Homeಮುಖಪುಟಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ 'ಸರಪಟ್ಟ ಪರಂಪರೈ' - ಬಿ. ಶ್ರೀಪಾದ ಭಟ್

ಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ ‘ಸರಪಟ್ಟ ಪರಂಪರೈ’ – ಬಿ. ಶ್ರೀಪಾದ ಭಟ್

ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ.

- Advertisement -
- Advertisement -

ಜಾತಿಯ ಹೆಸರು ಹೇಳಿದರೆ ಬೆಚ್ಚಿಬೀಳುವ ಭಾರತೀಯ ಸಿನಿಮಾ ರಂಗದಲ್ಲಿ ‘ದಲಿತರು ಮತ್ತು ಸಿನಿಮಾ’ ಎನ್ನುವ ಮಾತು ಮೊನ್ನೆಯವರೆಗೂ ಕಿವಿಗೆ ಬೀಳುತ್ತಿರಲಿಲ್ಲ. ಇಲ್ಲಿನ ರೋಗಗ್ರಸ್ಥ ಜಾತಿ ಸಮಾಜದಲ್ಲಿ ಆ ತರಹದ ಕಲ್ಪನೆಯೂ ಸಾಧ್ಯವಿಲ್ಲದಂತಹ ಪರಿಸ್ಥಿತಿಯಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ನಾಗ್ರಾಜ್ ಮಂಜುಳೆ, ಪ.ರಂಜಿತ್ ಮತ್ತು ಮಾರಿ ಸೆಲ್ವರಾಜ್ ಜಾತಿ ಪ್ರಶ್ನೆಯನ್ನು ಶೋಷಿತರ ನೆಲೆಯಿಂದ ಮಾತನಾಡತೊಡಗಿದಾಗ ಈ ಪಟ್ಟಭದ್ರ ಸಿನಿಮಾರಂಗದಲ್ಲಿ ಬಂಡೆಯನ್ನು ಸೀಳಿಕೊಂಡು ಸಮಾನತೆ, ಸ್ವಾತಂತ್ರ್ಯದ ಹುಲ್ಲು ಮೊಳಕೆಯೊಡಗಿತು. ಈವರೆಗಿನ ಸಿದ್ದ ಮಾದರಿಯನ್ನು ಕೆಡವಿ, ಮುರಿದು ಸಬಲ್ಟ್ರಾನ್ ಕಥನವನ್ನು ಮತ್ತೆ ಕಟ್ಟತೊಡಗಿದರು. ಮಂಜುಳೆ ಜಾತಿ ದೌರ್ಜನ್ಯದ ನಿರೂಪಣೆಯನ್ನು ಆಯ್ಕೆ ಮಾಡಿಕೊಂಡರೆ, ಪ.ರಂಜಿತ್ ದಲಿತರ assertion ಕುರಿತು ಮಾತ್ರ ಮಾತನಾಡುತ್ತೇನೆ ಎಂದು ಹೊಸ ಅಲೆಯ ಮತ್ತೊಂದು ಮಾದರಿಯನ್ನೇ ಸೃಷ್ಟಿಸಿದರು. ಆದರೆ ರಂಜಿತ್ ಇದನ್ನು ಪರ್ಯಾಯ ಸಿನಿಮಾ ಪರಂಪರೆಯಾಗಿ ಬೆಳೆಸದೆ ಬದಲಿಗೆ ಜನಪ್ರಿಯ ಸಿನಿಮಾದ ಕ್ಷೇತ್ರದೊಳಗೆ ಸಾದಿಸುತ್ತಾರೆ. ಮುರಿದು ಕಟ್ಟುವ ಪ.ರಂಜಿತ್ ಇಂದು ಅಂಬೇಡ್ಕರ್‌ವಾದದ ಹೊಸ ಅರ್ಥಗಳನ್ನೇ ಬಿಚ್ಚಿಡುತ್ತಿದ್ದಾರೆ. ಸಬಲ್ಟ್ರಾನ್ ಕಥನದ ಮರು ಕಟ್ಟುವ ಈ ಪ್ರಯೋಗಗಳು ಕಬಾಲಿ, ಕಾಲಾದ ನಂತರ ಈಗ ‘ಸರಪಟ್ಟ ಪರಂಪರೈ’ ನಲ್ಲಿ ಮತ್ತೊಂದು ಮಜಲನ್ನು ತಲುಪಿದೆ ಮತ್ತು ‘ಇದು ನಮ್ಮ ಕಾಲ’ ಎಂದು ಹಿರಿಮೆಯಿಂದ, ಘನತೆಯಿಂದ ಆತ್ಮವಿಶ್ವಾಸದಿಂದ ಹಾಡುತ್ತಿದ್ದಾರೆ.

