ತಮಿಳುನಾಡಿನ ತಿರುಚನಾಪಲ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ 30 ಮೀಟರ್ ಆಳದ ಬೋರ್ವೆಲ್ ನಲ್ಲಿ ಸುಜಿತ್ ಕುಮಾರ್ ಎಂಬ ಬಾಲಕ ಸಿಲುಕಿದ್ದಾನೆ. ಶನಿವಾರ ಸಂಜೆ 5:30ರ ವೇಳೆಗೆ ಮಗು ಬೋರ್ವೆಲ್ ನಲ್ಲಿ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮಗುವನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲು ಹರಸಾಹಸ ಮಾಡಲಾಗುತ್ತಿದೆ. ಮೂವತ್ತು ಮೀಟರ್ ಆಳದಲ್ಲಿ ಬಿದ್ದಿದ್ದ ಮಗು, 90 ಅಡಿ ಆಳಕ್ಕೆ ಹೋಗಿದ್ದು, ಸಿಕ್ಕಿಹಾಕಿಕೊಂಡಿದೆ.
ತಮಿಳುನಾಡಿನ ಆರೋಗ್ಯ ಮಂತ್ರಿ ವಿಜಯ್ ಭಾಸ್ಕರ್ ಮಾತನಾಡಿ, ಮಗು ಬಿದ್ದಿರುವ ಬೋರ್ವೆಲ್ ನಲ್ಲಿ ಆಕ್ಸಿಜನ್ ಒದಗಿಸಲಾಗಿದೆ. ಬಾಲಕ ಜೀವಂತವಾಗಿದ್ದಾನೆ. ಮಗು ಅಳುತ್ತಿರುವ ಧ್ವನಿಯನ್ನು ಅಧಿಕಾರಿಗಳು ಕೇಳಿಸಿಕೊಂಡಿದ್ದಾರೆ, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದರು.
ಘಟನಾ ಸ್ಥಳಕ್ಕೆ ವಿಜಯ್ ಭಾಸ್ಕರ್ ಮತ್ತು ಪ್ರವಾಸೋದ್ಯಮ ಸಚಿವ ವಲ್ಲಾಮಂಡಿ ನಟರಾಜನ್ ಭೇಟಿ ನೀಡಿದರು. ರಕ್ಷಣಾ ಕಾರ್ಯಾಚರಣೆಗೆ ಪಕ್ಕದ ಜಿಲ್ಲೆಯಿಂದ ನುರಿತ ತಂತ್ರಜ್ಞರನ್ನು ಕರೆಯಿಸಿದ್ದೇವೆ. ಮಗುವಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಬೋರ್ ವೆಲ್ ನ 60 ಅಡಿ ಆಳದಲ್ಲಿ ಮೈಕ್ ಕ್ಯಾಮರಾ ಬಿಡಲಾಗಿದೆ. ಕ್ಯಾಮರಾದಲ್ಲಿ ಮಗು ಉಸಿರಾಡುತ್ತಿರುವ ಶಬ್ದ ಕೇಳಿಸುತ್ತಿದೆ ಎಂದು ಮಾಹಿತಿ ನೀಡಿದರು.
ಇನ್ನು ಸುಜಿತ್ ಕುಮಾರ್ ಎಂಬ ಬಾಲಕ ಶನಿವಾರ ಸಂಜೆ 5:30ರ ಸುಮಾರಿಗೆ ಬೋರ್ ವೆಲ್ ನಲ್ಲಿ ಬಿದ್ದಿದ್ದಾನೆ. ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ತಮಿಳುನಾಡು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಸ್ಥಳೀಯರು ಸಹ ರಕ್ಷಣಾ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.