Homeಅಂತರಾಷ್ಟ್ರೀಯರಫೇಲ್ ರಾದ್ಧಾಂತ: ಮೋದಿ ಭವಿಷ್ಯದ ಮೇಲೆ `ಸುಪ್ರೀಂ' ಹೊಸ ತೀರ್ಪಿನ ಪರಿಣಾಮ ಹೇಗಿರಲಿದೆ ಗೊತ್ತಾ?

ರಫೇಲ್ ರಾದ್ಧಾಂತ: ಮೋದಿ ಭವಿಷ್ಯದ ಮೇಲೆ `ಸುಪ್ರೀಂ’ ಹೊಸ ತೀರ್ಪಿನ ಪರಿಣಾಮ ಹೇಗಿರಲಿದೆ ಗೊತ್ತಾ?

- Advertisement -
- Advertisement -
| ಗಿರೀಶ್ ತಾಳಿಕಟ್ಟೆ |
ಸುಪ್ರೀಂ ಕೋರ್ಟ್ ರಫೇಲ್ ವ್ಯವಹಾರದ ಕುರಿತು ಮಹತ್ವದ ತೀರ್ಪು ಹೊರಹಾಕಿದೆ. ತಮ್ಮನ್ನು ನೇರ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಷ್ಟು ಸಮರ್ಥವಾಗಿರುವ, ಯಾವ ದಾಖಲೆಗಳ ವಿರುದ್ಧ ಕೇಂದ್ರ ಸರ್ಕಾರ ತನ್ನ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಮೂಲಕ ‘ಕದ್ದ ದಾಖಲೆ’ಗಳು ಎಂದು ಆರೋಪಿಸಿತ್ತೊ ಆ ಮೂರೂ ದಾಖಲೆಗಳನ್ನು ಸರ್ವೋಚ್ಛ ನ್ಯಾಯಾಲಯ ಗಂಭೀರ ‘ಸಾಕ್ಷ್ಯ’ಗಳಾಗಿ ಪರಿಗಣಿಸಲು ನಿರ್ಧರಿಸಿದೆ. ಇದರಿಂದಾಗಿ 2018ರ ಡಿಸೆಂಬರ್ 14ರಂದು ‘ಮುಚ್ಚಿದ ಲಕೋಟೆ’ಯೊಳಗಿನ ಮಾಹಿತಿಯನ್ನು ಆಧರಿಸಿ ತಾನೇ, ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿದ್ದ ರಫೇಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆಗೆತ್ತಿಕೊಳ್ಳಲು ಮುಂದಾಗಿದೆ.

ಸಹಜವಾಗಿಯೇ ಇದು, ಸರ್ಕಾರಕ್ಕೆ ಮುಖ್ಯವಾಗಿ ನರೇಂದ್ರ ಮೋದಿಯವರಿಗೆ ಎರಡು ಕಾರಣಗಳಿಂದ ದೊಡ್ಡ ಹಿನ್ನಡೆ. ಮೊದಲನೆಯದು, ಕಾಂಗ್ರೆಸ್ ಮತ್ತು ದೂರುದಾರರು ಆರಂಭದಿಂದಲೂ ಆರೋಪಿಸುತ್ತಿರುವಂತೆ ದೇಶದ ಬೊಕ್ಕಸಕ್ಕೆ ಸುಮಾರು ಅರವತ್ತು ಸಾವಿರ ಕೋಟಿ ಲುಕ್ಸಾನು ಮಾಡಿದ ಈ ಹಗರಣದಲ್ಲಿ ಮೋದಿಯವರ ಕೈವಾಡ ಸಾಬೀತಾದರೆ ಅವರು ವೈಯಕ್ತಿಕವಾಗಿ ನ್ಯಾಯಾಂಗದ ಸಂಕಟಕ್ಕೆ ಈಡಾಗಬೇಕಾಗುತ್ತದೆ. ಎರಡನೆಯದು, ಇದು ಸಾರ್ವತ್ರಿಕ ಚುನಾವಣೆ ಸಮಯವಾಗಿರೋದರಿಂದ ಇಂಥಾ ಸಂದರ್ಭದಲ್ಲಿ ಹೊರಬಿದ್ದಿರುವ ಈ ಸುಪ್ರೀಂ ತೀರ್ಪು ಬಿಜೆಪಿಯನ್ನು ಮುತ್ತಿರುವ ಗಂಭೀರ ಆರೋಪವೊಂದರ ಗುಮಾನಿಯನ್ನು ಜನರ ಮನಸ್ಸಲ್ಲಿ ಮತ್ತಷ್ಟು ದಟ್ಟವಾಗಿಸಲಿದೆ. ಇದು ಫಲಿತಾಂಶದ ಮೇಲೆ ಖಂಡಿತ ಪ್ರಭಾವ ಬೀರಬಲ್ಲದು. ಅದಕ್ಕಿಂತಲೂ ಮುಖ್ಯವಾಗಿ, ಈ ಚುನಾವಣೆಯಲ್ಲಿ ಸಾಕಷ್ಟು ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿರುವ ಬಿಜೆಪಿ ವಲಯವನ್ನು ಇದು ಇನ್ನಷ್ಟು ಅಧೀರರನ್ನಾಗಿಸುವ ಸಾಧ್ಯತೆ ಇದೆ.

