Homeದಲಿತ್ ಫೈಲ್ಸ್ದಲಿತ್‌ ಫೈಲ್ಸ್‌: ತಮಿಳುನಾಡಿನಲ್ಲಿ ಅರ್ಚಕರಾಗಿ ನೇಮಕವಾದ ಅಬ್ರಾಹ್ಮಣರಿಗೆ ಬ್ರಾಹ್ಮಣರಿಂದ ಕಿರುಕುಳ

ದಲಿತ್‌ ಫೈಲ್ಸ್‌: ತಮಿಳುನಾಡಿನಲ್ಲಿ ಅರ್ಚಕರಾಗಿ ನೇಮಕವಾದ ಅಬ್ರಾಹ್ಮಣರಿಗೆ ಬ್ರಾಹ್ಮಣರಿಂದ ಕಿರುಕುಳ

ದಲಿತ ಹಾಗೂ ಇತರ ಜಾತಿಗಳ ಅರ್ಚಕರು ಅನುಭವಿಸಿದ, ಅನುಭವಿಸುತ್ತಿರುವ ಕಿರುಕುಳದ ಕುರಿತು ‘ನ್ಯೂಸ್‌ ಲಾಂಡ್ರಿ’ ಜಾಲತಾಣ ವರದಿ ಮಾಡಿದೆ. 'ಲಾಸ್ಯ ಶೇಖರ್‌' ಅವರು ಬರೆದಿರುವ ವರದಿಯ ಮೊದಲ ಕಂತು ಇಲ್ಲಿದೆ...

- Advertisement -
- Advertisement -

(ಎಂ.ಕೆ.ಸ್ಟಾಲಿನ್‌ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬ್ರಾಹ್ಮಣೇತರರನ್ನೂ ಅರ್ಚಕರನ್ನಾಗಿ ನೇಮಿಸಿ ಕ್ರಾಂತಿಕಾರಕ ಹೆಜ್ಜೆ ಇರಿಸಿದರು. ಆದರೆ ಶ್ರೇಣಿಕೃತ ಜಾತಿ ವ್ಯವಸ್ಥೆ ಈ ಅರ್ಚಕರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಅವಲೋಕಿಸಿದರೆ ಆತಂಕವಾಗುತ್ತದೆ. ನೇಮಕವಾದ ದಲಿತ ಹಾಗೂ ಇತರ ಜಾತಿಗಳ ಅರ್ಚಕರು ಅನುಭವಿಸಿದ, ಅನುಭವಿಸುತ್ತಿರುವ ಕಿರುಕುಳದ ಕುರಿತು ‘ನ್ಯೂಸ್‌ ಲಾಂಡ್ರಿ’ ಜಾಲತಾಣ ವರದಿ ಮಾಡಿದೆ. ‘ಲಾಸ್ಯ ಶೇಖರ್‌’ ಅವರು ಬರೆದಿರುವ ವರದಿಯ ಮೊದಲ ಕಂತು ಇಲ್ಲಿದೆ)

ಆಗಸ್ಟ್ 14, 2021ರಂದು, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಜ್ಯದಾದ್ಯಂತ ಇರುವ ವಿವಿಧ ದೇವಾಲಯಗಳಿಗೆ 23 ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಿದಾಗ, ಇದು ಆಮೂಲಾಗ್ರ ಬದಲಾವಣೆಯಾಗಿ ಕಂಡಿತು. 1970ರ ದಶಕದಲ್ಲಿ ಸಾಮಾಜಿಕ ಸುಧಾರಕ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌‌ ಅವರು, ಹಿಂದೂ ದೇವಾಲಯಗಳಲ್ಲಿ ಎಲ್ಲಾ ಜಾತಿಯ ಜನರನ್ನು ಅರ್ಚಕರನ್ನಾಗಿ ನೋಡಬೇಕೆಂದು ಕಂಡಿದ್ದ ಕನಸನ್ನು ನಿಜವಾಗಿಸಲು ಸ್ಟಾಲಿನ್ ಮುಂದಾದರು.

