Homeಕರ್ನಾಟಕಸುಳ್ಳು ಕೇಸಿನಲ್ಲಿ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ: ಎಲ್ಲೆಡೆ ತೀವ್ರ ಖಂಡನೆ

ಸುಳ್ಳು ಕೇಸಿನಲ್ಲಿ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ: ಎಲ್ಲೆಡೆ ತೀವ್ರ ಖಂಡನೆ

ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ಉದ್ಯಮಿಯಾಗಿ, ಹೋರಾಟಗಾರರಾಗಿ ತದನಂತರ ಪತ್ರಕರ್ತರಾಗಿ ಸದ್ಯ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

- Advertisement -
- Advertisement -

ಅಕ್ಟೋಬರ್ 24ರ ಗುರುವಾರ ಪತ್ರಕರ್ತ ಮತ್ತು ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ವಿಚಾರಣೆಗೆಂದು ಕರೆದೊಯ್ದಿದ್ದ ರಾಯಚೂರು ಪೊಲೀಸರು ನಿನ್ನೆ ಕೋರ್ಟಿಗೆ ಹಾಜರುಪಡಿಸಿದ್ದಾರೆ. ನವೆಂಬರ್ 06ಕ್ಕೆ ವಿಚಾರಣೆಯನ್ನು ಮುಂದೂಡಿರುವ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ವಿನೋದ, ಮೂರ್ತಿ, ಬಸವರಾಜು ಎಂದೆಲ್ಲಾ ಹೆಸರುಗಳಿಂದ ಆರೋಪಿಸಿರುವ ಪೊಲೀಸರು 1994ರ ರಾಯಚೂರು ಗ್ರಾಮೀಣ (ಯಾಪಲದಿನ್ನಿ) ಪೊಲೀಸ್ ಠಾಣೆಯಲ್ಲಿ ಮೂರು ಕೇಸುಗಳನ್ನು, ರಾಯಚೂರು ನೇತಾಜಿ ನಗರ ಠಾಣೆಯಲ್ಲಿ ಒಂದು ಕೇಸನ್ನು ಹಾಕಿದ್ದಾರೆ. ಕಲಂ 143, 147, 148, 307, 355, 385, 120(ಬಿ) 124(ಎ) ಸೇರಿದಂತೆ ಸುಮಾರು 21 ಸೆಕ್ಷನ್ ಗಳನ್ನು ಹಾಕಿದ್ದಾರೆ. ಅಲ್ಲದೇ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 24ರ ಗುರುವಾರ ರಾಯಚೂರಿನಲ್ಲಿ ನಡೆದ ಗೌರಿಲಂಕೇಶ್ ಬಳಗದ ವಿಚಾರಸಂಕಿರಣದಲ್ಲಿ ಭಾಗವಹಿಸಿದ ನಂತರ ದೊಡ್ಡಿಪಾಳ್ಯರವರನ್ನು ವಶಕ್ಕೆ ಪಡೆದಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಮತ್ತು ಡಿವೈಎಸ್ಪಿ ಶೀಲವಂತರ್ ಸೇರಿದಂತೆ ಹಲವು ಪೊಲೀಸರು ಒಂದು ದಿನಗಳ ಕಾಲ ಸತತ ವಿಚಾರಣೆ ನಡೆಸಿದ್ದಾರೆ. ಅವರ ಮೇಲಿನ ಎಲ್ಲಾ ಆರೋಪಗಳನ್ನು ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರು ನಿರಾಕರಿಸಿದ್ದಾರೆ.

