ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಕೇರಳ ಗಣರಾಜ್ಯೋತ್ಸವ ಪರೇಡ್ನಿಂದ ಹೊರಗುಳಿಯಲಿದ್ದು, ದೇಶದಾದ್ಯಂತ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ರಾಜ್ಯದ ವಿರೋಧ ಪಕ್ಷಗಳು ಕೂಡಾ ಬಗ್ಗೆ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಕಾರ್ಕಾಳ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒಕ್ಕೂಟ ಸರ್ಕಾರದ ಕ್ರಮವನ್ನು ಸಮರ್ಥಿಸುತ್ತಿದ್ದಾರೆ.
ಈ ಮಧ್ಯೆ ಟ್ಯಾಬ್ಲೊ ಕುರಿತಂತೆ ನಳಿನ್ ಕುಮಾರ್ ಮತ್ತು ಸುನಿಲ್ ಕುಮಾರ್ ಅವರ ಹೇಳಿಕೆಗಳಿಗೆ ಯಾವುದೆ ಸಾಮ್ಯತೆಯಿಲ್ಲದೆ ಇರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರು, ಹೋರಾಟಗಾರರು ಸೇರಿದಂತೆ ಹಲವಾರು ಜನರು ಗುರುತಿಸಿದ್ದು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೇಡ್ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೊವನ್ನು ಒಕ್ಕೂಟ ಸರ್ಕಾರ ನಿರಾಕರಿಸಿರುವುದನ್ನು ಸಮರ್ಥಿಸಿಕೊಂಡಿದ್ದ ಸಂಸ್ಕೃತಿ ಸಚಿವ ಸುನಿಲ್ ಕುಮಾರ್, “ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡಿಗೆ 12 ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅಂದರೆ 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ” ಎಂದು ಹೇಳಿದ್ದರು.
ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಟ್ಯಾಬ್ಲೊ ಸತತವಾಗಿ 13ನೇ ಬಾರಿಗೆ ಆಯ್ಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್ನಲ್ಲಿ, “ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರ ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ಸತತವಾಗಿ 13ನೇ ಬಾರಿ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾಗಿದ್ದು, 12 ರಾಜ್ಯಗಳ ಪೈಕಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಕರ್ನಾಟಕದ್ದಾಗಿದೆ” ಎಂದು ಹೇಳಿದ್ದಾರೆ.
ಆದರೆ ಸಚಿವ ಸುನಿಲ್ ಕುಮಾರ್ ಅವರು, 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ಸುಳ್ಳು ಎಂದು ಹೇಳಿರುವ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಅವರು, “ಸಚಿವ ಸುನಿಲ್ ಕುಮಾರ್ ಅವರು ನಾರಾಯಣ ಗುರುಗಳ ಸ್ಥಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ವಿದ್ರೋಹವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸತತ ಐದು ವರ್ಷಗಳ ಕಾಲ ಕರ್ನಾಟಕದ ಸ್ತಬ್ದಚಿತ್ರಗಳು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಿರುವುದನ್ನು ಸುನೀಲ್ ಕುಮಾರ್ ಮರೆತುಬಿಟ್ಟಂತೆ ಕಾಣುತ್ತಿದೆ” ಎಂದು ಹೇಳಿದ್ದಾರೆ.
“ನಾರಾಯಣ ಗುರುಗಳ ಸ್ಥಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ತಂಡ ಸಚಿವರು ಹೇಳಿರುವ ನಿಯಮವನ್ನು ಯಾಕೆ ಉಲ್ಲೇಖಿಸಿಲ್ಲ? ಯಾಕೆ ಅವರು ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಬದಲಾಗಿ ಶಂಕರಾಚಾರ್ಯರ ಸ್ತಬ್ದಚಿತ್ರವನ್ನು ಸೂಚಿಸಿದ್ದರು?” ಎಂದು ದಿನೇಶ್ ಅಮಿನ್ ಕೇಳಿದ್ದಾರೆ.
