Homeಚಳವಳಿವಂಚಿತರ ಪಾಲಿಗೆ ಮುಚ್ಚತೊಡಗಿದೆ ಜೆ.ಎನ್.ಯು ಬಾಗಿಲು : ಡಿ. ಉಮಾಪತಿ

ವಂಚಿತರ ಪಾಲಿಗೆ ಮುಚ್ಚತೊಡಗಿದೆ ಜೆ.ಎನ್.ಯು ಬಾಗಿಲು : ಡಿ. ಉಮಾಪತಿ

ಏಕಲವ್ಯ-ದ್ರೋಣ-ಅರ್ಜುನ ಮತ್ತು ಶಂಬೂಕ-ಬ್ರಾಹ್ಮಣ-ಶ್ರೀರಾಮನ ಕ್ರೂರ ಕಥನಗಳು ಆಧುನಿಕ ಭಾರತದಲ್ಲಿ ಬಗೆ ಬಗೆಯ ಹೊಸ ವೇಷಗಳನ್ನು ಧರಿಸಿ ಪುನರಾವರ್ತನೆ ಆಗುತ್ತಿವೆ. ಅಕ್ಷರವಂಚನೆಯ ಮೋಸ ಹತ್ತಾರು ರೂಪಗಳಲ್ಲಿ ಮುಂದುವರೆದಿದೆ.

- Advertisement -
- Advertisement -

ವ್ಯವಸ್ಥೆಯ ಅಂಚಿನಲ್ಲಿ ಉಸಿರು ಬಿಗಿಹಿಡಿದು ಬದುಕಿರುವ ನಿರ್ಗತಿಕ ಮತ್ತು ವಂಚಿತ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ, ಮೇಲ್ವರ್ಗ-ಮೇಲ್ಜಾತಿಗಳು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಯಥಾಸ್ಥಿತಿಯ ಅಡಿಪಾಯ ಅಲ್ಲಾಡತೊಡಗುತ್ತದೆ.

ಯಾಕೆಂದರೆ ಮಾತು ಸತ್ತ ಸಮುದಾಯಗಳಿಗೆ ಪದಸಂಪತ್ತು ಸಿಗುತ್ತದೆ, ಮಾತಾಡುವ ಆತ್ಮವಿಶ್ವಾಸ ಮೂಡುತ್ತದೆ.

ಸಮಾನ ಕಲಿಕೆಯ ಹಕ್ಕಿನ ಈ ಹೋರಾಟ ಇಂದು ನಿನ್ನೆಯದಲ್ಲ. ಸ್ವಂತ ಸಾಧನೆಯಿಂದಲೇ ಅರಿವನ್ನು ತನ್ನದಾಗಿಸಿಕೊಂಡ ಶೂದ್ರ ಏಕಲವ್ಯನನ್ನು ಜಾತಿ-ವರ್ಣ ವ್ಯವಸ್ಥೆ ವಂಚಿಸಿ ಸೋಲಿಸಿತು. ತಪಸ್ಸನ್ನು ಆಚರಿಸಲು ಮುಂದಾದ ಶಂಬೂಕನ ತಲೆದಂಡವನ್ನೇ ಪಡೆದು ಇತರೆ ಶೂದ್ರರು-ಅಸ್ಪೃಶ್ಯರು ತಲೆಯೆತ್ತದಂತೆ ಕ್ರೂರ ಶಿಕ್ಷೆ ವಿಧಿಸಿತ್ತು.

ಈ ಏಕಲವ್ಯ-ದ್ರೋಣ-ಅರ್ಜುನ ಮತ್ತು ಶಂಬೂಕ-ಬ್ರಾಹ್ಮಣ-ಶ್ರೀರಾಮನ ಕ್ರೂರ ಕಥನಗಳು ಆಧುನಿಕ ಭಾರತದಲ್ಲಿ ಬಗೆಬಗೆಯ ಹೊಸ ವೇಷಗಳನ್ನು ಧರಿಸಿ ಪುನರಾವರ್ತನೆ ಆಗುತ್ತಿವೆ. ಅಕ್ಷರವಂಚನೆಯ ಮೋಸ ಹತ್ತಾರು ರೂಪಗಳಲ್ಲಿ ಮುಂದುವರೆದಿದೆ.

ಹಣವಂತರು ವರ್ಷಕ್ಕೆ 10-15 ಲಕ್ಷ ತೆತ್ತು ಖಾಸಗಿ ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದಾರೆ. ಇಲ್ಲದವರ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಬಿಸಿಲುಗುದುರೆ ಆಗತೊಡಗಿದೆ.

