Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಮನುಕುಲಕ್ಕೆ ವೇದ್ಯ, ಬದುಕಿಗೆ ನೈವೇದ್ಯ ಠಾಗೋರ್‍ ಅವರ ಗೀತಾಂಜಲಿ

ಮನುಕುಲಕ್ಕೆ ವೇದ್ಯ, ಬದುಕಿಗೆ ನೈವೇದ್ಯ ಠಾಗೋರ್‍ ಅವರ ಗೀತಾಂಜಲಿ

- Advertisement -
- Advertisement -

ಸಂಕಟದಲಿ ಸಂರಕ್ಷಿಸು ಎಂಬ ಪ್ರಾರ್ಥನೆ ಇಲ್ಲ
ಸಂಕಟದಲಿ ಭಯವಿರದಿರೆ ಸಾಕು, ಹೆಚ್ಚಿನದೇನೂ ಬೇಕಿಲ್ಲ

ಜನರ ಭಯ ಮತ್ತು ಆಸೆಗಳೆಂಬ ಮೂಲ ಪ್ರವೃತ್ತಿಯೇ ಪುರೋಹಿತಶಾಹಿಯ ಬಂಡವಾಳ. ದೈವಿಕ ಪ್ರತಿಮೆಯನ್ನು ಮುಂದಿಟ್ಟುಕೊಂಡು ಭಕ್ತ ಮತ್ತು ಭಗವಂತರಿಬ್ಬರೂ ಸಂಧಿಸದ ಹಾಗೆ ನೋಡಿಕೊಳ್ಳುವ ಪುರೋಹಿತವರ್ಗವನ್ನು ದಾಟಿ ತಮ್ಮ ಅಂತರಂಗದಲ್ಲಿಯೇ ಭಗವಂತನೆಂಬ ಪೂರ್ಣಾಸ್ತಿತ್ವದ ಚೈತನ್ಯವನ್ನು ಬಿಂಬ ಪ್ರತಿಬಿಂಬದಂತೆ ನೋಡುವ ಭಕ್ತಿಯೇ ರವೀಂದ್ರನಾಥ ಠಾಗೋರರ ಗೀತಾಂಜಲಿ.

ಇದರಲ್ಲಿನ 103 ಕವನಗಳಲ್ಲಿ ಪ್ರಧಾನವಾಗಿ ಕಾಣುವುದು ಭಾವುಕತೆಯೇ. ಸಾಮಾನ್ಯವಾಗಿ ಕಾವ್ಯವೆಂದ ಕೂಡಲೇ ರೂಪಕಗಳು ಮುನ್ನೆಲೆಗೆ ಬರುವುದಾದರೂ ಗೀತಾಂಜಲಿಯಲ್ಲಿ ಅವು ಸರಳಗೊಳ್ಳುವವು. ಪ್ರಕೃತಿಯ ರೂಪಕಗಳನ್ನೇ ಬಳಸಿದರೂ ಅವು ಕಠಿಣವಾಗಿ ಸಾಂಕೇತಿಕವಾಗಿರುವ ಬದಲು ನೇರವಾಗಿ ಎದೆಗೆ ತಟ್ಟುವವು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಡಬ್ಲ್ಯು ಬಿ ಯೀಟ್ಸ್ “ಠಾಗೂರರು ಭಾರತೀಯ ಸಂಸ್ಕೃತಿಯಂತೆ ಅಂತರಾತ್ಮವನ್ನು ಶೋಧಿಸಿಕೊಳ್ಳುವುದರಲ್ಲಿ ತೃಪ್ತಿಪಡುತ್ತಾರೆ. ಅಂತರಂಗದ ಅಧಿನಾಯಕನ ಪ್ರೇರಣೆಗೆ ತಮ್ಮನ್ನು ಸಮರ್ಪಿಸಿಕೊಂಡುಬಿಡುತ್ತಾರೆ. ಸರಳ, ಸುಂದರ ಮತ್ತು ಮುಗ್ಧತೆ ಇದರಲ್ಲಿದೆ” ಎನ್ನುತ್ತಾರೆ. ಠಾಗೋರರು ಬಾಲ್ಯದಿಂದಲೂ ಕಾವ್ಯಕ್ಕೊಲಿದು ಪ್ರಕೃತಿಯಲ್ಲಿ ಭಾವುಕತೆಯಿಂದ ತನ್ಮಯರಾಗುತ್ತಿದ್ದವರು. ಸಾಂಪ್ರದಾಯಿಕವಾಗಿ ಮನೆಯಲ್ಲಿ ಧಾರ್ಮಿಕತೆಯು ಜೀವಂತವಾಗಿದ್ದರೂ ತಂದೆ ಮತ್ತು ಅಣ್ಣ ಹಾಗೂ ಇತರರಿಗಿದ್ದ ಇಂಗ್ಲೀಷ್ ಸಾಹಿತ್ಯ ಮತ್ತು ವಿಶ್ವ ಸಾಹಿತ್ಯದ ಸಂಗವಿತ್ತು. ಅದರಿಂದಾಗಿ ಅವರ ಧಾರ್ಮಿಕತೆಯು ಸಾಂಪ್ರದಾಯಿಕವಾಗಿ ಸಂಕುಚಿತವಾಗಿರದೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿತ್ತು. ಅಷ್ಟೇ ಅಲ್ಲದೇ ನಾಮ, ರೂಪಗಳನ್ನು ಮೀರಿದ ಮತ್ತು ಪುರೋಹಿತಶಾಹಿಯ ಕಂದಾಚಾರಗಳನ್ನು ಧಿಕ್ಕರಿಸಿದ್ದ ಬ್ರಹ್ಮಸಮಾಜದ ಪ್ರಭಾವವೂ ಅವರಿಗಿತ್ತು.

ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣವನ್ನೇ ವಿರೋಧಿಸಿ ಕೋಣೆಗಳ ಗೋಡೆಗಳ ನಡುವೆ ಶಿಕ್ಷೆ ಮತ್ತು ಶಿಕ್ಷಣ ಎಂಬ ಕಟ್ಟುಪಾಡಿನ ಕಲಿಕೆಯನ್ನು ಬಯಲಿಗೆ, ಮರ ಬಳ್ಳಿಗಳ ಕೆಳಗೆ, ಗಿಡ ಹೂಗಳ ನಡುವೆ, ಮಣ್ಣು ಹುಲ್ಲು ಕಲ್ಲುಗಳ ಮೇಲೆ ತಂದವರು. ಕಂಠಪಾಠದ ಕಠಿಣ ಶಿಕ್ಷಣದ ಶೃಂಖಲೆಗಳಿಂದ ಮಕ್ಕಳನ್ನು ಬಿಡಿಸಿ, ಹಾಡು, ಕತೆ, ಕುಣಿತ, ಚಿತ್ರ ಬಿಡಿಸುವುದಕ್ಕೆ ಅನುವು ಮಾಡಿದವರು. ಅದೇ ಮುಕ್ತ ಮನೋಭಾವ ಮತ್ತು ವೈಶಾಲ್ಯದ ಧೋರಣೆ ಅವರು ಪಡೆದ ಧಾರ್ಮಿಕ ತಿಳುವಳಿಕೆಗೂ ಅನ್ವಯವಾಗುತ್ತದೆ. ತಮ್ಮ ಧಾರ್ಮಿಕತೆಯನ್ನು ಮುಕ್ತ ಆಧ್ಯಾತ್ಮಿಕತೆಯನ್ನಾಗಿ ಪ್ರಕಟಿಸಿದ ಠಾಗೋರ್ ಸಂಪ್ರದಾಯವಾಗಿ ಮೂರ್ತಿಪೂಜಕನಾಗಿ ವರ್ತಿಸದೇ ಹಾಡುಗಳಿಂದ ನಮಿಸಿದ್ದೇ ಈ ಗೀತಾಂಜಲಿ.

