Homeಡೇಟಾ ಖೋಲಿಕೆಟ್ಟ-ಒಳ್ಳೆ ಸರ್ವಾಧಿಕಾರ ಅನ್ನೋದು ಇಲ್ಲ. ಅಮಾಸಿ ಅಮಾಸಿನ, ಹುಣಿಮೆ ಹುಣಿಮಿನ

ಕೆಟ್ಟ-ಒಳ್ಳೆ ಸರ್ವಾಧಿಕಾರ ಅನ್ನೋದು ಇಲ್ಲ. ಅಮಾಸಿ ಅಮಾಸಿನ, ಹುಣಿಮೆ ಹುಣಿಮಿನ

ಹೊಸ ಸರಕಾರ ಬಂದ ಮ್ಯಾಲೆ ಪಂಥ ಪ್ರಧಾನ ಸೇವಕರು ಇಲ್ಲ ಅನ್ನುವವರನ್ನ ದೂರ ಮಾಡಿ ಹೌದು ಅನ್ನುವರನ್ನು ಮಾತ್ರ ಹತ್ತಿರ ಇಟ್ಟುಕೊಂಡಾರ. ಟೀಕಾಕಾರರಿಗೆ ಜಾಗ ಇಲ್ಲ. ಭಜನಾ ಮಂಡಳಿಗಳಿಗೆ ಮಾತ್ರ ಜಾಗ ಇದೆ.

- Advertisement -
- Advertisement -

ಬಿಹಾರ ಸಿಂಡರೋಂ ಅಂತ ಒಂದು ಅದ.

ಅದು ಎನಪಾ ಅಂದ್ರ ಬಿಹಾರದಾಗ ಇರೋ ಬುದ್ಧಿವಂತ ಮನುಷ್ಯರು ಸಣ್ಣವರಿದ್ದಾಗ ಬಹಳ ಕಷ್ಟಪಟ್ಟು ಓದಿ, ಪರೀಕ್ಷಾ ಪಾಸು ಮಾಡಿ, ಡಾಕ್ಟರು, ಇಂಜಿನಿಯರು, ಐ.ಎ.ಎಸ್ ಅಧಿಕಾರಿ ಆಗತಾರ. ಅಷ್ಟೆಲ್ಲಾ ಭಾನಗಡಿ ಯಾಕಪಾ ಅಂದ್ರ ಬಿಹಾರದಿಂದ ಹೊರಗ ಬೀಳಲಿಕ್ಕೆ.

ಅಲ್ಲಿಂದ ಹೊರಗಬಿದ್ದವರು ಬೆಂಗಳೂರಿಗೆ ಬಂದು “ಥೂ ಈ ಟ್ರಾಫಿಕ್’, ಈ ಹೊಲಸು ನೀರು, ಗಲೀಜು ಮಾರ್ಕೆಟ್,’ ಅಂತ ಬೈತಾರ ಅದು ಬ್ಯಾರೆ ವಿಷಯ.
ಇದು ಯಾಕ ನೆನಪು ಆತಪಾ ಅಂದ್ರ ಮೊನ್ನೆ ನಮ್ಮ ಕಾಕು ಅವರ ಮನಿಯೊಳಗ ಈ ಸುದ್ದಿ ಬಂತು.

ನಾನು, ನಮ್ಮ ಮನಿಯವರು ಕೂಡಿ ಬಾಜು ಮನಿ ಕಾಕು ಅವರ ಮನಿಗೆ ಹೋಗಿದ್ದವಿ. ಅವರು ಮತ್ತು ಅವರ ಗಂಡ ಕೂಡುಮನಿ ಕಾಕಾ ಇಬ್ಬರೂ ಒಂದು ಕೂಡುಮನಿ (ಅಪಾಟ್ಮೆಂಟ್)ದೊಳಗ ಇರ್ತಾರ.

