Homeರಾಜಕೀಯಇಂದು ಚುನಾವಣೆ ಎಂಬುದು ಒಂದು ಬ್ರಾಂಡಿಂಗ್ ಈವೆಂಟ್ ಆಗಿದೆ

ಇಂದು ಚುನಾವಣೆ ಎಂಬುದು ಒಂದು ಬ್ರಾಂಡಿಂಗ್ ಈವೆಂಟ್ ಆಗಿದೆ

- Advertisement -
- Advertisement -

| ಸಂದರ್ಶನ: ಮಲ್ಲಿಗೆ
ಯೂಟ್ಯೂಬ್ ಕ್ಯಾಮರಾ ಸಹಾಯ ದೀಪು, ಸನಲ್, ಆರನ್, ಪೆಡೆಸ್ಟ್ರಿಯನ್ ಪಿಕ್ಚರ್ಸ್|

 

ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿತ್ರನಟ ಪ್ರಕಾಶ್ ರೈ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದ್ದಾರೆ. ಗೌರಿ ಲಂಕೇಶರ ಹತ್ಯೆಯ ನಂತರ ಅದನ್ನು ಬಹಿರಂಗವಾಗಿ ಖಂಡಿಸಿ ‘ಜಸ್ಟ್ ಆಸ್ಕಿಂಗ್’ ಎಂದು ಅಧಿಕಾರದಲ್ಲಿದ್ದವರಿಗೆ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನಷ್ಟೇ ಗುರಿ ಮಾಡಿ ಪ್ರಚಾರವನ್ನೂ ಮಾಡಿದರು. ಆದರೆ ಈ ಸಾರಿ ಸ್ವತಂತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್, ಬಿಜೆಪಿಗಳೆರಡರ ವಿರುದ್ಧವೂ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಕೇಳಲೇಬೇಕಾದ ಕೆಲವು ಪ್ರಶ್ನೆಗಳು ‘ಪತ್ರಿಕೆ’ಗೂ ಇದ್ದವು. ಅವಕ್ಕೆ ವಿವರವಾಗಿ ಅವರು ಉತ್ತರಿಸಿದ್ದಾರೆ. ಅವರೆದುರು ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ಜೊತೆ ಸಂದರ್ಶನವು ನಿಗದಿಯಾಗಿತ್ತಾದರೂ, ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಅವರು ಸಮಯ ಕೊಡಲಾಗಲಿಲ್ಲ. ಮುಂದಿನ ವಾರ ಇನ್ನೂ ಕೆಲವು ಅಭ್ಯರ್ಥಿಗಳ ಸಂದರ್ಶನ ಪ್ರಕಟವಾಗಲಿದೆ.

ಲೋಕಸಭಾ ಚುನಾವಣೆಗೆ ನಿಲ್ಲುವ ನಿರ್ಧಾರ ಯಾಕೆ?
ನಾನು ಯಾತಕ್ಕಾಗಿ ಚುನಾವಣೆಗೆ ನಿಲ್ಲುವ ತೀರ್ಮಾನ ತೆಗೆದುಕೊಂಡೆ ಅಂತ ಸಾಕಷ್ಟು ಜನ ಕೇಳುತ್ತಾರೆ. ನೋಡಿ, ಈಗಿನ ಸ್ಥಿತಿಯಲ್ಲಿ ನಾವು ಪ್ರಜಾತಂತ್ರ ಅಂದುಕೊಂಡಿರೋ ವ್ಯವಸ್ಥೆಯಲ್ಲಿ ತಲೆಕೆಳಗಾಗಿ ನಿಂತಿದೀವಿ. ಈ ವ್ಯವಸ್ಥೆ ನಮ್ಮನ್ನು ಹೊತ್ತುಕೊಂಡು ಮುಂದುಮುಂದಕ್ಕೆ ಹೋಗಬೇಕಿತ್ತು. ಆದರೆ, ನಾವೇ ಇದರ ಭಾರ ಹೊತ್ತುಕೊಂಡು ನಡೆಯಲಾರದೆ ನಡೆಯುವ ಸ್ಥಿತಿಗೆ ಬಂದು ತಲುಪಿದ್ದೇವೆ. ಹೌದೋ ಇಲ್ಲವೋ? ನಾವು ನಿಜಕ್ಕೂ ಎಂತಹವರನ್ನು ಆರಿಸಲು ಬಯಸುತ್ತೇವೋ ಅಂತಹವರಿಗೆ ಚುನಾವಣೆಯಲ್ಲಿ ನಿಲ್ಲುವ ಮತ್ತು ಗೆಲ್ಲುವ ಅವಕಾಶವೇ ಇಲ್ಲದಂತೆ ಮಾಡಲಾಗಿದೆ. ಯಾರು ಖಂಡಿತವಾಗಿ ಆಯ್ಕೆಯಾಗಬಾರದೋ ಅಂತಹವರು ಹೇಗಿದ್ದರೂ ಗೆಲ್ಲುವಂತಿದೆ. ಇದರಲ್ಲಿ ಎಲ್ಲಕ್ಕಿಂತ ಭಯಂಕರವಾದ ಪಕ್ಷ ಬಿಜೆಪಿ ಮತ್ತು ಆ ಕಾರಣಕ್ಕೆ ನಾವು ಅವರನ್ನು ಕಟುವಾಗಿ ವಿರೋಧಿಸುತ್ತೇವೆ. ಆದರೆ ಏನೇ ಹೇಳಿದರೂ ಉಳಿದವರನ್ನು ಸಮರ್ಥಿಸಲು ಸಾಧ್ಯವಿದೆಯೇ? ನಾವು ರಾಂಗ್ ಪರ್ಸನ್‍ನ್ನು ಅನಿವಾರ್ಯವಾಗಿ ಆರಿಸುವ ಸ್ಥಿತಿಗೆ ತಳ್ಳಲ್ಪಟ್ಟಿದ್ದೀವಿ, ಇದನ್ನು ನೋಡ್ತಾ ಹೀಗೇ ಇರ್ತೀವಾ?
