ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡ್ನ ಕ್ಷೇತ್ರ ವ್ಯಾಪ್ತಿಯ ಐತಿಹಾಸಿಕ ದೇವಸ್ಥಾನವೊಂದರಲ್ಲಿ ಕೋಳಿ ಅಂಗಡಿ (ಚಿಕನ್ ಶಾಪ್) ತೆರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ದೇವಾಲಯದಂತಹ ಕಟ್ಟಡವೊಂದು ಕಾಣಿಸುತ್ತಿದ್ದು, ವ್ಯಕ್ತಿಯೊಬ್ಬರು ಸ್ನೇಹಿತರೇ ಇದು ಸೀತಾರಾಮ ಮಂದಿರ. ಇದರ ಕೆಳಗಡೆ ಚಿಕನ್ ಅಂಗಡಿ ತೆರೆಯಲಾಗಿದೆ ಎಂದು ಹೇಳುವುದು ಕೇಳಿಸುತ್ತದೆ.
ವಿಡಿಯೋದ ಮೇಲೆ ” ಹಿಂದೂಗಳೇ ಎದ್ದೇಳಿ. ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡ್ ಕ್ಷೇತ್ರದಲ್ಲಿ ಸೀತಾರಾಮ ಮಂದಿರದಲ್ಲಿ ಚಿಕನ್ ಶಾಪ್ ತೆರೆಯಲಾಗಿದೆ. ಇದನ್ನು ಈ ಹಿಂದೆ ರಾಹುಲ್ ಗಾಂಧಿ ಉದ್ಘಾಟಿಸಿದ್ದರು. ಕಾಂಗ್ರೆಸ್ಗೆ ಇಡೀ ದೇಶದಲ್ಲಿ ಬಂದರೆ. ನಮ್ಮ ಎಲ್ಲಾ ಮಂದಿರಗಳನ್ನು ಏನು ಮಾಡಬಹುದು ಎಂದು ಯೋಚಿಸಿ. ಇದಕ್ಕಾಗಿಯೇ ಮುಸ್ಲಿಮರು ಕಾಂಗ್ರೆಸ್ ವೋಟ್ ಹಾಕ್ತಾರೆ” ಎಂದು ಬರೆಯಲಾಗಿದೆ.
ಫ್ಯಾಕ್ಟ್ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಈ ಕುರಿತು ಗೂಗಲ್ನಲ್ಲಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ಅನೇಕ ಮಾಧ್ಯಮಗಳು ಪಾಕಿಸ್ತಾನದಲ್ಲಿ ದೇವಾಲಯವನ್ನು ಚಿಕನ್ ಶಾಪ್ ಆಗಿ ಪರಿವರ್ತಿಸಲಾಗಿದೆ ಎಂದಿದೆ.
‘Makhan Ram jaipal Vlogs’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ 25 ಆಗಸ್ಟ್ 2023ರಂದು ‘Seeta Ram Mandir Became chicken shop after partition|| Condition of Mandir In Pakistan’ ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ. ಪಾಕಿಸ್ತಾನದಲ್ಲಿ ಬೃಹತ್ ಸೀತಾರಾಮ ಮಂದಿರವೊಂದರಲ್ಲಿ ಚಿಕನ್ ಶಾಪ್ ಸೇರಿದಂತೆ ಇತರ ಹಲವು ಅಂಗಡಿಗಳು ತೆರೆದಿರುವುದನ್ನು ವ್ಲಾಗರ್ ತೋರಿಸಿದ್ದಾರೆ. ವೈರಲ್ ವಿಡಿಯೋದಲ್ಲಿರುವ ಮಂದಿರ ಮತ್ತು ಯೂಟ್ಯೂಬರ್ ತೋರಿಸಿರುವ ಮಂದಿರ ಒಂದೇ ಆಗಿದೆ.