ಅವರು ಮೊನ್ನೆ ಇನ್ನಾ ಅಮೆರಿಕ ಪ್ರವಾಸ ಮುಗಿಸಿ ಬಂದಿದ್ದರು. ಅಲ್ಲಿ ಇರೋ ತಮ್ಮ ಮಗ – ಸೊಸಿ, ಮಗಳು – ಅಳಿಯನ ಭೇಟಿಯಾಗಿ ಬಂದಿದ್ದರು. ಅಲ್ಲಿಂದ ಬಂದು ಒಂದು ತಿಂಗಳು ಆದರೂ ಕೂಡ ನ್ಯೂಯಾರ್ಕಿನ ಥಂಡಿ, ಅಮೆರಿಕನ್ ಇಂಗ್ಲೀಷ್‌ನ ಒತ್ತುಮಾತು, ಹಾಗೂ ಅಲ್ಲಿನ ಸ್ವಚ್ಛ ರಸ್ತೆಗಳ ಗುಂಗಿನಲ್ಲೇ ಇದ್ದರು.

“ಇಲ್ಲೆ ಎಲ್ಲಾ ಕಡೆ ಹೊಲಸು, ಕಷ್ಟಪಟ್ಟು ಓದಿದ ಹುಡುಗರಿಗೆ ಮರಿಯಾದಿ ಇಲ್ಲ, ಮೀಸಲಾತಿಯೊಳಗ ಸಿಕ್ಕು ಸಾಯಬೇಕು. ಒಳ್ಳೆ ನೌಕರಿ ಇಲ್ಲ, ಏನಿಲ್ಲ, ಅದಕ್ಕ ನಮ್ಮ ಹುಡುಗರಿಗೆ ನಾ ಹೈಸ್ಕೂಲ್‌ದಾಗ ಹೇಳಿಬಿಟ್ಟೆ. ನೋಡ್ರಿ ಇಲ್ಲೆ ಛಲೋ ಓದರಿ, ಎಷ್ಟು ಲಗೂ ಆಗತದ ಅಷ್ಟು ಲಗೂ ಅಮೆರಿಕ, ಯೂರೋಪು, ಆಸ್ಟ್ರೇಲಿಯಾ ಅಂತ ಎಲ್ಲೇರ ಹೋಗಿ ಬಿಡರಿ. ಅವರು ನನ್ನ ಮಾತು ಕೇಳಿದರು, ಶಾಣೆ ಆದರು” ಅಂತ ಚಾಕಲೆಟ್ ಕಾರ್ಖಾನೆಯ ಒಳಗೆ ಹೋದ ಚಾರ್ಲಿಯಂತೆ ಖುಷಿ ಸೂಸಿದರು.

ಅವರು ಅಲ್ಲಿಗೆ ಹೋದ ಮ್ಯಾಲೆ ಅಲ್ಲೇ ಇರೋ ಹುಡುಗ ಹುಡುಗಿ ನೋಡಿ ಅವರ ಲಗ್ನ ಮಾಡಿದಿವಿ. ಅವರು ಅಲ್ಲೇ ಆರಾಮ ಇದ್ದಾರ ಅಂತ ಕಾಕಾ ಅಂದ್ರು.

“ಏನು ಆರಾಮೋ ಏನೋ ತಮ್ಮಾ? ಇಬ್ಬರಿಗೂ ಸಕ್ಕರೆ ರೋಗ. ಇವರಿಗೆ ಸಿಟ್ಟು ಜಾಸ್ತಿ ಆಗಿ ಆಗಿ ಬಿ. ಪಿ ಬ್ಯಾರೆ ಬಂದದ. ಒಂದು ಬ್ಲಡ್ ಟೆಸ್ಟ್ ಮಾಡಸಬೇಕು ಅಂದ್ರ ಯಾರರ ಹುಡುಗರ ಮರ್ಜಿ ಹಿಡಿಬೇಕು. ಅವಲಕ್ಕಿ ಖಾಲಿ ಆದರ ಕಿರಾಣಿ ಅಂಗಡಿಯವನಿಗೆ ಫೋನು ಮಾಡಿ ಕಾಯಬೇಕು. ಹಿಂಗ ನಡದದ ನೋಡು,” ಅಂತ ಕಾಕು ನಿಟ್ಟುಸಿರುಬಿಟ್ಟರು.

