ವ್ಯವಸ್ಥೆಯ ಅಂಚಿನಲ್ಲಿ ಉಸಿರು ಬಿಗಿಹಿಡಿದು ಬದುಕಿರುವ ನಿರ್ಗತಿಕ ಮತ್ತು ವಂಚಿತ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ, ಮೇಲ್ವರ್ಗ-ಮೇಲ್ಜಾತಿಗಳು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಯಥಾಸ್ಥಿತಿಯ ಅಡಿಪಾಯ ಅಲ್ಲಾಡತೊಡಗುತ್ತದೆ.
ಯಾಕೆಂದರೆ ಮಾತು ಸತ್ತ ಸಮುದಾಯಗಳಿಗೆ ಪದಸಂಪತ್ತು ಸಿಗುತ್ತದೆ, ಮಾತಾಡುವ ಆತ್ಮವಿಶ್ವಾಸ ಮೂಡುತ್ತದೆ.
ಸಮಾನ ಕಲಿಕೆಯ ಹಕ್ಕಿನ ಈ ಹೋರಾಟ ಇಂದು ನಿನ್ನೆಯದಲ್ಲ. ಸ್ವಂತ ಸಾಧನೆಯಿಂದಲೇ ಅರಿವನ್ನು ತನ್ನದಾಗಿಸಿಕೊಂಡ ಶೂದ್ರ ಏಕಲವ್ಯನನ್ನು ಜಾತಿ-ವರ್ಣ ವ್ಯವಸ್ಥೆ ವಂಚಿಸಿ ಸೋಲಿಸಿತು. ತಪಸ್ಸನ್ನು ಆಚರಿಸಲು ಮುಂದಾದ ಶಂಬೂಕನ ತಲೆದಂಡವನ್ನೇ ಪಡೆದು ಇತರೆ ಶೂದ್ರರು-ಅಸ್ಪೃಶ್ಯರು ತಲೆಯೆತ್ತದಂತೆ ಕ್ರೂರ ಶಿಕ್ಷೆ ವಿಧಿಸಿತ್ತು.
ಈ ಏಕಲವ್ಯ-ದ್ರೋಣ-ಅರ್ಜುನ ಮತ್ತು ಶಂಬೂಕ-ಬ್ರಾಹ್ಮಣ-ಶ್ರೀರಾಮನ ಕ್ರೂರ ಕಥನಗಳು ಆಧುನಿಕ ಭಾರತದಲ್ಲಿ ಬಗೆಬಗೆಯ ಹೊಸ ವೇಷಗಳನ್ನು ಧರಿಸಿ ಪುನರಾವರ್ತನೆ ಆಗುತ್ತಿವೆ. ಅಕ್ಷರವಂಚನೆಯ ಮೋಸ ಹತ್ತಾರು ರೂಪಗಳಲ್ಲಿ ಮುಂದುವರೆದಿದೆ.
ಹಣವಂತರು ವರ್ಷಕ್ಕೆ 10-15 ಲಕ್ಷ ತೆತ್ತು ಖಾಸಗಿ ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದಾರೆ. ಇಲ್ಲದವರ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಬಿಸಿಲುಗುದುರೆ ಆಗತೊಡಗಿದೆ.
2016-17ರಲ್ಲಿ ಅಮೆರಿಕೆಯಲ್ಲಿನ ಭಾರತೀಯ ವಿದ್ಯಾರ್ಥಿಗಳು 42,835 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದರು. 2015-16ರಲ್ಲಿ ಮಾಡಿದ್ದ ವೆಚ್ಚಕ್ಕಿಂತ ಶೇ.30ರಷ್ಟು ಹೆಚ್ಚು ಇದು.

ಭಾರತದ ಉನ್ನತ ಶಿಕ್ಷಣದ ಪೂರ್ಣ ಬಜೆಟ್ ಈ ವರ್ಷ 35 ಸಾವಿರ ಕೋಟಿ ರುಪಾಯಿ. ಈ ಬಜೆಟ್ಟಿನ ಒಂದೂವರೆ ಪಟ್ಟು ಹಣವನ್ನು ಭಾರತದ ವಿದ್ಯಾರ್ಥಿಗಳು ಅಮೆರಿಕೆಯಲ್ಲಿ ಹೂಡುತ್ತಿದ್ದಾರೆ. ಹೀಗೆ ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವವರ ಸಂಖ್ಯೆ ಸುಮಾರು ಐದು ಲಕ್ಷ. ಭಾರತದ ಉನ್ನತ ಶಿಕ್ಷಣ ತಲುಪಿರುವ ಅಧೋಗತಿಯ ಸೂಚಕ ಇದು.