ಯೂಟ್ಯೂಬ್ ವಿಡಿಯೋದಲ್ಲಿ ತೋರಿಸಿರುವ ದೇವಾಲಯವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝಾಂಗ್ ಜಿಲ್ಲೆಯ ಅಹ್ಮದ್ಪುರ ಸಿಯಾಲ್ ಎಂಬ ಪಟ್ಟಣದಲ್ಲಿದೆ. ಆ ಪ್ರದೇಶದ ಸುತ್ತಲೂ ಯಾವುದೇ ಹಿಂದೂಗಳು ವಾಸಿಸುತ್ತಿಲ್ಲ ಎಂದು ತಿಳಿದು ಬಂದಿದೆ.
2023ರ ಡಿಸೆಂಬರ್ 17 ರಂದು ‘ಪಂಜಾಬ್ ಕೇಸರಿ’ಯಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ, “ಪಾಕಿಸ್ತಾನದ ಅಹ್ಮದ್ಪುರ್ ಸಿಯಾಲ್ನಲ್ಲಿ ಐತಿಹಾಸಿಕ ಸೀತಾರಾಮ ಮಂದಿರ ಇತ್ತು. ಅದನ್ನು ಹಾಳುಗೆಡವಿ ಚಿಕನ್ ಅಂಗಡಿಯಾಗಿ ಪರಿವರ್ತನೆ ಮಾಡಲಾಗಿದೆ. ಈ ದೇಗುಲವನ್ನು ಶತಮಾನಗಳ ಹಿಂದೆ ನಿರ್ಮಿಸಲಾಗಿತ್ತು. ಇದಕ್ಕೆ ಐತಿಹಾಸಿಕ ಮಾತ್ರವಲ್ಲ, ಸಾಂಸ್ಕೃತಿಕ ಮಹತ್ವವೂ ಇದೆ ಎಂದು ಹೇಳಲಾಗಿದೆ.
ಈ ದೇವಾಲಯದ ಕುರಿತು, ಪಾಕಿಸ್ತಾನದ ‘ದಿ ಫ್ರೈಡೇ ಟೈಮ್ಸ್ ವೆಬ್ಸೈಟ್’ನಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ. ಈ ಲೇಖನವನ್ನು 12 ಮೇ 2017 ರಂದು ಪ್ರಕಟಿಸಲಾಗಿದೆ. ಲೇಖನದ ಪ್ರಕಾರ, ಸೀತಾ ರಾಮ ದೇವಾಲಯವನ್ನು 1887 ರಲ್ಲಿ ನಿರ್ಮಿಸಲಾಯಿತು ಮತ್ತು ಭಾರತದ ವಿಭಜನೆಯ ಮೊದಲು ನಗರದಲ್ಲಿ ಪ್ರಮುಖ ದೇವಾಲಯವಾಗಿತ್ತು. ವಿಭಜನೆಯ ನಂತರ, ದೇವಾಲಯವನ್ನು ಕೈಬಿಡಲಾಯಿತು ಮತ್ತು ದೇವಾಲಯದ ಒಳಗಿದ್ದ ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ಸ್ಥಳೀಯರು ಲೂಟಿ ಮಾಡಿದರು ಎಂದು ತಿಳಿದು ಬಂದಿದೆ.
ನಾವು ನಡೆಸಿದ ಪರಿಶೀಲನೆಯಲ್ಲಿ ಕೇರಳದ ವಯನಾಡ್ನಲ್ಲಿ ಸೀತಾರಾಮ ಮಂದಿರವನ್ನು ಚಿಕನ್ ಶಾಪ್ ಆಗಿ ಪರಿವರ್ತಿಸಲಾಗಿದ ಎಂಬ ಸುದ್ದಿ ಸುಳ್ಳು ಎಂಬುವುದು ಗೊತ್ತಾಗಿದೆ. ತಪ್ಪಾದ ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಿರುವ ವಿಡಿಯೋದಲ್ಲಿರುವ ದೇವಸ್ಥಾನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝಾಂಗ್ ಜಿಲ್ಲೆಯ ಅಹ್ಮದ್ಪುರ ಸಿಯಾಲ್ ಎಂಬ ಪಟ್ಟಣದಲ್ಲಿದೆ. ಈಗ ಅದರಲ್ಲಿ ಚಿಕನ್ ಸೇರಿದಂತೆ ಇತರ ಅಂಗಡಿಗಳನ್ನು ತೆರೆದಿರುವುದು ನಿಜ.