Homeಚಳವಳಿಸುಳ್ಳು ಕೇಸಿನಲ್ಲಿ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ: ಎಲ್ಲೆಡೆ ತೀವ್ರ ಖಂಡನೆ

ಸುಳ್ಳು ಕೇಸಿನಲ್ಲಿ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ: ಎಲ್ಲೆಡೆ ತೀವ್ರ ಖಂಡನೆ

ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ಉದ್ಯಮಿಯಾಗಿ, ಹೋರಾಟಗಾರರಾಗಿ ತದನಂತರ ಪತ್ರಕರ್ತರಾಗಿ ಸದ್ಯ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

- Advertisement -
- Advertisement -

ಅಕ್ಟೋಬರ್ 24ರ ಗುರುವಾರ ಪತ್ರಕರ್ತ ಮತ್ತು ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ವಿಚಾರಣೆಗೆಂದು ಕರೆದೊಯ್ದಿದ್ದ ರಾಯಚೂರು ಪೊಲೀಸರು ನಿನ್ನೆ ಕೋರ್ಟಿಗೆ ಹಾಜರುಪಡಿಸಿದ್ದಾರೆ. ನವೆಂಬರ್ 06ಕ್ಕೆ ವಿಚಾರಣೆಯನ್ನು ಮುಂದೂಡಿರುವ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ವಿನೋದ, ಮೂರ್ತಿ, ಬಸವರಾಜು ಎಂದೆಲ್ಲಾ ಹೆಸರುಗಳಿಂದ ಆರೋಪಿಸಿರುವ ಪೊಲೀಸರು 1994ರ ರಾಯಚೂರು ಗ್ರಾಮೀಣ (ಯಾಪಲದಿನ್ನಿ) ಪೊಲೀಸ್ ಠಾಣೆಯಲ್ಲಿ ಮೂರು ಕೇಸುಗಳನ್ನು, ರಾಯಚೂರು ನೇತಾಜಿ ನಗರ ಠಾಣೆಯಲ್ಲಿ ಒಂದು ಕೇಸನ್ನು ಹಾಕಿದ್ದಾರೆ. ಕಲಂ 143, 147, 148, 307, 355, 385, 120(ಬಿ) 124(ಎ) ಸೇರಿದಂತೆ ಸುಮಾರು 21 ಸೆಕ್ಷನ್ ಗಳನ್ನು ಹಾಕಿದ್ದಾರೆ. ಅಲ್ಲದೇ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 24ರ ಗುರುವಾರ ರಾಯಚೂರಿನಲ್ಲಿ ನಡೆದ ಗೌರಿಲಂಕೇಶ್ ಬಳಗದ ವಿಚಾರಸಂಕಿರಣದಲ್ಲಿ ಭಾಗವಹಿಸಿದ ನಂತರ ದೊಡ್ಡಿಪಾಳ್ಯರವರನ್ನು ವಶಕ್ಕೆ ಪಡೆದಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಮತ್ತು ಡಿವೈಎಸ್ಪಿ ಶೀಲವಂತರ್ ಸೇರಿದಂತೆ ಹಲವು ಪೊಲೀಸರು ಒಂದು ದಿನಗಳ ಕಾಲ ಸತತ ವಿಚಾರಣೆ ನಡೆಸಿದ್ದಾರೆ. ಅವರ ಮೇಲಿನ ಎಲ್ಲಾ ಆರೋಪಗಳನ್ನು ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರು ನಿರಾಕರಿಸಿದ್ದಾರೆ.