ದೆಹಲಿಯ ವಿಖ್ಯಾತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ‘ರಾಷ್ಟ್ರವಿರೋಧಿ’ ಹಣೆಪಟ್ಟಿ ಹಚ್ಚಿರುವ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಿಂದ ಅಲ್ಲಿನ ವಿದ್ಯಾರ್ಥಿಗಳ ಪ್ರವೇಶಾವಕಾಶ ಮತ್ತು ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯವನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ತುಳಿದು ಹಾಕುತ್ತಿದೆ.. ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಬರುವ ಬಡ ದಲಿತ-ಆದಿವಾಸಿ ಮಕ್ಕಳಿಗೆ ಜೆ.ಎನ್.ಯು ಬಾಗಿಲು ತೆರೆದಿರುತ್ತಿತ್ತು. ಅವರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿತ್ತು. ಈ ಅವಕಾಶಗಳು ಇದೀಗ ಬತ್ತತೊಡಗಿವೆ.
2017-18ರ ಎಂ.ಫಿಲ್ ಮತ್ತು ಪಿಎಚ್.ಡಿ. ಪ್ರವೇಶದ ಮೀಸಲಾತಿ ವಿವರಗಳು ಈ ಧೋರಣೆಗೆ ಹಿಡಿದ ಪುಟ್ಟ ಕನ್ನಡಿ. ಶೇ.15ರಷ್ಟು ಮೀಸಲಾತಿ ದೊರೆಯಬೇಕಿದ್ದ ಪರಿಶಿಷ್ಟ ಜಾತಿಗಳಿಗೆ ವಾಸ್ತವವಾಗಿ ದೊರೆತದ್ದು ಶೇ.1.3. ಶೇ.ಏಳೂವರೆಯ ಜಾಗದಲ್ಲಿ ಪರಿಶಿಷ್ಟ ಪಂಗಡಗಳಿಗೆ ಸಿಕ್ಕಿದ್ದು ಶೇ.0.6. ಶೇ.27ರಷ್ಟು ದೊರೆಯಬೇಕಿದ್ದ ಓ.ಬಿ.ಸಿ.ಗಳಿಗೆ ದಕ್ಕಿದ್ದು ಶೇ.8.2 ಮಾತ್ರ. ಸೀಟುಗಳ ಸಂಖ್ಯೆಯಲ್ಲಿ ಶೇ.83ರಷ್ಟು ಕಡಿತ ಮಾಡಲಾಗಿದೆ.
ಜೆ.ಎನ್.ಯು ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕೂಡ ಬಹುತೇಕ ಅತ್ಯಂತ ತಳವರ್ಗಗಳಿಗೆ ಸೇರಿದವರು. ಕನ್ಹಯ್ಯ ಕುಮಾರ್ ಕೂಡ ಇಂತಹುದೇ ಹಿನ್ನೆಲೆಯಿಂದ ಬಂದಾತ. ಜೆ.ಎನ್.ಯು. ಇತಿಹಾಸದಲ್ಲಿ ಇಂತಹ ನಿದರ್ಶನಗಳು ಹೇರಳ.
