Homeಕರೋನಾ ತಲ್ಲಣದೇಶದ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಲಸಿಕೆ ನೀಡುವುದು ಸರ್ಕಾರಗಳ ಮೊದಲ ಆದ್ಯತೆಯಾಗಬೇಕು

ದೇಶದ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಲಸಿಕೆ ನೀಡುವುದು ಸರ್ಕಾರಗಳ ಮೊದಲ ಆದ್ಯತೆಯಾಗಬೇಕು

- Advertisement -
- Advertisement -

ಮೂಲ : ದಿ ವೈರ್‌
ಅನುವಾದ : ರಾಜೇಶ್ ಹೆಬ್ಬಾರ್‌

ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್‌ ಲಸಿಕೆ ಸಿಗುತ್ತಿಲ್ಲ. ಲಸಿಕೆ ಯೋಜನೆಯಲ್ಲಿನ ಕೆಲವು ತಾಂತ್ರಿಕ ತೊಂದರೆ ದೇಶದ ಲಕ್ಷಾಂತರ ಅಸಂಘಟಿತ ಕಾರ್ಮಿಕರನ್ನು ವ್ಯಾಕ್ಸಿನೇಶನ್‌ ಪ್ರಕ್ರಿಯೆಯಿಂದ ಹೊರಗಿಟ್ಟಿದೆ. ಇಂದು ಇರುವ ಕೆಲವೇ ಕೆಲವು ಲಸಿಕೆಗಳಿಗಾಗಿ ಸುಶಿಕ್ಷಿತ ವಲಯದ ಜನರು ಮುಗಿಬೀಳುತ್ತಿದ್ದಾರೆ. ಕೊರೋನಾ ಸೋಂಕಿನ ಅಪಾಯಕ್ಕೆ ಅತಿಹೆಚ್ಚು ಬಲಿಯಾಗುವವರು ಅಸಂಘಟಿತ ಕೂಲಿ ಕಾರ್ಮಿಕರು ಮತ್ತು ಲಕ್ಷಾಂತರ ದುಡಿಯುವ ಜನಗಳು. ವ್ಯಾಕ್ಸಿನೇಶನ್‌ ರಕ್ಷಣೆ ಮಾತ್ರ ಲಕ್ಷಾಂತರ ಜನ ದುಡಿಯುವ ಕೈಗಳಿಗೆ ಇನ್ನು ಮರೀಚಿಕೆಯಾಗಿಯೇ ಉಳಿದಿದೆ.

ಕೋವಿಡ್‌ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ ಕಾರಣಗಳಿಂದ ಲಕ್ಷಾಂತರ ಜನ ಅಸಂಘಟಿತ ಕೂಲಿ ಕಾರ್ಮಿಕರ ಜೀವನ ಬೀದಿಗೆ ಬಿದ್ದಿದೆ. ದೇಶದ ಅತಿದೊಡ್ಡ ಶ್ರಮಿಕ ವರ್ಗವನ್ನು ಒಳಗೊಳ್ಳುವ ಅಸಂಘಟಿತ ಕಾರ್ಮಿಕ ವಲಯಕ್ಕೆ ಮಾತ್ರ ಕೋವಿಡ್‌ ಲಸಿಕೆಯೆಂಬುದು ಇನ್ನು ಗಗನ ಕುಸುಮವಾಗಿಯೇ ಉಳಿದಿದೆ. ಕೊರೋನಾ ಎರಡನೇ ಅಲೆ ಮತ್ತು ವ್ಯಾಕ್ಸೀನ್‌ ಕೊರತೆಯ ಸಮಸ್ಯೆಯನ್ನು ಎದುರಿಸಲು ದೇಶ ಹೆಣಗಾಡುತ್ತಿರುವ ಈ ಹೊತ್ತು ಅಸಂಘಟಿತ ಶ್ರಮಿಕ ವರ್ಗಕ್ಕೆ ಲಸಿಕೆಯನ್ನು ಒದಗಿಸುವುದು ಸರ್ಕಾರಗಳ ಮೊದಲ ಆದ್ಯತೆಯಾಗಬೇಕು.

ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಫ್ರಂಟ್‌ಲೈನ್‌ ವಾರಿಯರ್‌ಗಳಿಗೆ ಜನವರಿ ಫೆಭ್ರವರಿಯ ಅವಧಿಯಲ್ಲಿ ಆದ್ಯತೆಯ ಮೇಲೆ ಲಸಿಕೆಗಳನ್ನು ನೀಡಲಾಗಿದೆ. ಅದನ್ನು ಹೊರತುಪಡಿಸಿದರೆ ದೇಶದಲ್ಲಿ ಇದುವರೆಗೆ ವ್ಯಾಕ್ಸಿನೇಶನ್‌ ಪ್ರಕ್ರಿಯೆಯು ವಯಸ್ಸಿನ ಮಾನದಂಡದ ಆಧಾರದ ಮೇಲೆಯೇ ನಡೆಯುತ್ತಿದೆ. ವ್ಯಾಕ್ಸೀನ್‌ ಉತ್ಪಾದನೆಯ ಕೊರತೆ ಜೊತೆಗೆ ವ್ಯಾಕ್ಸೀನ್‌ ಹಂಚಿಕೆಯೂ ತಂತ್ರಜ್ಞಾನದ ಆಧಾರದಲ್ಲಿಯೇ ಈಗಲೂ ದೇಶದಲ್ಲಿ ನಡೆಯುತ್ತಿದೆ. ಇದರಿಂದಾಗಿ ಲಕ್ಷಾಂತರ ಜನ ಅಸಂಘಟಿತ ವಲಯದ ಕಾರ್ಮಿಕರು ವ್ಯಾಕ್ಸಿನೇಶ್‌ ಸೌಲಭ್ಯದಿಂದ ವಂಚಿತರಾಗಿದ್ದಾರೆ ಮತ್ತು ಕೋರೋನಾ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ.

ದೇಶದಲ್ಲಿ ಸರಿಸುಮಾರು 70% ನಗರದಲ್ಲಿನ ಕಾರ್ಮಿಕ ವರ್ಗವು ಅಧಿಕೃತವಾದ ಉದ್ಯೋಗದಲ್ಲಿ ತೊಡಗಿಲ್ಲ ಇನ್ನೂ ಅಸಾಂಪ್ರದಾಯಿಕ ವಲಯದಲ್ಲಿಯೇ ದುಡಿಯುತ್ತಿದೆ. ಇದರಲ್ಲಿ ಲಕ್ಷಾಂತರ ವಲಸೆ ಕಾರ್ಮಿರೂ ಸೇರಿದ್ದಾರೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್‌ ಕಾರ್ಮಿಕರು, ರಸ್ತೆ ನಿರ್ಮಾಣ ಕಾರ್ಮಿಕರು, ಮನೆಗೆಲಸ ಮಾಡುವ ಕೆಲಸಗಾರರು ಎಲ್ಲರೂ ತಮ್ಮ ಕೆಲಸದ ಕಾರಣದಿಂದ ಕೊರೋನಾ ಸೋಂಕಿಗೆ ಒಳಗಾಗುವ ಅಪಾಯಕಾರಿ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಅವರು ಅತ್ಯಂತ ಜನನಿಬಿಡವಾದ ಗಲ್ಲಿಗಳಲ್ಲಿ, ಐಸೋಲೇಶನ್‌ ಸಾಧ್ಯವಿಲ್ಲದ, ಸಾಮಾಜಿಕ ಅಂತರದ ನಿಯಮಗಳು ಕೆಲಸ ಮಾಡದ ಪರಿಸ್ಥಿತಿಯಲ್ಲಿ ವಸತಿ ವ್ಯವಸ್ಥೆಗಳನ್ನು ಹೊಂದಿದ್ದಾರೆ. ಕೊರೋನಾ, ಡೇಂಗ್ಯೂ, ಮಲೇರಿಯಾ ಸೇರಿ ಯಾವುದೇ ರೋಗ, ವೈರಸ್‌ ಗಳು ಹೆಚ್ಚಾಗಿ ಬಾಧಿಸುವುದು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಈ ದೊಡ್ಡ ವರ್ಗವನ್ನು. ಜೊತೆಗೆ ಒಂದು ವೇಳೆ ಕೊರೋನಾ ಸಾಂಕ್ರಾಮಿಕ ತಗುಲಿದರೂ ಚಿಕಿತ್ಸೆಯನ್ನು ಪಡೆಯುವ ಯಾವ ಸೌಲಭ್ಯವು ಈ ಜನರಿಗೆ ಲಭ್ಯವಿಲ್ಲ. ತಮ್ಮ ಕೆಲಸ ಮತ್ತು ವಾಸ್ತವ್ಯ ಮತ್ತು ಕೆಲಸದ ವಾತಾವರಣದಿಂದ ಕಾರ್ಮಿಕ ವರ್ಗದಲ್ಲಿ ರೋಗ ನಿರೋಧಕ ಶಕ್ತಿ ಸಾಮಾನ್ಯವಾಗಿಯೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ. ಜೊತೆಗೆ ಪೌಷ್ಟಿಕತೆಯ ಕೊರತೆಯಿಂದ ಅಸಂಘಟಿತ ವಲಯದಲ್ಲಿನ ಕಾರ್ಮಿಕರ ಮಕ್ಕಳು ನರಳುತ್ತಿದ್ದಾರೆ. ಉಸಿರಾಟ, ಹೃದಯ ಸೇರಿ ಹಲವು ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಹುತೇಕ ಶ್ರಮಿಕ ವರ್ಗದ ಜನರು ದಿನ ನಿತ್ಯ ಬಳಲುತ್ತಾರೆ ಮತ್ತು ಮರಣವನ್ನಪ್ಪುತ್ತಾರೆ.

ಒಂದು ವೇಳೆ ತಜ್ಞರು ಅಭಿಪ್ರಾಯ ಪಟ್ಟಂತೆ ಕೊರೋನಾ ಮೂರನೇ ಅಲೆಯು ದೇಶದ ಮಕ್ಕಳಲ್ಲಿ ಕಾಣಿಸಿಕೊಂಡರೆ ಅದಕ್ಕೆ ಮೊದಲು ಬಲಿಯಾಗುವುದು ಕೂಲಿ ಕಾರ್ಮಿಕರ ಮತ್ತು ಇತರ ಶ್ರಮಿಕ ವರ್ಗದ ಮಕ್ಕಳು. ಯಾಕೆಂದರೆ ಮಧ್ಯಮ ವರ್ಗ ಮತ್ತು ಇತರ ವರ್ಗದ ಮಕ್ಕಳು ಕಳೆದ ಒಂದು ವರ್ಷದಿಂದ ಮನೆಯಿಂದ ಆಚೆಗೆ ಬಂದಿಲ್ಲ. ಜನಸಮೂಹದಿಂದ ಸಾಕಷ್ಟು ದೂರದಲ್ಲಿ ಮನೆಯೊಳಗೇ ಇದ್ದಾರೆ. ಆದರೆ ನಗರಗಳ ಗಲ್ಲಿಗಳ ಚಿಕ್ಕ ಬಡಾವಣೆಗಳಲ್ಲಿನ ಶ್ರಮಿಕರ ಮಕ್ಕಳು ಬೀದಿ ಬದಿಯಲ್ಲಿಯೇ ತಮ್ಮ ಸಂಪೂರ್ಣವನ್ನು ದಿನ ಕಳೆಯುತ್ತಿದ್ದಾರೆ. ಅಲ್ಲದೇ ಬಹುತೇಕ ಅಪೌಷ್ಠಿಕತೆಯಿಂದ ಈ ಮಕ್ಕಳು ಬಳಲುತ್ತಿದ್ದು, ಕೊರೊನಾಕ್ಕೆ ಸುಲಭ ತುತ್ತಾಗುವ ಸಾಧ್ಯತೆಯಿದೆ.

