ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಚಟುವಟಿಕೆ ಗರಿಗೆದರಿವೆ. ಯಾವ ಪಕ್ಷಕ್ಕೂ ಮತದಾರರು ಬಹುಮತ ನೀಡಿಲ್ಲ. ಹೀಗಾಗಿ ಹರ್ಯಾಣದಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿತ್ತು. ಅದೆಲ್ಲಕ್ಕೂ ಈಗ ಉತ್ತರ ಸಿಕ್ಕಿದೆ. ಮತ್ತೊಂದು ಅವಧಿಗೆ ಸರ್ಕಾರ ನಡೆಸಲು ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ರೆಡಿಯಾಗಿದ್ದಾರೆ. ಸಿಎಂ ಆಯ್ಕೆ ಮತ್ತು ಜೆಜೆಪಿ ಜತೆಗಿನ ಸಮ್ಮಿಶ್ರ ಸರ್ಕಾರ ರಚನೆ ವಿಚಾರವಾಗಿ ಬಿಜೆಪಿ ಮಹತ್ವದ ಸಭೆ ನಡೆಯುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಈಗಾಗಲೇ ಹರ್ಯಾಣದ ಜನನಾಯಕ್ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹರ್ಯಾಣದ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರನ್ನು ಚಂಡೀಗಢದಲ್ಲಿ ಭೇಟಿಯಾಗಿರುವ ಮನೋಹರ್ ಲಾಲ್ ಖಟ್ಟರ್ ಸರ್ಕಾರ ರಚಿಸುವುದಾಗಿ ಮನವಿ ಮಾಡಿದ್ದಾರೆ. ಚುನಾವಣಾ ಫಲಿತಾಂಶ ಬಂದ ತಕ್ಷಣ ಮನೋಹರ್ ಲಾಲ್ ಖಟ್ಟರ್, ಹೈಕಮಾಂಡ್ ಬುಲಾವಿಗೆ ಓಗೊಟ್ಟು, ದೆಹಲಿಗೆ ಹೋಗಿದ್ದರು. ಸಾಕಷ್ಟು ಮಾತುಕತೆ, ರಾಜಕೀಯ ತಂತ್ರಗಳನ್ನು ಹೆಣೆದು, ಪ್ರಾದೇಶಿಕ ಪಕ್ಷ ಜೆಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ.
ಹರ್ಯಾಣದ 90 ಸ್ಥಾನಗಳಲ್ಲಿ, ಬಿಜೆಪಿ 40 ಸ್ಥಾನಗಳನ್ನು ಬಾಚಿಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚಿಸಲು ಜೆಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇದನ್ನರಿತ ಬಿಜೆಪಿ, ಜೆಜೆಪಿ ಮುಖ್ಯಸ್ಥ ದುಷ್ಯಂತ್ ಚೌತಾಲಾ ಅವರ ಜತೆ ಚರ್ಚಿಸಿ, ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಈಗ ಎರಡನೇ ಅವಧಿಗೆ ಹರ್ಯಾಣದಲ್ಲಿ ಬಿಜೆಪಿ ಆಡಳಿತ ನಡೆಸಲಿದೆ.
ಹರ್ಯಾಣದಲ್ಲಿ ಸರ್ಕಾರ ರಚನೆಗೆ ಬೇಕಿರುವ ಮ್ಯಾಜಿಕ್ ನಂಬರ್ 46. ಬಿಜೆಪಿ 40 ಸ್ಥಾನ ಪಡೆದಿದ್ದು, ಜೆಜೆಪಿ 10 ಸ್ಥಾನ ಪಡೆದ ಹಿನ್ನೆಲೆ ಸಮ್ಮಿಶ್ರ ಸರ್ಕಾರ ರಚಿಸಲು ಒಪ್ಪಿಕೊಂಡಿವೆ. ಚುನಾವಣೆ ಫಲಿತಾಂಶದ ನಂತರ ದೆಹಲಿಯ ಜನಪಥ್ ನಿವಾಸದಲ್ಲಿ ಜೆಜೆಪಿಯ ದುಷ್ಯಂತ್ ಚೌತಾಲಾ ಪತ್ರಿಕಾಗೋಷ್ಠಿ ನಡೆಸಿ, ಪಕ್ಷದ ಕೆಲ ಷರತ್ತುಗಳನ್ನು ಮುಂದಿಟ್ಟಿದ್ದರು. ಪಕ್ಷದ ಅಜೆಂಡಾವನ್ನು ಒಪ್ಪಿಕೊಳ್ಳುವ ಮತ್ತು ಪ್ಲಕೇಟ್ ಜಾಟ್ ಸಮುದಾಯಕ್ಕೆ ಶೇ. 75ರಷ್ಟು ಮೀಸಲಾತಿ ನೀಡುವುದು, ಹಿರಿಯ ನಾಗರಿಕರಿಗೆ ಪಿಂಚಣಿ, ಉದ್ಯೋಗ ನೀಡಲು ಒಪ್ಪಿಕೊಳ್ಳುವ ಯಾವುದೇ ಪಕ್ಷದ ಜತೆಗೆ ಸೇರಿ ಸರ್ಕಾರ ರಚಿಸುವುದಾಗಿ ಹೇಳಿದ್ದರು.
ಈಗ ಹರ್ಯಾಣದಲ್ಲಿ ಸಿಎಂ ಯಾರಾಗುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದು ಅವಧಿಗೆ ಮನೋಹರ್ ಲಾಲ್ ಖಟ್ಟರ್ ಸಿಎಂ ಆಗುವ ಸಾಧ್ಯತೆಗಳು ಹೆಚ್ಚಿವೆ. ಇಲ್ಲವೇ ಜೆಜೆಪಿ ಪಕ್ಷದ ದುಷ್ಯಂತ್ ಚೌತಾಲಾ ಸಿಎಂ ಹುದ್ದೆಗೆ ಬೇಡಿಕೆಯಿಟ್ಟು, ಅವರೇ ಸಿಎಂ ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.