ಪೊಲೀಸರ ಆರೋಪ ನಿರಾಧಾರ, ಇವೆಲ್ಲವೂ ರಾಜಕೀಯ ಪ್ರೇರಿತ ಸುಳ್ಳು ಕೇಸುಗಳು

ನರಸಿಂಹಮೂರ್ತಿಯವರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರ್ ಸಮತಳರವರು ಪೊಲೀಸರ ಆರೋಪ ನಿರಾಧಾರ, ಇವೆಲ್ಲವೂ ರಾಜಕೀಯ ಪ್ರೇರಿತ ಸುಳ್ಳು ಕೇಸುಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರಸಿಂಹಮೂರ್ತಿಯವರು 1990ರಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದು ಬಿಎಂಐಸಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಅವರ ಅಣ್ಣನೊಂದಿಗೆ ಸೇರಿ ರೇಷ್ಮೆ ಮಿಲ್ ವ್ಯವಹಾರ ನಡೆಸಿದ್ದಾರೆ. ಇವೆಲ್ಲದಕ್ಕೂ ಸಾಕಷ್ಟು ದಾಖಲೆಗಳಿರುವುದಲ್ಲದೇ ರಾಯಚೂರಿನ ಕೇಸಿಗೂ ಅವರಿಗೂ ಸಂಬಂಧವಿಲ್ಲ ಎಂದಿದ್ದಾರೆ.

ಯಾರದೋ ಮೇಲಿನ ಕೇಸುಗಳನ್ನು ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರ ಮೇಲೆ ಹಾಕಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಅಲ್ಲದೇ ಪೊಲೀಸರು ಉಲ್ಲೇಖಿಸಿರುವ ಎಲ್ಲಾ ಕೇಸುಗಳು ಈಗಾಗಲೇ ವಿಚಾರಣೆ ನಡೆದು ಖುಲಾಸೆಗೊಂಡಿವೆ. ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ಉದ್ಯಮಿಯಾಗಿ, ಹೋರಾಟಗಾರರಾಗಿ ತದನಂತರ ಪತ್ರಕರ್ತರಾಗಿ ಸದ್ಯ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತವರ ಮೇಲೆ ಸುಳ್ಳು ಕೇಸು ಹಾಕಿರುವುದು ಸರಿಯಲ್ಲ, ಪೊಲೀಸರು ಕೂಡಲೇ ಕೇಸನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ನರಸಿಂಹಮೂರ್ತಿಯವರ ಬಂಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ

ಪೊಲೀಸರು ಖುಲಾಸೆಯಾಗಿರುವ ಕೇಸು ಹಾಕಿರುವುದು ಮತ್ತು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಹೇಳಿರುವುದು ಬಹಳಷ್ಟು ಜನರ ವಿರೋಧಕ್ಕೆ ಗುರಿಯಾಗಿದೆ. ಪೊಲೀಸರ ನಡೆಯನ್ನು ಹಲವಾರು ಜನರು ವ್ಯಂಗ್ಯ ಮಾಡಿ ಟ್ರೋಲ್ ಮಾಡಿದರೆ ಮತ್ತಷ್ಟು ಜನರ ಸರ್ಕಾರದ  ದಮನಕಾರಿ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿಯವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ, ಅದು ಬೇರೆ ವಿಷಯ. ಆದರೆ ಸರ್ಕಾರ ಕೂಡಲೇ‌ ಅವರನ್ನು ಬಿಡುಗಡೆ‌ ಮಾಡಿ ಕ್ಷಮೆ ಕೋರಬೇಕು.‌ ಯಾಕೆಂದರೆ ಬಂಧಿಸಿದ ಕಾರಣ, ಕೇಸು, ಎಸ್ ಪಿ ಕೊಟ್ಟ‌ ಸಮರ್ಥನೆ ಎಲ್ಲವೂ ನಗೆಪಾಟಲಿಗೀಡಾಗುವಂಥದ್ದು. ನಾಗರಿಕ ಸರ್ಕಾರ ಯಾವುದೂ ಈ ಬಗೆಯ‌ ಬ್ಲಂಡರ್ ಮಾಡಲು ಸಾಧ್ಯವಿಲ್ಲ. ನಿಮ್ಮದೇ ಮರ್ಯಾದೆ ಉಳಿಸಿಕೊಳ್ಳಲಾದರೂ ಕೂಡಲೇ ಬಿಡುಗಡೆ ಮಾಡಿ ಎಂದು ಪತ್ರಕರ್ತರಾದ  ದಿನೇಶ್ ಕುಮಾರ್ ದಿನೂರವರು ಒತ್ತಾಯಿಸಿದ್ದಾರೆ.