ಇಲ್ಲ ಅನ್ನೋದು ನನ್ನ ಉತ್ತರ. ನಾನೂ ನಿಮ್ಮಲ್ಲೇ ಒಬ್ಬ, ಹೋರಾಟಗಾರರು, ಚಿಂತಕರು, ಸೂಕ್ಷ್ಮವಾಗಿ ಆಲೋಚನೆ ಮಾಡುವವರು……ನಿಮ್ಮಲ್ಲೆ ಒಬ್ಬ. ಆದರೆ, ಸ್ವಲ್ಪ ಇನ್ನೂ ಹೆಚ್ಚು ಧೈರ್ಯದಿಂದ ಕೆಲವು ಕೆಲಸಗಳಿಗೆ ನುಗ್ಗಿ ಮುಂದೆ ಹೋಗ್ತೀನಿ ಅಷ್ಟೆ. ಈಗಲೂ ಹಾಗೆ, ಕಾಲ ಪಕ್ವವಾಗಿದೆ ಅನ್ನಿಸಿತು, ನುಗ್ಗಿದೆ. ತುಂಬ ಲೆಕ್ಕಾಚಾರದ ನಡೆ ಅಲ್ಲ, ನಿಜ ಹೇಳಬೇಕೆಂದರೆ ಬಹಳ ಲೆಕ್ಕ ಹಾಕ್ತಾ ಕೂತಿದ್ದರೆ ಬರ್ತಿದ್ನೋ ಇಲ್ವೋ ಗೊತ್ತಿಲ್ಲ, ಇದು ಈ ಕಾಲದ ಅಗತ್ಯ ಅನ್ನಿಸಿತು, ಇದನ್ನು ಬಿಟ್ಟರೆ ಈ ಅವಕಾಶ ಸಿಗಲ್ಲ ಅನ್ನಿಸಿತು, ಜನರಿಗೆ ಒಂದು ಬಗೆಯ ಭ್ರಮನಿರಸನ, ಅಪಾರ ನಿರಾಸೆಯಾಗಿದೆ, ಈ ಹಂತದಲ್ಲಿ ಅವರಲ್ಲಿ ಭರವಸೆ ಮೂಡಿಸಿ ವಿಶ್ವಾಸ ತುಂಬುವ ಅಗತ್ಯವಿದೆ ಅಂತಲೇ ಈ ನಿರ್ಧಾರ ತೆಗೆದುಕೊಂಡೆ. ಇದರಲ್ಲಿ ಗೆದ್ದೇ ಗೆಲ್ತೀನಿ ಅಂತ ಅಲ್ಲ, ಆದರೆ ನಮಗೆ ಈಗ ಬರುತ್ತಿರುವ ಪ್ರತಿಕ್ರಿಯೆ ನೋಡಿದರೆ ಸಾಕಷ್ಟು ಜನ ಬೆಂಬಲ ಅಂತೂ ಸಿಕ್ಕೇ ಸಿಗುತ್ತದೆ. ಅದೇ ನಮಗೆ ಮುಂದೆ ಹೋಗಲು ಸಿಗುವ ಜೀವಜಲ!

ಪರಿಸ್ಥಿತಿ ಹೀಗಿದೆ ಎಂದ ಮೇಲೆ, ಈ ವಾತಾವರಣದಲ್ಲಿ ನೀವು ಭಿನ್ನ ರಾಜಕಾರಣ ಮಾಡಲು ಹೇಗೆ ಸಾಧ್ಯ?
