ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿಯವರು ಮಾಂಸ ತಿಂದು ದೇವಾಲಯಕ್ಕೆ ಭೇಟಿ ನೀಡಿದ್ದಾರೆಂಬುದು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಸಿದ್ದರಾಮಯ್ಯನವರು ಮಾಂಸಾಹಾರ ತಿಂದು ದೇವಾಲಯ ಪ್ರವೇಶಿಸಿದರೆಂದು ಬಿಜೆಪಿ ಟೀಕಿಸಿತ್ತು. ಇದು ಮಹಾಪರಾಧವೆಂಬಂತೆ ಬಿಂಬಿಸುವ ಪ್ರಯತ್ನಗಳು ಮಾಧ್ಯಮಗಳಲ್ಲಿ ಆಗಿದ್ದವು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿಯವರು ಮಾಂಸಾಹಾರದ ಪರ ಬ್ಯಾಟಿಂಗ್ ಮಾಡಿದ್ದಾರೆ. “ನಾನು ತಿನ್ನೋ ಜಾತಿಯಲ್ಲಿ ಹುಟ್ಟಿದ್ದೀನಿ. ಸಂಕೋಚ ಏನ್ರೀ? ಹೊರಗಡೆ ಹೋಗಿ ಕೈಮುಗಿದು ಬಂದಿದ್ದೇನೆ. ತಪ್ಪೇನಿಲ್ಲ. ಇಷ್ಟು ಆದ ಮೇಲೂ ದಾಷ್ಟ್ಯವನ್ನು ತೋರಿಸಿಲ್ಲ. ನಾನ್ವೆಜ್ ದೇವರುಗಳು ಇದ್ದಾವೆ. ಅವರದ್ದು ದಾಷ್ಟ್ಯ, ನನ್ನದು ನಿವೇದನೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಫೆಬ್ರವರಿ 19ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ.ರವಿ ಆಗಮಿಸಿದ್ದರು. ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ಭಟ್ಕಳಕ್ಕೆ ಸಿ.ಟಿ.ರವಿ ಆಗಮಿಸಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸವಿದಿದ್ದರು. ಬಾಡೂಟ ಸವಿದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಹರಿದಾಡುತ್ತಿದೆ.
ಬಾಡೂಟ ಸವಿದು ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ್ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಸಿ.ಟಿ.ರವಿ ದೇವಸ್ಥಾನಕ್ಕೆ ತೆರಳಿದ್ದರು. ಇದು ಚರ್ಚೆಗೆ ಕಾರಣವಾಗಿದೆ.
‘ಕಾಂಗ್ರೆಸ್ನವರು ತಿಂದರೆ ಮಾಂಸ, ಬಿಜೆಪಿಯವರು ತಿಂದರೆ ಕ್ಯಾರೆಟ್ ಹಲ್ವಾನಾ?’
ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದ್ದು, “ಕಾಂಗ್ರೆಸ್ನವರು ತಿಂದರೆ ಮಾಂಸ, ಬಿಜೆಪಿಗರು ತಿಂದರೆ ಮಾಂಸವೂ ಕ್ಯಾರೆಟ್ ಹಲ್ವಾದಂತಾಗುತ್ತದೆಯೇ? ಮಾಂಸದೂಟ ಸೇವಿಸಿ ಹನುಮನ ದೇವಸ್ಥಾನಕ್ಕೆ ಹೋಗಿದ್ದ ಸಿ.ಟಿ.ರವಿಯವರು ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಬಾಯಿ ಬಡಿದುಕೊಳ್ಳುತ್ತಿಲ್ಲವೇಕೆ? ಈಗ ದೇವಾಲಯ ಮೈಲಿಗೆಯಾಗಿಲ್ಲವೇ? ಗೋಮೂತ್ರ ಎರಚುವುದಿಲ್ಲವೇ?” ಎಂದು ಕೇಳಿದೆ.
ಇದನ್ನೂ ಓದಿರಿ: ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ
“ದ್ವೇಷ ಕಾರುವುದನ್ನೇ ಧರ್ಮ ಎಂದುಕೊಂಡಿರುವ ಬಾಯಿಹರುಕ ಸಿ.ಟಿ.ರವಿಯವರು, ದೇವಸ್ಥಾನಕ್ಕೆ ಹೋಗುವ ಮುನ್ನ ತಿಂದ ಮಾಂಸದ ಮೆನು ಏನು ಬಿಜೆಪಿ ಕರ್ನಾಟಕ? ಫಿಶ್ ಫ್ರೈ? ಚಿಕನ್ ಕಬಾಬ್? ಲೆಗ್ ಪೀಸ್? ಮಟನ್ ಕುರ್ಮಾ? ಚಿಕನ್ ಟಿಕ್ಕಾ? ನಾಟಿಕೋಳಿ ಸಾಂಬಾರ್? ಫೋರ್ಕ್ ಫ್ರೈ? ಬೀಫ್ ಬಿರಿಯಾನಿ? ಸಿಟಿ ರವಿ ತಟ್ಟೆಯನ್ನು ಬಿಜೆಪಿಗರು ಇಣುಕಿ ನೋಡಿಲ್ಲವೇ?” ಎಂದು ಸರಣಿ ಪ್ರಶ್ನೆಗಳನ್ನು ಎಸೆದಿದೆ.
ಇದು ವಿವಾದವೇ ಅಲ್ಲ: ಸಿದ್ದರಾಮಯ್ಯ
ಈ ವಿಚಾರವಾಗಿ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, “ದೇವಸ್ಥಾನಕ್ಕೆ ಹೋಗೋದು, ಹೋಗದೇ ಇರುವುದು, ಮಾಂಸ ತಿನ್ನೊದು ತಿನ್ನದೇ ಇರುವದು ವಿವಾದವೇ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಜನರ ಸಮಸ್ಯೆಗಳು, ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ನಾನು ಈಗಾಗಲೇ ಬಿಜೆಪಿಗರಿಗೆ ನಾವು ಚರ್ಚೆ ಮಾಡಲು ತಯಾರಿದ್ದೇವೆ. ನೀವು ತಯಾರಿದ್ದೀರಾ ಎಂದು ಕೇಳಿದ್ದೇನೆ” ಎಂದಿದ್ದಾರೆ.
“ಈ ನಾಡಿನ ರೈತರಿಗೆ, ಬಡವರಿಗೆ ಏನು ಮಾಡಿದ್ದಾರೆ ಅಂತ ಬಿಜೆಪಿಯವರು ಹೇಳಬೇಕು. ಜನರ ಸಮಸ್ಯೆಗಳನ್ನು ಬಗೆ ಹರಿಸುವದನ್ನು ಬಿಟ್ಟು, ನಾಮ(ತಿಲಕ) ಹಾಕಿಕೊಳ್ಳುವದು, ದೇವಸ್ಥಾನಕ್ಕೆ ಹೋಗುವದು, ಟಿಪ್ಪು ಸುಲ್ತಾನ್, ಗಾಂಧಿ, ಗೋಡೆ, ಸಾವರ್ಕಕರ್ ಬಗ್ಗೆ ಮಾತನಾಡುವದು- ಇವೆಲ್ಲ ರಿಲೆವೆಂಟ್ ವಿಷಯಗಳಲ್ಲ” ಎಂದು ತಿಳಿಸಿದ್ದಾರೆ.