ಆಯ್ಕೆಯಾದ 23 ಅರ್ಚಕರಿಗೆ ಸಿಎಂ ಆದೇಶ ಪತ್ರ ನೀಡಿದ್ದು ಬ್ರಾಹ್ಮಣೇತರ ಅರ್ಚಕರ ಜೀವನದಲ್ಲಿ ಹೊಸ ಹೆಜ್ಜೆಯಾಗಿ ಕಂಡಿತು. ನೇಮಕಗೊಂಡವರಲ್ಲಿ ಒಬ್ಬರು ಆಗಸ್ಟ್ 14, 2021ರಂದು ಇಂಡಿಯನ್‌ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡುತ್ತಾ, “ವೈಯಕ್ತಿಕ ಸ್ವಾತಂತ್ರ್ಯವನ್ನು ಪಡೆದಂತೆ ಭಾಸವಾಗುತ್ತಿದೆ” ಎಂದಿದ್ದರು.

ಆದರೆ ಈಗ ಪರಿಸ್ಥಿತಿ ಏನಾಗಿದೆ?

ಶ್ರೀವಿಲ್ಲಿಪುತ್ತೂರಿನ ಸೇತುನಾರಾಯಣ ಪೆರುಮಾಳ್ ದೇವಸ್ಥಾನಕ್ಕೆ ಅರ್ಚಕರಾಗಿ ನೇಮಕಗೊಂಡ 30 ವರ್ಷದ ಕೆ ಕನ್ನಬೀರನ್ ಅವರು ಕಳೆದ ಜನವರಿಯಲ್ಲಿ ರಾಜೀನಾಮೆ ಸಲ್ಲಿಸಿದರು. ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ತನ್ನನ್ನು ಪ್ರತಿದಿನ ಬ್ರಾಹ್ಮಣ ಅರ್ಚಕರು ಅವಮಾನಿಸುತ್ತಿದ್ದರು ಎಂದು ಸೇತುನಾರಾಯಣ ಅವರು ನೋವು ತೋಡಿಕೊಂಡರು. “ಇದು ನನಗಷ್ಟೇ ಅಲ್ಲ, ನನ್ನ ಕುಟುಂಬಕ್ಕೂ ಒತ್ತಡ ತಂದಿತ್ತು. ಹೀಗಾಗಿ ಅರ್ಚಕ ಹುದ್ದೆ ತ್ಯಜಿಸಲು ನಿರ್ಧರಿಸಿದೆ” ಎಂದು ಕನ್ನಬೀರನ್ ಸುದ್ದಿವಾಹಿನಿಗೆ ತಿಳಿಸಿದರು.

ಎಲ್ಲರೂ ಅರ್ಚರಾಗುವ ಅವಕಾಶ

“ಹಿಂದೂ ದೇವಾಲಯಗಳಲ್ಲಿನ ಜಾತಿ ಆಧಾರಿತ ತಾರತಮ್ಯವು ನನ್ನ ಹೃದಯದಲ್ಲಿ ಹೊಕ್ಕಿದ ಮುಳ್ಳು” ಎಂದು ಪೆರಿಯಾರ್‌ ಹೇಳಿದ್ದರು. ಈ ಧಾರ್ಮಿಕ ಸ್ಥಳಗಳಿಗೆ ಎಲ್ಲರಿಗೂ ಪ್ರವೇಶ ನೀಡಬೇಕೆಂದು ಆಗ್ರಹಿಸಿದ್ದ ಅವರು ಕೆಲವು ಬ್ರಾಹ್ಮಣರು ಮಾತ್ರ ಪುರೋಹಿತ್ಯ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದರು. ಎಲ್ಲಾ ಜಾತಿಯ ಜನರು ಅರ್ಚಕರಾಗಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

1971ರಲ್ಲಿ ಅಧಿಕಾರದಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಪೆರಿಯಾರ್‌ ಅಭಿಯಾನದ ಫಲವಾಗಿ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆಗೆ ತಿದ್ದುಪಡಿ ಮಾಡಿತು. ವಂಶ ಪಾರಂಪರ್ಯವಾಗಿ ನಡೆಯುತ್ತಿದ್ದ ನೇಮಕಾತಿಗಳನ್ನು ರದ್ದುಗೊಳಿಸಲು ಪ್ರೇರೇಪಿಸಿತು.