ಮೂರ್ತಿಭಂಜನವು ಭಾರತೀಯ ಧಾರ್ಮಿಕತೆಗೇನೂ ಹೊಸತಲ್ಲ. ಉಪನಿಷತ್ತುಗಳಲ್ಲಿಯೇ ಸಾಂಪ್ರದಾಯಕ ಭಕ್ತಿ ಮತ್ತು ನಿವೇದನೆಯನ್ನು ನಿರಾಕರಿಸಿಯಾಗಿತ್ತು. ದೈವತ್ವವನ್ನು ತನ್ನಲ್ಲೇ ಕಾಣುವ ಅಥವಾ ತನ್ನನ್ನು ದೈವತ್ವದಲ್ಲಿ ಕಾಣುವ ಅದ್ವೈತ ತತ್ವವು ಗಟ್ಟಿಗೊಳ್ಳತೊಡಗಿತ್ತು.

ತಾನು ಎಂಬುದು ವ್ಯಕ್ತಿಗತವಾದ ಅಸ್ತಿತ್ವ ಮತ್ತು ‘ಅದು’ ಎನ್ನುವುದು ಮಹಾ ಅಸ್ತಿತ್ವವೆಂಬ ಪರಿಕಲ್ಪನೆಯಲ್ಲಿ ತನ್ನನ್ನೂ ಮತ್ತು ‘ಅದನ್ನೂ’ ಸಂಧಿಸುವ ‘ಸೋಹಂ’ ಎನ್ನುವ ಭಾವಪ್ರಯೋಗಗಳು ನಡೆದಿದ್ದವು. ಆದರೆ ಗೀತಾಂಜಲಿಯಲ್ಲಿ ಠಾಗೂರರು ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ. ನಾನೇ ಅದು, ಅದೇ ನಾನು ಎಂಬ ಭಾವದಲ್ಲಿ ತೋಡಿಕೊಳ್ಳಲಾಗದು. ಮಾನುಷವಾದ ದುಃಖ, ಸಂಕಟ, ನೋವುಗಳನ್ನು ನಿವೇದಿಸಿಕೊಳ್ಳಲಾಗದು. ಅಹಂಬ್ರಹ್ಮಾಸ್ಮಿ ಎಂದು ನಾನೇ ಭಗವಂತನಾಗಿ ನನಗೆ ದುಃಖವಾಗುವುದಿಲ್ಲ, ನೋವಾಗುವುದಿಲ್ಲ ಎಂದು ಆತ್ಮವಂಚನೆ ಮಾಡಿಕೊಳ್ಳಲಾಗದು. ಗೊಂದಲಗಳಾಗುತ್ತವೆ, ತಳಮಳಗಳಾಗುತ್ತವೆ, ಭಯವಾಗುತ್ತದೆ, ಬಯಕೆಯುಂಟಾಗುತ್ತದೆ, ದಿಕ್ಕೆಡುವಂತಾಗುತ್ತದೆ; ಈ ಬಗೆಯ ಹಲವು ಮಾನುಷ ಭಾವಗಳು ಹುಟ್ಟಿದ್ದನ್ನು ಒಪ್ಪದೇ ಇದ್ದರೆ ಹೇಗೆ? ತಾನೊಬ್ಬ ಮೂರ್ಖನೆಂದು ಅರಿವಾಗದಿದ್ದರೆ ಹೇಗೆ? ಅದಕ್ಕೆ ತಮ್ಮ ಅಂತರಂಗದಲ್ಲಿನ ಮಹಾಚೈತನ್ಯಕ್ಕೆ ಅಥವಾ ಮಹಾಅಸ್ತಿತ್ವದ ಬಲಕ್ಕೆ ಅಧಿನಾಯಕನೆಂದು ಕರೆದು, ತಮ್ಮ ಮಾನುಷ ಸಹಜ ಮನೋಭಾವವನ್ನು ವಿನಯಗೊಳಿಸಿಕೊಂಡು ತಮ್ಮ ದೈನೇಸಿಯನ್ನು, ದೌರ್ಬಲ್ಯಗಳನ್ನು, ಆಶಯಗಳನ್ನು ಪ್ರದರ್ಶಿಸಿಕೊಳ್ಳುತ್ತಾ ನಿವೇದಿಸಿಕೊಳ್ಳುತ್ತಾರೆ. ಯಾವ ಪೌರಾಣಿಕ ದೇವರ ಪ್ರತಿಮೆಗಳು ಇಲ್ಲಿಲ್ಲ. ಆದರೆ ಗೀತಾಂಜಲಿ ಸಂಪೂರ್ಣ ಆಸ್ತಿಕ ಭಾವ ಮಂಜರಿಯೇ. ಹಾಗಾಗಿ ವಿಶ್ವದ ಯಾವುದೇ ದೇಶ ಮತ್ತು ಕಾಲದವರು ಗೀತಾಂಜಲಿಯಲ್ಲಿ ವಿಶ್ವಸ್ಥವಾಗಿರುವ ದೈವೀ ಪ್ರತಿಮೆಯಲ್ಲಿ ತಮ್ಮ ದೇವರನ್ನು ಕಂಡುಕೊಳ್ಳಬಹುದು. ಯೆಹೂದಿಗಳಾಗಲಿ, ಮುಸಲ್ಮಾನರು, ಕ್ರೈಸ್ತರು, ಹಿಂದೂಗಳೂ; ದೇವರನ್ನು ಒಪ್ಪುವ ಯಾವುದೇ ಧರ್ಮೀಯರು ತಮ್ಮ ತಮ್ಮ ದೇವರನ್ನು ಅಲ್ಲಿ ಕಾಣಬಹುದು. ಗೀತಾಂಜಲಿ ದೇವರ ಸ್ತುತಿಯಲ್ಲ. ಭಕ್ತನ ನಿವೇದನೆ. ಭಕ್ತನು ಮನುಷ್ಯನಾಗಿರುವ ಕಾರಣದಿಂದ, ಮಾನುಷಾನುಭವಗಳು ದೇಶ ಕಾಲ ಮೀರಿ ಸಹಜ ಮತ್ತು ಸಾಮಾನ್ಯವಾಗಿರುವುದರಿಂದ ಗೀತಾಂಜಲಿಯ ಹಾಡಿನ ನಮಸ್ಕಾರಗಳು ಯಾರ ಭಕ್ತಿಯಾಗಿಯೂ ಪ್ರಕಟಗೊಳ್ಳಬಹುದು.