ಇದೇ ಏಪ್ರಿಲ್ 4ರಂದು, ಬಿಜೆಪಿಯ ಮಾತೃಭೂಮಿಯಾದ ನಾಗ್ಪುರದ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರು ‘ತಾವು ಅಧಿಕಾರಕ್ಕೆ ಬಂದದ್ದೇ ಆದಲ್ಲಿ, ರಫೇಲ್ ಹಗರಣವನ್ನು ವಿಚಾರಣೆಗೊಳಪಡಿಸಿ ಮೋದಿಯವರನ್ನು ಜೈಲಿಗೆ ಕಳಿಸುತ್ತೇವೆ’ ಎಂಬ ಹೇಳಿಕೆ ನೀಡಿದ್ದರು. ಇದಾದ ನಂತರ ಮೋದಿಯವರು ಹಲವು ಚುನಾವಣಾ ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕದ್ದೇ ನೆಲದಲ್ಲಿ ಭಾಷಣ ಮಾಡಿದ್ದಾರೆ. ಅಲ್ಲೆಲ್ಲ ತಮ್ಮ ಯಥಾ ಧಾಟಿಯ ಹಿಂದೂತ್ವ, ಪಾಕಿಸ್ತಾನ, ಭಯೋತ್ಪಾದನೆ, ಸೈನಿಕರು ಎಂಬ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆಯೇ ವಿನಾಃ ರಾಹುಲ್ ಮಾಡಿದ ಗಂಭೀರ ಸ್ಟೇಟ್‌ಮೆಂಟ್‌ಗೆ ತಿರುಗೇಟು ನೀಡಲಿಲ್ಲ. ಮೋದಿ ಮಾತ್ರವಲ್ಲ, ಬಿಜೆಪಿಯ ಯಾವ ನಾಯಕರೂ ತಮ್ಮ ಪರಮೋಚ್ಛ ನಾಯಕನನ್ನು ಜೈಲಿಗಟ್ಟುವ ಗಂಭೀರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಇನ್ನು ರಾಹುಲ್ ಹೇಳಿಕೆಯ ಮಾರನೇ ದಿನವೇ ಎಬಿಪಿ ನ್ಯೂಸ್ ಚಾನೆಲ್‌ಗೆ ಮೋದಿಯವರು ಒಂದು ಅಪರೂಪದ(!) ಸಂದರ್ಶನ ಕೊಟ್ಟರು. ಆ ಸಂದರ್ಶನದ ವೈಖರಿಯನ್ನು ಗಮನಿಸಿದವರು ಸಂದರ್ಶನದ ಪತ್ರಿಕೋದ್ಯಮ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಿದ್ದಾರಾದರು, ನೆಪಕ್ಕೂ ಸಹಾ ಅಲ್ಲಿ ರಫೇಲ್ ಪ್ರಶ್ನೆ, ರಾಹುಲ್ ಕಮೆಂಟ್ ನುಸುಳಲೇ ಇಲ್ಲ. ಇದರಿಂದ ಒಂದು ಅಂಶವಂತೂ ಸ್ಪಷ್ಟವಾಗುತ್ತದೆ, ಏನೆಂದರೆ ಈ ಚುನಾವಣೆಯ ಸಂದರ್ಭದಲ್ಲಿ ಯಾವ ಕಾರಣಕ್ಕೂ ರಫೇಲ್ ಚರ್ಚೆಯನ್ನು ಬೆಳೆಸದಿರಲು ಬಿಜೆಪಿ ದೃಢವಾಗಿ ನಿರ್ಧರಿಸಿದೆ. ಆರೋಪ-ಪ್ರತ್ಯಾರೋಪಗಳು ಮುಗಿಲುಮುಟ್ಟಬೇಕಾದ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ರಫೇಲ್ ಚರ್ಚೆಯನ್ನು isolate ಮಾಡಲು ಯತ್ನಿಸುತ್ತಿರುವುದು ಯಾಕಿರಬಹುದು?