ಅಷ್ಟೊತ್ತಿಗೆ ನೀರಿಕ್ಷೆಯಂತೆ ಮಾತು ಹಿಂದೂಸ್ತಾನದ ರಾಜಕಾರಣಕ್ಕೆ ಹೊರಳಿತು. ಅಲ್ಲೋ ನಮ್ಮ ಜನಾ ಕೊರೊನಾ ಬಂದದ ಮಾಸ್ಕ್ ಹಾಕ್ಕೊಂಡು ಓಡಾಡರಿ ಅದ್ರ ಕೇಳೋದೇ ಇಲ್ಲ. ಬಜಾರ್‌ದಾಗ ಹೋದರ ಒಬ್ಬರ ಮೈ ಮ್ಯಾಲೆ ಒಬ್ಬರು ಬೀಳತಾರ. ಯಾರಿಗೂ ಶಿಸ್ತು ಅನ್ನೋದು ಇಲ್ಲ. ಛೇ ಛೇ ಅಂದ್ರು ಕಾಕಾ.

“ಅದಕ್ಕ ನೋಡು ನಮಗ ಸರ್ವಾಧಿಕಾರಿನ ಬೇಕು. ಪ್ರಜಾಪ್ರಭುತ್ವ ಎಲ್ಲಾ ನಡಿಯೋದಿಲ್ಲ. ಈ ಚುನಾವಣೆ, ಸಂಸತ್ತು, ಕ್ಯಾಬಿನೇಟು ಎಲ್ಲಾ ಕೆಲ್ಸಕ್ಕ ಬಾರದ ಮಾತು, ಗೈರು ಉಪಯೋಗಿ,” ಅಂದ್ರು.

ಈ ಕೂಡುಮನಿ ಕಾಕಾಗಳು ಬ್ಯಾರೆ ಎಲ್ಲಾ ವಿಷಯ ಮಾತಾಡೋವಾಗ ಸಹಜ ಇರ್ತಾರ. ಆದರ ರಾಜಕೀಯ ಬಂತು ಅಂದ್ರ ಡಿಸ್ಕವರಿ ಚಾನಲ್‌ನ ಪ್ರಾಣಿ ಬೇಟೆ ಆಗುವಾಗ ಮಾಡೋಹಂಗ ಆಗತಾರ. ಅವರ ದನಿ ಜೋರ ಆಗಲಿಕ್ಕೆ ಶುರುಆಗತದ. ಅವರ ಕೈ ಉಗುರು ಹೊರಗ ಬರಲಿಕ್ಕೆ ಹತ್ತತಾವು. ಅವರ ಕಣ್ಣ ಪಾಪೆ ದೊಡ್ಡವು ಆಗಲಿಕ್ಕೆ ಶುರು ಆಗತಾವು. ಹಿಂದ ರಾಮ್ಸೆ ಬಂಧುಗಳ ಹಳೆ ಹಾರರ ಹಿಂದಿ ಪಿಚ್ಛರನ ಹಿನ್ನೆಲೆ ಸಂಗೀತ ಕೇಳಲಿಕ್ಕೆ ಶುರು ಆಗತದ.

“ನಾನು ಹೋಗಲಿ ಬಿಡರಿ ಕಾಕಾ. ರಾಜಕೀಯ ಮಾತಾಡಿ ಚಹಾದ ರುಚಿ ಯಾಕ ಕೇಡಿಸಿಕೊಳ್ಳಬೇಕು,” ಅಂತ ನಕ್ಕೆ. ಅಗದೀ ಖರೆ ಮಾತು ಹೇಳಿದಿ ನೋಡಪಾ. ಇವರಿಗೆ ನಮ್ಮ ಅಳಿಯ ಒಂದು ಶಾಣೆ ಫೋನು ಕೊಡಿಸಿ ಬಿಟ್ಟಾನ. ಅದರಾಗ ಆ ‘ಏನು ನಡದದ’ (ವಾಟಸಪ್ಪು ) ಬ್ಯಾರೆ ಹಾಕಿ ಕೊಟ್ಟಾನ. ಆವಾಗಿನಿಂದಾ ಬರೆ ಅದರಾಗ ಇರ್ತಾರ. ಯಾರ ಬಂದರೂ ಬರೆ ರಾಜಕೀಯದ ಮಾತು. ನನಗ ಅಂತೂ ಸಾಕಾಗಿ ಬಿಟ್ಟದ. ಅಂತ ಅಂದ್ರು.