2016-17ರಲ್ಲಿ ಅಮೆರಿಕೆಯಲ್ಲಿನ ಭಾರತೀಯ ವಿದ್ಯಾರ್ಥಿಗಳು 42,835 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದರು. 2015-16ರಲ್ಲಿ ಮಾಡಿದ್ದ ವೆಚ್ಚಕ್ಕಿಂತ ಶೇ.30ರಷ್ಟು ಹೆಚ್ಚು ಇದು.

ಭಾರತದ ಉನ್ನತ ಶಿಕ್ಷಣದ ಪೂರ್ಣ ಬಜೆಟ್ ಈ ವರ್ಷ 35 ಸಾವಿರ ಕೋಟಿ ರುಪಾಯಿ. ಈ ಬಜೆಟ್ಟಿನ ಒಂದೂವರೆ ಪಟ್ಟು ಹಣವನ್ನು ಭಾರತದ ವಿದ್ಯಾರ್ಥಿಗಳು ಅಮೆರಿಕೆಯಲ್ಲಿ ಹೂಡುತ್ತಿದ್ದಾರೆ. ಹೀಗೆ ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವವರ ಸಂಖ್ಯೆ ಸುಮಾರು ಐದು ಲಕ್ಷ. ಭಾರತದ ಉನ್ನತ ಶಿಕ್ಷಣ ತಲುಪಿರುವ ಅಧೋಗತಿಯ ಸೂಚಕ ಇದು.

ದೆಹಲಿಯ ವಿಖ್ಯಾತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ‘ರಾಷ್ಟ್ರವಿರೋಧಿ’ ಹಣೆಪಟ್ಟಿ ಹಚ್ಚಿರುವ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಿಂದ ಅಲ್ಲಿನ ವಿದ್ಯಾರ್ಥಿಗಳ ಪ್ರವೇಶಾವಕಾಶ ಮತ್ತು ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯವನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ತುಳಿದು ಹಾಕುತ್ತಿದೆ.. ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಬರುವ ಬಡ ದಲಿತ-ಆದಿವಾಸಿ ಮಕ್ಕಳಿಗೆ ಜೆ.ಎನ್.ಯು ಬಾಗಿಲು ತೆರೆದಿರುತ್ತಿತ್ತು. ಅವರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿತ್ತು. ಈ ಅವಕಾಶಗಳು ಇದೀಗ ಬತ್ತತೊಡಗಿವೆ.

2017-18ರ ಎಂ.ಫಿಲ್ ಮತ್ತು ಪಿಎಚ್.ಡಿ. ಪ್ರವೇಶದ ಮೀಸಲಾತಿ ವಿವರಗಳು ಈ ಧೋರಣೆಗೆ ಹಿಡಿದ ಪುಟ್ಟ ಕನ್ನಡಿ. ಶೇ.15ರಷ್ಟು ಮೀಸಲಾತಿ ದೊರೆಯಬೇಕಿದ್ದ ಪರಿಶಿಷ್ಟ ಜಾತಿಗಳಿಗೆ ವಾಸ್ತವವಾಗಿ ದೊರೆತದ್ದು ಶೇ.1.3. ಶೇ.ಏಳೂವರೆಯ ಜಾಗದಲ್ಲಿ ಪರಿಶಿಷ್ಟ ಪಂಗಡಗಳಿಗೆ ಸಿಕ್ಕಿದ್ದು ಶೇ.0.6. ಶೇ.27ರಷ್ಟು ದೊರೆಯಬೇಕಿದ್ದ ಓ.ಬಿ.ಸಿ.ಗಳಿಗೆ ದಕ್ಕಿದ್ದು ಶೇ.8.2 ಮಾತ್ರ. ಸೀಟುಗಳ ಸಂಖ್ಯೆಯಲ್ಲಿ ಶೇ.83ರಷ್ಟು ಕಡಿತ ಮಾಡಲಾಗಿದೆ.

ಜೆ.ಎನ್.ಯು ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕೂಡ ಬಹುತೇಕ ಅತ್ಯಂತ ತಳವರ್ಗಗಳಿಗೆ ಸೇರಿದವರು. ಕನ್ಹಯ್ಯ ಕುಮಾರ್ ಕೂಡ ಇಂತಹುದೇ ಹಿನ್ನೆಲೆಯಿಂದ ಬಂದಾತ. ಜೆ.ಎನ್.ಯು. ಇತಿಹಾಸದಲ್ಲಿ ಇಂತಹ ನಿದರ್ಶನಗಳು ಹೇರಳ.