ಕಳೆದ ವರ್ಷ ಆಗಸ್ಟ್‌ನಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ತಮಿಳುನಾಡು ಸರ್ಕಾರ ನೇಮಿಸಿತು. (ಚಿತ್ರ: ನ್ಯೂಸ್‌ಲಾಂಡ್ರಿ)

ಸರ್ಕಾರದ ನಿರ್ಧಾರದ ವಿರುದ್ಧ ಸಿಟ್ಟಿಗೆದ್ದವರು ನ್ಯಾಯಾಲಯದ ಮೊರೆ ಹೋದರು. 1972ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, “ದೇವಾಲಯದ ನಿಯಮಗಳ ಪ್ರಕಾರ ಅರ್ಚಕರನ್ನು ನೇಮಿಸಬೇಕು” ಎಂದಿತು. ಆದರೆ, ಸರ್ಕಾರದ ತಿದ್ದುಪಡಿಗಳನ್ನು ‘ಜಾತ್ಯತೀತ’ ಎಂದು ಗುರುತಿಸಿ ಮಾನ್ಯ ಮಾಡಿತು.

ಇದನ್ನೂ ಓದಿರಿ: ಮೇಕೆದಾಟು: ಸ್ಟಾಲಿನ್‌ ಸರ್ವಪಕ್ಷ ಸಭೆ ಕರೆಯಲಿ- ಕೇಂದ್ರ ಮಾಜಿ ಸಚಿವ ಒತ್ತಾಯ

ಸುಪ್ರಿಂ ತೀರ್ಪಿನ ಕುರಿತು ಡಿಎಂಕೆಯ ಮುಖವಾಣಿಯಾದ ‘ವಿದುತಲೈ’ಗೆ ಸಂಪಾದಕೀಯ ಬರೆದ ಪೆರಿಯಾರ್‌, “ಆಪರೇಷನ್‌ ಯಶಸ್ವಿ; ಆದರೆ ರೋಗಿ ನಿಧನ” ಎಂದಿದ್ದರು.

1971ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿಯವರು, 2006ರಲ್ಲಿ ಮತ್ತೆ ಸಿಎಂ ಆದರು. ಪೆರಿಯಾರ್ ಅವರ ಉದ್ದೇಶವನ್ನು ಪೂರೈಸಲು ಮತ್ತೊಂದು ಪ್ರಯತ್ನವನ್ನು ಮಾಡಿದರು. ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿರುವ 44,713 ದೇವಾಲಯಗಳಲ್ಲಿ “ಅಗತ್ಯವಾದ ಅರ್ಹತೆ ಮತ್ತು ತರಬೇತಿ” ಪಡೆದ ಯಾವುದೇ ವ್ಯಕ್ತಿ ಅರ್ಚಕ ಹುದ್ದೆಗೆ ಅರ್ಹರಾಗಿರುತ್ತಾರೆ ಎಂದು ಘೋಷಿಸಿ ವಿಶೇಷ ಸರ್ಕಾರಿ ಆದೇಶವನ್ನು ಅಂಗೀಕರಿಸಿದರು.

18 ತಿಂಗಳ ಕೋರ್ಸ್ ಅನ್ನು 2007ರಲ್ಲಿ ಪರಿಚಯಿಸಲಾಯಿತು. ಆಸಕ್ತ ಅಭ್ಯರ್ಥಿಗಳು ಯಾವುದೇ ಜಾತಿಯಾದರೂ ಅರ್ಚಕರಾಗಲು ತರಬೇತಿಯನ್ನು ಈ ಕೋರ್ಸ್ ನೀಡುತ್ತದೆ. ಕೋರ್ಸ್‌ಗೆ ದಾಖಲಾದ 240 ಜನರಲ್ಲಿ, 207 ಜನರು ಪದವಿ ಪಡೆದರು. ಆದರೆ ಅಖಿಲ ಭಾರತ ಆದಿಶೈವ ಶಿವಾಚಾರ್ಯರಗಳ ಸೇವಾ ಸಂಘವು ಅರ್ಚಕ ತರಬೇತಿ ಶಾಲೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕಾರಣ ಈ ಪದವೀಧರರು ನಿರುದ್ಯೋಗಿಗಳಾದರು.

ಸುಪ್ರೀಂ ಕೋರ್ಟ್‌ನ 2015ರ ತೀರ್ಪು ಕೋರ್ಸ್‌ಗೆ ಅನುಮತಿ ನೀಡಿದ್ದರೂ, ಅರ್ಚಕಾ ತರಬೇತಿ ಶಾಲೆಗಳು ಕಾರ್ಯನಿರ್ವಹಿಸದೆ ಉಳಿದವು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಾಗಲಿಲ್ಲ.

