Homeಮುಖಪುಟಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ 'ಸರಪಟ್ಟ ಪರಂಪರೈ' - ಬಿ. ಶ್ರೀಪಾದ ಭಟ್

ಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ ‘ಸರಪಟ್ಟ ಪರಂಪರೈ’ – ಬಿ. ಶ್ರೀಪಾದ ಭಟ್

ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ.

- Advertisement -
- Advertisement -

ಜಾತಿಯ ಹೆಸರು ಹೇಳಿದರೆ ಬೆಚ್ಚಿಬೀಳುವ ಭಾರತೀಯ ಸಿನಿಮಾ ರಂಗದಲ್ಲಿ ‘ದಲಿತರು ಮತ್ತು ಸಿನಿಮಾ’ ಎನ್ನುವ ಮಾತು ಮೊನ್ನೆಯವರೆಗೂ ಕಿವಿಗೆ ಬೀಳುತ್ತಿರಲಿಲ್ಲ. ಇಲ್ಲಿನ ರೋಗಗ್ರಸ್ಥ ಜಾತಿ ಸಮಾಜದಲ್ಲಿ ಆ ತರಹದ ಕಲ್ಪನೆಯೂ ಸಾಧ್ಯವಿಲ್ಲದಂತಹ ಪರಿಸ್ಥಿತಿಯಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ನಾಗ್ರಾಜ್ ಮಂಜುಳೆ, ಪ.ರಂಜಿತ್ ಮತ್ತು ಮಾರಿ ಸೆಲ್ವರಾಜ್ ಜಾತಿ ಪ್ರಶ್ನೆಯನ್ನು ಶೋಷಿತರ ನೆಲೆಯಿಂದ ಮಾತನಾಡತೊಡಗಿದಾಗ ಈ ಪಟ್ಟಭದ್ರ ಸಿನಿಮಾರಂಗದಲ್ಲಿ ಬಂಡೆಯನ್ನು ಸೀಳಿಕೊಂಡು ಸಮಾನತೆ, ಸ್ವಾತಂತ್ರ್ಯದ ಹುಲ್ಲು ಮೊಳಕೆಯೊಡಗಿತು. ಈವರೆಗಿನ ಸಿದ್ದ ಮಾದರಿಯನ್ನು ಕೆಡವಿ, ಮುರಿದು ಸಬಲ್ಟ್ರಾನ್ ಕಥನವನ್ನು ಮತ್ತೆ ಕಟ್ಟತೊಡಗಿದರು. ಮಂಜುಳೆ ಜಾತಿ ದೌರ್ಜನ್ಯದ ನಿರೂಪಣೆಯನ್ನು ಆಯ್ಕೆ ಮಾಡಿಕೊಂಡರೆ, ಪ.ರಂಜಿತ್ ದಲಿತರ assertion ಕುರಿತು ಮಾತ್ರ ಮಾತನಾಡುತ್ತೇನೆ ಎಂದು ಹೊಸ ಅಲೆಯ ಮತ್ತೊಂದು ಮಾದರಿಯನ್ನೇ ಸೃಷ್ಟಿಸಿದರು. ಆದರೆ ರಂಜಿತ್ ಇದನ್ನು ಪರ್ಯಾಯ ಸಿನಿಮಾ ಪರಂಪರೆಯಾಗಿ ಬೆಳೆಸದೆ ಬದಲಿಗೆ ಜನಪ್ರಿಯ ಸಿನಿಮಾದ ಕ್ಷೇತ್ರದೊಳಗೆ ಸಾದಿಸುತ್ತಾರೆ. ಮುರಿದು ಕಟ್ಟುವ ಪ.ರಂಜಿತ್ ಇಂದು ಅಂಬೇಡ್ಕರ್‌ವಾದದ ಹೊಸ ಅರ್ಥಗಳನ್ನೇ ಬಿಚ್ಚಿಡುತ್ತಿದ್ದಾರೆ. ಸಬಲ್ಟ್ರಾನ್ ಕಥನದ ಮರು ಕಟ್ಟುವ ಈ ಪ್ರಯೋಗಗಳು ಕಬಾಲಿ, ಕಾಲಾದ ನಂತರ ಈಗ ‘ಸರಪಟ್ಟ ಪರಂಪರೈ’ ನಲ್ಲಿ ಮತ್ತೊಂದು ಮಜಲನ್ನು ತಲುಪಿದೆ ಮತ್ತು ‘ಇದು ನಮ್ಮ ಕಾಲ’ ಎಂದು ಹಿರಿಮೆಯಿಂದ, ಘನತೆಯಿಂದ ಆತ್ಮವಿಶ್ವಾಸದಿಂದ ಹಾಡುತ್ತಿದ್ದಾರೆ.