29 ವರ್ಷ ವಯಸ್ಸಿನ ಜಿತೇಂದ್ರ ಸೂನ ಹತ್ತು ವರ್ಷಗಳ ಹಿಂದೆ ದಿಲ್ಲಿಯ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ನಲ್ಲಿ ಗ್ಯಾಸ್ ಸ್ಟೌವ್ಗಳನ್ನು ರಿಪೇರಿ ಮಾಡುತ್ತಿದ್ದ. ರಸ್ತೆಯಡಿಗಳ ಪೈಪುಗಳು ಒಡೆದರೆ ಗುಂಡಿ ತೋಡುತ್ತಿದ್ದ. ಒಡಿಶಾದ ಕಾಳಹಂಡಿ ಜಿಲ್ಲೆಯ ಬಡ ತಂದೆತಾಯಿಗಳ ಮಗ. ಎಂಟನೆಯ ತರಗತಿಯಲ್ಲಿದ್ದಾಗ ತಾಯಿ ತೀರಿಹೋದಳು. ಇತರರ ಭತ್ತದ ಗದ್ದೆಗಳಲ್ಲಿ ಕೂಲಿ ಮಾಡಿ ದಿನಕ್ಕೆ 30-40 ರುಪಾಯಿ ಸಂಪಾದಿಸುತ್ತಿದ್ದ. ನರೇಗಾ ಯೋಜನೆಯಡಿ ಉದ್ಯೋಗ ಗಿಟ್ಟಿಸಿ ನೆಲ ಅಗೆದು ದಿನಕ್ಕೆ 100-150 ರುಪಾಯಿ ಕೂಲಿ ಗಳಿಸಿದ್ದ.
ಹೊಟ್ಟೆಪಾಡಿಗೆಂದು ದೆಹಲಿ ತಲುಪಿ ಕೂಲಿನಾಲಿ ಮಾಡುತ್ತಲೇ ಪದವಿ ಗಳಿಸಿದ. 2013ರಲ್ಲಿ ಜೆ.ಎನ್.ಯು ಪ್ರವೇಶ ಪರೀಕ್ಷೆ ಪಾಸು ಮಾಡಿದ. ಇದೀಗ ಪಿಎಚ್.ಡಿ. ಮಾಡುತ್ತಿರುವ ಆತ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹುದ್ದೆಗೆ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘಟನೆಯಿಂದ (BAPSA) ಸ್ಪರ್ಧಿಸಿದ್ದ. ಬದುಕಿನೊಂದಿಗೆ ಹೋರಾಡಿ ಜೆ.ಎನ್.ಯು. ಪ್ರವೇಶಿಸಿ ಅಕ್ಷರಗಳನ್ನು ಎದೆಗಿಳಿಸಿಕೊಂಡ ಇಂತಹ ಸಾವಿರಾರು ಕತೆಗಳಿವೆ.

ಸಫಾಯಿ ಕರ್ಮಚಾರಿಗಳು, ಕೈಯಿಂದ ಮಾನವ ಮಲ ಬಳಿವವರು, ರಸ್ತೆ ಬದಿಯ ಸಣ್ಣಪುಟ್ಟ ವ್ಯಾಪಾರಿಗಳು, ಕೃಷಿ ಕೂಲಿಕಾರರು, ಅಂಗನವಾಡಿ ಅಮ್ಮಂದಿರ ಬಡಮಕ್ಕಳು ಕಲಿಯಲು ಇಲ್ಲಿಗೆ ಬರುತ್ತಾರೆ. ಮಾಸಿಕ ಆದಾಯ 6000 ರುಪಾಯಿಗಳು ಮತ್ತು ಅದಕ್ಕೂ ಕಮ್ಮಿ ಇರುವ ಆದಾಯವರ್ಗದ ಕುಟುಂಬಗಳಿಂದ ಬರುವ ಇಂತಹ ಮಕ್ಕಳ ಪ್ರಮಾಣ ಶೇ.43. ಮೊನ್ನೆ ಮೊನ್ನೆ ಹಾಸ್ಟೆಲ್ ಮತ್ತು ಕಲಿಕೆಯ ಶುಲ್ಕವನ್ನು ಜೆ.ಎನ್.ಯು ಆಡಳಿತವರ್ಗ ವಾರ್ಷಿಕ 30 ಸಾವಿರ ರುಪಾಯಿಗಳಿಂದ 60 ಸಾವಿರಕ್ಕೆ ಏರಿಸಿದೆ. ಪಾವತಿ ಮಾಡಲಾಗದಿದ್ದರೆ ಇಲ್ಲಿ ಓದುವುದನ್ನು ಬಿಟ್ಟು ಬೇರೆ ಹುಡುಕಿಕೊಳ್ಳಿ ಎಂದು ವಿಶ್ವವಿದ್ಯಾಲಯದ ಆಡಳಿತವರ್ಗ ವಿದ್ಯಾರ್ಥಿಗಳನ್ನು ಜಬರಿಸಿದೆ.