29 ವರ್ಷ ವಯಸ್ಸಿನ ಜಿತೇಂದ್ರ ಸೂನ ಹತ್ತು ವರ್ಷಗಳ ಹಿಂದೆ ದಿಲ್ಲಿಯ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ನಲ್ಲಿ ಗ್ಯಾಸ್ ಸ್ಟೌವ್‍ಗಳನ್ನು ರಿಪೇರಿ ಮಾಡುತ್ತಿದ್ದ. ರಸ್ತೆಯಡಿಗಳ ಪೈಪುಗಳು ಒಡೆದರೆ ಗುಂಡಿ ತೋಡುತ್ತಿದ್ದ. ಒಡಿಶಾದ ಕಾಳಹಂಡಿ ಜಿಲ್ಲೆಯ ಬಡ ತಂದೆತಾಯಿಗಳ ಮಗ. ಎಂಟನೆಯ ತರಗತಿಯಲ್ಲಿದ್ದಾಗ ತಾಯಿ ತೀರಿಹೋದಳು. ಇತರರ ಭತ್ತದ ಗದ್ದೆಗಳಲ್ಲಿ ಕೂಲಿ ಮಾಡಿ ದಿನಕ್ಕೆ 30-40 ರುಪಾಯಿ ಸಂಪಾದಿಸುತ್ತಿದ್ದ. ನರೇಗಾ ಯೋಜನೆಯಡಿ ಉದ್ಯೋಗ ಗಿಟ್ಟಿಸಿ ನೆಲ ಅಗೆದು ದಿನಕ್ಕೆ 100-150 ರುಪಾಯಿ ಕೂಲಿ ಗಳಿಸಿದ್ದ.

ಹೊಟ್ಟೆಪಾಡಿಗೆಂದು ದೆಹಲಿ ತಲುಪಿ ಕೂಲಿನಾಲಿ ಮಾಡುತ್ತಲೇ ಪದವಿ ಗಳಿಸಿದ. 2013ರಲ್ಲಿ ಜೆ.ಎನ್.ಯು ಪ್ರವೇಶ ಪರೀಕ್ಷೆ ಪಾಸು ಮಾಡಿದ. ಇದೀಗ ಪಿಎಚ್.ಡಿ. ಮಾಡುತ್ತಿರುವ ಆತ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹುದ್ದೆಗೆ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘಟನೆಯಿಂದ (BAPSA) ಸ್ಪರ್ಧಿಸಿದ್ದ. ಬದುಕಿನೊಂದಿಗೆ ಹೋರಾಡಿ ಜೆ.ಎನ್.ಯು. ಪ್ರವೇಶಿಸಿ ಅಕ್ಷರಗಳನ್ನು ಎದೆಗಿಳಿಸಿಕೊಂಡ ಇಂತಹ ಸಾವಿರಾರು ಕತೆಗಳಿವೆ.

ಸಫಾಯಿ ಕರ್ಮಚಾರಿಗಳು, ಕೈಯಿಂದ ಮಾನವ ಮಲ ಬಳಿವವರು, ರಸ್ತೆ ಬದಿಯ ಸಣ್ಣಪುಟ್ಟ ವ್ಯಾಪಾರಿಗಳು, ಕೃಷಿ ಕೂಲಿಕಾರರು, ಅಂಗನವಾಡಿ ಅಮ್ಮಂದಿರ ಬಡಮಕ್ಕಳು ಕಲಿಯಲು ಇಲ್ಲಿಗೆ ಬರುತ್ತಾರೆ. ಮಾಸಿಕ ಆದಾಯ 6000 ರುಪಾಯಿಗಳು ಮತ್ತು ಅದಕ್ಕೂ ಕಮ್ಮಿ ಇರುವ ಆದಾಯವರ್ಗದ ಕುಟುಂಬಗಳಿಂದ ಬರುವ ಇಂತಹ ಮಕ್ಕಳ ಪ್ರಮಾಣ ಶೇ.43. ಮೊನ್ನೆ ಮೊನ್ನೆ ಹಾಸ್ಟೆಲ್ ಮತ್ತು ಕಲಿಕೆಯ ಶುಲ್ಕವನ್ನು ಜೆ.ಎನ್.ಯು ಆಡಳಿತವರ್ಗ ವಾರ್ಷಿಕ 30 ಸಾವಿರ ರುಪಾಯಿಗಳಿಂದ 60 ಸಾವಿರಕ್ಕೆ ಏರಿಸಿದೆ. ಪಾವತಿ ಮಾಡಲಾಗದಿದ್ದರೆ ಇಲ್ಲಿ ಓದುವುದನ್ನು ಬಿಟ್ಟು ಬೇರೆ ಹುಡುಕಿಕೊಳ್ಳಿ ಎಂದು ವಿಶ್ವವಿದ್ಯಾಲಯದ ಆಡಳಿತವರ್ಗ ವಿದ್ಯಾರ್ಥಿಗಳನ್ನು ಜಬರಿಸಿದೆ.