“ಸುನೀಲ್ ಕುಮಾರ್ ಒಬ್ಬ ಜವಾಬ್ದಾರಿಯುತ ಸಚಿವರಾಗಿದ್ದು. ಅವರು ಇಲ್ಲದ ನಿಯಮಗಳನ್ನು ಸ್ವಯಂ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಹೋದ್ಯೋಗಿ ಸುನೀಲ್ ಕುಮಾರ್ ಹೇಳಿರುವುದು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ಕರ್ನಾಟಕದ ಸ್ತಬ್ದಚಿತ್ರ ಸತತ 13 ನೇ ಬಾರಿ ಗಣರಾಜ್ಯೋತ್ಸವ ಪರೇಡ್ಗೆ ಆಯ್ಕೆಯಾಗಿರುವುದನ್ನು ಮುಖ್ಯಮಂತ್ರಿಗಳು ಹೆಮ್ಮೆ-ಸಂತೋಷದಿಂದ ಹೇಳಿಕೊಂಡಿದ್ದಾರೆ. ಸುನೀಲ್ ಕುಮಾರ್ ಮೂರು ವರ್ಷಗಳ ನಿಯಮವನ್ನು ಎಲ್ಲಿಂದ ಅಗೆದು ತೆಗೆದಿದ್ದಾರೆ ಎನ್ನುವುದನ್ನು ತಿಳಿಸಬೇಕು” ಎಂದು ದಿನೇಶ್ ಅಮಿನ್ ಅವರು ಪ್ರಶ್ನಿಸಿದ್ದಾರೆ.
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ನಾರಾಯಣ ಗುರುಗಳ ಟ್ಯಾಬ್ಲೊವನ್ನು ಒಕ್ಕೂಟ ಸರ್ಕಾರ ನಿರಾಕರಿಸಿರುವುದ ಬಗ್ಗೆ ಬೇರೆಯೆ ಹೇಳಿಕೆಯನ್ನು ನೀಡಿದ್ದಾರೆ. ಅವರು ತನ್ನ ಟ್ವೀಟ್ನಲ್ಲಿ, “ಪ್ರಜಾಪ್ರಭುತ್ವ ದಿನದಂದು ದೆಹಲಿಯ ರಾಜಪಥದಲ್ಲಿ ಚಲಿಸುವ ಟ್ಯಾಬ್ಲೋಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳಿವೆ. ಒಕ್ಕೂಟ ಸರ್ಕಾರ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕೇರಳ ನಿರ್ಲಕ್ಷ್ಯ ಮಾಡಿದೆ. ಕೇರಳ ಸರಕಾರದ ಧೋರಣೆಯಿಂದ ರದ್ದಾಗಿದೆ ವಿನಃ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಎನ್ನುವ ಕಾರಣಕ್ಕೆ ಒಕ್ಕೂಟ ಸರಕಾರ ರದ್ದು ಮಾಡಿಲ್ಲ” ಎಂದು ಹೇಳಿದ್ದಾರೆ.