ಆದರೆ ಅರ್ಚಕರಾಗಲು ಅರ್ಹತೆ ಪಡೆದ ಈ ಪದವೀಧರರಲ್ಲಿ 23 ಮಂದಿಗೆ 13 ವರ್ಷಗಳ ಬಳಿಕ ಅರ್ಚಕರಾಗುವ ಅವಕಾಶ ದೊರಕಿತು. 24 ಜನರ ಅರ್ಚಕ ಹುದ್ದೆಯಲ್ಲಿ 23 ಮಂದಿ ಬ್ರಾಹ್ಮಣೇತರರಿಗೆ ಅವಕಾಶ ನೀಡಿ ಸ್ಟಾಲಿನ್ ಆದೇಶ ಹೊರಡಿಸಿದರು.

ಬ್ರಾಹ್ಮಣ ಪುರೋಹಿತರಿಂದ ಕುರುಕುಳ

ತರಬೇತಿ ಪಡೆದ ದೀರ್ಘ ಅವಧಿಯ ಬಳಿಕ ಅರ್ಚಕರಾದವರು ಅನೇಕ ಸವಾಲುಗಳನ್ನು ಎದುರಿಸಿದರು.

“ನನ್ನ ಜಾತಿ ಯಾವುದೆಂದು ಎಲ್ಲರಿಗೂ ತಿಳಿದಿರುವ ಹಳ್ಳಿಯಲ್ಲಿ ನಾನು ವಾಸಿಸುತ್ತಿದ್ದೇನೆ. ಖಾಸಗಿ ಕಾರ್ಯಕ್ರಮಗಳಿಗೆ ಯಾರೂ ನನ್ನನ್ನು ಕರೆಯುವುದಿಲ್ಲ” ಎಂದು ಹೇಳುವ 2008ರ ಬ್ಯಾಚ್‌ನ ದಲಿತ ವಿದ್ಯಾರ್ಥಿಯೊಬ್ಬರು ತಮ್ಮ ವೃತ್ತಿಯನ್ನು ಈಗ ಬದಲಾಯಿಸಿದ್ದಾರೆ.

“ನನ್ನ ನೇಮಕಾತಿಗೆ ಮೊದಲು, ನನಗೆ ಬೆದರಿಕೆ ಕರೆಗಳು ಬಂದವು. ಇಂದಿಗೂ, ಬ್ರಾಹ್ಮಣರು ನನ್ನನ್ನು ಸಾಯಿಸುವಂತೆ ನೋಡುತ್ತಾರೆ. ನಾನು ಆಗಮಕ್ಕೆ ಬದ್ಧನಾಗಿದ್ದರೂ ನನ್ನ ಪೂಜಾ ವಿಧಾನಗಳನ್ನು ಟೀಕಿಸುತ್ತಾರೆ” ಎಂದು ತಿರುಚಿರಾಪಳ್ಳಿಯ ನಾಗನಾಥಸ್ವಾಮಿ ದೇವಸ್ಥಾನದಲ್ಲಿ ನಿಯೋಜಿಸಲಾದ 33 ವರ್ಷದ ಎಂ ವೇಲುಮುರುಗನ್ ಹೇಳುತ್ತಾರೆ. ಅವರು ದೇವಾಲಯದ ಏಕೈಕ ಅರ್ಚಕರಾಗಿದ್ದಾರೆ.

ಇದನ್ನೂ ಓದಿರಿ: NEET ವಿರುದ್ಧ ಮಸೂದೆ ಅಂಗೀಕರಿಸಿದ ತಮಿಳುನಾಡು ಸರ್ಕಾರ; ಸಿಎಂ ಸ್ಟಾಲಿನ್ ಹೇಳಿದ್ದೇನು?

2021ರಲ್ಲಿ ನೇಮಕವಾದ 23 ಬ್ರಾಹ್ಮಣೇತರ ಅರ್ಚಕರಲ್ಲಿ 10 ಮಂದಿಯೊಂದಿಗೆ ‘ನ್ಯೂಸ್‌ಲಾಂಡ್ರಿ’ ಜಾಲತಾಣವು ಮಾತನಾಡಿದೆ. ಕೇವಲ ಇಬ್ಬರು ಮಾತ್ರ ತಾವು ನೇಮಿಸಿದ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇಬ್ಬರೂ ಬ್ರಾಹ್ಮಣ ಸಹೋದ್ಯೋಗಿಗಳಿಲ್ಲದ ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದಾರೆ!

