ಪೆಟ್ರೋಲ್ ದರ ಗಗನಕ್ಕೆ ಏರಿರುವ ಹೊತ್ತಿನಲ್ಲಿ ತಮಿಳುನಾಡಿನ ಜನರಿಗೆ ಡಿಎಂಕೆ ಸರ್ಕಾರ ಕೊಂಚ ಮಟ್ಟದ ಸಮಾಧಾನ ನೀಡಿದೆ. ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ 3 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಶುಕ್ರವಾರ ಘೋಷಿಸಿದ್ದಾರೆ.
ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರದ ಚೊಚ್ಚಲ ಬಜೆಟ್ ಇದಾಗಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ನಿರ್ದೇಶನದ ಮೇರೆಗೆ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ 3 ರೂಪಾಯಿ ಕಡಿತವನ್ನು ಮಾಡಲಾಗಿದೆ ಎಂದು ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಹೇಳಿದ್ದಾರೆ.
ಆದೇಶ ಜಾರಿಯಾದ ತಕ್ಷಣದಿಂದ ಒಂದು ಲೀಟರ್ ಪೆಟ್ರೋಲ್ಗೆ ಬೆಲೆ 3 ರೂಪಾಯಿಗಳಷ್ಟು ಕಡಿತಗೊಳ್ಳಲಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 1,160 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವ್ಯಾಕ್ಸಿನೇಷನ್ ಅಭಿಯಾನ ಉದ್ಘಾಟಿಸಿದ ತಮಿಳುನಾಡು ಸಿಎಂ ಸ್ಟಾಲಿನ್
ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗಿದೆ. ರಾಜ್ಯದ ಹಣಕಾಸು ಕುರಿತು ‘ಶ್ವೇತ ಪತ್ರ’ ವರದಿಯನ್ನು ಪ್ರಕಟಿಸಿದ ಹಣಕಾಸು ಸಚಿವ ತ್ಯಾಗರಾಜನ್, 2021-22ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್ ಅನ್ನು ಮಂಡಿಸಿದ್ದಾರೆ.
ಡಿಎಂಕೆ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರ್ಗೆ 5 ರೂಪಾಯಿಗಳಷ್ಟು ಕಡಿತ ಮಾಡುವುದಾಗಿ ಘೋಷಿಸಿತ್ತು. ಭರವಸೆಯಂತೆಯೆ ಈಗ 3 ರೂಪಾಯಿಗಳಷ್ಟು ಕಡಿತ ಮಾಡಲಾಗಿದೆ ಎಂದು ಸಚಿವ ತ್ಯಾಗರಾಜನ್ ಹೇಳಿದ್ದಾರೆ.
ಜೊತೆಗೆ ಡಿಎಂಕೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಎಲ್ಲಾ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸೆಪ್ಟೆಂಬರ್ 21 ರಂದು ಬಜೆಟ್ ಅಧಿವೇಶನ ಮುಕ್ತಾಯವಾಗಲಿದೆ. ಅಲ್ಲದೆ, ಮೊದಲ ಬಾರಿಗೆ ಸರ್ಕಾರವು ಕೃಷಿಗಾಗಿ ಪ್ರತ್ಯೇಕ ಬಜೆಟ್ ಅನ್ನು ಮಂಡಿಸಲಿದೆ.
ಇದನ್ನೂ ಓದಿ: ಮೇಕೆದಾಟು: ಕರ್ನಾಟಕದೊಂದಿಗೆ ಯಾವುದೇ ಮಾತುಕತೆಯಿಲ್ಲ, ಕೇಂದ್ರದ ಭರವಸೆಯಿದೆ ಎಂದ ತಮಿಳುನಾಡು ಸಿಎಂ