ನಾನು ಹೋಗಲಿ ಬಿಡರಿ. ಅದು ಹೊಸಾದು ಅಂತ ಅದನ್ನ ನೋಡತಾರ. ಒಂದು ದಿವಸ ಅದು ಸಹಿತ ಬೇಜಾರು ಆಗಿ ಬಿಟ್ಟುಬಿಡತಾರ ಅಂದೆ.

ಒಂದು ಕೆಲಸ ಮಾಡ್ರಿ. ಈ ವರ್ಷ ಅಮೆರಿಕ ಹೋದಂಗ ಮುಂದಿನ ವರ್ಷ ಉತ್ತರ ಕೊರಿಯಾ ಹೋಗರಿ. ಅಲ್ಲೇ ಮಜಾ ಇರ್ತದ ಅಂದೆ. ನಮ್ಮ ಗೆಳೆಯ ಇದ್ದಾನ. ಕಿಮ್ ಅಂತ. ಅವನ ಅಡ್ರೆಸ್ ಕೊಡತೆನಿ. ಅಲ್ಲಿ ಸ್ವಲ್ಪ ದಿವಸ ಇದ್ದು ಬರ್ರಿ ಅಂದೆ.

“ಅಲ್ಲೇ ಏನು ಮಜಾಪಾ ಅಂತಾದು” ಅಂದ್ರು ಕಾಕು.

“ಅಲ್ಲೇ ತಿಂಗಳದಾಗ ಎಲ್ಲರ ಮನಿಗೆ ಎರಡು ಸರೆ ಕೇಶಕರ್ತನ ನಿರೀಕ್ಷಕರು (ಹೇರ್‌ಕಟ್ ಇನ್ಸ್‌ಪೆಕ್ಟರ್) ಬರ್ತಾರ. ಅಲ್ಲಿನ ಕಾನೂನು ಪ್ರಕಾರ ಗಂಡಸರು 15 ರೀತಿ ಕಟ್ ಮಾಡಿಸಿಕೋಬೇಕು. ಹೆಣ್ಣು ಮಕ್ಕಳಿಗೆ ವಿನಾಯಿತಿ ಅದ. ಅವರು 16 ರೀತಿ ಮಾಡಿಸಿಕೊಳ್ಳಬೇಕು. ತಲಿ ಮ್ಯಾಲೆ ಕೂದಲು ಇಲ್ಲಾ ಅನ್ನೋ ಖಲವಾಟ ಗಂಡಸುರು ಪರಿಮಿತಿ ಪಡೆದ ವಿಗ್ ಹಾಕಿಸಿಕೊಳ್ಳಬೇಕು,” ಅಂತ ಅಂದೆ ನಾನು.

Image courtesy: MarketWatch

ಹೋಗೋ ಮಾರಾಯ ಎನರ ಸುಳ್ಳು ಸುಳ್ಳು ಹೇಳಬ್ಯಾಡ ಅಂತಅಂದ್ರು. ಅಯ್ಯೋ ಇಲ್ಲಾ. ಇಲ್ಲೇ ನೋಡ್ರಿ ಬೇಕಾರ ಅಂತ ಹೇಳಿದೆ.