ನಾನು ಮಾಡುತ್ತೇನೆ ಯಾಕೆಂದರೆ ನನ್ನ ಗುರಿ ಸ್ಪಷ್ಟವಿದೆ. ನನಗೆ ಈ ಜನರ ನೋವು ನಲಿವುಗಳಿಗೆ ದನಿಯಾಗುವುದನ್ನು ಬಿಟ್ಟರೆ ಬೇರೆ ಆದ್ಯತೆಗಳಿಲ್ಲ. ಎಲ್ಲೇ ಇದ್ದರೂ, ಏನೇ ಆದರೂ ನಾನು ಹೇಳಬೇಕಿರುವುದನ್ನೇ ಹೇಳುತ್ತೇನೆ, ಮಾಡಬೇಕಿರುವುದನ್ನೇ ಮಾಡುತ್ತೇನೆ. ಈ ಕೇಂದ್ರ ಸರ್ಕಾರಗಳೆಲ್ಲ ಏನು ಕೊಟ್ಟಿದಾವೆ ನಮಗೆ? ಅವರ ಪ್ರಣಾಳಿಕೆಗಳನ್ನು ನೋಡಿ, 1200 ಕೊಡ್ತೀವಿ, 3000 ಕೊಡ್ತೀವಿ ಅಂತ, ಅದು ಒಂಥರಾ ಚಾರಿಟಿ ಗ್ರೂಪ್‍ನ ಕಾರ್ಯಕ್ರಮ ಇದ್ದ ಹಾಗಿರತ್ತೆ, ಅದು ಬಡತನ ಮತ್ತು ಸಾಮಾಜಿಕ ಅನ್ಯಾಯಗಳನ್ನು ಕ್ರೂರವಾಗಿ ಲೇವಡಿ ಮಾಡೋದು ಅಂತ ನನಗೆ ಅನಿಸತ್ತೆ. ಅವರು ಈ ರಾಜ್ಯ ಪಟ್ಟಿ ಕೇಂದ್ರ ಪಟ್ಟಿ ಅಂತೆಲ್ಲ ಇಟ್ಟುಕೊಂಡಿರೋದು ಆಡಳಿತಾತ್ಮಕ ಅನುಕೂಲಗಳ ಜೊತೆಗೆ ರಾಜ್ಯಗಳನ್ನು ಬ್ಲ್ಯಾಕ್‍ಮೇಲ್ ಮಾಡೋದಕ್ಕೂ ಕೂಡಾ. ಇದನ್ನೆಲ್ಲ ನಾವು ಯಾಕೆ ಅನುಭವಿಸಬೇಕು? ನಮಗೆ ನಮ್ಮದೇ ಗುರುತು ಬೇಕಲ್ವಾ? ಉದಾಹರಣೆಗೆ, ರೈತರ ಸಮಸ್ಯೆಗೆ ಪರಿಹಾರ ಅಂತ ಏನೋ ಒಂದು ಪಾಲಿಸಿ ಇಡೀ ದೇಶಕ್ಕೆಲ್ಲ ಒಂದೇ ರೀತಿಯದ್ದನ್ನು ಕೊಡುತ್ತಾರೆ. ರೈತರ ಸಮಸ್ಯೆ ಅಂದರೆ ದೇಶಕ್ಕೆಲ್ಲ ಒಂದೇನಾ? ನದೀತೀರದ ರೈತರ ಸಮಸ್ಯೆ ಬೇರೆ, ಬೆಟ್ಟಗುಡ್ಡಗಳಲ್ಲಿರುವ ಸಣ್ಣರೈತರ ಸ್ಥಿತಿ ಬೇರೆ, ಒಣಪ್ರದೇಶಗಳಲ್ಲಿ ಬೇರೆ, ಅದು ಹೇಗೆ ಎಲ್ಲರಿಗೂ ಒಂದೇ ಪರಿಹಾರ ಕೊಡ್ತೀರಿ. ಅಂದರೆ ಏನೋ ಒಂದು ಪಾಲಿಸಿ ಬೇಡ ಅಂತ ಅಲ್ಲ ನಾನು ಹೇಳ್ತಿರೋದು, ನಿಜವಾಗಿ ಸಮಸ್ಯೆ ಪರಿಹಾರ ಆಗಬೇಕು ಎಂಬ ಕಳಕಳಿಯೂ ಇಲ್ಲ, ಇಚ್ಛಾಶಕ್ತಿಯೂ ಇಲ್ಲ ಅಂತ.
ಜನರು ತುಂಬಾ ಜರ್ಜರಿತರಾಗಿದ್ದಾರೆ. ನೀಟ್ ಏಕ್ಸಾಂ ಇರಬಹುದು, ರೈತರ ಸಮಸ್ಯೆಗಳಿರಬಹುದು, ಫಂಡ್ ಅಲೋಕೇಷನ್ಸ್ ಇರುಬಹುದು ಮತ್ತು ರೆಪ್ರೆಸೆಂಟೇಷನ್ ದೃಷ್ಠಿಯಿಂದ ನೋಡಿದಾಗಲೂ ಎಲ್ಲರೂ ಒಂದು ಇಶ್ಯೂ ಮೇಲೆ ಬರ್ತಿದ್ದಾರೆ. ಈ ಸಲ ಫೆಡರಲ್ ಸ್ಟೇಜ್‍ನಲ್ಲಿ ಭಾರತ ಎಷ್ಟೇ ಡೆಮಾಕ್ರೆಟಿಕ್ ಆಗಿದ್ದರೂ ಯೂರೋಪಿನ ಡೆಮಾಕ್ರಸಿ ಇಲ್ಲಿ ಉಪಯುಕ್ರವಾಗಲ್ಲ. ನಮ್ಮಲ್ಲಿ ವೈವಿದ್ಯತೆ ಇದೆ, ಬಹಲಷ್ಟು ಸಂಸ್ಕøತಿ, ಆಚಾರ-ವಿಚಾರಗಳಿವೆ. ಭೌಗೋಳಿಕವಾಗಿಯೂ ಆಹಾರ ಪದ್ದತಿಯನ್ನೂ ಒಳಗೊಂಡಂತೆ ಪ್ರತಿ ನೂರು ಕಿಲೋಮೀಟರ್‍ಗೂ ವ್ಯತ್ಯಾಸಗಳನ್ನು ಕಾಣಬಹುದು. ಇವತ್ತು ಭಾರತ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗಲು ಯಾವುದು ರಾಜ್ಯ ವಿಷಯವಾಗಬೇಕು, ಯಾವುದು ರಾಷ್ಟ್ರೀಯ ವಿಷಯವಾಗಬೇಕು ಎಂದು ಎಲ್ಲಾ ಕ್ಷೇತ್ರವನ್ನು ರೀ ಸ್ಟ್ರಕ್ಚರ್ ಮಾಡದೇ ಸಾಧ್ಯವೇ ಇಲ್ಲ.