ಇಲ್ಲಿಯವರೆಗೂ ಅನಾಮಿಕವಾಗಿದ್ದ ‘ಉತ್ತರ ಮದ್ರಾಸ್’ ವೆಟ್ರಿಮಾರನ್ ಸಿನಿಮಾಗಳ ಮೂಲಕ ಬೆಳಕಿಗೆ ಬರತೊಡಗಿತು. ಈಗ ‘ಸರಪಟ್ಟ’ ಸಿನಿಮಾದ ಮೂಲಕ ಪ. ರಂಜಿತ್ ಅಲ್ಲಿನ ದುಡಿಯುವ ವರ್ಗಗಳ ಬದುಕು, ಬವಣೆಯ ವಿರಾಟ್ ಸ್ವರೂಪವನ್ನು ನಮಗೆಲ್ಲಾ ಎಳೆಎಳೆಯಾಗಿ ಬಿಚ್ಚಿ ತೋರಿಸಿದ್ದಾರೆ. ನೆಲಮೂಲ ಸಂಸ್ಕೃತಿಯ ಜೀವಂತಿಕೆ ಸ್ಪರ್ಶ ಮಾಡಿಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಈ ‘ಉತ್ತರ ಮದ್ರಾಸ್’ನ ಸ್ಲಂಗಳು, ಓಣಿಗಳು, ಕಾರ್ಖಾನೆಗಳಲ್ಲಿ ವಾಸಿಸುತ್ತಿರುವ ದುಡಿಯುವ ವರ್ಗದ ಬದುಕಿನ ಅನಾವರಣವಿದೆ. ಇಲ್ಲಿ ಈ ವರ್ಗದೊಳಗಿನ ಜಾತಿ ತಾರತಮ್ಯದ ಕ್ರೌರ್ಯವೂ ಸಹ ಬಿಚ್ಚಿಕೊಳ್ಳುತ್ತದೆ ಮತ್ತು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಇದನ್ನು ‘ಬಾಕ್ಸಿಂಗ್ ಡ್ರಾಮಾ’ದ ಮೂಲಕ ನಿರೂಪಿಸಿದ್ದಾರೆ. ಸರಪಟ್ಟ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಎಂದು ಮಾತ್ರ ಕರೆದರೆ ರಂಜಿತ್‌ರವರ ಮುರಿದು ಕಟ್ಟುವ ಕಥನವನ್ನು ಮೂಲೆಗುಂಪು ಮಾಡಿದಂತಾಗುತ್ತದೆ. ಅದರಾಚೆಗೆ ಬೆಳೆದ ಚಿತ್ರಕತೆಯು ಅಲ್ಲಿ ವಾಸಿಸುತ್ತಿರುವ ವಿವಿಧ ವರ್ಗ, ಜಾತಿಗಳ ಜನರ ಬದುಕನ್ನು ಒಂದೇ ಹಾರದಲ್ಲಿ ಪೋಣಿಸಿ ಸುಂದರ ಹಾರದಂತೆ ಹೆಣೆಯಲಾಗಿದೆ.