ಅಲ್ಲೇ ಇನ್ನೊಂದು ಕಾನೂನು ಆದ. ರಾಜಕೀಯ ಅಪರಾಧಿಗಳಿಗೆ ಬೇಗ ಬೇಗ ವಿಚಾರಣೆ, ಬೇಗ ಬೇಗ ಶಿಕ್ಷೆ. ಅವರಿಗೆ ಜಾಮೀನು ಇಲ್ಲ, ಬಿಡುಗಡೆ ಇಲ್ಲ. ಅವರಿಗೆ ವಿಶೇಷ ಜೈಲು. ಅಲ್ಲೇ ಅವರ ಹತ್ತರ ಕಠಿಣ ಕೂಲಿ ಕೆಲಸ ಮಾಡಿಸಿ ಊಟಕ್ಕ ಹಾಕತಾರ. ಇನ್ನೂ ಮಜಾ ಏನು ಅಂದ್ರ ಯಾವ ರಾಜಕೀಯ ಹೋರಾಟಗಾರರು ಒಬ್ಬಂಟಿ ಆಗಬಾರದು ಅಂತ ಹೇಳಿ ಅವರ ಅಪ್ಪ, ಮಕ್ಕಳು ಎಲ್ಲರನ್ನೂ ಅವರ ಜೊತೆಗೆ ಜೈಲಿಗೆ ಹಾಕತಾರ.

ಒಬ್ಬ ಮನುಷ್ಯನಿಗೆ ಕ್ರಾಂತಿಕಾರಿ ಐಡಿಯಾ ಬಂದೇತಿ ಅಂದ್ರ ಅದಕ್ಕ ಅವರ ಅಪ್ಪ ಕಾರಣ ಇರತಾನ. ಅದಕ್ಕ ಅವ ಒಳಗ ಇನ್ನೂ, ತನ್ನ ಮಗನ ಮ್ಯಾಲೆ ಕ್ರಾಂತಿಕಾರಿ ಪ್ರಭಾವ ಬೀರಿರಬಹುದು. ಅದಕ್ಕ ಅವನಿಗೂ ಜೈಲು. ಅವರು ಎಷ್ಟು ಸಣ್ಣಾವ್ರು ಇದ್ದರೂ ಸರಿ, ಜೈಲಿಗೆ ಕಳಸೋದ. ಐದಾರು ವರ್ಷದ ಮಕ್ಕಳಿಗೆ ಜೈಲಿಗೆ ಹಾಕೋದು ಅಲ್ಲೇ ಸಾಮಾನ್ಯ ಅಂತ ಅಂದೆ. ಅಯ್ಯೋ ಅಷ್ಟು ಸಣ್ಣ ಹುಡುಗರಿಗೆ ಯಾಕ? ಅಂತ ಯಾರೋ ಕೇಳಿದಾಗ ಹಾವಿಗೆ ಹುಟ್ಟಿನಿಂದ ವಿಷ ಇರ್ತದ ಅಂತ ಅಲ್ಲಿನ ಕಿಮ್ ಅನ್ನೋ ನಾಯಕರು ಹೇಳಿದರು.

ಅದಕ್ಕ ಆ ಜೈಲಿಗೆ 14 ನೆ ನಂಬರ್ ಕ್ಯಾಂಪ್ ಅಂತ ಹೆಸರು. ಅದಕ್ಕ ಕೆಲವರು ಜೋಕು ಮಾಡತಾರ. ಉತ್ತರ ಕೊರಿಯಾದಾಗ ಇರೋದಕ್ಕಿಂತ ಆ ಕ್ಯಾಂಪ್‌ದಾಗ ಇರಬೇಕು. ಯಾಕ್ ಅಂದ್ರ ಇಡೀ ದೇಶದಾಗಿನ ಸಾಹಿತಿಗಳು, ಕವಿಗಳು, ಚಿತ್ರ ಕಲಾವಿದರು, ಚಲನಚಿತ್ರ ನಿರ್ದೇಶಕರು, ಸಂಗೀತಕಾರರು, ಕಾಲೇಜು ಶಿಕ್ಷಕರು, ಎಲ್ಲರೂ ಅಲ್ಲೇ ಇದ್ದಾರ, ಅಂತ.