ಆಗಲೇ ಹೇಳಿದಂತೆ, ರಾಷ್ಟ್ರೀಯ ಪಕ್ಷಗಳು ಕೇಂದ್ರ ವಿಷಯಗಳನ್ನು ಇಡಿದಿಟ್ಟುಕೊಂಡಿರುವುದೇ ರಾಜ್ಯಗಳ ಮೇಲೆ ಹಿಡಿತ ಸಾಧಿಸಲಿಕ್ಕೆ. ಕೆಲವರು ಮಾತನಾಡುವ ಭಾಷೆಗಳೇ ಅರ್ಥವಾಗುವುದಿಲ್ಲ ನಮಗೆ, ಹೀಗಾಗಿ ಎಷ್ಟೋ ರಾಜ್ಯಗಳಿಗೆ ತಮ್ಮನ್ನು ನಮ್ಮವರೇ ಆಳುತ್ತಿದ್ದಾರೆ ಎಂದು ಅನ್ನಿಸುವುದೇ ಇಲ್ಲ. ನಾನು ಕರ್ನಾಟಕದಲ್ಲಿ ಓಡಾಡಲು ಶುರುಮಾಡಿದ ನಂತರ ಗಮನಿಸಿದಂತೆ ಕರ್ನಾಟಕದಲ್ಲೂ ರಾಜಕೀಯ ಪಕ್ಷಗಳು ಶೇಕ್ ಆಗುತ್ತಿದೆ, ಅಷ್ಟೇ ಅಲ್ಲ ಜನರಲ್ಲಿ ಸಂತೃಪ್ತಿಯೇ ಇಲ್ಲ. ಚುನಾವಣೆ ಒಂದು ಕೋಮುವಾದಿ ಪಕ್ಷವನ್ನು ಸೋಲಿಸುವುದಷ್ಟೇ ಅಲ್ಲ, ಜನರ ನಡುವೆ ನಡೆಯುತ್ತಿದ್ದ ಚರ್ಚೆಯಲ್ಲಿ ಕಾಂಗ್ರೆಸ್ ಬಗ್ಗೆಯೂ ಅಸಮಧಾನದ ಮಾತುಗಳಿದ್ದವು, ಹಾಗೇ ಬೇರೆ ಪಕ್ಷಗಳ ಮೇಲೂ ಅಸಮಧಾನವಿದೆ. ಆದರೆ ಬೇರೆ ಆಲ್ಟರ್‍ನೇಟಿವ್ ಇಲ್ಲದೆ ಬೇರೆ ಕಡೆಗೆ ಹೋಗುತ್ತಿದ್ದಾರೆ ಎಂದರೆ ಆ ಆಲ್ಟರ್‍ನೇಟಿವ್‍ನ ಕೊಡಬೇಕು.
ಮನುಷ್ಯ ನಂಬುವ ಸ್ಥಿತಿಯನ್ನ ಕಳೆದುಕೊಂಡಿದ್ದಾನೆ, ಅವನು ಬದಲಾವಣೆಗಾಗಿ ಸಿದ್ದನಾಗಿದ್ದಾನೆ. ಚುನಾವಣೆ ಎಂಬುದು ಪ್ರಜೆ ಮತ್ತು ವ್ಯಕ್ತಿ, ಪ್ರಜೆ ಮತ್ತು ಪಕ್ಷದ ನಡುವೆ ಇಂದು ಸಂವಾದವಾಗಬೇಕಿತ್ತು. ಆದರೆ, ಇಂದು ಚುನಾವಣೆ ಎಂಬುದು ಒಂದು ಬ್ರಾಂಡಿಂಗ್ ಈವೆಂಟ್ ಆಗಿದೆ. ಇದು ಮಾರ್ಕೆಟಿಂಗ್ ತಂತ್ರವಾಗಿದೆ. ನಾವು ತಪ್ಪು ಕಾರಣಗಳಿಗಾಗಿ ಮತ ಹಾಕುತ್ತಿದ್ದೇವೆ. ಈ ಸಮಯದಲ್ಲಿ ಸುಳ್ಳನ್ನ ನಂಬುತ್ತಾ ಹೋದಂತೆ ಜನ ಬೇಸತ್ತಿದ್ದಾರೆ. ಈ ಸಂದರ್ಭದಲ್ಲಿ ಪರ್ಯಾಯ ರಾಜಕಾರಣದ ಬೀಜವನ್ನ ಬಿತ್ತಲು ಶುರು ಮಾಡಿದ್ದೇವೆ, ಈ ಹೊತ್ತಿಗೆ ಅಸಂಘಟಿತವಾಗಿದ್ದ ಸಂಘಟನೆಗಳು ಒಂದೆಡೆ ಬರಲು ಶುರುಮಾಡಿರೋದು ನಿಜಕ್ಕೂ ದೊಡ್ಡ ವಿಚಾರ.