ಕಳೆದ ಐದು ವರ್ಷಗಳಲ್ಲಿ ಐದೂವರೆ ಲಕ್ಷ ಕೋಟಿ ರುಪಾಯಿಗಳಷ್ಟು ಕಾಪೆರ್Çರೇಟು ಸಾಲಗಳನ್ನು ಮನ್ನಾ ಮಾಡಲಾಗಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲರ ಪ್ರತಿಮೆ ನಿಲ್ಲಿಸಲು 3000 ಕೋಟಿ ರುಪಾಯಿ ವ್ಯಯಿಸಲಾಗಿದೆ. ನೋಟು ರದ್ದು ಮಾಡಿ, ಹೊಸ ನೋಟು ಮುದ್ರಿಸಲು ಮಾಡಲಾದ ವೆಚ್ಚ 13 ಸಾವಿರ ಕೋಟಿ ರುಪಾಯಿಗಳು. ಆಳುವ ಪಕ್ಷದ ಜಾಹೀರಾತುಗಳಿಗೆ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಆದರೆ ನಿರ್ಗತಿಕರು ಮತ್ತು ವಂಚಿತ ಸಮುದಾಯಗಳ ವಿದ್ಯಾರ್ಥಿಗಳ ಪಾಲಿನ ಏಕೈಕ ಅಕ್ಷರಲೋಕ ಜೆ.ಎನ್.ಯು ಬಾಗಿಲನ್ನು ಶುಲ್ಕ ಏರಿಸಿ ಈ ವರ್ಗಗಳಿಗೆ ಮುಚ್ಚಲಾಗುತ್ತಿದೆ.

ಪ್ರತಿಭಟನೆಗೆ ಇಳಿದಿರುವ ವಿದ್ಯಾರ್ಥಿ ಸಮುದಾಯದ ವಿರುದ್ಧ ದಮನಕಾರಿ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಮೊನ್ನೆ ವಕೀಲರ ಜೊತೆಗಿನ ಘರ್ಷಣೆಗಳಲ್ಲಿ ಕುರಿಮರಿಗಳಂತೆ ವರ್ತಿಸಿದ್ದ ದೆಹಲಿ ಪೆÇಲೀಸರು, ಇದೀಗ ಬಡ ವಿದ್ಯಾರ್ಥಿಗಳ ಬುರುಡೆ ಬಿಚ್ಚುತ್ತಿದ್ದಾರೆ.

ಇದೇ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯವೇ ಸ್ಥಾಪಿಸಿದ ವ್ಯವಸ್ಥೆ (National Institutions Ranking Framework) ದೇಶದಲ್ಲೇ ಮೊದಲ ರ್ಯಾಂಕ್ ನೀಡಿತ್ತು. ವಿಶ್ವವಿದ್ಯಾಲಯವೊಂದು ಏಕಕಾಲಕ್ಕೆ ರಾಷ್ಟ್ರವಿರೋಧಿ ಎನಿಸಿಕೊಳ್ಳುವುದು ಮತ್ತು ಅದೇ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದಿಂದ ದೇಶದಲ್ಲಿ ಮೊದಲ ರ್ಯಾಂಕ್ ಪಡೆಯುವುದು ದೊಡ್ಡ ಸೋಜಿಗವೇ ಸರಿ!

ಇದನ್ನು ಓದಿ : JNU ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ರಾಜ್ಯದ್ಯಂತ ವಿದ್ಯಾರ್ಥಿಗಳಿಂದ ಪ್ರತಿಭಟನೆ..