ನನ್ನ ಮಾತು ಮುಂದುವರೆಯಿತು. ಅದು ಕೆಟ್ಟ ಸರ್ವಾಧಿಕಾರ. ನಮಗ ಬೇಕಾಗಿದ್ದು ಒಳ್ಳೆ ಸರ್ವಾಧಿಕಾರ. ಅಂತ ಅಂದ್ರು ಕಾಕಾ. ಅದರಾಗ ಒಳ್ಳೇದು – ಕೆಟ್ಟದ್ದು ಅನ್ನೋದು ಇರೋದಿಲ್ಲ ಕಾಕಾ, ಅಮಾಸಿ ಅಮಾಸಿನ, ಹುಣಿಮಿ ಹುಣಿಮಿನ ಅಂತ ಅಂದೆ.

ಈ ಮಾತು ಕತೆ ಯಾವಾಗ ಮುಗಿತದೋ ಅಂತ ಕಾಕು ಕಾಯತಾ ಕೂತಿದ್ದರು.

ನೋಡ್ರಿ, ಮಾನವ ಸ್ವಾತಂತ್ರ ಸೂಚಿ – 19 ಅಂತ ಒಂದು ವರದಿ ಬಂದದ. ಅದರ ಪ್ರಕಾರ ಎರಡು ನೂರು ದೇಶದಾಗ ಭಾರತ 94 ನೆ ಸ್ಥಾನದಾಗ ಆದ. ಏಷಿಯಾದ ಅನೇಕ ದೇಶಗಳು ಇದಕ್ಕಿಂತ ಉನ್ನತ ಸ್ಥಾನದಾಗ ಅದಾವು ಅಂತ ಹೇಳಿದೆ.

ನಮ್ಮದು ಸ್ವತಂತ್ರ ದೇಶ. ಇದು ಮೊದಲಿನ ಹತ್ತು- ಇಪ್ಪತ್ತುರ ಒಳಗ ಇರಬೇಕಾಗಿತ್ತು ಅಲ್ಲಾ, ಅಂತ ಕಾಕಾ ಮಹಾಭಾರತದ ದ್ರತರಾಷ್ಟ್ರನ ಗತೆ ಒಂದು ಘನ ಗಂಭೀರ ಹೇಳಿಕೆಕೊಟ್ಟರು.

ಎಲ್ಲೆ ಇರ್ತದ ಕಾಕಾ, ಹೊಸ ಸರಕಾರ ಬಂದ ಮ್ಯಾಲೆ ಪಂಥ ಪ್ರಧಾನ ಸೇವಕರು ಇಲ್ಲ ಅನ್ನುವವರನ್ನ ದೂರ ಮಾಡಿ ಹೌದು ಅನ್ನುವರನ್ನು ಮಾತ್ರ ಹತ್ತಿರ ಇಟ್ಟುಕೊಂಡಾರ. ಟೀಕಾಕಾರರಿಗೆ ಜಾಗ ಇಲ್ಲ. ಭಜನಾ ಮಂಡಳಿಗಳಿಗೆ ಮಾತ್ರ ಜಾಗ ಇದೆ. ಸರಕಾರ ಅನ್ನೋದು ಮಿತಿಮೀರಿದ ಅಧಿಕಾರ ಪಡೆದುಕೊಂಡುಬಿಟ್ಟದ. ಎಲ್ಲಾ ರೀತಿಯ ಚಳುವಳಿ, ಹೋರಾಟಗಳನ್ನ ಹತ್ತಿಕ್ಕಿಬಿಟ್ಟದ.

ನೂರಾರು ಮಂದಿ ಚಿಂತಕರನ್ನ ವರ್ಷಗಟ್ಟಲೆ ವಿಚಾರಣೆ ಇಲ್ಲದೆ, ನ್ಯಾಯಾಲಯದ ಮುಂದ ನಿಲ್ಲಿಸದೆ, ನಿಲ್ಲಿಸಿದರೂ ಅವರಿಗೆ ಬೇಲು ಸಿಗದಂತೆ ನೋಡಿಕೊಂಡಾರ. ಅವರ ಅಪ್ಪ- ಮಕ್ಕಳು ಎಲ್ಲರನ್ನೂ ಕರಕೊಂಡು ಹೋಗಿ 14 ನೆ ನಂಬರ್ ಕ್ಯಾಂಪ್‌ಗೆ ಕರಕೊಂಡು ಹೋಗೋದು ಒಂದು ಬಾಕಿ ಐತಿ ನೋಡ್ರಿ, ಅಂದೆ.