ನೀವು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕವನ್ನ ಸುತ್ತುವಾಗ ಜನರಿಗೆ ಕೋಮು ಶಕ್ತಿಗಳ ವಿರುದ್ಧ ಕರೆ ಕೊಡುತ್ತಿದ್ದಿರಿ……..
ಆಗಲೂ ಕೊಟ್ಟಿದ್ದೆ, ಈಗಲೂ ಕೊಡುತ್ತೇನೆ. ಆದರೆ ಅಲ್ಲೇ ನಿಂತುಹೋಗಿಬಿಡಬಾರದು ಅಲ್ವಾ? ಕೋಮುವಾದವನ್ನ ಬಿತ್ತುವ ಬಿಜೆಪಿ ಕ್ಯಾನ್ಸರ್ ಆದರೆ, ಉಳಿದವು ಕೆಮ್ಮು-ನೆಗಡಿ ಇದ್ದಂತೆ, ಅವುಗಳನ್ನು ಕಡೆಗಣಿಸುವಂತಿಲ್ಲ ಎಂದೂ ನಾವು ಹೇಳುತ್ತಿದ್ದೆ. ಆ ಸಂದರ್ಭದಲ್ಲಿ ಸಕ್ರಿಯ ರಜಕಾರಣಕ್ಕೇ ಬರುತ್ತೀರಾ ಎಂದು ಯಾರಾದರೂ ಕೇಳಿದ್ದರೆ ಬಹುಶಃ ಇಲ್ಲ ಎಂದೇ ನಾನು ಹೇಳುತ್ತಿದ್ದೆ. ಗೌರಿ ಹತ್ಯೆಯ ನಂತರ ವೈಯಕ್ತಿಕವಾದ ಕೋಪ ಮತ್ತು ನೋವು ನನ್ನಲಿತ್ತು, ತುಂಬಾ ಅಸಹಾಯಕನಾಗಿದ್ದೆ, ರಾಜಕೀಯ ಲೆಕ್ಕ-ಚಾರಗಳೇ ಅರ್ಥವಾಗುತ್ತಿರಲಿಲ್ಲ. ಯಾರೂ ಮತ್ತೊಬ್ಬ ಗೌರಿ ಆಗಾಗಬಾರದು ಎಂಬುದಷ್ಟೇ ಇತ್ತು; ಅದು ರಾಜಕೀಯ ಪ್ರಜ್ಞೆ, ಜವಬ್ದಾರಿಯನ್ನು ಮೂಡಿಸಿತು. ಆದರೆ ಈ ಚುನಾವಣೆ ಹಾಗಲ್ಲ. ಇದರಲ್ಲಿ ಇಳಿಯುವಾಗ ನಾನು ಸ್ಪಷ್ಟವಾಗಿ ಯಾರ ಕಡೆ ನಿಲ್ಲಬೇಕು ಎಂಬ ಯೋಚನೆ ಮಾಡಿಯೇ ಜನರಿಗೆ ಬೇಕಾದ ಒಂದು ಗಟ್ಟಿದನಿಯಾಗಬೇಕೆಂದು ನಿರ್ಧರಿಸಿಯೇ ನಿಂತಿರುವುದು.

ಗೌರಿ ಲಂಕೇಶರೊಂದಿಗೆ ಆತ್ಮೀಯ ಗೆಳೆತನವನ್ನ ಹೊಂದಿದ್ರಿ, ಈಗ ಅವರೇನಾದರೂ ಇದ್ದಿದ್ದರೆ ನಿಮ್ಮ ಪರ್ಯಾಯ ರಾಜಕಾರಣದ ಬಗ್ಗೆ ಏನು ಹೇಳುತ್ತಿದ್ದರು?