“ಈ ದೇವಸ್ಥಾನದಲ್ಲಿ ನಾನೊಬ್ಬನೇ ಅರ್ಚಕನಾಗಿರುವುದರಿಂದ ನನಗೆ ಯಾವುದೇ ತಾರತಮ್ಯವಿಲ್ಲ. ಭಕ್ತರಿಂದ ಯಾವುದೇ ವಿರೋಧವಿಲ್ಲ” ಎಂದು ಕೊಯಮತ್ತೂರು ಬಳಿಯ ವಝೈ ತೊಟ್ಟತ್ತು ಅಯ್ಯನ್ ದೇವಸ್ಥಾನದ ಅರ್ಚಕ ಟಿ.ಯೋಗನಾಥನ್ ತಿಳಿಸಿದ್ದಾರೆ.

ಬ್ರಾಹ್ಮಣೇತರ ಪುರೋಹಿತರು ಬ್ರಾಹ್ಮಣ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡಬೇಕಾದಲ್ಲೆಲ್ಲ ತಾರತಮ್ಯ ಮತ್ತು ಕಿರುಕುಳವನ್ನು ಎದುರಿಸುತ್ತಿದ್ದಾರೆ. ಅನೇಕ ಕಡೆ ಬ್ರಾಹ್ಮಣೇತರ ಪುರೋಹಿತರು, “ನಮ್ಮನ್ನು ಮೂಲೆಗುಂಪು ಮಾಡಲಾಗಿದೆ. ನಮ್ಮ ಕೆಲಸವನ್ನು ಮಾಡಲು ಅವಕಾಶ ನೀಡುತ್ತಿಲ್ಲ” ಎಂದಿದ್ದಾರೆ.

ಶ್ರೀವಿಲ್ಲಿಪುತ್ತೂರಿನ ಸೇತುನಾರಾಯಣ ಪೆರುಮಾಳ್ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ, ಆದರೆ ಕಳೆದ ಜನವರಿಯಲ್ಲಿ ರಾಜೀನಾಮೆ ನೀಡಿದ ಕನ್ನಬಿರಾನ್, “ನನ್ನನ್ನು ಅರ್ಚಕ ಹುದ್ದೆಗೆ ನೇಮಿಸಲಾಯಿತು. ಆದರೆ ಎಂದಿಗೂ ನಾನು ಅರ್ಚಕನಾಗಿ ಕೆಲಸ ಮಾಡಲಿಲ್ಲ. ನಾನು ಮಾಡಿದ್ದು ದೇಗುಲವನ್ನು ಶುಚಿಗೊಳಿಸುವುದಷ್ಟೆ” ಎಂದು ವಿಷಾದಿಸಿದ್ದಾರೆ.

ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಮತ್ತೊಬ್ಬ ದಲಿತ ಅರ್ಚಕ, “ಹೆಚ್ಚು ಕೆಲಸ ಇರುವ ದಿನಗಳಲ್ಲಿಯೂ ಅವರು [ಬ್ರಾಹ್ಮಣ ಪುರೋಹಿತರು] ಅಭಿಷೇಕದಂತಹ ಆಚರಣೆಗಳನ್ನು ಮಾಡಲು ನನಗೆ ಅವಕಾಶ ನೀಡುವುದಿಲ್ಲ. ಕಾನೂನಿನಲ್ಲಿ ಅವಕಾಶವಿದ್ದರೂ ಗರ್ಭಗುಡಿಯನ್ನು ಪ್ರವೇಶಿಸಲು ಧೈರ್ಯವಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ತಮಿಳುನಾಡಿನ ದೇವಸ್ಥಾನವೊಂದರ ಮುಖ್ಯ ಅರ್ಚಕರಾಗಿರುವ 31 ವರ್ಷದ ಮಣಿಗಂದನ್ (ಕೋರಿಕೆಯ ಮೇರೆಗೆ ಹೆಸರನ್ನು ಬದಲಾಯಿಸಲಾಗಿದೆ) ಮುಖ್ಯ ದೇವಾಲಯದ ಸನ್ನಿಧಾನಂನಲ್ಲಿ ಪೂಜೆಗಳನ್ನು ನಡೆಸಬೇಕಿದೆ. ಅಲ್ಲಿ ಪ್ರಧಾನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. “ನೀವು ಸನ್ನಿದಾನಂದಲ್ಲಿ ಪೂಜೆಯನ್ನು ನೆರವೇರಿಸಿದರೆ ನಾವು ಗರ್ಭಗುಡಿಯನ್ನು ಪ್ರವೇಶಿಸುವುದಿಲ್ಲ ಎಂದು ಬ್ರಾಹ್ಮಣ ಪುರೋಹಿತರು ಎಚ್ಚರಿಸಿದ್ದಾರೆ” ಎಂದು ನೋವು ತೋಡಿಕೊಂಡಿದ್ದಾರೆ ಮಣಿಗಂದನ್.