ಇಲ್ಲಿಯವರೆಗೂ ಅನಾಮಿಕವಾಗಿದ್ದ ‘ಉತ್ತರ ಮದ್ರಾಸ್’ ವೆಟ್ರಿಮಾರನ್ ಸಿನಿಮಾಗಳ ಮೂಲಕ ಬೆಳಕಿಗೆ ಬರತೊಡಗಿತು. ಈಗ ‘ಸರಪಟ್ಟ’ ಸಿನಿಮಾದ ಮೂಲಕ ಪ. ರಂಜಿತ್ ಅಲ್ಲಿನ ದುಡಿಯುವ ವರ್ಗಗಳ ಬದುಕು, ಬವಣೆಯ ವಿರಾಟ್ ಸ್ವರೂಪವನ್ನು ನಮಗೆಲ್ಲಾ ಎಳೆಎಳೆಯಾಗಿ ಬಿಚ್ಚಿ ತೋರಿಸಿದ್ದಾರೆ. ನೆಲಮೂಲ ಸಂಸ್ಕೃತಿಯ ಜೀವಂತಿಕೆ ಸ್ಪರ್ಶ ಮಾಡಿಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಈ ‘ಉತ್ತರ ಮದ್ರಾಸ್’ನ ಸ್ಲಂಗಳು, ಓಣಿಗಳು, ಕಾರ್ಖಾನೆಗಳಲ್ಲಿ ವಾಸಿಸುತ್ತಿರುವ ದುಡಿಯುವ ವರ್ಗದ ಬದುಕಿನ ಅನಾವರಣವಿದೆ. ಇಲ್ಲಿ ಈ ವರ್ಗದೊಳಗಿನ ಜಾತಿ ತಾರತಮ್ಯದ ಕ್ರೌರ್ಯವೂ ಸಹ ಬಿಚ್ಚಿಕೊಳ್ಳುತ್ತದೆ ಮತ್ತು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಇದನ್ನು ‘ಬಾಕ್ಸಿಂಗ್ ಡ್ರಾಮಾ’ದ ಮೂಲಕ ನಿರೂಪಿಸಿದ್ದಾರೆ. ಸರಪಟ್ಟ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಎಂದು ಮಾತ್ರ ಕರೆದರೆ ರಂಜಿತ್‌ರವರ ಮುರಿದು ಕಟ್ಟುವ ಕಥನವನ್ನು ಮೂಲೆಗುಂಪು ಮಾಡಿದಂತಾಗುತ್ತದೆ. ಅದರಾಚೆಗೆ ಬೆಳೆದ ಚಿತ್ರಕತೆಯು ಅಲ್ಲಿ ವಾಸಿಸುತ್ತಿರುವ ವಿವಿಧ ವರ್ಗ, ಜಾತಿಗಳ ಜನರ ಬದುಕನ್ನು ಒಂದೇ ಹಾರದಲ್ಲಿ ಪೋಣಿಸಿ ಸುಂದರ ಹಾರದಂತೆ ಹೆಣೆಯಲಾಗಿದೆ.