ಗೌರಿ ಇದ್ದಿದ್ದರೆ ಪರ್ಯಾಯ ರಾಜಕಾರಣ ಬೇಕು ಅನ್ನುತ್ತಿದ್ದರು. ಆದರೆ ನಾನು ರಾಜಕಾರಣಕ್ಕೆ ಬರಲು ಬಿಡುತ್ತಿರಲಿಲ್ಲ, ಬೇಡ ಎಂದೇ ಹೇಳುತ್ತಿದ್ದರು. ಗೌರಿ ಅಷ್ಟೇ ಅಲ್ಲ, ನಮ್ಮಲ್ಲಿ ಇನ್ನೂ ತುಂಬಾ ಜನ ರಾಜಕಾರಣ ತುಂಬಾ ಹೊಲಸು, ಅದನ್ನ ಗೆಲ್ಲೋಕಾಗಲ್ಲ, ಅಲ್ಲೋದರೆ ತುಂಬಾ ಭ್ರಷ್ಟರಾಗುತ್ತೇವೆ ಎನ್ನುವುದೇ ಜಾಸ್ತಿ. ಆದರೆ, ನಾವು ಕೆಸರಲ್ಲಿ ಬಿದ್ದರೂ ಮೈಗೆ ಅಂಟಿಕೊಳ್ಳದ ಹಾಗೆ ಅದನ್ನ ಶುದ್ಧ ಮಾಡಬೇಕಿದೆ. ಮೇಷ್ಟ್ರೂ ಕೂಡ ನಾವು ನಿರಂತರವಾದ ವಿರೋಧ ಪಕ್ಷವಾಗಿರಬೇಕು ಎಂದೇ ಹೇಳುತ್ತಿದ್ದರು. ಆದರೆ ನಿರಂತರವಾದ ವಿರೋಧ ಪಕ್ಷವಾಗುವ ಸ್ಥಿತಿಯೂ ಈಗ ಇಲ್ಲ, ರೈತಸಂಘವೇ ಚುನಾವಣೆಗೆ ಬಂದು ಸೋತ ಉದಾಹರಣೆಯೂ ನಮ್ಮ ಮುಂದಿದೆ. ಅಷ್ಟೇ ಅಲ್ಲದೆ ಪ್ರಭುತ್ವವೇ ಇಂದು ಪ್ರಜೆಗಳ ಕೈಯಲ್ಲಿಲ್ಲ, ಬಹುಶಃ ಪರ್ಯಾಯ ರಾಜಕಾರಣವನ್ನ ಮಾಡುತ್ತಾ ಪ್ರಜೆಗಳ ಮಾತಿಗೆ ಮನ್ನಣೆ ಸಿಗುವಂತೆ ಮಾಡುವುದರಿಂದ ಜನರು ಸರ್ಕಾರವನ್ನು ನಿಯಂತ್ರಿಸುವಂತೆ ಮಾಡಬೇಕು. ಆಮೂಲಕ ಜನರಿಗೆ ಆ ಶಕ್ತಿಯನ್ನು ಮರಳಿ ಪಡೆಯುವಂತೆ ಮಾಡಬೇಕು ಎನ್ನಿಸುತ್ತದೆ.

ಕ್ಷೇತ್ರದ ಜನರೊಂದಿಗೆ ಮಾತನಾಡುವಾಗ ಮುಂದಿನ 15 ವರ್ಷ ನಾನು ನಿಮ್ಮೊಂದಿಗಿರುತ್ತೇನೆ ಎಂದು ಹೇಳುತ್ತಿದ್ದಿರಾ, ಈ 15 ವರ್ಷಗಳ ಸುದೀರ್ಘ ಸಮಯ ಹಾಗಾದರೆ ಈವರೆಗಿದ್ದ ನಿಮ್ಮ ಬದುಕಿನ ತಾತ್ವಿಕತೆಯನ್ನು ಮತ್ತು ಆದ್ಯತೆಯನ್ನು ಬದಲಾಯಿಸುತ್ತದೆ. ಈ ಸ್ಪರ್ಧೆ ಆ ವ್ಯತ್ಯಾಸವನ್ನ ತಂದಿದೆಯಾ?
ಇದುವರೆಗೂ ಜನರು ನನ್ನನ್ನು ನೋಡಿರುವುದು ನಟನಾಗಿ ಮಾತ್ರ, ಮುಂದಿನ 15 ವರ್ಷಗಳಲ್ಲಿ ಆ ಬದಲಾವಣೆ ಕಾಣಿಸುತ್ತದೆ. ನನಗೆ ಇನ್ನು 20 ವರ್ಷ ಬದುಕಬೇಕೆಂಬ ಆಸೆಯಿದೆ, ಇದರಲ್ಲಿ ಕೊನೆಯ 5 ವರ್ಷ ಬೇಕಿರುವುದು ಏಕಾಂತ, ನಾನಗೆ ತುಂಬಾ ಇಷ್ಟವಾದದ್ದು ಪುಸ್ತಕ ಅದಕ್ಕೆ ನಾನು ಹೋಗಬೇಕು. ಇನ್ನು 15 ವರ್ಷ ನನ್ನ ದೃಷ್ಟಿಕೋನಕ್ಕೆ ತಕ್ಕ ರೀತಿಯ ಬದುಕು ಬದುಕಲು ಬಯಸುತ್ತೇನೆ. ಇಲ್ಲಿಯವರೆಗೂ ಸಿಗದೇ ಇದ್ದ ಸ್ವಾತಂತ್ರ್ಯ ನನಗೆ ಸಿಕ್ಕಿದೆ ನಾನು ಅದನ್ನ ಸಂತೋಷದಿಂದ ಅನುಭವಿಸುತ್ತಿದ್ದೇನೆ. ನಾನು ಒಬ್ಬ ನಟನಾಗಿ, ಪ್ರತಿಭೆಯಾಗಿ ಗುರುತಿಸಲ್ಪಟ್ಟನ್ನೇ ಹೊರತು ಮನುಷ್ಯನಾನಿ ನಾನೇನು ಎಂಬುದನ್ನು ಗುರುತಿಸಿಕೊಂಡಿರಲಿಲ್ಲ, ಈಗ ನಾನು ತೆಗೆದುಕೊಳ್ಳುವ ನಿಲುವಿನಿಂದ ನಿಜವಾಗಿ ನಾನು ಏನಾಗಿದ್ದೆನೋ ಅದೇ ರೀತಿಯಲ್ಲಿ ಹೊರಹೊಮ್ಮಲು ಸಾಧ್ಯವಾಗಿದೆ ಅನ್ನಿಸುತ್ತಿದೆ. ಒಂದು ವೇಳೆ ಇದೆಲ್ಲ ಂಆಡದಿರುತ್ತಿದ್ದರೆ ನಾನಲ್ಲದ ನಾನಾಗಿ ಹಾಗೇ ಸತ್ತುಹೋಗಿ ಬಿಡುತ್ತಿದ್ದೆನಲ್ಲಪ್ಪ ಅಂತ ಭಯವಾಗತ್ತೆ……. ಇದೆಲ್ಲರ ನಡುವೆ ನನ್ನ ಪ್ರಜ್ಞೆಯಿಂದ ತುಂಬಾ ಆಕ್ಟಿವ್ ಆಗಿದ್ದೇನೆ, ಇದು ನನಗೆ ಹೊಸ ಚೈತನ್ಯ ಕೊಡುತ್ತಿದೆ.
