ಮುಲುಗು: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಮಂದಿ ಮಾವೋವಾದಿ ನಕ್ಸಲರು ಹತರಾಗಿದ್ದಾರೆ ಎಂದು ಮುಲುಗು ಜಿಲ್ಲಾ ಎಸ್ಪಿ ಡಾ.ಶಬರೀಶ್ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ.
ಹತ್ಯೆಯಾದವರಲ್ಲಿ ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐ (ಮಾವೋವಾದಿ)ನ ತೆಲಂಗಾಣ ರಾಜ್ಯ ಸಮಿತಿಯ (ಯೆಲ್ಲಾಂಡು ನರಸಂಪೇಟ್) ಕಾರ್ಯದರ್ಶಿ ಕುರುಸಂ ಮಾಂಗು ಅಲಿಯಾಸ್ ಭದ್ರೂ ಕೂಡ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತೆಲಂಗಾಣದ ಮುಲುಗು ಜಿಲ್ಲೆಯ ಏಟುರುನಗರಂ ಅರಣ್ಯ ಪ್ರದೇಶದಲ್ಲಿ ಇಂದು ನಡೆದ (ಭಾನುವಾರ) ಈ ಗುಂಡಿನ ಚಕಮಕಿಯಲ್ಲಿ ಒಟ್ಟು ಏಳು ಮಂದಿ ಮಾವೋವಾದಿ ನಕ್ಸಲರು ಸಾವನ್ನಪ್ಪಿದ್ದಾರೆ. ನಕ್ಸಲ್ ನಿಗ್ರಹ ದಳದ ಗ್ರೇಹೌಂಡ್ಸ್ ನ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಎನ್ಕೌಂಟರ್ ನಡೆದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಿಂದ ಎರಡು ಎಕೆ 47 ರೈಫಲ್ಗಳನ್ನು ಒಳಗೊಂಡಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಕುರುಸಂ ಮಾಂಗು ಅಲಿಯಾಸ್ ಭದ್ರು ಅಲಿಯಾಸ್ ಪಾಪಣ್ಣ (35), ಏಗೊಳಪು ಮಲ್ಲಯ್ಯ ಅಲಿಯಾಸ್ ಮಧು (43), ಮುಸ್ಸಕಿ ದೇವಳ ಅಲಿಯಾಸ್ ಕರುಣಾಕರ್ (22), ಮುಸ್ಸಕಿ ಜಮುನಾ (23), ಜೈಸಿಂಗ್ (25), ಕಿಶೋರ್ (22) ಮತ್ತು ಕಾಮೇಶ್ (23) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ…ಅರವಿಂದ್ ಕೇಜ್ರಿವಾಲ್ ಮೇಲೆ ನೀರು ಎರಚಿ ದಾಳಿಗೆ ಯತ್ನ; ಆರೋಪಿ ಬಂಧನ