ಹೀಗಾಗಿ ಮಣಿಗಂದನ್ ಅವರು ದೇವಾಲಯ ಸಂಕೀರ್ಣದಲ್ಲಿರುವ ನವಗ್ರಹ (ಒಂಬತ್ತು ಗ್ರಹಗಳು) ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು “ಉಪ-ದೇವಾಲಯ” (ಚಿಕ್ಕ ದೇವಾಲಯ) ಎಂದು ಕರೆಯಲಾಗುತ್ತದೆ. “ಬ್ರಾಹ್ಮಣ ಪುರೋಹಿತರು ಅಭಿಷೇಕದಲ್ಲಿ ಸಹಾಯ ಮಾಡಲು ತಮ್ಮ ಸಂಬಂಧಿಕರನ್ನು ಕರೆತರುತ್ತಾರೆ. ನಾನು ಗರ್ಭಗುಡಿಯನ್ನು ಏಕೆ ಪ್ರವೇಶಿಸುವುದಿಲ್ಲ ಎಂದು ಭಕ್ತರು ನನ್ನನ್ನು ಕೇಳಿದರೆ ನನ್ನ ಬಳಿ ಉತ್ತರವಿಲ್ಲ” ಎನ್ನುತ್ತಾರೆ ಅವರು. ಮಣಿಗಂದನ್‌ ಪ್ರಸಾದ ತಯಾರಿಸದಂತೆ ಬ್ರಾಹ್ಮಣ ಸಹೋದ್ಯೋಗಿಗಳು ತಡೆ ಹಿಡಿದಿದ್ದಾರೆ.

ತಿಂಡಿವನಂನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮಡಪಲ್ಲಿ ಪರಿಚಾರಗಾರ ಅಥವಾ ಅಡುಗೆಯವರಾಗಿ 34 ವರ್ಷದ ಆರ್ ಮುರುಗನ್ ನೇಮಕಗೊಂಡರು. ಆದರೆ, ಅವರಿಗೆ ದೇವಸ್ಥಾನದ ಅಡುಗೆ ಕೋಣೆಗೆ ಪ್ರವೇಶ ನಿರಾಕರಿಸಲಾಗಿದೆ. ಮುಖ್ಯ ದೇವಸ್ಥಾನದ ಸನ್ನಿಧಾನಕ್ಕೆ ಪ್ರವೇಶಿಸಲು ಅವರಿಗೆ ಅವಕಾಶವಿಲ್ಲ. ಸಣ್ಣಪುಟ್ಟ ದೇವಾಲಯಗಳನ್ನು ನೋಡಿಕೊಳ್ಳುವುದು, ತುಳಸಿ ಎಲೆಗಳನ್ನು ಕೀಳುವುದು ಮತ್ತು ಗರ್ಭಗುಡಿಯ ಹೊರಗೆ ದೀಪಗಳನ್ನು ಬೆಳಗಿಸುವಂತಹ ಕೆಲಸಗಳನ್ನು ಮುರುಗನ್‌ ಮಾಡುತ್ತಿದ್ದಾರೆ.