ನಾಸ್ತಿಕನೊಬ್ಬನಿಗೆ ಒಬ್ಬ ವ್ಯಕ್ತಿಯ ಮನಸ್ಸು ತನ್ನದೇ ಮನಸ್ಸನ್ನು ಮುಖಾಮುಖಿಯಾದಂತೆ ತೋರಬಹುದು. ವ್ಯಕ್ತಿಯೊಬ್ಬನ ಸೀಮಿತ ಮನೋಬಲವು ಅವನದೇ ಆದಂತಹ ಮಹಾಮನೋಬಲಕ್ಕೆ ನಿವೇದಿಸಿಕೊಳ್ಳುವಂತೆಯೂ ತೋರಬಹುದು.

ಒಟ್ಟಾರೆ ಗೀತಾಂಜಲಿಯು ಹಾಡುವುದೇನು? ಆತ್ಮಾವಲೋಕನದ, ಸರಳ ಬಾಳ್ವೆಯ, ದೌರ್ಬಲ್ಯವನ್ನು ಒಪ್ಪುವ, ವಿನಯವಂತಿಕೆಯನ್ನು ಅಪ್ಪುವ, ಹೃದಯವನ್ನು ಅರಳಿಸಿಕೊಳ್ಳುವ, ಮನವನ್ನು ವಿಸ್ತಾರಗೊಳಿಸಿಕೊಳ್ಳುವ, ಪ್ರೇಮ, ಶಾಂತಿ, ಮಮತೆಯ ಹನಿಗಳನ್ನು ಸೇವಿಸುವ ಮತ್ತು ಹಂಚುವ ಆಶಯವನ್ನು. ಅಷ್ಟಾದರೆ ವ್ಯಕ್ತಿಯು ಆಸ್ತಿಕನಾದರೇನು, ನಾಸ್ತಿಕನಾದರೇನು? ಭಕ್ತಿಯಾದರೇನು, ಪ್ರೀತಿಯಾದರೇನು? ಬರಗೆಟ್ಟಿರುವ ಮನುಷ್ಯನ ಬದುಕಿಗೆ ಪ್ರೇಮ, ಶಾಂತಿ, ನೆಮ್ಮದಿ ಮತ್ತು ಮಮತೆಯ ಅನುಭವವಾದರೆ ಸಾಲದೇ!