ಒಕ್ಕೂಟ ಸರ್ಕಾರವು ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ಮಾಡಿರುವುದರ ಬಗ್ಗೆ ಬಿಜೆಪಿಯ ಮೂವರು ನಾಯಕರ ಹೇಳಿಕೆಯ ನಡುವೆ ಯಾವುದೆ ತಾಳೆಯಾಗುತ್ತಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗಾಗಿ ನಾನುಗೌರಿ.ಕಾಂ ಸಚಿವ ಸುನಿಲ್ ಕುಮಾರ್ ಅವರನ್ನು ಸಂಪರ್ಕಿಸಿತ್ತಾದರೂ ಅವರು ಕರೆಯನ್ನು ಸ್ವೀಕರಿಸಿಲ್ಲ. ಅವರ ಹೇಳಿಕೆ ಸಿಕ್ಕ ಕೂಡಲೇ ಅದನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ನಾರಾಯಣ ಗುರುಗಳ ಟ್ಯಾಬ್ಲೋ ಗಣರಾಜ್ಯೋತ್ಸವ ಪರೇಡ್ ಗೆ ಮೋದಿ ಸರಕಾರದಿಂದ ತಿರಸ್ಕಾರ ಗೊಂಡಿರುವ ವಿಚಾರದಲ್ಲಿ ಸಚಿವ ಸುನಿಲ್ ಕುಮಾರ್ ಸುಳ್ಳು ಹೇಳಿ ಬಹಿರಂಗವಾಗಿ ಸಿಕ್ಕಾಕಿಕೊಂಡಿದ್ದಾರೆ. ಅವರು ಈ ಕುರಿತು ನಾರಾಯಣ ಗುರುಗಳ ಸಮಸ್ತ ಅನುಯಾಯಿಗಳು, ಹಾಗೂ ಕೇರಳದ ಎಡರಂಗ ಸರಕಾರದ ಮುಂದೆ ಕ್ಷಮೆ ಯಾಚಿಸಬೇಕು. ಅದಕ್ಕಿಂತ ಮುಂಚೆ ಅವರು ತಕ್ಷಣ ಒಂದು ಬೈಠಕ್ ಸೇರಿ ನಾರಾಯಣ ಗುರುಗಳ ಟ್ಯಾಬ್ಲೋ ವಿಚಾರಕ್ಕೆ ಸಂಬಂಧಿಸಿ ಕೇರಳದ ಕಮ್ಯುನಿಸ್ಟ್ ಸರಕಾರದ ವಿರುದ್ದ ಒಂದು ಪರಿಣಾಮಕಾರಿ ಆರೋಪ ಸಿದ್ದಪಡಿಸಬೇಕು. ನಳಿನ್ ಕುಮಾರ್ ಒಂದು ಆರೋಪ, ಸುನಿಲ್ ಕುಮಾರ್ ಇನ್ನೊಂದು ಆರೋಪ, ಬೊಮ್ಮಾಯಿಯವರದ್ದು ಮತ್ತೊಂದು ಹೇಳಿಕೆ…ಒಂದಕ್ಕೂ ತಾಳಮೇಳ ಇಲ್ಲ. ಒಳ್ಳೆ ಜೋಕರ್ಗಳಂತಾಗಿದ್ದಾರೆ” ಎಂದು ಹೇಳಿದ್ದಾರೆ.
ಈ ಮಧ್ಯೆ, ತಮಿಳುನಾಡಿನ ಟ್ಯಾಬ್ಲೊಗೂ ಒಕ್ಕೂಟ ಸರ್ಕಾರ ಅನುಮತಿ ನಿರಾಕರಿಸಿದೆ. ತಮಿಳುನಾಡು ಸರ್ಕಾರವು ಸ್ವಾತಂತ್ಯ್ರ ಹೋರಾಟಗಾರರಾದ ಸುಬ್ರಮಣ್ಯ ಭಾರತಿ, ವಿ.ಒ. ಚಿದಂಬರನಾರ್, ರಾಣಿ ವೇಲು ನಾಚಿಯಾರ್, ಮರುತು ಪಾಂಡಿಯರ್ ಸೇರಿದಂತೆ ಹಲವು ಪ್ರಸಿದ್ದ ಸ್ವಾತಂತ್ಯ್ರ ಹೋರಾಟಗಾರರ ಟ್ಯಾಬ್ಲೊವನ್ನು ಸಿದ್ದಪಡಿಸಿತ್ತು. ಆದರೆ ಒಕ್ಕೂಟ ಸರ್ಕಾರವು ಇವರು ಪ್ರಸಿದ್ದ ಸ್ವಾತಂತ್ಯ್ರ ಹೋರಾಟಗಾರರಲ್ಲ ಎಂದು ಹೇಳಿ ನಿರಾಕರಿಸಿದೆ ಎಂದು ವರದಿಯಾಗಿದೆ. ಜೊತೆಗೆ ಸ್ವಾತಂತ್ಯ್ರ ಹೋರಾಟಗಾರ ವಿ.ಒ. ಚಿದಂಬರನಾರ್ ಅವರನ್ನು ‘ವ್ಯಾಪಾರಿ’ ಎಂದು ಸರ್ಕಾರ ಹೇಳಿದೆ.