ಕಟ್ಟಡ ನಿರ್ಮಾಣ ಮತ್ತು ಗಾರ್ಮೆಂಟ್‌ ನಲ್ಲಿ ಕೆಲಸದ ಮಾಡುವ ಕಾರ್ಮಿಕರಲ್ಲಿ ಬಹುತೇಕರು ಕೋ- ಮೊರ್ಬಿಡಿಟೀಸ್‌ ಗಳೆಂದು ಪರಿಗಣಿಸಲ್ಪಟ್ಟಿರುವ ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಇದು ಅವರನ್ನು ಮತ್ತಷ್ಟು ಕೊರೋನಾ ಸೋಂಕು ತಗಲುವಂತೆ ಮಾಡುತ್ತದೆ. ಜೊತೆಗೆ ಇಂತಹ ಕಾರ್ಮಿಕರಿಗೆ ಆರೋಗ್ಯ ಸಂಬಂಧಿ ತೊಂದರೆಗಳಿದ್ದಾಗಲೂ ವೇತನ ಸಹಿತ ರಜೆಗಳಾಗಲೀ, ಆರೋಗ್ಯ ವಿಮೆಯಾಗಲಿ ಅಥವಾ ಇಎಸ್‌ಐ ಸೌಲಭ್ಯಗಳಾಗಲೀ ಇರುವುದಿಲ್ಲ. ಇದು ಸ್ವಾಭಾವಿಕವಾಗಿ ಕಾರ್ಮಿಕರನ್ನು ಆರೋಗ್ಯ ಸಂಬಂಧಿ ಸಮಸ್ಯೆಗಳ ನಡುವೆಯೇ ಕೆಲಸ ಮಾಡುವಂತೆ ಮಾಡುತ್ತದೆ. ಅವರು ಪ್ರತಿ ನಿತ್ಯದ ದುಡಿಮೆ ನಷ್ಟವಾಗುವುದನ್ನು ತಡೆದುಕೊಳ್ಳುವಷ್ಟು ಶಕ್ತರಾಗಿರುವುದಿಲ್ಲ. ಇದರಿಂದಾಗಿ ಒಂದು ವೇಳೆ ಕಾರ್ಮಿಕರು ಕರೋನಾ ಲಕ್ಷಣಗಳಿದ್ದಾಗಲೂ ಕೆಲಸಕ್ಕೆ ಬರುವ ಸಾಧ್ಯತೆಯಿದ್ದು ಒಬ್ಬರಿಂದ ಜೊತೆಗೆ ಕೆಲಸ ಮಾಡುವ ಎಲ್ಲರಿಗೂ ಸೋಂಕು ಹರಡುವ ಸಾಧ್ಯತೆಯಿದೆ. ಜೊತೆಗೆ ಸ್ಥಳದಲ್ಲಿ ಕೆಲಸ ನಿರ್ವಹಿಸುವ ಸಮಾಜದ ಅನೇಕರಿಗೆ ವ್ಯರಸ್‌ ಹರಡಿ ಮತ್ತೊಮ್ಮೆ ಕೊರೋನಾ ಸಾಂಕ್ರಾಮಿಕವು ಸಮುದಾಯಗಳಿಗೆ ವ್ಯಾಪಕವಾಗಿ ತಗುಲಲೂಬಹುದು.

ಕೋವಿಡ್‌ ವ್ಯಾಕ್ಸೀನ್‌ ಸೋಂಕಿನ ವಿರುದ್ಧ ಹೋರಾಡಲು ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಕೊರೋನಾ ಸಾಂಕ್ರಾಮಿಕದ ಮೂರನೇ ಅಲೆಯನ್ನು ಎದುರಿಸಲು ಸದ್ಯ ನಮ್ಮಲ್ಲಿರುವ ಏಕೈಕ ಪರಿಹಾರ. ಆದರೆ ಇದುವರೆಗೆ ಅಸಂಘಟಿತ ವಲಯದಲ್ಲಿ ದುಡಿಯುವ ದೊಡ್ಡ ವರ್ಗ ವ್ಯಾಕ್ಸೀನ್‌ ನಿಂದ ಹೊರಗೆ ಉಳಿದಿದೆ.