ಈ ಪ್ರಕರಣವನ್ನು ಸಿಬಿಐ ಮತ್ತು ನ್ಯಾಯಾಲಯದ ಕಟಕಟೆಗೆ ಒಯ್ದಿರುವ ಬಿಜೆಪಿಯ ಹಿರಿಯ ನಾಯಕರುಗಳಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಸುಪ್ರೀಂಕೋರ್ಟ್‌ನ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಗೂ ರಫೇಲ್ ವ್ಯವಹಾರದ ಮೇಲೆಬಿದ್ದು ದಿನಕ್ಕೊಂದು ಅಚ್ಚರಿ ಹೊರಗೆಡವುತ್ತಿರುವ ‘ದಿ ಹಿಂದೂ’ ಪತ್ರಿಕೆಯ ಆತ್ಮವಿಶ್ವಾಸ ಮತ್ತು ಬದ್ಧತೆಯನ್ನು ಗಮನಿಸಿದರೆ ಪ್ರಧಾನಿಯವರು ಮತ್ತು ಅವರ ಆಪ್ತರು ಈ ಕೇಸಿನಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಸಮರ್ಥ ಪುರಾವೆಗಳನ್ನು ಒಟ್ಟಾಗಿಸಿಕೊಂಡೇ ಹೋರಾಟಕ್ಕಿಳಿದಂತೆ ಕಾಣುತ್ತಿದೆ. ರಕ್ಷಣಾ ಇಲಾಖೆಯ ಒಪ್ಪಂದದಕ್ಕು ಪ್ರಧಾನಿಯವರು ಹಸ್ತಕ್ಷೇಪ ಮಾಡಿದ್ದಾಗಲಿ, ಅನುಭವಿ ಎಚ್.ಎ.ಎಲ್. ಅನ್ನು ಹೊರಗಿಟ್ಟು ಆಗಷ್ಟೇ ಹುಟ್ಟಿಕೊಂಡ ಗೆಳೆಯ ಅನಿಲ್ ಅಂಬಾನಿಯ ರಿಲಾಯನ್ಸ್ ಏರೋಸ್ಟ್ರಕ್ಚರ್ ಲಿಮಿಟೆಡ್ ಕಂಪನಿಗೆ ಆಫ್‌ಸೆಟ್ ಪಾಲುದಾರನ ಸ್ಥಾನ ಸಿಗುವಂತೆ ಮಾಡಿದ್ದಾಗಲಿ, ತಂತ್ರಜ್ಞಾನ ಸಮೇತ 126 ಯುದ್ಧ ವಿಮಾನಗಳನ್ನು ತಲಾ ಅಂದಾಜು 550-600 ಕೋಟಿಗೆ ಖರೀದಿಸಲು ಯುಪಿಎ ಮಾಡಿಕೊಳ್ಳು ಅಂತಿಮಗೊಳಿಸಿದ್ದ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿ ಕೇವಲ 36 ವಿಮಾನಗಳನ್ನು ಅದೂ ತಂತ್ರಜ್ಞಾನವಿಲ್ಲದೆ ಮೂರುಪಟ್ಟು ಹೆಚ್ಚು ಹಣ ತೆತ್ತು ಕೊಂಡುಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾಗಲಿ, ಫ್ರಾನ್ಸ್‌ನ ಡೆಸ್ಸಾಲ್ಟ್ ಕಂಪನಿಯಿಂದ ಬ್ಯಾಂಕ್ ಖಾತ್ರಿ ಅಥವಾ ಆ ದೇಶದ ‘ಸಾವರೀನ್ ಗ್ಯಾರಂಟಿ’ಯನ್ನೂ ಪಡೆದುಕೊಳ್ಳದೆ ದೇಶದ ಬೊಕ್ಕಸಕ್ಕೆ ಲುಕ್ಸಾನು ಮಾಡಿದ್ದಾಗಲಿ…. ಹೀಗೆ ಯಾವಯಾವ ಆರೋಪಗಳನ್ನು ದೂರುದಾರರು ಲಿಖಿತ ರೂಪದಲ್ಲಿ ದಾಖಲಿಸಿದ್ದಾರೊ ಅವುಗಳೆಲ್ಲವನ್ನೂ ಅವರು