ದಿನಗಳೆದಂತೆ ಹಿಂದಿನ ಒಂದು ದಶಕದಲ್ಲಿ ಬೆಳೆದಿದ್ದಕ್ಕಿಂತ ಈಗ ಸ್ವಲ್ಪ ಸಮಯದಲ್ಲಿ ಜಾಸ್ತಿ ಬೆಳೆದಿದ್ದೇನೆ, ದೃಷ್ಡಿ ವಿಶಾಲವಾಗಿ ಸೂಕ್ಷ್ಮತೆಯ ಕಡೆಗೆ ಹೋಗ್ತಾಯಿದೆ.

ನಿಮಗೆ ದೊಡ್ಡ ಬೆಂಬಲ ಸಿಕ್ಕಿ ಸುಲಭದಲ್ಲಿ ಆಯ್ಕೆಯಾಗಬಹುದಿದ್ದ ತೆಲಂಗಾಣವನ್ನು ಬಿಟ್ಟು ಇಲ್ಲೇ ಏಕೆ ಸ್ಪರ್ಧಿಸಿದ್ದೀರಿ? ಇಲ್ಲಿ ಗೆಲುವು ನಿಮಗೆ ಕಠಿಣವಲ್ಲವೇ? ಅದರಲ್ಲೂ ಎಲ್ಲರಿಗೂ ಸಾಮಾಜಿಕ ನ್ಯಾಯ ದಕ್ಕಬೇಕೆಂದು ಬಯಸುವ ನೀವು ರಾಜ್ಯದಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲ್ಲಬಹುದಾಗಿದ್ದ ಕ್ಷೇತ್ರವನ್ನೇ ಏಕೆ ಆರಿಸಿಕೊಂಡಿರಿ?
ಯಾಕೆಂದರೆ, ಇದು ನನ್ನ ಬೇರು, ನನ್ನ ಮನೆ, ನನ್ನ ಭಾಷೆ. ನಾನು ಎಲ್ಲೇ ಹೋದರು ಮತ್ತೆ ಮರಳಿ ಮನೆಗೇ ಬರಬೇಕು ಎಷ್ಟ್ ದಿನ ಊರಿಂದ ಹೊರಗಿರಲು ಸಾಧ್ಯ. ಮರ ಎಷ್ಟೇ ಚಾಚಿಕೊಂಡರೂ ಬೇಕು ನೆ¯ದಲ್ಲಿ ಕೂರಲೇಬೇಕು. ಎರಡನೆಯದಾಗಿ ಮುಸ್ಲಿಂ ಜನಾಂಗವನ್ನ ಕ್ಷಮೆಕೇಳಿ ನಾನು ಮತಯಾಚನೆ ಮಾಡುತ್ತಿದ್ದೇನೆ. ಯಾಕೆಂದರೆ ಮುಸ್ಲಿಂ ಜನಾಂಗಕ್ಕೆ ಒಂದಾದರೂ ಸೀಟು ಇರಬೇಕಿತ್ತು, ಆದರೆ ಅದು ಸಾಧ್ಯವಾಗಿಲ್ಲ. ನಾನು ಯಾರನ್ನ ಸೆಕ್ಯುಲರ್ ಪಾರ್ಟಿ ಎಂದು ಕರೆಯುತ್ತೀವೋ, ಅವರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆಯೇ ಹೊರತು, ನಮ್ಮನ್ನು ಹೊತ್ತುಕೊಂಡು ಹೋಗುತ್ತಿಲ್ಲ, ಅವರು ನಮ್ಮನ್ನು ತುಳಿಯುತ್ತಿದ್ದಾರೆ. ಆ ಕಾರಣಕ್ಕೆ ನಾನು ಇಲ್ಲಿ ನಿಂತಿದ್ದೇನೆ. ಆ ಪಕ್ಷದವರು ಈ ಕ್ಷೇತ್ರದಲ್ಲಿ ಮುಸ್ಲಿಂ ಕ್ಯಾಂಡಿಡೇಟ್ ಹಾಕಿಯೂ ಗೆಲ್ಲಲಿಲ್ಲ, 5 ವರ್ಷ ಅಧಿಕಾರ ನಡೆಸಿದ್ದಾರೆ, ಅದರೂ ಇಂಥ ಕ್ಷೇತ್ರದಲ್ಲಿ ಒಬ್ಬ ನಾಯಕನನ್ನ ಬೆಳೆಸಲು ಸಾಧ್ಯವಾಗಲಿಲ್ಲ. ಮಂಗಳೂರು, ಬೀದರ್‍ಗಳಲ್ಲಿ ಈ ಸಮುದಾಯಕ್ಕೆ ಕೊಡಬಹುದಿತ್ತು. ಆದರೆ ಬೆಳೆಸಲಿಲ್ಲ. ಇಲ್ಲಿನ ಸ್ಲಂಗಳು, ಜನ ಇವನ್ನೆಲ್ಲ ನೋಡುತ್ತಿದ್ದರೆ ಇವು ಎರಡು ಪಟ್ಟಭದ್ರ ಹಿತಾಸಕ್ತಿಗಾಗಿ ಬಲಿಯಾಗುತ್ತಿವೆ. ಇದಕ್ಕೆಲ್ಲ ಕಾರಣ ಪರ್ಯಾಯ ಇಲ್ಲದೇ ಇರುವುದು. ಆ ಪರ್ಯಾಯಕ್ಕಾಗಿ ಯಾರಾದರೂ ಬರುತ್ತಾರ ಅಂತ ಕಾಯುತ್ತಿದ್ದಾರೆ.ಒಟ್ಟಾರೆ ಇಲ್ಲಿನ ಸಮಸ್ಯೆಗಳ ಬಗೆಗೆ ನಾನು ಮಾತನಾಡುತ್ತಿರುವುದರಿಂದ ನನಗೆ ಜನ ಅವಕಾಶ ಕೊಡುತ್ತಾರೆ ಅನ್ನಿಸುತ್ತದೆ.

ಪರ್ಯಾಯ ರಾಜಕಾರಣದ ಯೋಜನೆಯನ್ನು ಚುನಾವಣೆಯ ನಂತರವೂ ಮುಂದೆ ತೆಗೆದುಕೊಂಡು ಆಲೋಚನೆ ಇದೆಯಾ?
ಖಂಡಿತಾ ಇರಲೇಬೇಕು, ಪರ್ಯಾಯ ರಾಜಕಾರಣ ಅಂದ್ರೆ ರಾಜಕಾರಣವನ್ನು ಕ್ಲೀನ್ ಮಾಡುವುದು, ಮುಂದೆ ಬರುವ ಬಿಬಿಎಂಪಿ, ಎಂಎಲ್‍ಎ ಎಲೆಕ್ಷನ್ ಇರಬಹುದು ಎಲ್ಲಾ ಕಡೆ ಆಗಬೇಕಿದೆ. ಇದು ಕೇವಲ ಇಲ್ಲಿ ಮಾತ್ರವಲ್ಲದೆ ರಾಜ್ಯದ ಎಲ್ಲಾ ಭಾಗಗಳಲ್ಲಿಯು ಆಗಬೇಕಿದೆ. ನಾವು ಒಂದು ಕಡೆ ನಿಂತು ಕೆಲಸ ಮಾಡಲು ಶುರು ಮಾಡುತ್ತಿದ್ದಂತೆ ಬೇರೆ ಕಡೆಗಳಲ್ಲಿಯೂ ಹೊಸ ನಾಯಕರನ್ನು ಹುಡುಕಲು ಜನ ಶುರುಮಾಡುತ್ತಾರೆ. ಇದರಿಂದ ಪ್ರಜ್ಞಾವಂತರು ಕಣಕ್ಕೆ ಬರಬೇಕಾಗತ್ತೆ, ಇದು ಒಬ್ ವ್ಯಕ್ತಿ ಮೇಲೆ ಬೆಳೆಯೋ ಮೂಮೆಂಟ್ ಆಗದೆ, ಒಂದು ಹೊಸ ಗಾಳಿಯ ಮೇಲೆ ಬೆಳೆಯಬೇಕಾಗಿದೆ, ಅದಕ್ಕೆ ಇನ್ನೂ ಹೆಚ್ಚು ಜನ ಧೈರ್ಯ ಮಾಡಿ ಬಂದ್ರೆ ಸಾಧ್ಯವಾಗುತ್ತದೆ. ಒಂದಷ್ಟು ಜನ ಕಂಫರ್ಟ್ ಜೋನ್‍ನಲ್ಲಿದ್ದಾರೆ, ಅವರು ಸ್ವಲ್ಪ ತ್ಯಾಗ ಮಾಡಿ ಕಣಕ್ಕೆ ಇಳಿದರೆ ಪರ್ಯಾಯ ಖಂಡಿತಾ ಸಾಧ್ಯವಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...