ಸರಪಟ್ಟ ಸಿನಿಮಾವನ್ನು ಉತ್ತರ ಮದ್ರಾಸ್‌ನ ಶ್ರಮಿಕರ ಬದುಕಿನ ಕೊಲಾಜ್ ಎಂದೇ ಕರೆಯಬಹುದು. ಆ ಬಹುಸಂಸ್ಕೃತಿಯ ಜಗತ್ತಿನಲ್ಲಿ ಅಂಬೇಡ್ಕರ್, ಬುದ್ದ ಕಾಣಿಸಿಕೊಳ್ಳುತ್ತಾರೆ, ಬೀಫ್ ಬಿರಿಯಾನಿ, ಮೊಲ ಮಾಂಸದ ಆಹಾರ ಸಂಸ್ಕೃತಿಯಿದೆ. ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ. ‘ಪರಂಪರೆ ಮುಖ್ಯವಲ್ಲ, ನೀನು, ನಾನು, ಮುನುಷ್ಯರು ಮುಖ್ಯ’ ಎಂದು ಬದುಕಿನ ದೊಡ್ಡ ಪಾಠ ಹೇಳಿದ ಮಾರಿಯಮ್ಮಳ ಮಾನವೀಯತೆಯ ಒರತೆಯಿದೆ, ‘ಮಗ ಕೊಲೆಗಾರನಾಗಬಾರದು, ಕಳ್ಳನಾಗಬಾರದು, ಹಾಗೆಯೇ ಯಾರೂ ಸಹ’ ಎಂದು ಮುರಿದು ಬೀಳುತ್ತಿರುವ ಬದುಕನ್ನು ಮರಳಿ ಕಟ್ಟಲು ಹೆಣಗುತ್ತಿರುವ ಬಾಕಿಯಮ್ಮಳ ಛಲ, ದಿಟ್ಟತೆಯಿದೆ. ನಾವು ಬದುಕೋಣ, ಎಲ್ಲರೂ ಬದುಕೋಣ ಎನ್ನುವ ಡ್ಯಾಡಿಯ ಜೀವಪರತೆಯಿದೆ, ಶಕುನಿ ಮಾಮಾನನ್ನು ನೆನಪಿಸುವ ಕೋಣಿ ಚಂದನ್ ಇದ್ದರೆ ಕಾಯಕ ತತ್ವವನ್ನು ಉಸಿರಾಡುವ ಬೀಡಿ ರಾಯಪ್ಪನ್ ನಮ್ಮನ್ನು ಕಾಡುತ್ತಾನೆ. ಬಾಕ್ಸಿಂಗ್ ದೈತ್ಯ ವೆಂಬುಲಿಯ ಪೌರುಷದ ದುರಹಂಕಾರ ಒಂದೆಡೆಯಿದ್ದರೆ ಮತ್ತೊಂದೆಡೆ ಆಳುವ, ಗೋಳಾಡುವ, ಅಸಹಾಯಕನಾಗಿ ಕುಸಿದು ಹೋಗುವ ಈ ಸಿನಿಮಾದ ಪ್ರೊಟಗಾನಿಸ್ಟ್ ಕಬಿಲನ್ ನಮಗೆಲ್ಲ ಎಚ್ಚರಿಕೆಯ ಪಾಠದಂತಿದ್ದಾನೆ. ತಾನು ಬಾಕ್ಸರ್, ಆದರೆ ತನ್ನ ತಂದೆಯಿಂದಲೇ ತಿರಸ್ಕರಿಸ್ಪಡುವ ವೇಟ್ರಿಸೆಲ್ವನ್ ಬದುಕಿನ ಸಂಕೀರ್ಣತೆಯ ದುರಂತವಿದೆ. ಇವರೆಲ್ಲರ ಜೀವ ಮಿಡಿತದ ಸದ್ದು ‘ಸರಪಟ್ಟ’. ಇಲ್ಲಿ ಯಾರೂ ಅಮುಖ್ಯರಲ್ಲ. ಎಲ್ಲರೂ ಮುಖ್ಯ.