ಭಿನ್ನಾಭಿಪ್ರಾಯಗಳನ್ನು ತುಳಿಯಲಾಗುತ್ತಿದೆ. ಭಿನ್ನಮತ ಪ್ರದರ್ಶಿಸುವ ವಿದ್ಯಾರ್ಥಿಗಳನ್ನು ದುಬಾರಿ ದಂಡ ಶುಲ್ಕಗಳಿಂದ ದಂಡಿಸಲಾಗುತ್ತಿದೆ. ವಿದ್ಯಾರ್ಥಿಗಳ ಕೈಗೆಟುಕುವ ದರಗಳಲ್ಲಿ ವ್ಯವಹರಿಸುವ ಧಾಬಾಗಳನ್ನು ಮುಚ್ಚಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ರಾತ್ರಿ 11.30ರ ನಂತರ ಕ್ಯಾಂಪಸಿನಲ್ಲಿ ಕಫ್ರ್ಯೂ ವಿಧಿಸಲಾಗಿದೆ. ರಾತ್ರಿಯೆಲ್ಲ ತೆರೆದಿರುತ್ತಿದ್ದ ಗ್ರಂಥಾಲಯವನ್ನು ಮುಚ್ಚಲಾಗುತ್ತಿದೆ.

ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಳ್ಳುವ, ಜನತಾಂತ್ರಿಕ, ಪ್ರಗತಿಪರ ಹಾಗೂ ಜಾತ್ಯತೀತ ಗುಣಗಳನ್ನು, ವೈಚಾರಿಕ ಸ್ವಾತಂತ್ರ್ಯ ಮತ್ತು ಮುಕ್ತಚಿಂತನೆಯ ಮೌಲ್ಯಗಳು ಜೆ.ಎನ್.ಯುವಿನ ಆತ್ಮ. ಈ ಆತ್ಮವನ್ನೇ ನಾಶ ಮಾಡಲಾಗುತ್ತಿದೆ. ಶಿಕ್ಷಣವನ್ನು ಖಾಸಗೀಕರಿಸಿ ವ್ಯಾಪಾರದ ಸರಕನ್ನಾಗಿಸುವ, ಉಳ್ಳವರ ಏಕಸ್ವಾಮ್ಯ ಆಗಿಸುವ ಹುನ್ನಾರ ಜಾರಿಯಲ್ಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೋದಿ ವರ್ಚಸ್ ಆರೆಸಸ್ ಕೇಂದ್ರ ಸರ್ಕಾರದ ದೂರ್ ನಡಿಯ ದುರ್ನಡತೆ ನನ್ನ ಧಿಕ್ಕಾರ
    ಕಾಂಗ್ರೆಸ್ ಒಂದುರೀತಿ ಅನ್ಯಾಯ ಮಾಡಿದ್ದಾದರೆ ಅವರು 70 ವರ್ಷ ಆಡಳಿತ ಅವಧಿಯಲ್ಲಿ ಹಂತಹಂತವಾಗಿ ತಳ ವರ್ಗದವರಿಗೆ ಅನ್ಯಾಯ ಮಾಡುತ್ತಲೇ ಮುಂದಿರುತ್ತಾರೆ
    ಬಿಜೆಪಿ ಆರನೇ ವರ್ಷ ರನ್ನಿಂಗ್ ಇದೆ ನಿರ್ಗತಿಕರಿಗೆ ಕಾರ್ಮಿಕ ವರ್ಗದವರಿಗೆ ತಿನ್ನಲು ಊಟವೇ ಇಲ್ಲದ ಕಡುಬಡತನ ಹೇರಲಾಗಿದೆ ಇನ್ನು 70ವರ್ಷ ಕಾಂಗ್ರೆಸ್ ಸರ್ಕಾರದ ಅವಧಿ ಬಿಜೆಪಿಗೆ ಸಿಕ್ಕರೆ ಭಾರತದೇಶವೇ ಸಂಪೂರ್ಣ ಮನುವಾದಿಗಳು ವರ್ಚಸ್ ಶೂದ್ರರು ಹೊಡೆದಾಡುವುದು ರಲ್ಲಿ ಮುಲಾಜಿಲ್ಲದೆ ನಡೆಯಬೇಕಾಗುತ್ತದೆ ಮೋದಿಯಂತಹ ದುರ್ದೈವ ಪ್ರಧಾನಿ ಎಂದರೆ ಮತ್ತೊಬ್ಬನಿಲ್ಲ
    ಜೈ ಭೀಮ್ ಜೈ ಸಂವಿಧಾನ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...