ಅಸಂಘಟಿತ ವಲಯವನ್ನು ವ್ಯಾಕ್ಸೀನ್‌ ನಿಂದ ದೂರವೇ ಇಟ್ಟ ಡಿಜಿಟ್‌ ವ್ಯವಸ್ಥೆ

ವ್ಯಾಕ್ಸೀನ್‌ ವಿತರಣೆ ವ್ಯವಸ್ಥೆ ಮುಖ್ಯವಾಗಿ ಡಿಜಿಟಲ್‌ ತಂತ್ರಜ್ಞಾನವನ್ನೇ ಆಧರಿಸಿರುವುದು ಮತ್ತು ವಯಸ್ಸಿನ ಮಾನದಂಡದ ಮೇಲೆ ನಿಂತಿರುವುದು ಕಾರ್ಮಿಕ ವರ್ಗಕ್ಕೆ ಲಸಿಕೆಯನ್ನು ಪಡೆಯಲು ಅತ್ಯಂತ ದೊಡ್ಡ ತೊಡಕಾಗಿ ಮಾರ್ಪಟ್ಟಿದೆ. 18-45 ವಯೋಮಾನದವರಿಗೆ ಡಿಜಿಟಲ್‌ ಮಾಧ್ಯಮದ ಮೂಲಕ ರಿಜಿಸ್ಟ್ರೇಶನ್‌ ಮಾಡಿಸುವುದು ಕಡ್ಡಾಯವಾಗಿರುವ ಕಾರಣ ಬಹುತೇಕ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿದ ನಗರ ನಿವಾಸಿಗಳೇ ಇದುವರೆಗೆ ವ್ಯಾಕ್ಸೀನ್‌ ಪಡೆದುಕೊಂಡ ದೊಡ್ಡ ಸಮೂಹವಾಗಿದ್ದಾರೆ. ದೊಡ್ಡ ಪ್ರಮಾಣದ ದುಡಿಯುವ ವರ್ಗ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದದೇ ಇರುವುದು ವ್ಯಾಕ್ಸೀನ್‌ ಪಡೆದುಕೊಳ್ಳದಂತೆ ಅವರನ್ನು ತಡೆದಿದೆ. ಇದಕ್ಕೂ ಮುಖ್ಯವಾಗಿ ಅಸಂಘಟಿತ ವಲಯದ 90% ಜನರು 18-45 ವಯೋ ಮಾನದವರೇ ಆಗಿರುವುದರಿಂದ ಅವರಿಗೆ ಇದುವರೆಗೆ ವ್ಯಾಕ್ಸಿನೇಶನ್‌ ಸೌಲಭ್ಯಗಳು ಲಭಿಸಿಲ್ಲ. ತಂತ್ರಜ್ಞಾನ ಆಧಾರಿತ ವ್ಯಾಕ್ಸಿನೇಶನ್‌ ವ್ಯವಸ್ಥೆ ಈ ಮೂಲಕ ವ್ಯಾಕ್ಸೀನ್‌ ಅಸಮಾನತೆಯನ್ನು ಸೃಷ್ಟಿಸಿದೆ. ಬಹುತೇಕ ಕಾರ್ಮಿಕ ಕುಟುಂಬಗಳ ಸದಸ್ಯರಿಗೆ ಇದುವರೆಗೆ ವ್ಯಾಕ್ಸೀನ್‌ ಗಳು ಸಿಗದಿರುವುದು ಕುಟುಂಬದ ದುಡಿಯುವ ವ್ಯಕ್ತಿಗಳೂ ಸಹ ಕೊರೋನಾ ಸೋಂಕಿಗೆ ಒಳಗಾಗುವಂತೆ ಮಾಡಿದೆ. ತಂತ್ರಜ್ಞಾನದ ಕೊರತೆ ಮತ್ತು ವಯಸ್ಸಿನ ಪರಿಮಿತಿಯ ಆಚೆಗೂ ಈ ಕುಟುಂಬಗಳಿಗೆ ವ್ಯಾಕ್ಸೀನ್‌ ಗಳು ಸಿಗುವಂತಾದರೆ ಕಾರ್ಮಿಕರು ಧೈರ್ಯದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ತನ್ನ ಕಾರ್ಮಿಕರಿಗೆ ವ್ಯಾಕ್ಸೀನ್‌ ನೀಡುವುದು ಉದ್ಯೋಗದಾತನ ಜವಾಬ್ದಾರಿ