ಪ.ರಂಜಿತ್‌ಗೆ 1970ರ ದಶಕದ ‘ಉತ್ತರ ಮದ್ರಾಸ್’ನ ಆ ನಾಸ್ಟಾಲ್ಜಿಯಾದ ಕುರಿತು, ಆ ಕಾಲದ ಭೌಗೋಳಿಕತೆಯ ಕುರಿತು ಆಸಕ್ತಿಯಿಲ್ಲ. ಜನರು ಮಾತ್ರ ಮುಖ್ಯ ಎಂದು ನಂಬಿದ ನಿರ್ದೇಶಕ ಆ ಶೋಷಿತ ಜನರ ಬದುಕಿನ ಕಥನವನ್ನು ‘ಬಾಕ್ಸಿಂಗ್ ಕ್ರೀಡೆ’ಯ ಹಿನ್ನಲೆಯ ಮೂಲಕ ರೂಪಿಸುತ್ತಾ ಹೋಗುತ್ತಾರೆ. ಒಂದು ಕಾಲದಲ್ಲಿ ಕುಡಿತ ಮತ್ತು ಗೂಂಡಾಗಿರಿ ಮೇಲುಗೈ ಸಾಧಿಸಿ ಉತ್ತರ ಮದ್ರಾಸ್‌ನ ಬಾಕ್ಸಿಂಗ್ ಜಗತ್ತು ಕೊಳೆಯತೊಡಗಿತ್ತು, ಕುಟುಂಬಗಳ ಬದುಕು ಛಿದ್ರಗೊಳ್ಳತೊಡಗಿತ್ತು. ಇದನ್ನು ಎಲ್ಲಿಯೂ ಸಂಕೀರ್ಣಗೊಳಿಸದೆ ನೇರವಾಗಿ ಗತಕಾಲದ ವಾಸ್ತವವನ್ನು ಸಿನೀಮಿಯವಾಗಿ ಮುಂದಿಟ್ಟಿದ್ದಾರೆ. ಬಾಕ್ಸಿಂಗ್ ರಿಂಗ್‌ನ ಒಳಗೆ ನಡೆಯುವ ಎರಡು ವಂಶಗಳ ನಡುವಿನ ಹಣಾಹಣಿಯು ವೈಯಕ್ತಿಕವೂ ಹೌದು ಮತ್ತು ಸಾಮಾಜಿಕವೂ ಹೌದು. ಇದನ್ನು ಒಂದೇ ಸೂತ್ರದಲ್ಲಿ ಬೆಸಿದಿರುವ ನಿರ್ದೇಶಕ ಆ ಮೂಲಕ ಸಮುದಾಯದ ವಿಮೋಚನೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ಈ ಸಿನಿಮಾದ ಗೆಲುವು. ತಮ್ಮ ಬಡತನದ ನಡುವೆಯೂ ಬಾಕ್ಸಿಂಗ್ ಕ್ರೀಡೆಯ ಕಾಳಗದ ಮೂಲಕ ಬದುಕನ್ನು ವರ್ಣರಂಜಿತಗೊಳಸಿಕೊಳ್ಳಲು ತವಕಿಸುವ ‘ಉತ್ತರ ಮದ್ರಾಸ್‘ನ ಶ್ರಮಿಕರ ಜೀವನಪ್ರೇಮವೂ ಈ ಸಿನಿಮಾದ ಆತ್ಮದಂತಿದೆ. ಆದರೆ ಈ ವರ್ಗದೊಳಗೂ ಜಾತಿ ತಾರತಮ್ಯವಿದೆ. ದಲಿತ ಎನ್ನುವ ಕಾರಣಕ್ಕೆ ಕಬಿಲನ್ ಗೆಲ್ಲಬಾರದೆಂದು ಹೆಣಗಾಡುವ ರಮಣ್ ಮತ್ತವನ ಚಿಕ್ಕಪ್ಪ ತಣಿಗೈನ ವಿಕೃತಿಗಳು ಜಾತಿ ದೌರ್ಜನ್ಯವನ್ನು ಅನಾವರಣಗೊಳಿಸುತ್ತವೆ.