ಪೊಲೀಸರ ಆರೋಪ ನಿರಾಧಾರ, ಇವೆಲ್ಲವೂ ರಾಜಕೀಯ ಪ್ರೇರಿತ ಸುಳ್ಳು ಕೇಸುಗಳು

ನರಸಿಂಹಮೂರ್ತಿಯವರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರ್ ಸಮತಳರವರು ಪೊಲೀಸರ ಆರೋಪ ನಿರಾಧಾರ, ಇವೆಲ್ಲವೂ ರಾಜಕೀಯ ಪ್ರೇರಿತ ಸುಳ್ಳು ಕೇಸುಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರಸಿಂಹಮೂರ್ತಿಯವರು 1990ರಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದು ಬಿಎಂಐಸಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಅವರ ಅಣ್ಣನೊಂದಿಗೆ ಸೇರಿ ರೇಷ್ಮೆ ಮಿಲ್ ವ್ಯವಹಾರ ನಡೆಸಿದ್ದಾರೆ. ಇವೆಲ್ಲದಕ್ಕೂ ಸಾಕಷ್ಟು ದಾಖಲೆಗಳಿರುವುದಲ್ಲದೇ ರಾಯಚೂರಿನ ಕೇಸಿಗೂ ಅವರಿಗೂ ಸಂಬಂಧವಿಲ್ಲ ಎಂದಿದ್ದಾರೆ.

ಯಾರದೋ ಮೇಲಿನ ಕೇಸುಗಳನ್ನು ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರ ಮೇಲೆ ಹಾಕಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಅಲ್ಲದೇ ಪೊಲೀಸರು ಉಲ್ಲೇಖಿಸಿರುವ ಎಲ್ಲಾ ಕೇಸುಗಳು ಈಗಾಗಲೇ ವಿಚಾರಣೆ ನಡೆದು ಖುಲಾಸೆಗೊಂಡಿವೆ. ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ಉದ್ಯಮಿಯಾಗಿ, ಹೋರಾಟಗಾರರಾಗಿ ತದನಂತರ ಪತ್ರಕರ್ತರಾಗಿ ಸದ್ಯ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತವರ ಮೇಲೆ ಸುಳ್ಳು ಕೇಸು ಹಾಕಿರುವುದು ಸರಿಯಲ್ಲ, ಪೊಲೀಸರು ಕೂಡಲೇ ಕೇಸನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ನರಸಿಂಹಮೂರ್ತಿಯವರ ಬಂಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ

ಪೊಲೀಸರು ಖುಲಾಸೆಯಾಗಿರುವ ಕೇಸು ಹಾಕಿರುವುದು ಮತ್ತು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಹೇಳಿರುವುದು ಬಹಳಷ್ಟು ಜನರ ವಿರೋಧಕ್ಕೆ ಗುರಿಯಾಗಿದೆ. ಪೊಲೀಸರ ನಡೆಯನ್ನು ಹಲವಾರು ಜನರು ವ್ಯಂಗ್ಯ ಮಾಡಿ ಟ್ರೋಲ್ ಮಾಡಿದರೆ ಮತ್ತಷ್ಟು ಜನರ ಸರ್ಕಾರದ  ದಮನಕಾರಿ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿಯವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ, ಅದು ಬೇರೆ ವಿಷಯ. ಆದರೆ ಸರ್ಕಾರ ಕೂಡಲೇ‌ ಅವರನ್ನು ಬಿಡುಗಡೆ‌ ಮಾಡಿ ಕ್ಷಮೆ ಕೋರಬೇಕು.‌ ಯಾಕೆಂದರೆ ಬಂಧಿಸಿದ ಕಾರಣ, ಕೇಸು, ಎಸ್ ಪಿ ಕೊಟ್ಟ‌ ಸಮರ್ಥನೆ ಎಲ್ಲವೂ ನಗೆಪಾಟಲಿಗೀಡಾಗುವಂಥದ್ದು. ನಾಗರಿಕ ಸರ್ಕಾರ ಯಾವುದೂ ಈ ಬಗೆಯ‌ ಬ್ಲಂಡರ್ ಮಾಡಲು ಸಾಧ್ಯವಿಲ್ಲ. ನಿಮ್ಮದೇ ಮರ್ಯಾದೆ ಉಳಿಸಿಕೊಳ್ಳಲಾದರೂ ಕೂಡಲೇ ಬಿಡುಗಡೆ ಮಾಡಿ ಎಂದು ಪತ್ರಕರ್ತರಾದ  ದಿನೇಶ್ ಕುಮಾರ್ ದಿನೂರವರು ಒತ್ತಾಯಿಸಿದ್ದಾರೆ.