“ಹಬ್ಬದ ಸಂದರ್ಭದಲ್ಲಿ ವಾಚ್‌ಮನ್‌ ಜೊತೆಯಲ್ಲಿ ಜನಸಂದಣಿಯನ್ನು ನಿರ್ವಹಿಸಲು ನನಗೆ ಹೇಳಲಾಯಿತು” ಎಂದು ಮುರುಗನ್ ನೋವು ತೋಡಿಕೊಂಡಿದ್ದಾರೆ. ಒಂದು ಸಂದರ್ಭದಲ್ಲಿ, ಪುರೋಹಿತನೊಬ್ಬ ಮುರುಗನ್ ಅಂಗೈ ಮೇಲೆ ಉರಿಯುತ್ತಿರುವ ಕರ್ಪೂರದ ತುಂಡನ್ನು ಇರಿಸಿ, ಇದು ನಿನ್ನನ್ನು ಶುದ್ಧೀಕರಿಸುತ್ತದೆ ಎಂದಿದ್ದನ್ನು ಮುರುಗನ್‌ ನೆನೆಯುತ್ತಾರೆ.

“ದೇಶದಲ್ಲಿ ದಲಿತ ಅಥವಾ ಬ್ರಾಹ್ಮಣೇತರರು ಐಎಎಸ್ ಅಧಿಕಾರಿಯಾಗುವುದು ಅಥವಾ ರಾಷ್ಟ್ರಪತಿಯಾಗುವುದು ಸುಲಭ. ಆದರೆ ಪುರೋಹಿತರಾಗುವುದು ಕಷ್ಟ ಎಂಬುದನ್ನು ಅನುವಂಶಿಕ ಪೌರೋಹಿತ್ಯ ಪ್ರಾಬಲ್ಯ ಸಾಬೀತುಪಡಿಸುತ್ತದೆ. ಈ ಆಚರಣೆಗಳು ಭಾರತೀಯ ಸಂವಿಧಾನದ 17ನೇ ವಿಧಿ [ಅಸ್ಪೃಶ್ಯತೆ ನಿರ್ಮೂಲನೆ] ಉಲ್ಲಂಘನೆಯಾಗಿದೆ” ಎಂದು ತಮಿಳುನಾಡು ಸರ್ಕಾರಿ ಅರ್ಚಕರ ಸಂಘದ ಅಧ್ಯಕ್ಷ ಮತ್ತು 2008ರ ಬ್ಯಾಚ್‌ನ ಸದಸ್ಯ ವಿ ರಂಗನಾಥನ್ ಹೇಳಿದ್ದಾರೆ.

(ಮುಂದುವರಿಯುತ್ತದೆ….)

ಮೂಲ: ನ್ಯೂಸ್ ಲಾಂಡ್ರಿ


ಇದನ್ನೂ ಓದಿರಿ: ಮುಂದಿನ ಚುನಾವಣೆಗೆ ಮುನ್ನೆಲೆಗೆ ಬರುವುದೇ ‘ತಮಿಳುನಾಡು ಮಾದರಿ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. .ಹೀಗೇ ಇಡೀ ದೇಶದಲ್ಲಿ ಈ ರೀತಿಯಾಗಿ ಎಲ್ಲಾ ಜಾತಿಯ ಜನರಿಗೆ ತರಬೇತಿ ನೀಡಿ ಈ ವೃತ್ತಿಯಲ್ಲಿ ಇಳಿಸಿ ಹಾಗೇ ಅವರ ಈ ಕೆಲಸವನ್ನು ಎಲ್ಲಾ ಜನಾಂಗದವರು ವೀಕ್ಷಿಸಲಿ, ಆಗ ಈ ರೀತಿಯ ಕಿರುಕುಳ ತಪ್ಪುತ್ತದೆ.
    ಎಲ್ಲಿ ಆದಾಯ ಕಡಿಮೆಯಾಗುವುದೋ ಎಂದು ನಾನಾ ರೀತಿಯಲ್ಲಿ ಚಿಂತಿಸುವ ಸಹವಿಪ್ರರಿಗೆ ಸರಿಯಾದ ತರಬೇತಿ ನೀಡುವ ಮೂಲಕ ಈ ರೀತಿಯ ಕಿರುಕುಳ ಖಂಡಿತ ತಪ್ಪಿಸಲು ಸಾದ್ಯವಿದೆ.
    ಕೆಲ ಅಸಮ್ಮರ್ಥ ವಿಪ್ರರು ಓಡಿ ಹೋಗಲೂ ಬಹುದು.
    ಒಟ್ಟಾರೆ ಅತ್ಯಂತ ಒಳ್ಳೆಯ ಹೆಜ್ಜೆಗಳು ಎನ್ನುವುದು ಸರಿ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...