ಹೋರಾಟಗಾರ್ತಿ ಸುಧಾ ಭಾರದ್ವಾಜ್ರವರಿಗೆ ಬಾಂಬೆ ಹೈಕೋರ್ಟ್ ನೀಡಲಾದ ಡೀಫಾಲ್ಟ್ ಜಾಮೀನನ್ನು ಪ್ರಶ್ನಿಸಿ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗಾಗಿ ಸುಧಾ ಭಾರದ್ವಾಜ್ರವರು ಡೀಫಾಲ್ಟ್ ಜಾಮೀನಿಗೆ ಅರ್ಹರಾಗಿದ್ದು ನಾಳೆ ಬೈಕುಲ್ಲಾ ಮಹಿಳಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಬಂಧನವಾಗಿ ಮೂರು ವರ್ಷಗಳು ಕಳೆದರೂ ಪೊಲೀಸರು ಯಾವುದೆ ದೋಷಾರೋಪ ಪಟ್ಟಿಯನ್ನು ಸಲ್ಲಿಸದೇ ಇರುವ ಕಾರಣ ಭೀಮಾ ಕೊರೆಗಾಂವ್ – ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ, ವಕೀಲೆ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಕಳೆದ ವಾರ ಡೀಫಾಲ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಅದನ್ನು ಪ್ರಶ್ನಿಸಿ ಎನ್ಐಎ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬಾಂಬೆ ಹೈಕೋರ್ಟ್ ನೀಡಿದ ಜಾಮೀನಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ಜೆ ಜಾಮದಾರ್ರವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ತನಿಖೆಗಾಗಿ ಒದಗಿಸಲಾದ ಗರಿಷ್ಠ ಅವಧಿ ಮುಗಿದ ನಂತರವೂ ಪೊಲೀಸರು ಯಾವುದೇ ಆರೋಪ ಪಟ್ಟಿಯನ್ನು ಸಲ್ಲಿಸದಿದ್ದರೆ, ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹನಾಗುತ್ತಾರೆ. ಇನ್ನು ಡೀಫಾಲ್ಟ್ ಜಾಮೀನು ಎಂದು ಕರೆಯುತ್ತಾರೆ.
ಡಿಸೆಂಬರ್ 8 ರಂದು ಮುಂಬೈನ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ಮುಂದೆ ತನ್ನ ಜಾಮೀನಿನ ಷರತ್ತುಗಳ ನಿರ್ಧಾರಕ್ಕಾಗಿ ಸುಧಾ ಭಾರದ್ವಾಜ್ರವರು ಹಾಜರಾಗಬೇಕಾಗುತ್ತದೆ. ಇದರ ನಂತರ ಬೈಕುಲ್ಲಾ ಮಹಿಳಾ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಗುತ್ತದೆ.
ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಸುಧಾ ಭಾರದ್ವಾಜ್ರವರು ನವೆಂಬರ್ 26, 2018 ರಂದು ಡೀಫಾಲ್ಟ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ವಿರುದ್ಧ ಫೆಬ್ರವರಿ 21, 2019 ರಂದು ಚಾರ್ಜ್ಶೀಟ್ ಸಲ್ಲಿಸಲಾಯಿತು. ಹಾಗಾಗಿ ಅವರಿಗೆ ಜಾಮೀನು ಲಭ್ಯವಾಗಿದೆ.
ಭೀಮಾ ಕೋರೆಂಗಾವ್ ಪ್ರಕರಣದಲ್ಲಿ ಬಂಧಿತರಾದ 16 ಹೋರಾಟಗಾರರಲ್ಲಿ ಸುಧಾ ಭಾರದ್ವಾಜ್ ಡೀಫಾಲ್ಟ್ ಜಾಮೀನು ಪಡೆದ ಮೊದಲಿಗರಾಗಿದ್ದಾರೆ.
ಮೇ 2019ರಲ್ಲಿ ಅಂದರೆ ಚಾರ್ಜ್ಶೀಟ್ ಸಲ್ಲಿಸಿದ ನಂತರ ಜಾಮೀನಿಗೆ ಅರ್ಜಿ ಹಾಕಿದ ವರವರರಾವ್, ಅರುಣ್ ಫೆರಾರ, ವೆರ್ನನ್ ಗೊನ್ಸಾಲ್ವ್ಸ್ ರವರಿಗೆ ಜಾಮೀನು ನೀಡಲಾಗಿಲ್ಲ. ಆದರೆ ವರವರರಾವ್ರವರು ತಮ್ಮ ಅನಾರೋಗ್ಯದ ಕಾರಣಕ್ಕೆ ಡಿಸೆಂಬರ್ 06ರವರೆಗೆ ಜಾಮೀನು ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಮುಸ್ಲಿಂ ಯುವಕನಿಗೆ ಥಳಿತ, ಮೂತ್ರ ಕುಡಿಸಲು ಒತ್ತಾಯ ಆರೋಪ: ಸಬ್ ಇನ್ಸ್ಪೆಕ್ಟರ್ ಅಮಾನತು
ಇದು ಸ್ವಾಗತಾರ್ಹ. ಬೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂದಿತರಾಗಿರುವ ಎಲ್ಲರನ್ನೂ ಸರ್ಕಾರ ಈ ಕೂಡಲೇ ಬಿಡುಗಡೆ ಮಾಡಬೇಕು.