ಹಂಗೂ ಆಗಬಹುದು ಅಂತಿಯೇನು, ಅಂದ್ರು ಕಾಕು. ಯಾರಿಗೆ ಗೊತ್ತಪಾ ಮಾರಾಯ. ಯಾರಿಗೂ ಅಗತ್ಯಕ್ಕಿಂತ ಜಾಸ್ತಿ ಅಧಿಕಾರ ಕೊಡಬಾರದು ಅಂತ ಅಂತ ಸಣ್ಣ ದನಿಯೊಳಗ ಅಂದುಕೊಂಡರು. ಅವರು ಓಣಿಯೊಳಗ ಓಡಾಡಿ ಬೆಳದವರು. ಎಲ್ಲಕ್ಕಿಂತ ಮುಖ್ಯ ಅಂದ್ರ ಅವರ ಫೋನಿನ ಒಳಗ ’ಎನ್ ನಡದದ’ ಅನ್ನೋದು ಇಲ್ಲಾ!


ಇದನ್ನೂ ಓದಿ: ಈ ಜಿಡಿಪಿ ಅಂದರೆ ಏನಪಾ? : ಡೇಟಾಮ್ಯಾಟಿಕ್ಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡಿನಲ್ಲಿ ಎರಡು ಬಸ್ಸುಗಳು ಡಿಕ್ಕಿ:10ಕ್ಕೂ ಹೆಚ್ಚು ಜನರ ಸಾವು, 20 ಜನರಿಗೆ ಗಂಭೀರ ಗಾಯಗಳಾಗಿವೆ

ಚೆನ್ನೈ: ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಭಾನುವಾರ ಸಂಜೆ ಎರಡು ತಮಿಳುನಾಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು...

ನಾಳೆಯಿಂದ ಸಂಸತ್ ಚಳಿಗಾಲದ ಅಧಿವೇಶನ | ಸುಗಮ ಕಲಾಪಕ್ಕೆ ಸಹಕಾರ ಕೋರಿದ ಆಡಳಿತ : ಎಸ್‌ಐಆರ್ ಚರ್ಚೆ ಮುಂದಿಟ್ಟ ಪ್ರತಿಪಕ್ಷಗಳು

ನಾಳೆಯಿಂದ (ಡಿಸೆಂಬರ್ 1) ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭಗೊಳ್ಳಲಿದೆ. ಅದಕ್ಕೂ ಮುನ್ನ ಇಂದು (ನವೆಂಬರ್ 30) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ. ಸಭೆಯಲ್ಲಿ ಸುಗಮ...

ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.  ನವೆಂಬರ್ 30ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು...

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ: ಮನನೊಂದು 22 ವರ್ಷದ ಯುವತಿ ಆತ್ಮಹತ್ಯೆ 

ಮದುವೆಯಾಗುವುದಾಗಿ ನಂಬಿಸಿದ್ದ ಯುವಕ, ಯುವತಿಗೆ ಮಾನಸಿಕ-ದೈಹಿಕ ಹಲ್ಲೆ ನಡೆಸಿದ್ದು, ಆತನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂಜಿನಿಯರಿಂಗ್ ಪದವೀಧರೆ...

ಮಹಾರಾಷ್ಟ್ರ : ಪ್ರಮುಖ ನಾಯಕ ಅನಂತ್ ಸೇರಿದಂತೆ 10 ಮಂದಿ ಮಾವೋವಾದಿಗಳು ಶರಣಾಗತಿ

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಶುಕ್ರವಾರ (ನ.28) ಪ್ರಮುಖ ಮಾವೋವಾದಿ ನಾಯಕ ವಿಕಾಸ್ ನಾಗಪುರೆ ಅಲಿಯಾಸ್ ನವಜ್ಯೋತ್ ಅಲಿಯಾಸ್ ಅನಂತ್ ಮತ್ತು ಇತರ 10 ಮಂದಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಅನಂತ್ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ...