“ಸರಕಾರ ಬಡವರಿಗಾಗಿ ರೂಪಿಸಿದ ಯೋಜನೆಗಳು ಬಡವರನ್ನು ತಲುಪುತ್ತಿಲ್ಲ” ಎಂದು ಹೇಳುವುದು ಐಪಿಸಿಯ ಯಾವುದೋ ಕಲಂ ಪ್ರಕಾರ ಗಂಭೀರ ಅಪರಾಧವಂತೆ. ಎಷ್ಟು ಯೋಚಿಸಿದರೂ ಅದು ಯಾವ ಕಲಂ ಎಂಬುದು ನೆನಪಿಗೆ ಬರುತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ಹೇಳಿ” ಎಂದು ಹಿರಿಯರಾದ ಶ್ರೀನಿವಾಸ ಕಾರ್ಕಳರವರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರನ್ನು ಕಳೆದ ೨೦ ವರ್ಷಗಳಿಂದ ‘ ತಲೆಮರೆಸಿಕೊಂಡಿದ್ದರೆಂದು’ ಹೇಳಿ, ರಾಯಚೂರು ಪೋಲೀಸರು ಬಂಧಿಸಿರುವುದು ಆಘಾತಕಾರಿಯಾಗಿದೆ. ಇದು ಈಗಾಗಲೇ ದೇಶದಾದ್ಯಂತ ನಡೆಯುತ್ತಿರುವ ಇಂಥದ್ದೇ ಹಲವು ಘಟನೆಗಳಿಗೆ ಪೂರಕವಾಗಿದೆ ಮಾತ್ರವಲ್ಲ ದೇಶಕ್ಕೊಂದು ಸಂದೇಶವನ್ನೂ ರವಾನೆ ಮಾಡುತ್ತಿದೆ. ಇಂಥ ಘಟನೆಗಳು ಸಾಮಾಜಿಕ ಚಿಂತ‌ನಾ ಕ್ರಮಗಳನ್ನೇ ಅಳಿಸಿ ಹಾಕುವ ಪ್ರಯತ್ನಗಳಾಗಿವೆ.
ನಾವೆಲ್ಲ ದಿನಾ ಪೋಲಿಸ್ ಸ್ಟೇಷನ್ ಗೆ ಹೋಗಿ ಸಹಿಹಾಕಿ ಬಂದರೆ ಮಾತ್ರ ‘ ತಲೆಮರೆಸಿಕೊಂಡಿಲ್ಲ’ ಎಂಬರ್ಥ ಹೊರಡುವ ಕ್ರಿಯೆಗಳಿವು.
ನಾವೆಲ್ಲರೂ ದೊಡ್ಡಿಪಾಳ್ಯರ ಬೆಂಬಲಕ್ಕೆ ನಿಲ್ಲುವುದರ ಮೂಲಕ ನಮ್ಮ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳೋಣ.
ಯಾರಿಗೂ ಜೀವಂತ ಆತ್ಮಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ದೆಹಲಿಯ ಜೆ.ಎನ್‌.ಯು ಪ್ರಾಧ್ಯಪಾಕರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ತಿಳಿಸಿದ್ದಾರೆ.