ಕಾರ್ಮಿಕರಿಗೆ ವ್ಯಾಕ್ಸೀನ್‌ ಕೊಡಿಸುವುದು ಕೆಲಸ ನೀಡಿದವನ ಜವಾಬ್ಧಾರಿಯಾಗಬೇಕು. ಕಾಂಟ್ರಾಕ್ಟರ್‌ ಮತ್ತು ಮಾಲೀಕರು ತಮ್ಮ ಕೆಲಸಗಾರರಿಗೆ ವ್ಯಾಕ್ಸೀನ್‌ ವ್ಯವಸ್ಥೆ ಸಿಗುವಂತೆ ನೋಡಿಕೊಂಡರೆ ದೊಡ್ಡ ಪ್ರಮಾಣದ ದುಡಿಯುವ ವರ್ಗಗಳಿಗೆ ಲಸಿಕೆ ಸುಲಭವಾಗಿ ಸಿಗುತ್ತಿದೆ. ದೊಡ್ಡ ದೊಡ್ಡ ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವ್ಯಾಕ್ಸೀನ್‌ ನೀಡಲು ಮುಂದೆ ಬಂದಿವೆ. ಅದೇ ರೀತಿಯಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಗಳು ಮತ್ತು ಕಾಂಟ್ರಕ್ಟರ್‌ ಗಳು ತಮ್ಮಲ್ಲಿ ಕೆಲಸ ಮಾಡುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವ್ಯಾಕ್ಸೀನ್‌ ವ್ಯವಸ್ಥೆಯನ್ನು ಮಾಡುವುದು ಸದ್ಯದ ಸಮಸ್ಯೆಗಳಿಗೆ ಪರಿಹಾರವಾಗಿ ಕಾಣುತ್ತದೆ. ಖಾಸಗೀ ಕಂಪನಿಗಳ ಮಾದರಿಯಲ್ಲೇ ಗಾರ್ಮೆಂಟ್‌ ಫ್ಯಾಕ್ಟರಿಗಳು ಮತ್ತು ರಸ್ತೆ ಕಾಮಗಾರಿ ನಡೆಸುವ ಸಂಸ್ಥೆಗಳೂ ಕೂಡ ಕಾರ್ಮಿಕರಿಗೆ ವ್ಯಾಕ್ಸೀನ್‌ ಪೂರೈಸಲು ಮುಂದಾಗಬೇಕು. ಇಲ್ಲವಾದಲ್ಲಿ ಕಾರ್ಮಿಕರ ಮೂಲಕ ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಿ ಉದ್ಯಮದ ಮಾಲೀಕರಿಗೆ ಆರ್ಥಿಕವಾಗಿ ದೊಡ್ಡ ನಷ್ಟವಾಗುತ್ತದೆ.

ಪರಿಣಾಮಕಾರಿ ಮಾಹಿತಿ ಅಭಿಯಾನ

ಬಹುತೇಕ ಅಸಂಘಟಿತ ಕಾರ್ಮಿಕರಿಗೆ ಯಾವ ಪ್ರದೇಶದಲ್ಲಿ ವ್ಯಾಕ್ಸೀನ್‌ ನೀಡಲಾಗುತ್ತಿದೆ? ಹೇಗೆ ವ್ಯಾಕ್ಸೀನ್‌ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂಬ ಮಾಹಿತಿಯಿಲ್ಲ. ಸರ್ಕಾರ ಮಧ್ಯಮಗಳ ಮೂಲಕ ಕಾರ್ಮಿಕರು ಕೆಲಸ ಮಾಡುವ ಸಮೀಪದ ಯಾವ ಸ್ಥಳದಲ್ಲಿ ವ್ಯಾಕ್ಸೀನ್‌ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಜನರಿಗೆ ನೀಡುವುದು ಅಸಂಘಟಿತ ಕಾರ್ಮಿಕರು ವ್ಯಾಕ್ಸೀನ್‌ ಪಡೆಯುವಂತೆ ಮಾಡಲು ಇರುವ ಇನ್ನೊಂದು ದಾರಿ.