ಎಸ್‌ಐಆರ್ : 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಗಡುವು ವಿಸ್ತರಿಸಿದ ಚು. ಆಯೋಗ

ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌)ಯಲ್ಲಿ ಮತದಾರರು ಎಣಿಕೆ ನಮೂನೆಗಳನ್ನು ಸಲ್ಲಿಸುವ ಗಡುವನ್ನು ಡಿಸೆಂಬರ್ 4 ರಿಂದ 11ಕ್ಕೆ ಚುನಾವಣಾ ಆಯೋಗ...

ಗೆಳತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹ: 18ವರ್ಷದ ಪದವಿಪೂರ್ವ ವಿದ್ಯಾರ್ಥಿ ಆತ್ಮಹತ್ಯೆ

ತನ್ನ ಗೆಳತಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದ ಕಾರಣ ನವೆಂಬರ್ 29, ಶನಿವಾರ ಹೈದರಾಬಾದ್‌ನಲ್ಲಿ ಪದವಿಪೂರ್ವ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸುರರಾಮ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು 18 ವರ್ಷದ ಅಭಿಲಾಷ್ ಎಂದು...

ಅರ್ಫಾಝ್‌ನ ಮನೆ ಕೆಡವಿದ ಆಡಳಿತ : ತನ್ನ ಜಾಗ ಉಡುಗೊರೆಯಾಗಿ ಕೊಟ್ಟ ಕುಲ್ದೀಪ್ ಶರ್ಮಾ

ಅರ್ಫಾಝ್ ಎಂಬ ಪತ್ರಕರ್ತನ ಮನೆಯನ್ನು ಆಡಳಿತ ಕೆಡವಿದಾಗ, ತನ್ನ ಜಾಗವನ್ನು ಉಡುಗೊರೆಯಾಗಿ ಕೊಟ್ಟ ಜಮ್ಮು ಕಾಶ್ಮೀರದ ಸಾಮಾಜಿಕ ಹೋರಾಟಗಾರ ಕುಲ್ದೀಪ್ ಶರ್ಮಾ ನಡೆಗೆ ದೇಶದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಮ್ಮುವಿನ ಜ್ಯುವೆಲ್ ಪ್ರದೇಶದ ನಿವಾಸಿ...

ತೆಲಂಗಾಣದಲ್ಲಿ ಭೀಕರ ಅಗ್ನಿ ಅವಘಡ, ಕೊಂಡಗಟ್ಟು ಪ್ರದೇಶದಲ್ಲಿ 20ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಹೈದರಾಬಾದ್: ತೆಲಂಗಾಣದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕೊಂಡಗಟ್ಟು ಪ್ರದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಕೊಂಡಗಟ್ಟು ಬೆಟ್ಟಗಳ ತಪ್ಪಲಿನಲ್ಲಿರುವ ಅಂಗಡಿಗಳ ಸಾಲಿಗೆ ಬೆಂಕಿ ವ್ಯಾಪಿಸಿದ್ದು, ತೀವ್ರ...

ಬಾಬರಿ ಮಸೀದಿ ಧ್ವಂಸದಂದು ಶಾಲೆಗಳಲ್ಲಿ ‘ಶೌರ್ಯ ದಿನಾಚರಣೆ’ಗೆ ಸೂಚಿಸಿದ ರಾಜಸ್ಥಾನದ ಬಿಜೆಪಿ ಸರ್ಕಾರ : 12 ಗಂಟೆಯೊಳಗೆ ಆದೇಶ ವಾಪಸ್

ಬಾಬರಿ ಮಸೀದಿ ಧ್ವಂಸ ದಿನವಾದ ಡಿಸೆಂಬರ್ 6ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ 'ಶೌರ್ಯ ದಿನ' ಆಚರಿಸುವಂತೆ ನೀಡಿದ್ದ ಆದೇಶವನ್ನು 12 ಗಂಟೆಗಳ ಒಳಗೆ ರಾಜಸ್ಥಾನದ ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ. ಡಿಸೆಂಬರ್ 6ರಂದು ರಾಜ್ಯದ...