ಈಗ ಕಡಿಮೆಯೆಂದರೂ 15-20 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಚಳವಳಿಗಳಲ್ಲಿ, ಪತ್ರಕರ್ತರಾಗಿ, ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ನಾಯಕರಾಗಿ ಇಡೀ ರಾಜ್ಯಕ್ಕೇ ಚಿರಪರಿಚಿತರಾಗಿರುವ ದೊಡ್ಡಿಪಾಳ್ಯ ನರಸಿಂಹಮೂರ್ತಿ ಯವರನ್ನು ಏಕಾಏಕಿಯಾಗಿ ಪೊಲೀಸರು ಬಂಧಿಸಿದ್ದಾರೆ. 20 ವರ್ಷಗಳ ಹಿಂದೆ ಅವರು ನಕ್ಸಲೀಯ ಚಳುವಳಿಯಲ್ಲಿದ್ದರಂತೆ ಹೀಗಾಗಿ ಬಂಧಿಸಿದ್ದಾರಂತೆ. ಈ 20 ವರ್ಷಗಳ ಹಿಂದೆ ರಾಯಚೂರಿನಲ್ಲಿ ಇದ್ದ ಯಾರೋ ವಿನೋದ್ ಎಂಬ ನಕ್ಸಲೀಯರ ಹೆಸರಿಗೂ ದೊಡ್ಡಿಪಾಳ್ಯ ಮೂರ್ತಿಯವರಿಗೂ ಸಂಬಂಧ ಕಲ್ಪಿಸಿ ಈಗ ಬಂಧಿಸಿರುವುದು ಎಷ್ಟು ಸರಿ? ದೊಡ್ಡಿಪಾಳ್ಯ ನರಸಿಂಹ ಮೂರ್ತಿ ನನಗೆ ಪರಿಚಯವಾಗಿ ಈಗ ಸುಮಾರು 15 ವರ್ಷಗಳಾಯಿತು. ಅಂದಿನಿಂದಲೂ ಬೆಂಗಳೂರಿನಲ್ಲಿ ಅವರು ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ನಮಗೆಲ್ಲ ಆತ್ಮೀಯ ಗೆಳೆಯರಾಗಿಯೂ ಇದ್ದಾರೆ.

2011ರಿಂದ ಕೆಲವು ವರ್ಷಗಳ ಕಾಲ ನಾವು ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಸಹೋದ್ಯೋಗಿಗಳಾಗಿಯೂ ಕೆಲಸ ಮಾಡಿದ್ದೆವು. ನಂತರ ಅವರು ಗೌರಿ ಲಂಕೇಶ್ ಪತ್ರಿಕೆಯಲ್ಲಿ ಸಕ್ರಿಯವಾಗಿದ್ದರು. ಕಾನೂನುಬದ್ಧವಾಗಿ ದಶಕಗಳಿಂದಲೂ ಚಳವಳಿಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಸುಳ್ಳುಕೇಸು ಹಾಕಿ ಜೈಲಿಗೆ ಕಳಿಸುವ ಕೆಲಸ ಶುರುವಾಗಿದೆಯೇ?  ಹೀಗೆ ಹಸಿ ಸುಳ್ಳಿನ ಮೇಲೆ ರಾಜಕೀಯ ಕಾರ್ಯಕರ್ತರೊಬ್ಬರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಯಾವುದೋ ರಾಜಕೀಯ ಒತ್ತಡದಿಂದಲೇ ಪೊಲೀಸರು ಹೀಗೆ ಮಾಡಿರಬಹುದೇ? ಏನೇ ಆಗಲಿ ಇದು ಖಂಡಿನೀಯ. ಕೂಡಲೇ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆಯವರು ಅಭಿಪ್ರಾಯಪಟ್ಟಿದ್ದಾರೆ.

KVS ಆಯೋಜಿಸಿದ ಭಗತ್ ಸಿಂಗ್ ಹುತಾತ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಹೋರಾಟಗಾರ, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಸ್ಥಳೀಯ ಪೋಲಿಸ್ ಇನ್ಸ್ಪೆಕ್ಟರ್ ಅವರ ಜೊತೆಗೂಡಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ್ದ ಚಿತ್ರಗಳಿವು. ಇಂತಹ ನೂರಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ ಮತ್ತು ಭಾಗವಹಿಸಿದ್ದಾರೆ. ಜನಪರವಾದ ಹೋರಾಟಗಳಲ್ಲಿ ಸದಾ ಸಕ್ರಿಯವಾಗಿ ದುಡಿಯುವ ವರ್ಗದವರ ಪರ ಶ್ರಮಿಸುತ್ತಿರುವ ನಮ್ಮ ಮೂರ್ತಿ ಅಣ್ಣ ಬದ್ಧತೆವುಳ್ಳ ಪತ್ರಕರ್ತರೂ ಹೌದು ಎಂದು ನಿಮಗೆಲ್ಲಾ ಗೊತ್ತೇಯಿದೆ ಆದರೂ ಸುಳ್ಳು ಹೇಳುವುದನ್ನು ಪೋಲಿಸರಿಂದ ಕಲಿಯಿರಿ ಎಂದು ಸರೋವರ್ ಬೆಂಕಿಕೆರೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...