“ಸರಕಾರ ಬಡವರಿಗಾಗಿ ರೂಪಿಸಿದ ಯೋಜನೆಗಳು ಬಡವರನ್ನು ತಲುಪುತ್ತಿಲ್ಲ” ಎಂದು ಹೇಳುವುದು ಐಪಿಸಿಯ ಯಾವುದೋ ಕಲಂ ಪ್ರಕಾರ ಗಂಭೀರ ಅಪರಾಧವಂತೆ. ಎಷ್ಟು ಯೋಚಿಸಿದರೂ ಅದು ಯಾವ ಕಲಂ ಎಂಬುದು ನೆನಪಿಗೆ ಬರುತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ಹೇಳಿ” ಎಂದು ಹಿರಿಯರಾದ ಶ್ರೀನಿವಾಸ ಕಾರ್ಕಳರವರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರನ್ನು ಕಳೆದ ೨೦ ವರ್ಷಗಳಿಂದ ‘ ತಲೆಮರೆಸಿಕೊಂಡಿದ್ದರೆಂದು’ ಹೇಳಿ, ರಾಯಚೂರು ಪೋಲೀಸರು ಬಂಧಿಸಿರುವುದು ಆಘಾತಕಾರಿಯಾಗಿದೆ. ಇದು ಈಗಾಗಲೇ ದೇಶದಾದ್ಯಂತ ನಡೆಯುತ್ತಿರುವ ಇಂಥದ್ದೇ ಹಲವು ಘಟನೆಗಳಿಗೆ ಪೂರಕವಾಗಿದೆ ಮಾತ್ರವಲ್ಲ ದೇಶಕ್ಕೊಂದು ಸಂದೇಶವನ್ನೂ ರವಾನೆ ಮಾಡುತ್ತಿದೆ. ಇಂಥ ಘಟನೆಗಳು ಸಾಮಾಜಿಕ ಚಿಂತ‌ನಾ ಕ್ರಮಗಳನ್ನೇ ಅಳಿಸಿ ಹಾಕುವ ಪ್ರಯತ್ನಗಳಾಗಿವೆ.
ನಾವೆಲ್ಲ ದಿನಾ ಪೋಲಿಸ್ ಸ್ಟೇಷನ್ ಗೆ ಹೋಗಿ ಸಹಿಹಾಕಿ ಬಂದರೆ ಮಾತ್ರ ‘ ತಲೆಮರೆಸಿಕೊಂಡಿಲ್ಲ’ ಎಂಬರ್ಥ ಹೊರಡುವ ಕ್ರಿಯೆಗಳಿವು.
ನಾವೆಲ್ಲರೂ ದೊಡ್ಡಿಪಾಳ್ಯರ ಬೆಂಬಲಕ್ಕೆ ನಿಲ್ಲುವುದರ ಮೂಲಕ ನಮ್ಮ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳೋಣ.
ಯಾರಿಗೂ ಜೀವಂತ ಆತ್ಮಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ದೆಹಲಿಯ ಜೆ.ಎನ್‌.ಯು ಪ್ರಾಧ್ಯಪಾಕರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ತಿಳಿಸಿದ್ದಾರೆ.