ದಾಖಲೆಸಹಿತ ಜನರ ಮುಂದಿಡುತ್ತಿದ್ದಾರೆ ಮತ್ತು ಅವೇ ದಾಖಲೆಗಳನ್ನು ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ಹಾಗಾಗಿ ರಫೇಲ್ ಹಗರಣದ ಆರೋಪ ಗಾಳಿಯಲ್ಲಿ ಕಲ್ಲು ಎಸೆದಂತ ಒಂದು ಬೇಕಾರ್ ಆರೋಪವಾಗಿರದೆ ಒಂದು ವ್ಯವಸ್ಥಿತ ಆರೋಪವಾಗಿದೆ. ಇದು ಬಿಜೆಪಿಗೆ ಮನದಟ್ಟಾಗಿರುವುದರಿಂದಲೇ, ಚರ್ಚೆ ಬೆಳೆಸಿ ಖೆಡ್ಡಾಕ್ಕೆ ಬೀಳುವ ಬದಲು, ಆ ಬಗ್ಗೆ ಬರುವ ಎಂಥದೇ ಗಂಭೀರ ಹೇಳಿಕೆಗೂ ಪ್ರತ್ಯುತ್ತರ ನೀಡಬಾರದು ಎಂದು ಬಿಜೆಪಿ ನಿರ್ಧರಿಸಿಕೊಂಡಿದೆಯಾ ಎಂಬ ಅನುಮಾನ ಖಂಡಿತ ಕಾಡುತ್ತದೆ.
ಕೇವಲ ನ್ಯಾಯಾಲಯದ ಅಂಗಳದ ಹೋರಾಟ ಮಾತ್ರವಾಗಿರದೆ ‘ರಫೇಲ್’ ಜನರ ನಡುವಿನ ಟ್ರೆಂಡಿಂಗ್ ಚರ್ಚೆಯಾಗಿ ಬೆಳೆದಿರುವುದು ಸಹಾ ಬಿಜೆಪಿಯನ್ನು ಕಂಗಾಲು ಮಾಡಿರಲಿಕ್ಕೆ ಸಾಕು. ರಾಜಸ್ಥಾನದ ಪೋಖ್ರಾನ್‌ನಲ್ಲಿ ರಾಹುಲ್ ಗಾಂಧಿಯವರು ರಫೇಲ್ ಹಗರಣವನ್ನು ಪರಿಗಣಿಸಿ ಮೊದಲ ಬಾರಿ ಉಲ್ಲೇಖಿಸಿದ ‘ಚೌಕಿದಾರ್ ಚೋರ್ ಹೈ’ ಸ್ಲೋಗನ್ ಯಾವ ಪರಿ ಜನರ ನಡುವೆ ವ್ಯಾಪಿಸಿದೆಯೆಂದರೆ, ಇದನ್ನು ಮಟ್ಟಹಾಕುವುದಕ್ಕೆಂದೇ ವ್ಯಾಪಕ ಐಟಿ ಜಾಲ ಮತ್ತು ಪೇಯ್ಡ್ ಮೀಡಿಯಾಗಳ ನೆರವಿನಿಂದ ಮೋದಿಯವರು ಕರೆಕೊಟ್ಟ ‘ಮೈ ಭೀ ಚೌಕಿದಾರ್’ ಅಭಿಯಾನ ಕೂಡಾ ಬಿಜೆಪಿ ಮತ್ತು ಸಂಘ ಪರಿವಾರದ ವ್ಯಾಪ್ತಿ ಬಿಟ್ಟು ಹೊರಬರಲಿಲ್ಲ. ಸ್ವತಃ ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿಯೇ ‘ನಾನು ಬ್ರಾಹ್ಮಣ. ಚೌಕಿದಾರನಾಗುವುದಿಲ್ಲ’ ಎಂದದ್ದು ಮೋದಿಯವರ ಅಭಿಯಾನಕ್ಕೆ ದೊಡ್ಡ ಹಿನ್ನಡೆ ಮಾತ್ರವಲ್ಲ, ಆ ಅಭಿಯಾನದ ಯಶಸಿನ ಮಿತಿಯನ್ನೂ ತೋರಿಸುವಂತಿತ್ತು. ಇದಕ್ಕೆ ಪ್ರತಿಯಾಗಿ ‘ಚೌಕಿದಾರ್ ಚೋರ್ ಹೈ’ ಕೂಗು ಈಗ ನಡೆಯುತ್ತಿರುವ ಐಪಿಎಲ್ ಕ್ರೀಡಾಂಗಣಗಳಲ್ಲೂ ಮೊಳಗುತ್ತಿದೆ. ಈ ಎಲ್ಲಾ ಕಾರಣಗಳಿಂದ ರಫೇಲ್ ಚರ್ಚೆಯಿಂದ ಬಿಜೆಪಿ ದೂರವುಳಿಯಲು ಯತ್ನಿಸುತ್ತಿರುವಂತಿದೆ.