ಅಧಮರಲ್ಲಿ ಅಧಮರಾದವರ ಅಡಿಯಲ್ಲಿ ಕಳೆದು

ಕಂಗೆಟ್ಟವರ ಕಟ್ಟ ಕಡೆಯಲ್ಲಿ ನಿನ್ನಡಿಯು ತೋರುವುದು.

ಬಡವರಲ್ಲಿ ಬಡವರಾದವರ ಬುಡದಲ್ಲಿ

ದೀನರಲಿ ದೀನರಾದವರ ದಡದಲ್ಲಿ ನಿನ್ನಡಿಯು ರಾಜಿಪುದು.

ಗೀತಾಂಜಲಿಯಲ್ಲಿ ನೀನು ಎನ್ನುವ ಕರೆಯು ದೇವನಿಗಾದರೂ, ದೇವರೆಂಬುವ ಪರಿಕಲ್ಪನೆಯು ತನ್ನ ವಿವಿಧ ಪಾತ್ರಗಳನ್ನು ಧರಿಸುವುದು.

ಚೈತನ್ಯ, ಅನಂತತೆ, ಪ್ರೀತಿ, ಜೀವನ, ಪ್ರಕೃತಿ; ಇತ್ಯಾದಿಗಳೇ ಆ ಪಾತ್ರಗಳು.

ಓ ನನ್ನ ಜೀವನದ ಜೀವನವೇ, ಈ ದೇಹವನು ಸತತ ಪಾವನವಾಗಿರಿಸಿಕೊಳ್ಳುವೆ,

ನಗರಿವಿದೆ ನಿನ್ನ ಜೀವಂತಿಕೆಯ ಸ್ಪರ್ಶ ನನ್ನೆಲ್ಲಾ ಅಂಗಾಂಗಗಳ ಮೇಲಿದೆ.

1912 ರಲ್ಲಿ ಗೀತಾಂಜಲಿಯ ಇಂಗ್ಲೀಷ್ ಆವೃತ್ತಿ ಪ್ರಕಟವಾಯಿತು. 1913ರಲ್ಲಿ ಅದಕ್ಕೆ ನೊಬೆಲ್ ಪಾರಿತೋಷಕವೂ ದೊರೆಯಿತು. ಆದರೆ, ಭಾರತವೂ ಒಳಗೊಂಡಂತೆ ಅನೇಕ ಐರೋಪ್ಯದೇಶಗಳಲ್ಲಿ ಈ ಗೀತ ಸಂಗ್ರಹದಲ್ಲಿರುವ ಅನೇಕಾನೇಕ ಗೀತೆಗಳು ಎಷ್ಟೆಷ್ಟೋ ಜನರ ಅಂತರಂಗದ ನಿವೇದನೆಯನ್ನು ಧ್ವನಿಸುವ ಕವನಗಳಾದವು. ರೋಗದಿಂದ ನರಳುತ್ತಿದ್ದವರು, ಮಾನಸಿಕವಾಗಿ ಬಳಲಿದ್ದವರು, ಜೀವನದಲ್ಲಿ ಚೈತನ್ಯಹೀನರಾದವರು ತಮ್ಮ ದಿಂಬಿನಡಿಯಲ್ಲಿರಿಸಿಕೊಂಡು ಓದಿಕೊಳ್ಳುತ್ತಿದ್ದ ಸಂಗತಿಗಳಿವೆ. ಅಲ್ಲಿ ಗೀತಾಂಜಲಿ ಮನುಕುಲಕ್ಕೆ ವೇದ್ಯವಾಯಿತು. ಬದುಕಿಗೆ ನೈವೇದ್ಯವಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...