ಎಲ್ಲರನ್ನೂ ಒಳಗೊಂಡ ವ್ಯಾಕ್ಸಿನೇಶನ್‌ ವ್ಯವಸ್ಥೆ

ವ್ಯಾಕ್ಸೀನ್‌ ಖರೀದಿಯ ಆರ್ಥಿಕ ಹೊರೆಯಿಂದ ಕೆಲವು ರಾಜ್ಯಗಳು ತಮ್ಮ ರಾಜ್ಯದ ಜನರಿಗೆ ಮಾತ್ರ ವ್ಯಾಕ್ಸೀನ್‌ ನೀಡಲು ಮುಂದಾಗುತ್ತಿವೆ. ಇದಕ್ಕಾಗಿ ಕೆಲವು ರಾಜ್ಯಗಳು ಆಧಾರ್‌ ಸೇರಿದಂತೆ ಹಲವು ದಾಖಲೆಗಳನ್ನು ಕೇಳಲು ಮುಂದಾಗುತ್ತಿವೆ. ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ತನ್ನ ರಾಜ್ಯದ ಜನರಿಗೆ ವ್ಯಾಕ್ಸೀನ್‌ ನೀಡುವುದು ಮೊದಲ ಆದ್ಯತೆ ಎಂದು ಹೇಳಿದೆ. ಜೊತೆಗೆ ವಿಳಾಸ ದಾಖಲಾತಿಗಳನ್ನು, ಆಧಾರ್‌ ಕಾರ್ಡ್‌ ಗಳನ್ನು ವ್ಯಾಕ್ಸೀನ್‌ ಪಡೆಯಲು ಕಡ್ಡಾಯಗೊಳಿಸಿದೆ. ಉತ್ತರ ಪ್ರದೇಶ ಸರ್ಕಾರದ ಈ ನಿರ್ಧಾರ ವಲಸೆ ಕಾರ್ಮಿಕರಿಗೆ ಅತ್ಯಂತ ಕೆಟ್ಟ ಸಂದೇಶವನ್ನು ನೀಡಿದ್ದು ಲಕ್ನೋ ಕಾನ್ಪುರ ವಾರಣಾಸಿ ಸೇರಿ ಅನೇಕ ಕಡೆ ಹೊರ ರಾಜ್ಯಗಳಿಂದ ಬಂದು ಕೆಲಸ ಮಾಡುತ್ತಿರುವ ಕಾರ್ಮಿಕರು ವ್ಯಾಕ್ಸೀನ್‌ ಪಡೆಯಲು ಎಲ್ಲಿ ಹೋಗಬೇಕು ಎಂದು ಪರದಾಡತೊಡಗಿದ್ದಾರೆ.

ಆರ್ಥಿಕವಾಗಿ ಸಧೃಢವಲ್ಲದ ಈ ಅಸಂಘಟಿತ ವರ್ಗ ಸರ್ಕಾರದಿಂದ ಅತ್ಯಂತ ನಿರ್ಲಕ್ಷಕ್ಕೆ ಒಳಗಾಗದ ವರ್ಗ. ಆದರೆ ದೇಶದ ಆರ್ಥಿಕತೆಗೆ ಬೇರೆ ವಲಯಗಳಷ್ಟೇ ಅಸಂಘಟಿತ ವಲಯವೂ ಕೊಡುಗೆಗಳನ್ನು ನೀಡುತ್ತಿದೆ. ಆದರೆ ಕಳೆದ ವರ್ಷದ ಲಾಕ್‌ ಡೌನ್‌ ಅನುಭವದಿಂದ ದುಡಿಯುವ ವರ್ಗಗಳು ಸರ್ಕಾರಗಳ ಅತ್ಯಂತ ಕೊನೆಯ ಆದ್ಯತೆಯಾಗಿವೆ ಎಂಬುದು ಸ್ಪಷ್ಟವಾಗಿವೆ. ಈಗಾಗಲೇ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕಾರ್ಮಿಕ ವರ್ಗ ಕೊರೋನಾ ಸಾಂಕ್ರಾಮಿಕವನ್ನು ಎದುರಿಸುವ ಶಕ್ತಿಯನ್ನು ಹೊಂದಿಲ್ಲ. ಜೊತೆಗೆ ಲಾಕ್‌ ಡೌನ್‌ ಕಾರಣಗಳಿಂದ ಮತ್ತೊಮ್ಮೆ ಚೇತರಿಕೊಳ್ಳಲು ಸಾಧ್ಯವಾಗದಷ್ಟು ಕೆಳಕ್ಕೆ ಹೋಗಿವೆ. ಇನ್ನು ಹತ್ತಿರದ ದಿನಗಳಲ್ಲಿ ಕಾರ್ಮಿಕರ ಆರ್ಥಿಕ ಸ್ಥಿತಿಗಳು ಚೇತರಿಸಿಕೊಳ್ಳುವ ದೃಷ್ಟಿಯಲ್ಲಿ ಸರ್ಕಾರಗಳು ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮುಂದಾಗುವುದಿಲ್ಲ.