ಈಗ ಕಡಿಮೆಯೆಂದರೂ 15-20 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಚಳವಳಿಗಳಲ್ಲಿ, ಪತ್ರಕರ್ತರಾಗಿ, ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ನಾಯಕರಾಗಿ ಇಡೀ ರಾಜ್ಯಕ್ಕೇ ಚಿರಪರಿಚಿತರಾಗಿರುವ ದೊಡ್ಡಿಪಾಳ್ಯ ನರಸಿಂಹಮೂರ್ತಿ ಯವರನ್ನು ಏಕಾಏಕಿಯಾಗಿ ಪೊಲೀಸರು ಬಂಧಿಸಿದ್ದಾರೆ. 20 ವರ್ಷಗಳ ಹಿಂದೆ ಅವರು ನಕ್ಸಲೀಯ ಚಳುವಳಿಯಲ್ಲಿದ್ದರಂತೆ ಹೀಗಾಗಿ ಬಂಧಿಸಿದ್ದಾರಂತೆ. ಈ 20 ವರ್ಷಗಳ ಹಿಂದೆ ರಾಯಚೂರಿನಲ್ಲಿ ಇದ್ದ ಯಾರೋ ವಿನೋದ್ ಎಂಬ ನಕ್ಸಲೀಯರ ಹೆಸರಿಗೂ ದೊಡ್ಡಿಪಾಳ್ಯ ಮೂರ್ತಿಯವರಿಗೂ ಸಂಬಂಧ ಕಲ್ಪಿಸಿ ಈಗ ಬಂಧಿಸಿರುವುದು ಎಷ್ಟು ಸರಿ? ದೊಡ್ಡಿಪಾಳ್ಯ ನರಸಿಂಹ ಮೂರ್ತಿ ನನಗೆ ಪರಿಚಯವಾಗಿ ಈಗ ಸುಮಾರು 15 ವರ್ಷಗಳಾಯಿತು. ಅಂದಿನಿಂದಲೂ ಬೆಂಗಳೂರಿನಲ್ಲಿ ಅವರು ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ನಮಗೆಲ್ಲ ಆತ್ಮೀಯ ಗೆಳೆಯರಾಗಿಯೂ ಇದ್ದಾರೆ.

2011ರಿಂದ ಕೆಲವು ವರ್ಷಗಳ ಕಾಲ ನಾವು ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಸಹೋದ್ಯೋಗಿಗಳಾಗಿಯೂ ಕೆಲಸ ಮಾಡಿದ್ದೆವು. ನಂತರ ಅವರು ಗೌರಿ ಲಂಕೇಶ್ ಪತ್ರಿಕೆಯಲ್ಲಿ ಸಕ್ರಿಯವಾಗಿದ್ದರು. ಕಾನೂನುಬದ್ಧವಾಗಿ ದಶಕಗಳಿಂದಲೂ ಚಳವಳಿಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಸುಳ್ಳುಕೇಸು ಹಾಕಿ ಜೈಲಿಗೆ ಕಳಿಸುವ ಕೆಲಸ ಶುರುವಾಗಿದೆಯೇ?  ಹೀಗೆ ಹಸಿ ಸುಳ್ಳಿನ ಮೇಲೆ ರಾಜಕೀಯ ಕಾರ್ಯಕರ್ತರೊಬ್ಬರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಯಾವುದೋ ರಾಜಕೀಯ ಒತ್ತಡದಿಂದಲೇ ಪೊಲೀಸರು ಹೀಗೆ ಮಾಡಿರಬಹುದೇ? ಏನೇ ಆಗಲಿ ಇದು ಖಂಡಿನೀಯ. ಕೂಡಲೇ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆಯವರು ಅಭಿಪ್ರಾಯಪಟ್ಟಿದ್ದಾರೆ.

KVS ಆಯೋಜಿಸಿದ ಭಗತ್ ಸಿಂಗ್ ಹುತಾತ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಹೋರಾಟಗಾರ, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಸ್ಥಳೀಯ ಪೋಲಿಸ್ ಇನ್ಸ್ಪೆಕ್ಟರ್ ಅವರ ಜೊತೆಗೂಡಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ್ದ ಚಿತ್ರಗಳಿವು. ಇಂತಹ ನೂರಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ ಮತ್ತು ಭಾಗವಹಿಸಿದ್ದಾರೆ. ಜನಪರವಾದ ಹೋರಾಟಗಳಲ್ಲಿ ಸದಾ ಸಕ್ರಿಯವಾಗಿ ದುಡಿಯುವ ವರ್ಗದವರ ಪರ ಶ್ರಮಿಸುತ್ತಿರುವ ನಮ್ಮ ಮೂರ್ತಿ ಅಣ್ಣ ಬದ್ಧತೆವುಳ್ಳ ಪತ್ರಕರ್ತರೂ ಹೌದು ಎಂದು ನಿಮಗೆಲ್ಲಾ ಗೊತ್ತೇಯಿದೆ ಆದರೂ ಸುಳ್ಳು ಹೇಳುವುದನ್ನು ಪೋಲಿಸರಿಂದ ಕಲಿಯಿರಿ ಎಂದು ಸರೋವರ್ ಬೆಂಕಿಕೆರೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...