದಾರೆ” ಎಂದು ಶಿಂಧೆ ಕಿಡಿಕಾರಿದ್ದರು.
ಮಂಖುರ್ದ್-ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಝ್ಮಿ “ಛಾವಾ ಸಿನಿಮಾ’ಗೆ ಸಂಬಂಧಿಸಿದಂತೆ ನಾನು ಹೇಳಿಕೆ ನೀಡಿದ್ದೇನೆ ಎಂದರೂ, ಅವರ ವಿರುದ್ದ ಬಿಎನ್ಎಸ್ ಕಾಯ್ದೆಯಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಮಾನನಷ್ಠೆ ಮೊಕದ್ದಮೆ” ದಾಖಲಿಸಲಾಗಿದೆ.
ಅಬೂ ಅಝ್ಮಿ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿರುವ ಕುರಿತು ಮಾತನಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ತಮ್ಮ ಪಕ್ಷದ ನಾಯಕನ ವಿರುದ್ಧದ ಕ್ರಮವು ‘ಸತ್ಯವನ್ನು ಮೌನಗೊಳಿಸುವ’ ಪ್ರಯತ್ನವಾಗಿದೆ ಎಂದಿದ್ದಾರೆ.
“ಸಿದ್ದಾಂತದ ವಿಚಾರಕ್ಕೆ ಅಮಾನತು ಮಾಡುವುದಾದರೆ ವಾಕ್ ಸ್ವಾತಂತ್ರ್ಯ ಮತ್ತು ತಲೆ ಬಾಗುವುದರ ನಡುವೆ ಏನು ವ್ಯತ್ಯಾಸ ಇರಲಿದೆ? ನಮ್ಮ ಶಾಸಕರು ನಿರ್ಭೀತ ಬುದ್ದಿವಂತರು. ಅಮಾನತು ಸತ್ಯವನ್ನು ಮೌನಗೊಳಿಸಬಹುದು ಎಂದುಕೊಂಡರೆ, ಅದು ಅವರ ಅಪ್ರಭುದ್ದತೆಯಷ್ಟೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.