ಸರಪಟ್ಟ ಸಿನಿಮಾವನ್ನು ಉತ್ತರ ಮದ್ರಾಸ್‌ನ ಶ್ರಮಿಕರ ಬದುಕಿನ ಕೊಲಾಜ್ ಎಂದೇ ಕರೆಯಬಹುದು. ಆ ಬಹುಸಂಸ್ಕೃತಿಯ ಜಗತ್ತಿನಲ್ಲಿ ಅಂಬೇಡ್ಕರ್, ಬುದ್ದ ಕಾಣಿಸಿಕೊಳ್ಳುತ್ತಾರೆ, ಬೀಫ್ ಬಿರಿಯಾನಿ, ಮೊಲ ಮಾಂಸದ ಆಹಾರ ಸಂಸ್ಕೃತಿಯಿದೆ. ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ. ‘ಪರಂಪರೆ ಮುಖ್ಯವಲ್ಲ, ನೀನು, ನಾನು, ಮುನುಷ್ಯರು ಮುಖ್ಯ’ ಎಂದು ಬದುಕಿನ ದೊಡ್ಡ ಪಾಠ ಹೇಳಿದ ಮಾರಿಯಮ್ಮಳ ಮಾನವೀಯತೆಯ ಒರತೆಯಿದೆ, ‘ಮಗ ಕೊಲೆಗಾರನಾಗಬಾರದು, ಕಳ್ಳನಾಗಬಾರದು, ಹಾಗೆಯೇ ಯಾರೂ ಸಹ’ ಎಂದು ಮುರಿದು ಬೀಳುತ್ತಿರುವ ಬದುಕನ್ನು ಮರಳಿ ಕಟ್ಟಲು ಹೆಣಗುತ್ತಿರುವ ಬಾಕಿಯಮ್ಮಳ ಛಲ, ದಿಟ್ಟತೆಯಿದೆ. ನಾವು ಬದುಕೋಣ, ಎಲ್ಲರೂ ಬದುಕೋಣ ಎನ್ನುವ ಡ್ಯಾಡಿಯ ಜೀವಪರತೆಯಿದೆ, ಶಕುನಿ ಮಾಮಾನನ್ನು ನೆನಪಿಸುವ ಕೋಣಿ ಚಂದನ್ ಇದ್ದರೆ ಕಾಯಕ ತತ್ವವನ್ನು ಉಸಿರಾಡುವ ಬೀಡಿ ರಾಯಪ್ಪನ್ ನಮ್ಮನ್ನು ಕಾಡುತ್ತಾನೆ. ಬಾಕ್ಸಿಂಗ್ ದೈತ್ಯ ವೆಂಬುಲಿಯ ಪೌರುಷದ ದುರಹಂಕಾರ ಒಂದೆಡೆಯಿದ್ದರೆ ಮತ್ತೊಂದೆಡೆ ಆಳುವ, ಗೋಳಾಡುವ, ಅಸಹಾಯಕನಾಗಿ ಕುಸಿದು ಹೋಗುವ ಈ ಸಿನಿಮಾದ ಪ್ರೊಟಗಾನಿಸ್ಟ್ ಕಬಿಲನ್ ನಮಗೆಲ್ಲ ಎಚ್ಚರಿಕೆಯ ಪಾಠದಂತಿದ್ದಾನೆ. ತಾನು ಬಾಕ್ಸರ್, ಆದರೆ ತನ್ನ ತಂದೆಯಿಂದಲೇ ತಿರಸ್ಕರಿಸ್ಪಡುವ ವೇಟ್ರಿಸೆಲ್ವನ್ ಬದುಕಿನ ಸಂಕೀರ್ಣತೆಯ ದುರಂತವಿದೆ. ಇವರೆಲ್ಲರ ಜೀವ ಮಿಡಿತದ ಸದ್ದು ‘ಸರಪಟ್ಟ’. ಇಲ್ಲಿ ಯಾರೂ ಅಮುಖ್ಯರಲ್ಲ. ಎಲ್ಲರೂ ಮುಖ್ಯ.

