ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ ತನ್ನ 7 ವರ್ಷದ ಮಗಳ ಮೃತದೇಹವನ್ನು ವ್ಯಕ್ತಿಯೊಬ್ಬ 10 ಕಿ.ಮೀ ನಷ್ಟು ಹೊತ್ತೊಯ್ದ ಅಮಾನವೀಯ ಘಟನೆ ಛತ್ತೀಸ್ಘಡದಲ್ಲಿ ಜರುಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಆರೋಗ್ಯ ಸಚಿವ ಟಿ.ಎಸ್ ಸಿಂಗ್ ಡ್ಯೂ ತನಿಖೆಗೆ ಆದೇಶಿಸಿದ್ದಾರೆ ಎನ್ಡಿಟಿವಿ ವರದಿ ಮಾಡಿದೆ
ಛತ್ತೀಸ್ಘಡದ ಸುರ್ಗಜ ಜಿಲ್ಲೆಯ ಅಮದಳ ಗ್ರಾಮದ ಈಶ್ವರ್ ದಾಸ್ ಎಂಬುವವರು ಅನಾರೋಗ್ಯಕ್ಕೀಡಾಗಿದ್ದ ತನ್ನ ಮಗಳು ಸುರೇಖಾಳನ್ನು ಲಖನಪುರ್ನಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಚಿಕಿತ್ಸೆ ನೀಡಿದರೂ ಸಹ ಬದುಕುಳಿಯಲಿಲ್ಲ. ಆ ನಂತರ ಶವ ಸಾಗಿಸಲು ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬಾರದ ಕಾರಣ ತನ್ನ ಮಗಳ ಮೃತದೇಹವನ್ನು ಹೆಗಲು ಮೇಲೆ ಹೊತ್ತುಕೊಂಡೇ ತಮ್ಮ ಸ್ವಗ್ರಾಮ ತಲುಪಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಬೆಳಿಗ್ಗೆ ಬಾಲಕಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವಿನ ಆಕ್ಸಿಜನ್ ಮಟ್ಟ 60ಕ್ಕೆ ಕುಸಿದಿತ್ತು. ಅಗತ್ಯ ಚಿಕಿತ್ಸೆ ನೀಡಲು ಆರಂಭಿಸಿತ್ತಾದರೂ ಆರೋಗ್ಯ ಸ್ಥಿತಿ ಬಿಗಡಾಯಿಸಿ ಮಗು ಶನಿವಾರ ಬೆಳಿಗ್ಗೆ 7.30ರ ಸಮಯದಲ್ಲಿ ಕೊನೆಯುಸಿರೆಳೆಯಿತು ಎಂದು ಗ್ರಾಮೀಣ ಆರೋಗ್ಯ ಸಹಾಯಕ ಅಧಿಕಾರಿ ಡಾ ವಿನೋದ್ ಭಾರ್ಗವ್ ಹೇಳಿದ್ದಾರೆ.
ಮಗುವಿನ ಕುಟುಂಬಕ್ಕೆ ಸ್ವಲ್ಪ ಸಮಯದಲ್ಲಿ ಶವ ಸಾಗಿಸುವ ವಾಹನ ಬರುತ್ತದೆ ಕಾಯಿರಿ ಎಂದು ಹೇಳಿದೆವು. 9.20ರ ಸಮಯಕ್ಕೆ ವಾಹನ ಬಂತು. ಆದರೆ ಅಷ್ಟರಲ್ಲಿ ಅವರು ಮೃತದೇಹ ತೆಗೆದುಕೊಂಡು ಹೊರಟು ಹೋಗಿದ್ದರು ಎಂದು ಅವರು ಹೇಳಿದ್ದಾರೆ.
ತಂದೆ ತನ್ನ ಮಗಳ ಮೃತದೇಹವನ್ನು ಹೆಗಲ ಮೆಲೆ ಹೊತ್ತುಕೊಂಡು ಹೋಗುವ ವಿಡಿಯೋ ಹರಿದಾಡಿದ ನಂತರ ಹಲವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರೋಗ್ಯ ವ್ಯವಸ್ಥೆ ಇಷ್ಟು ಹದಗೆಟ್ಟಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಂತರ ಆರೋಗ್ಯ ಸಚಿವ ಟಿ.ಎಸ್ ಸಿಂಗ್ ಡ್ಯೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
Surguja: Chhattisgarh Health Min TS Singh Deo orders probe after video of a man carrying body of his daughter on his shoulders went viral
Concerned health official from Lakhanpur should have made the father understand to wait for hearse instead of letting him go, Deo said(25.3) pic.twitter.com/aN5li1PsCm
— ANI MP/CG/Rajasthan (@ANI_MP_CG_RJ) March 26, 2022
“ನಾನು ಆ ವಿಡಿಯೋ ನೋಡಿದೆ, ಬಹಳ ನೋವಾಯಿತು. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಮತ್ತು ಸೂಕ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಆ ಸಮಯದಲ್ಲಿ ಕರ್ತವ್ಯದಲ್ಲಿ ಇದ್ದವರು ಆದಷ್ಟು ಬೇಗ ಶವ ಸಾಗಿಸುವ ವಾಹನದ ವ್ಯವಸ್ಥೆ ಮಾಡಬೇಕಿತ್ತು. ಆದರೆ ಮಾಡದಿರುವುದು ದುರಾದೃಷ್ಟ. ಕರ್ತವ್ಯ ಲೋಪ ಎಸಗಿದವರನ್ನು ವಜಾಗೊಳಿಸಲಾಗುವುದು” ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಇದು ಮೊದಲ ಘಟನೆಯಲ್ಲ. ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿ ಜರುಗಿವೆ. ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಕಳಪೆ ಮಟ್ಟದಲ್ಲಿರುವುದನ್ನು ಇಂತಹ ಘಟನೆಗಳು ಪದೇ ಪದೇ ನಿರೂಪಿಸುತ್ತಿವೆ. ದೇಶದ ಎಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಸೇವೆ ನೀಡಬೇಕಾದ ಸರ್ಕಾರಗಳು ತಮ್ಮ ಕರ್ತವ್ಯ ಪಾಲಿಸುತ್ತಿಲ್ಲ. ಸಮರ್ಪಕ ಮೇಲ್ವಿಚಾರಣೆ ಇಲ್ಲದ ಕಾರಣಕ್ಕೆ ಇರುವ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅದರಿಂದಾಗಿಯೇ ಇಂತಹ ಅನಾಹುತಗಳು ಸಂಭವಿಸುತ್ತಿವೆ. ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಮತ್ತು ಅದಕ್ಕಾಗಿ ಜನರು ಒತ್ತಾಯಿಸಬೇಕಾಗಿದೆ.
ಇದನ್ನೂ ಓದಿ: ಬಾಲಕನನ್ನು ಬೆತ್ತಲುಗೊಳಿಸಿ, ಬಣ್ಣ ಸುರಿದು ಚಿತ್ರಹಿಂಸೆ: ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