ಆದರೆ ಸುಪ್ರೀಂ ಕೋರ್ಟ್‌ನ ಹೊಸ ತೀರ್ಪು ಆ ರಫೇಲ್ ವಿವಾದವನ್ನು ಚುನಾವಣೆಯ ನಡುವೆ ಚರ್ಚೆಗೆ ತರಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಚುನಾವಣಾ ರಾಜಕಾರಣದಲ್ಲಿ ಮೋದಿವರಿಗೆ ಮತ್ತು ಬಿಜೆಪಿಗೆ ದೊಡ್ಡ ಏಟನ್ನೇ ನೀಡಲಿದೆ.
ಸಿಜೆಐ ರಂಜನ್ ಗೊಗಾಯ್, ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಸಂಜಯ್ ಕಿಶನ್ ಕೌಲ್ ಅವರಿರುವ ತ್ರಿಸದಸ್ಯ ಪೀಠವು ಸರ್ಕಾರದ ಆಕ್ಷೇಪಣೆಯನ್ನು ಪಕ್ಕಕ್ಕೆ ತಳ್ಳಿ, ದೂರುದಾರರು ಸಲ್ಲಿಸಿರುವ ದಾಖಲೆಗಳ ಮೇಲೆ ವಿಚಾರಣೆ ನಡೆಸಲು ನಿರ್ಧರಿಸಿರುವುದರಿಂದ ವೈಯಕ್ತಿಕವಾಗಿ ಮೋದಿಯವರ ಸಂಕಟ ಮತ್ತಷ್ಟು ಹೆಚ್ಚಾಗಿದೆ.
ಇಲ್ಲೊಂದು ವಿಚಾರವನ್ನು ನಾವು ಗಮನಿಸಲೇಬೇಕು, 2019ರ ಈ ಚುನಾವಣೆ ಯಾರು ಪ್ರಧಾನಿಯಾಗುತ್ತಾರೆ ಎಂಬುದನ್ನು ನಿರ್ಧರಿಸುವುದಕ್ಕಿಂತಲೂ ಹೆಚ್ಚಾಗಿ, ಫಲಿತಾಂಶದ ನಂತರ ಮೋದಿ ಎಷ್ಟು ಪ್ರಭಾವಿಯಾಗಿ ಉಳಿಯುತ್ತಾರೆ, ರಾಜಕೀಯವಾಗಿ ಎಷ್ಟು ದುರ್ಬಲರಾಗುತ್ತಾರೆ ಎಂಬುದನ್ನು ನಿರ್ಧರಿಸುವ ಮಾನದಂಡವಾಗಿದೆ. ಪ್ರಸ್ತುತ ಸರ್ಕಾರದ ವಿರುದ್ಧ ಜನರ ಮನದಲ್ಲಿ ಆಡಳಿತವಿರೋಧಿ ಅಲೆ ಇದ್ದಾಗ್ಯೂ, ಕಾಂಗ್ರೆಸ್ ಪಕ್ಷವಾಗಲಿ ಅಥವಾ ಅದರ ಯುಪಿಎ ಸಂರಚನೆಯಾಗಲಿ ಅಥವಾ ತೃತೀಯ ಶಕ್ತಿಗಳಾಗಲಿ ಎನ್‌ಡಿಎ ಕೂಟವನ್ನು ಓವರ್‌ಟೇಕ್ ಮಾಡಿಬಿಡುವಂತ ರಾಜಕೀಯ ಸನ್ನಿವೇಶ ಸದ್ಯದಲ್ಲಿ ಇಲ್ಲ. ಎನ್‌ಡಿಎ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿದರೂ ಇತರೆ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ (ಎನ್‌ಡಿಯ ಮೈತ್ರಿಕೂಟದಲ್ಲಿಲ್ಲದ) ನೆರವಿನೊಂದಿಗೆ ಬಹು ಪ್ರಯಾಸದಿಂದ ಸರ್ಕಾರ ರಚಿಸಬೇಕಾದ ಸಾಧ್ಯತೆಯೇ ದಟ್ಟವಾಗಿ ಕಾಣುತ್ತಿದೆ. ಅಂಥಾ ಸಂದರ್ಭದಲ್ಲಿ ತಾನೇ ತಾನಾಗಿ ಸೃಷ್ಟಿಸಿಕೊಂಡಿರುವ ‘attitude nature’ನಿಂದ ಬಹುಪಾಲ ರಾಜಕೀಯ ನಾಯಕರಿಗೆ ಬೇಡವಾಗಿರುವ ಮೋದಿಯನ್ನು ಪಕ್ಕಕ್ಕೆ ಸರಿಸಲು ಪಕ್ಷದೊಳಗೇ ಇರುವ ಮೋದಿ-ವಿರೋಧಿಗಳಿಗೆ ಈ ರಫೇಲ್ ಹಗರಣ ಮತ್ತು ಸುಪ್ರೀಂ ಕೋರ್ಟ್‌ನ ಈ ತೀರ್ಪು ದೊಡ್ಡ ಅಸ್ತ್ರಗಳಾಗಿ ಬಳಕೆಯಾಗುವ ಸಾಧ್ಯತೆಯುಂಟು.