ಪ ರಂಜಿತ್

ಮುಖ್ಯವಾಗಿ ಅನಾದಿ ಕಾಲದಿಂದಲೂ ವೈಭವೀಕರಿಸಲ್ಪಟ್ಟ ದ್ರೋಣಾಚಾರ್ಯ-ಅರ್ಜುನ ಪರಂಪರೆಯನ್ನು ಸಂಪೂರ್ಣವಾಗಿ ಒಡೆದು ಹಾಕುವ ಪ.ರಂಜಿತ್ ಸರಪಟ್ಟು ಸಿನಿಮಾದ ಮೂಲಕ ಏಕಲವ್ಯನಿಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ಇಲ್ಲಿ ಆತ ಹೆಬ್ಬೆರೆಳು ಕತ್ತರಿಸಿಕೊಡುವ ಅಗತ್ಯವಿಲ್ಲ. ಜಾತಿ ಕಾರಣಕ್ಕೆ ತಿರಸ್ಕೃತನಾದರೂ ಮತ್ತೆ ಮತ್ತೆ ಪುಟಿದೆದ್ದು ಗೆಲುವು ಸಾದಿಸುವ ಏಕಲವ್ಯನ ಹೊಸ ನಿರೂಪಣೆಯ ಮೂಲಕ ರಂಜಿತ್ ದಲಿತರ assertion ನ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ನಾಂದಿ ಹಾಡುತ್ತಾರೆ. ಹೀಗಾಗಿ ಇದನ್ನು ಕೇವಲ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಮಾತ್ರವಲ್ಲ, ಜೊತೆಗೆ ಬಾಕ್ಸಿಂಗ್ ಕ್ರೀಡೆಯನ್ನು ಹಿನ್ನಲೆಯಾಗುಳ್ಳ ಸಮಾಜೋ-ರಾಜಕೀಯ-ಸಾಂಸ್ಕೃತಿಕ ಕಥನ.

ಇದನ್ನೂ ಓದಿ; ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ಈ ಸಿನಿಮಾದ ಕಡೆಯ ಒಂದು ತಾಸು ನಿರ್ದೇಶಕರ ಬತ್ತಳಿಕೆಯ ಸರಕು ಖಾಲಿಯಾಗಿ ಪರದಾಡುವಂತಾಗಿರುವುದೂ ಸಹ ಇಲ್ಲಿನ ಮಿತಿ ಎನ್ನಬಹುದು. ಆದರೆ ಬಾಕ್ಸಿಂಗ್ ಕ್ರೀಡೆಯನ್ನು ಅದರ ವೃತಿಪರತೆಯಲ್ಲಿ ಮೈಗೂಡಿಸಿಕೊಂಡು ಚಿತ್ರಕತೆಗೆ ಅದ್ಭುತವಾಗಿ ಒಗ್ಗಿಸಿಕೊಂಡಿರುವುದು ಈ ಮಿತಿಗಳನ್ನು ಗೌಣಗೊಳಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಅಗತ್ಯವಾದ ಲಿಂಕ್‌ಗಳನ್ನು ಎಲ್ಲಿಯೂ ಸಡಿಲಗೊಳಿಸದೆ ನಿರಂತರತೆಯನ್ನು ಕಾಪಾಡಿಕೊಂಡಿರುವುದು ಸಣ್ಣ ಪುಟ್ಟ ದೋಶಗಳನ್ನು ಮರೆ ಮಾಚುತ್ತದೆ.

‘ಇದು ನಮ್ಮ ಕಾಲಂ, ಏಳಂದು ವಾ’ ಎಂಬ ಆತ್ಮವಿಶ್ವಾಸದ ಹಾಡಿನ ಮೂಲಕ ಶೋಷಿತ ಸಮುದಾಯಗಳ ಮೇಲ್ಮುಖ ಚಲನೆಯ, ಸಬಲೀಕರಣದ ದಿನಗಳು ಪ್ರಾರಂಭವಾಗಿದೆ ಎನ್ನುವ ಹೇಳಿಕೆ ಕೊಡುವ ‘ಸರಪಟ್ಟ’ ಸಿನಿಮಾವನ್ನು ಮತ್ತೆ ಮತ್ತೆ ನಿರ್ವಚಿಸಬೇಕಾಗುತ್ತದೆ.

  • ಶ್ರೀಪಾದ್ ಭಟ್

(ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ; ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...