ಜೊತೆಗೆ ವ್ಯಾಕ್ಸಿನೇಶನ್‌ ನಿಂದಲೂ ಇವರನ್ನು ಹೊರಗಿಟ್ಟರೆ ದೇಶ ಮತ್ತೊಂದು ಸುತ್ತಿನ ಆರೋಗ್ಯದ ಬಿಕ್ಕಟ್ಟಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಕೊರೋನಾ ಸಾಂಕ್ರಾಮಿಕವು ವ್ಯಾಪಕವಾಗಿ ಹರಡುವ ಮತ್ತು ಒಂದು ಪ್ರದೇಶಕ್ಕೆ ಸೀಮಿತವಲ್ಲದ ಸಮಸ್ಯೆ. ದೇಶದ ಯಾರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡರೂ ಅದು ಹೆಮ್ಮರವಾಗಿ ಅವರಿಸಿಕೊಳ್ಳುತ್ತ ದೇಶವ್ಯಾಪಿಯಾಗಿ ಹರಡುವುದನ್ನು 2020 ಮತ್ತು 2021 ರ ಕೊರೋನಾ ಮೊದಲನೇಯ ಮತ್ತು ಎರಡನೇಯ ಅಲೆಯಲ್ಲಿ ಗಮನಿಸಿದ್ದೇವೆ. ಸಾರ್ವಜನಿಕವಾಗಿ ಹೆಚ್ಚು ಜನರ ಜೊತೆ ಬೆರೆಯುವ, ಸಮಾಜದಲ್ಲಿ ಅತಿ ಹೆಚ್ಚು ಜನಸಾಂದ್ರತೆಯ ಜನ ದಟ್ಟಣೆಯ ಭಾಗವಾಗಿರುವ ತರಕಾರಿ ಹಣ್ಣು ಮಾರುವ, ಮನೆಗೆಲಸ ಮಾಡುವ, ಗಾರೆ ಕೆಲಸ ಮಾಡುವ ಹೀಗೆ ಬೇರೆ ಬೇರೆ ಸಂಘಟಿತವಲ್ಲದ ಕೆಲಸಗಳಲ್ಲಿ ತೊಡಗಿರುವ ಶ್ರಮಿಕ ವರ್ಗಕ್ಕೆ ವ್ಯಾಕ್ಸೀನ್‌ ನ ಅವಶ್ಯಕತೆ ಹೆಚ್ಚಿದೆ. ಜೊತೆಗೆ ಅಸಂಘಟಿತ ವಲಯದಿಂದ ಬಹುಬೇಗ ಆ ಪ್ರದೇಶದಲ್ಲಿ ಸೋಂಕು ಹರಡುವ ಸಾಧ್ಯತೆ ಕೂಡ ಇದೆ. ಇದು ದೇಶದಲ್ಲಿ ಕೊರೋನಾ ಮೂರನೆ ಅಲೆಯ ಸಂದರ್ಭದಲ್ಲಿ ಮತ್ತೊಂದು ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗಬಹುದು. ಅದಕ್ಕೂ ಮೊದಲು ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಆದ್ಯತೆಯ ಮೇಲೆ ವ್ಯಾಕ್ಸೀನ್‌ ಗಳನ್ನು ನೀಡಲು ಮುಂದಾಗುವುದು ದೇಶದ ಆರೋಗ್ಯದ ದೃಷ್ಟಿಯಿಂದಲೂ ಒಳಿತು.


ಇದನ್ನೂ ಓದಿ: ಕೊರೋನಾ ನಿರ್ವಹಣೆ, ಲಸಿಕೆ ವಿತರಣೆ ರಾಜ್ಯಗಳ ವಿಷಯ ಎಂದ ಕೇಂದ್ರ ಮಂತ್ರಿಗಳು: ಸಾಂಕ್ರಾಮಿಕದ ನಡುನೀರಲ್ಲಿ ಕೈಬಿಟ್ಟ ಕೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...