ಕಳೆದ ಐದು ವರ್ಷಗಳಲ್ಲಿ ಐದೂವರೆ ಲಕ್ಷ ಕೋಟಿ ರುಪಾಯಿಗಳಷ್ಟು ಕಾಪೆರ್Çರೇಟು ಸಾಲಗಳನ್ನು ಮನ್ನಾ ಮಾಡಲಾಗಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲರ ಪ್ರತಿಮೆ ನಿಲ್ಲಿಸಲು 3000 ಕೋಟಿ ರುಪಾಯಿ ವ್ಯಯಿಸಲಾಗಿದೆ. ನೋಟು ರದ್ದು ಮಾಡಿ, ಹೊಸ ನೋಟು ಮುದ್ರಿಸಲು ಮಾಡಲಾದ ವೆಚ್ಚ 13 ಸಾವಿರ ಕೋಟಿ ರುಪಾಯಿಗಳು. ಆಳುವ ಪಕ್ಷದ ಜಾಹೀರಾತುಗಳಿಗೆ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಆದರೆ ನಿರ್ಗತಿಕರು ಮತ್ತು ವಂಚಿತ ಸಮುದಾಯಗಳ ವಿದ್ಯಾರ್ಥಿಗಳ ಪಾಲಿನ ಏಕೈಕ ಅಕ್ಷರಲೋಕ ಜೆ.ಎನ್.ಯು ಬಾಗಿಲನ್ನು ಶುಲ್ಕ ಏರಿಸಿ ಈ ವರ್ಗಗಳಿಗೆ ಮುಚ್ಚಲಾಗುತ್ತಿದೆ.
ಪ್ರತಿಭಟನೆಗೆ ಇಳಿದಿರುವ ವಿದ್ಯಾರ್ಥಿ ಸಮುದಾಯದ ವಿರುದ್ಧ ದಮನಕಾರಿ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಮೊನ್ನೆ ವಕೀಲರ ಜೊತೆಗಿನ ಘರ್ಷಣೆಗಳಲ್ಲಿ ಕುರಿಮರಿಗಳಂತೆ ವರ್ತಿಸಿದ್ದ ದೆಹಲಿ ಪೆÇಲೀಸರು, ಇದೀಗ ಬಡ ವಿದ್ಯಾರ್ಥಿಗಳ ಬುರುಡೆ ಬಿಚ್ಚುತ್ತಿದ್ದಾರೆ.
ಇದೇ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯವೇ ಸ್ಥಾಪಿಸಿದ ವ್ಯವಸ್ಥೆ (National Institutions Ranking Framework) ದೇಶದಲ್ಲೇ ಮೊದಲ ರ್ಯಾಂಕ್ ನೀಡಿತ್ತು. ವಿಶ್ವವಿದ್ಯಾಲಯವೊಂದು ಏಕಕಾಲಕ್ಕೆ ರಾಷ್ಟ್ರವಿರೋಧಿ ಎನಿಸಿಕೊಳ್ಳುವುದು ಮತ್ತು ಅದೇ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದಿಂದ ದೇಶದಲ್ಲಿ ಮೊದಲ ರ್ಯಾಂಕ್ ಪಡೆಯುವುದು ದೊಡ್ಡ ಸೋಜಿಗವೇ ಸರಿ!
ಇದನ್ನು ಓದಿ : JNU ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ರಾಜ್ಯದ್ಯಂತ ವಿದ್ಯಾರ್ಥಿಗಳಿಂದ ಪ್ರತಿಭಟನೆ..