ಇನ್ನು ಕೊನೆಯದಾಗಿ, ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ವಿಚಾರಣೆ ದೂರುದಾರರ ಪರವಾಗಿಯೇ ಸಾಗಿ ಆರೋಪಿಗಳಿಗೆ ಶಿಕ್ಷೆ ಆಗಿಯೇ ಬಿಡುತ್ತೆ ಎಂಬ ಅತೀ-ಕಲ್ಪನೆಯೂ ಸಲ್ಲದು. ಯಾಕೆಂದರೆ ಬೋಫೋರ್ಸ್ ಹಗರಣದಿಂದ, ಬಾಬ್ರಿ ಮಸೀದಿ ಧ್ವಂಸದವರೆಗೆ ಈ ದೇಶ ಕಂಡ ಘನಘೋರ ಪ್ರಕರಣಗಳ ವಿಚಾರಣೆ ಸಾಗುತ್ತಿರುವ ವೇಗ ನೋಡಿದರೆ ಅಥವಾ ಜನರೇ ದಿಗ್ಭ್ರಮೆಗೊಳ್ಳುವಂಥಾ ಅಚಾನಕ್ ತೀರ್ಪುಗಳು ಹೊರಬಿದ್ದ ನಿದರ್ಶನಗಳನ್ನು ನೋಡಿದರೆ ಯಾವುದನ್ನೂ ಹೀಗೇ ಎಂದು ಊಹಿಸುವುದು ಕಷ್ಟ. ಆದರೆ ಒಂದಂತೂ ಸತ್ಯ, ಕಳೆದ ವರ್ಷ ಡಿಸೆಂಬರ್ 14ರಂದು ಇದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ನೋಡಿ ನ್ಯಾಯಾಂಗದ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿದ್ದವರಿಗೆ ನ್ಯಾಯಾಂಗದ ಮೇಲೆ ಮತ್ತೆ ವಿಶ್ವಾಸ ಮೂಡಿದೆ, ಮುಖ್ಯವಾಗಿ ರಫೇಲ್ ದೂರುದಾರರ ಹುಮ್ಮಸ್ಸು ಎಷ್ಟರಮಟ್ಟಿಗೆ ಹೆಚ್ಚಾಗಿದೆಯೆಂದರೆ, ಈ ವಿಚಾರಣೆಯಲ್ಲೂ ತಮಗೆ ವ್ಯತಿರಕ್ತ ತೀರ್ಪು ಹೊರಬಂದರೂ, ಮತ್ತೊಮ್ಮೆ ಮೇಲ್ಮನವಿಗೆ ಹೋಗುವಷ್ಟು ಚೈತನ್ಯ ಅವರ ಮಾತುಗಳಲ್ಲಿ ಕಾಣುತ್ತಿದೆ. ಅಷ್ಟರಲ್ಲಾಗಲೆ, ಬಹುಶಃ ಅಧಿಕಾರದಿಂದ ದೂರವಾಗಿಸಲ್ಪಟ್ಟ ಅಥವಾ ದುರ್ಬಲ ಅಧಿಕಾರಸ್ಥನ ಸ್ಥಾನದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಮೋದಿಯವರ ಸಂಕಟದ ಅಸಲೀ ಕಾರಣಗಳಿರುವುದೇ ಅವರ ಆ ಚೈತನ್ಯಗಳಲ್ಲಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...