ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ತಾ ಯೋಜನೆ ಜಾರಿಗಾಗಿ ದೆಹಲಿಯ ಚಾರಿತ್ರಿಕ ಕಟ್ಟಡಗಳನ್ನು ಕೆಡವಲಾಗುತ್ತಿದೆ. ಕರೊನಾ ಸಾಂಕ್ರಾಮಿಕದ ನಡುವೆಯೂ ಕೇಂದ್ರದ ಸೆಂಟ್ರಲ್ ವಿಸ್ತಾ ಕಾಮಗಾರಿ ಬರದಿಂದ ಸಾಗುತ್ತಿದೆ. ದೆಹಲಿಯ ಚಾರಿತ್ರಿಕ ಇತಿಹಾಸವನ್ನು ಬದಲಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಮಾಣ ಕಾಮಗಾರಿ ನಿಲ್ಲಿಸಬೇಕೆಂದು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ದಾಖಲಾಗಿತ್ತು. ದೆಹಲಿ ಹೈಕೋರ್ಟ್ ಕಳೆದ ತಿಂಗಳು ಸೆಂಟ್ರಲ್ ವಿಸ್ತಾ ಯೋಜನೆ ರಾಷ್ಟ್ರೀಯ ಹಿತಾಸಕ್ತಿಯ ಯೋಜನೆಯಾಗಿದ್ದು ಕಾಮಗಾರಿಯನ್ನು ನಿಲ್ಲಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ. ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಸಿ ನ್ಯಾಯವಾದಿ ಪ್ರದೀಪ್ ಕುಮಾರ್ ಯಾದವ್, ಅನನ್ಯಾ ಮಲ್ಹೋತ್ರಾ, ಸೋಹೇಲ್ ಹಶ್ಮಿಯವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಸುಪ್ರೀಂ ಕೋರ್ಟ್ ಕೂಡ ಅವರ ಮೇಲ್ಮನವಿ ವಜಾಗೊಳಿಸಿದೆ.
ಇಂದು ಮೇಲ್ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಜಸ್ಟಿಸ್ ಎ ಎಮ್ ಖಾನ್ವಿಲ್ಕರ್, ಜಸ್ಟಿಸ್ ದಿನೇಶ್ ಮಾಹೇಶ್ವರಿ, ಜಸ್ಟಿಸ್ ಅನಿರುದ್ಧ್ ಬೋಸ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ “ದೆಹಲಿ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಅರ್ಜಿದಾರರು ಸೆಂಟ್ರಲ್ ವಿಸ್ತಾ ಯೋಜನೆಯ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸುವ ಸ್ಥಾನದಲ್ಲಿ ಇಲ್ಲ. ಇವರು ಅನ್ಯ ವಿಷಯದಲ್ಲಿ ಸಂಶೊಧನೆಯನ್ನು ನಡೆಸಿದ್ದು ವಾಸ್ತಶಿಲ್ಪಕ್ಕೆ ಸಂಬಂಧಿಸಿದ ವಿಷಯದ ತಜ್ಞರಲ್ಲ” ಎಂದು ಅಭಿಪ್ರಾಯಪಟ್ಟಿದೆ.
ಅನನ್ಯ ಮಲ್ಹೋತ್ರಾ ಅವರು ಅನುವಾದಕರಾಗಿದ್ದು ಸೋಹೆಲ್ ಹಶ್ಮಿ ಅವರು ಇತಿಹಾಸಕಾರರಾಗಿದ್ದಾರೆ. ಅನನ್ಯ ಮಲ್ಹೋತ್ರಾ, ಸೋಹೆಲ್ ಹಶ್ಮಿಯವರು ದೆಹಲಿ ಹೈಕೋರ್ಟ್ನಲ್ಲಿ ಸೆಂಟ್ರಲ್ ವಿಸ್ತಾ ಯೋಜನೆಗೆ ತಡೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸುರಕ್ಷತೆಯಿಲ್ಲ. ಅವರ ಜೀವ ಅಪಾಯದಲ್ಲಿದೆ ಎಂದು ಅರ್ಜಿದಾರರು ಹೈಕೋರ್ಟ್ನಲ್ಲಿ ವಾದಿಸಿದ್ದರು. ಸೆಂಟ್ರಲ್ ವಿಸ್ತಾ ಯೋಜನೆ ರಾಷ್ಟ್ರೀಯ ಹಿತಾಸಕ್ತಿಯಿಂದ ಕೂಡಿದ್ದು, ದೇಶದ ಸಂಸತ್ತಿನ ನಿರ್ಮಾಣ ಕಾರ್ಯವೂ ಯೋಜನೆಯಲ್ಲಿ ಒಳಗೊಂಡಿದೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಾಂಟ್ರಾಕ್ಟರ್ಗಳು ಅಳವಡಿಸಿಕೊಂಡಿದ್ದಾರೆ. ನಿಗದಿತ ಗಡುವಿನೊಳಗೆ ಯೋಜನೆಯನ್ನು ಪೂರ್ಣಗೊಳ್ಳಬೇಕು ಎಂದು ಹೇಳಿ ಮೇ 30 ರಂದು ಸೆಂಟ್ರಲ್ ವಿಸ್ತಾ ಯೋಜನೆ ವಿರುದ್ಧದ ಮನವಿಯನ್ನು ವಜಾಗೊಳಿಸಿತ್ತು. ದುರುದ್ಧೇಶಪೂರಿತ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರಿಗೆ 1 ಲಕ್ಷ ರೂ ದಂಡವನ್ನು ಸಹ ದೆಹಲಿ ಹೈಕೋರ್ಟ್ ವಿಧಿಸಿತ್ತು.
ಇದನ್ನೂ ಓದಿ : ಕೇರಳದ ಗ್ರಾಮಗಳ ಹೆಸರು ಬದಲಾವಣೆ ಇಲ್ಲವೆಂದು ಶಾಸಕ ಎ.ಕೆ.ಎಂ. ಅಶ್ರಫ್ ಸ್ಪಷ್ಟನೆ