ಭಿನ್ನಾಭಿಪ್ರಾಯಗಳನ್ನು ತುಳಿಯಲಾಗುತ್ತಿದೆ. ಭಿನ್ನಮತ ಪ್ರದರ್ಶಿಸುವ ವಿದ್ಯಾರ್ಥಿಗಳನ್ನು ದುಬಾರಿ ದಂಡ ಶುಲ್ಕಗಳಿಂದ ದಂಡಿಸಲಾಗುತ್ತಿದೆ. ವಿದ್ಯಾರ್ಥಿಗಳ ಕೈಗೆಟುಕುವ ದರಗಳಲ್ಲಿ ವ್ಯವಹರಿಸುವ ಧಾಬಾಗಳನ್ನು ಮುಚ್ಚಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ರಾತ್ರಿ 11.30ರ ನಂತರ ಕ್ಯಾಂಪಸಿನಲ್ಲಿ ಕಫ್ರ್ಯೂ ವಿಧಿಸಲಾಗಿದೆ. ರಾತ್ರಿಯೆಲ್ಲ ತೆರೆದಿರುತ್ತಿದ್ದ ಗ್ರಂಥಾಲಯವನ್ನು ಮುಚ್ಚಲಾಗುತ್ತಿದೆ.
ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಳ್ಳುವ, ಜನತಾಂತ್ರಿಕ, ಪ್ರಗತಿಪರ ಹಾಗೂ ಜಾತ್ಯತೀತ ಗುಣಗಳನ್ನು, ವೈಚಾರಿಕ ಸ್ವಾತಂತ್ರ್ಯ ಮತ್ತು ಮುಕ್ತಚಿಂತನೆಯ ಮೌಲ್ಯಗಳು ಜೆ.ಎನ್.ಯುವಿನ ಆತ್ಮ. ಈ ಆತ್ಮವನ್ನೇ ನಾಶ ಮಾಡಲಾಗುತ್ತಿದೆ. ಶಿಕ್ಷಣವನ್ನು ಖಾಸಗೀಕರಿಸಿ ವ್ಯಾಪಾರದ ಸರಕನ್ನಾಗಿಸುವ, ಉಳ್ಳವರ ಏಕಸ್ವಾಮ್ಯ ಆಗಿಸುವ ಹುನ್ನಾರ ಜಾರಿಯಲ್ಲಿದೆ.



ಮೋದಿ ವರ್ಚಸ್ ಆರೆಸಸ್ ಕೇಂದ್ರ ಸರ್ಕಾರದ ದೂರ್ ನಡಿಯ ದುರ್ನಡತೆ ನನ್ನ ಧಿಕ್ಕಾರ
ಕಾಂಗ್ರೆಸ್ ಒಂದುರೀತಿ ಅನ್ಯಾಯ ಮಾಡಿದ್ದಾದರೆ ಅವರು 70 ವರ್ಷ ಆಡಳಿತ ಅವಧಿಯಲ್ಲಿ ಹಂತಹಂತವಾಗಿ ತಳ ವರ್ಗದವರಿಗೆ ಅನ್ಯಾಯ ಮಾಡುತ್ತಲೇ ಮುಂದಿರುತ್ತಾರೆ
ಬಿಜೆಪಿ ಆರನೇ ವರ್ಷ ರನ್ನಿಂಗ್ ಇದೆ ನಿರ್ಗತಿಕರಿಗೆ ಕಾರ್ಮಿಕ ವರ್ಗದವರಿಗೆ ತಿನ್ನಲು ಊಟವೇ ಇಲ್ಲದ ಕಡುಬಡತನ ಹೇರಲಾಗಿದೆ ಇನ್ನು 70ವರ್ಷ ಕಾಂಗ್ರೆಸ್ ಸರ್ಕಾರದ ಅವಧಿ ಬಿಜೆಪಿಗೆ ಸಿಕ್ಕರೆ ಭಾರತದೇಶವೇ ಸಂಪೂರ್ಣ ಮನುವಾದಿಗಳು ವರ್ಚಸ್ ಶೂದ್ರರು ಹೊಡೆದಾಡುವುದು ರಲ್ಲಿ ಮುಲಾಜಿಲ್ಲದೆ ನಡೆಯಬೇಕಾಗುತ್ತದೆ ಮೋದಿಯಂತಹ ದುರ್ದೈವ ಪ್ರಧಾನಿ ಎಂದರೆ ಮತ್ತೊಬ್ಬನಿಲ್ಲ
ಜೈ ಭೀಮ್ ಜೈ ಸಂವಿಧಾನ