ಪ.ರಂಜಿತ್‌ಗೆ 1970ರ ದಶಕದ ‘ಉತ್ತರ ಮದ್ರಾಸ್’ನ ಆ ನಾಸ್ಟಾಲ್ಜಿಯಾದ ಕುರಿತು, ಆ ಕಾಲದ ಭೌಗೋಳಿಕತೆಯ ಕುರಿತು ಆಸಕ್ತಿಯಿಲ್ಲ. ಜನರು ಮಾತ್ರ ಮುಖ್ಯ ಎಂದು ನಂಬಿದ ನಿರ್ದೇಶಕ ಆ ಶೋಷಿತ ಜನರ ಬದುಕಿನ ಕಥನವನ್ನು ‘ಬಾಕ್ಸಿಂಗ್ ಕ್ರೀಡೆ’ಯ ಹಿನ್ನಲೆಯ ಮೂಲಕ ರೂಪಿಸುತ್ತಾ ಹೋಗುತ್ತಾರೆ. ಒಂದು ಕಾಲದಲ್ಲಿ ಕುಡಿತ ಮತ್ತು ಗೂಂಡಾಗಿರಿ ಮೇಲುಗೈ ಸಾಧಿಸಿ ಉತ್ತರ ಮದ್ರಾಸ್‌ನ ಬಾಕ್ಸಿಂಗ್ ಜಗತ್ತು ಕೊಳೆಯತೊಡಗಿತ್ತು, ಕುಟುಂಬಗಳ ಬದುಕು ಛಿದ್ರಗೊಳ್ಳತೊಡಗಿತ್ತು. ಇದನ್ನು ಎಲ್ಲಿಯೂ ಸಂಕೀರ್ಣಗೊಳಿಸದೆ ನೇರವಾಗಿ ಗತಕಾಲದ ವಾಸ್ತವವನ್ನು ಸಿನೀಮಿಯವಾಗಿ ಮುಂದಿಟ್ಟಿದ್ದಾರೆ. ಬಾಕ್ಸಿಂಗ್ ರಿಂಗ್‌ನ ಒಳಗೆ ನಡೆಯುವ ಎರಡು ವಂಶಗಳ ನಡುವಿನ ಹಣಾಹಣಿಯು ವೈಯಕ್ತಿಕವೂ ಹೌದು ಮತ್ತು ಸಾಮಾಜಿಕವೂ ಹೌದು. ಇದನ್ನು ಒಂದೇ ಸೂತ್ರದಲ್ಲಿ ಬೆಸಿದಿರುವ ನಿರ್ದೇಶಕ ಆ ಮೂಲಕ ಸಮುದಾಯದ ವಿಮೋಚನೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ಈ ಸಿನಿಮಾದ ಗೆಲುವು. ತಮ್ಮ ಬಡತನದ ನಡುವೆಯೂ ಬಾಕ್ಸಿಂಗ್ ಕ್ರೀಡೆಯ ಕಾಳಗದ ಮೂಲಕ ಬದುಕನ್ನು ವರ್ಣರಂಜಿತಗೊಳಸಿಕೊಳ್ಳಲು ತವಕಿಸುವ ‘ಉತ್ತರ ಮದ್ರಾಸ್‘ನ ಶ್ರಮಿಕರ ಜೀವನಪ್ರೇಮವೂ ಈ ಸಿನಿಮಾದ ಆತ್ಮದಂತಿದೆ. ಆದರೆ ಈ ವರ್ಗದೊಳಗೂ ಜಾತಿ ತಾರತಮ್ಯವಿದೆ. ದಲಿತ ಎನ್ನುವ ಕಾರಣಕ್ಕೆ ಕಬಿಲನ್ ಗೆಲ್ಲಬಾರದೆಂದು ಹೆಣಗಾಡುವ ರಮಣ್ ಮತ್ತವನ ಚಿಕ್ಕಪ್ಪ ತಣಿಗೈನ ವಿಕೃತಿಗಳು ಜಾತಿ ದೌರ್ಜನ್ಯವನ್ನು ಅನಾವರಣಗೊಳಿಸುತ್ತವೆ.

ಪ ರಂಜಿತ್

ಮುಖ್ಯವಾಗಿ ಅನಾದಿ ಕಾಲದಿಂದಲೂ ವೈಭವೀಕರಿಸಲ್ಪಟ್ಟ ದ್ರೋಣಾಚಾರ್ಯ-ಅರ್ಜುನ ಪರಂಪರೆಯನ್ನು ಸಂಪೂರ್ಣವಾಗಿ ಒಡೆದು ಹಾಕುವ ಪ.ರಂಜಿತ್ ಸರಪಟ್ಟು ಸಿನಿಮಾದ ಮೂಲಕ ಏಕಲವ್ಯನಿಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ಇಲ್ಲಿ ಆತ ಹೆಬ್ಬೆರೆಳು ಕತ್ತರಿಸಿಕೊಡುವ ಅಗತ್ಯವಿಲ್ಲ. ಜಾತಿ ಕಾರಣಕ್ಕೆ ತಿರಸ್ಕೃತನಾದರೂ ಮತ್ತೆ ಮತ್ತೆ ಪುಟಿದೆದ್ದು ಗೆಲುವು ಸಾದಿಸುವ ಏಕಲವ್ಯನ ಹೊಸ ನಿರೂಪಣೆಯ ಮೂಲಕ ರಂಜಿತ್ ದಲಿತರ assertion ನ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ನಾಂದಿ ಹಾಡುತ್ತಾರೆ. ಹೀಗಾಗಿ ಇದನ್ನು ಕೇವಲ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಮಾತ್ರವಲ್ಲ, ಜೊತೆಗೆ ಬಾಕ್ಸಿಂಗ್ ಕ್ರೀಡೆಯನ್ನು ಹಿನ್ನಲೆಯಾಗುಳ್ಳ ಸಮಾಜೋ-ರಾಜಕೀಯ-ಸಾಂಸ್ಕೃತಿಕ ಕಥನ.

ಇದನ್ನೂ ಓದಿ; ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ಈ ಸಿನಿಮಾದ ಕಡೆಯ ಒಂದು ತಾಸು ನಿರ್ದೇಶಕರ ಬತ್ತಳಿಕೆಯ ಸರಕು ಖಾಲಿಯಾಗಿ ಪರದಾಡುವಂತಾಗಿರುವುದೂ ಸಹ ಇಲ್ಲಿನ ಮಿತಿ ಎನ್ನಬಹುದು. ಆದರೆ ಬಾಕ್ಸಿಂಗ್ ಕ್ರೀಡೆಯನ್ನು ಅದರ ವೃತಿಪರತೆಯಲ್ಲಿ ಮೈಗೂಡಿಸಿಕೊಂಡು ಚಿತ್ರಕತೆಗೆ ಅದ್ಭುತವಾಗಿ ಒಗ್ಗಿಸಿಕೊಂಡಿರುವುದು ಈ ಮಿತಿಗಳನ್ನು ಗೌಣಗೊಳಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಅಗತ್ಯವಾದ ಲಿಂಕ್‌ಗಳನ್ನು ಎಲ್ಲಿಯೂ ಸಡಿಲಗೊಳಿಸದೆ ನಿರಂತರತೆಯನ್ನು ಕಾಪಾಡಿಕೊಂಡಿರುವುದು ಸಣ್ಣ ಪುಟ್ಟ ದೋಶಗಳನ್ನು ಮರೆ ಮಾಚುತ್ತದೆ.

‘ಇದು ನಮ್ಮ ಕಾಲಂ, ಏಳಂದು ವಾ’ ಎಂಬ ಆತ್ಮವಿಶ್ವಾಸದ ಹಾಡಿನ ಮೂಲಕ ಶೋಷಿತ ಸಮುದಾಯಗಳ ಮೇಲ್ಮುಖ ಚಲನೆಯ, ಸಬಲೀಕರಣದ ದಿನಗಳು ಪ್ರಾರಂಭವಾಗಿದೆ ಎನ್ನುವ ಹೇಳಿಕೆ ಕೊಡುವ ‘ಸರಪಟ್ಟ’ ಸಿನಿಮಾವನ್ನು ಮತ್ತೆ ಮತ್ತೆ ನಿರ್ವಚಿಸಬೇಕಾಗುತ್ತದೆ.

  • ಶ್ರೀಪಾದ್ ಭಟ್

(ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ; ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...