Homeಮುಖಪುಟಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ 'ಸರಪಟ್ಟ ಪರಂಪರೈ' - ಬಿ. ಶ್ರೀಪಾದ ಭಟ್

ಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ ‘ಸರಪಟ್ಟ ಪರಂಪರೈ’ – ಬಿ. ಶ್ರೀಪಾದ ಭಟ್

ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ.

- Advertisement -
- Advertisement -

ಜಾತಿಯ ಹೆಸರು ಹೇಳಿದರೆ ಬೆಚ್ಚಿಬೀಳುವ ಭಾರತೀಯ ಸಿನಿಮಾ ರಂಗದಲ್ಲಿ ‘ದಲಿತರು ಮತ್ತು ಸಿನಿಮಾ’ ಎನ್ನುವ ಮಾತು ಮೊನ್ನೆಯವರೆಗೂ ಕಿವಿಗೆ ಬೀಳುತ್ತಿರಲಿಲ್ಲ. ಇಲ್ಲಿನ ರೋಗಗ್ರಸ್ಥ ಜಾತಿ ಸಮಾಜದಲ್ಲಿ ಆ ತರಹದ ಕಲ್ಪನೆಯೂ ಸಾಧ್ಯವಿಲ್ಲದಂತಹ ಪರಿಸ್ಥಿತಿಯಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ನಾಗ್ರಾಜ್ ಮಂಜುಳೆ, ಪ.ರಂಜಿತ್ ಮತ್ತು ಮಾರಿ ಸೆಲ್ವರಾಜ್ ಜಾತಿ ಪ್ರಶ್ನೆಯನ್ನು ಶೋಷಿತರ ನೆಲೆಯಿಂದ ಮಾತನಾಡತೊಡಗಿದಾಗ ಈ ಪಟ್ಟಭದ್ರ ಸಿನಿಮಾರಂಗದಲ್ಲಿ ಬಂಡೆಯನ್ನು ಸೀಳಿಕೊಂಡು ಸಮಾನತೆ, ಸ್ವಾತಂತ್ರ್ಯದ ಹುಲ್ಲು ಮೊಳಕೆಯೊಡಗಿತು. ಈವರೆಗಿನ ಸಿದ್ದ ಮಾದರಿಯನ್ನು ಕೆಡವಿ, ಮುರಿದು ಸಬಲ್ಟ್ರಾನ್ ಕಥನವನ್ನು ಮತ್ತೆ ಕಟ್ಟತೊಡಗಿದರು. ಮಂಜುಳೆ ಜಾತಿ ದೌರ್ಜನ್ಯದ ನಿರೂಪಣೆಯನ್ನು ಆಯ್ಕೆ ಮಾಡಿಕೊಂಡರೆ, ಪ.ರಂಜಿತ್ ದಲಿತರ assertion ಕುರಿತು ಮಾತ್ರ ಮಾತನಾಡುತ್ತೇನೆ ಎಂದು ಹೊಸ ಅಲೆಯ ಮತ್ತೊಂದು ಮಾದರಿಯನ್ನೇ ಸೃಷ್ಟಿಸಿದರು. ಆದರೆ ರಂಜಿತ್ ಇದನ್ನು ಪರ್ಯಾಯ ಸಿನಿಮಾ ಪರಂಪರೆಯಾಗಿ ಬೆಳೆಸದೆ ಬದಲಿಗೆ ಜನಪ್ರಿಯ ಸಿನಿಮಾದ ಕ್ಷೇತ್ರದೊಳಗೆ ಸಾದಿಸುತ್ತಾರೆ. ಮುರಿದು ಕಟ್ಟುವ ಪ.ರಂಜಿತ್ ಇಂದು ಅಂಬೇಡ್ಕರ್‌ವಾದದ ಹೊಸ ಅರ್ಥಗಳನ್ನೇ ಬಿಚ್ಚಿಡುತ್ತಿದ್ದಾರೆ. ಸಬಲ್ಟ್ರಾನ್ ಕಥನದ ಮರು ಕಟ್ಟುವ ಈ ಪ್ರಯೋಗಗಳು ಕಬಾಲಿ, ಕಾಲಾದ ನಂತರ ಈಗ ‘ಸರಪಟ್ಟ ಪರಂಪರೈ’ ನಲ್ಲಿ ಮತ್ತೊಂದು ಮಜಲನ್ನು ತಲುಪಿದೆ ಮತ್ತು ‘ಇದು ನಮ್ಮ ಕಾಲ’ ಎಂದು ಹಿರಿಮೆಯಿಂದ, ಘನತೆಯಿಂದ ಆತ್ಮವಿಶ್ವಾಸದಿಂದ ಹಾಡುತ್ತಿದ್ದಾರೆ.

ಇಲ್ಲಿಯವರೆಗೂ ಅನಾಮಿಕವಾಗಿದ್ದ ‘ಉತ್ತರ ಮದ್ರಾಸ್’ ವೆಟ್ರಿಮಾರನ್ ಸಿನಿಮಾಗಳ ಮೂಲಕ ಬೆಳಕಿಗೆ ಬರತೊಡಗಿತು. ಈಗ ‘ಸರಪಟ್ಟ’ ಸಿನಿಮಾದ ಮೂಲಕ ಪ. ರಂಜಿತ್ ಅಲ್ಲಿನ ದುಡಿಯುವ ವರ್ಗಗಳ ಬದುಕು, ಬವಣೆಯ ವಿರಾಟ್ ಸ್ವರೂಪವನ್ನು ನಮಗೆಲ್ಲಾ ಎಳೆಎಳೆಯಾಗಿ ಬಿಚ್ಚಿ ತೋರಿಸಿದ್ದಾರೆ. ನೆಲಮೂಲ ಸಂಸ್ಕೃತಿಯ ಜೀವಂತಿಕೆ ಸ್ಪರ್ಶ ಮಾಡಿಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಈ ‘ಉತ್ತರ ಮದ್ರಾಸ್’ನ ಸ್ಲಂಗಳು, ಓಣಿಗಳು, ಕಾರ್ಖಾನೆಗಳಲ್ಲಿ ವಾಸಿಸುತ್ತಿರುವ ದುಡಿಯುವ ವರ್ಗದ ಬದುಕಿನ ಅನಾವರಣವಿದೆ. ಇಲ್ಲಿ ಈ ವರ್ಗದೊಳಗಿನ ಜಾತಿ ತಾರತಮ್ಯದ ಕ್ರೌರ್ಯವೂ ಸಹ ಬಿಚ್ಚಿಕೊಳ್ಳುತ್ತದೆ ಮತ್ತು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಇದನ್ನು ‘ಬಾಕ್ಸಿಂಗ್ ಡ್ರಾಮಾ’ದ ಮೂಲಕ ನಿರೂಪಿಸಿದ್ದಾರೆ. ಸರಪಟ್ಟ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಎಂದು ಮಾತ್ರ ಕರೆದರೆ ರಂಜಿತ್‌ರವರ ಮುರಿದು ಕಟ್ಟುವ ಕಥನವನ್ನು ಮೂಲೆಗುಂಪು ಮಾಡಿದಂತಾಗುತ್ತದೆ. ಅದರಾಚೆಗೆ ಬೆಳೆದ ಚಿತ್ರಕತೆಯು ಅಲ್ಲಿ ವಾಸಿಸುತ್ತಿರುವ ವಿವಿಧ ವರ್ಗ, ಜಾತಿಗಳ ಜನರ ಬದುಕನ್ನು ಒಂದೇ ಹಾರದಲ್ಲಿ ಪೋಣಿಸಿ ಸುಂದರ ಹಾರದಂತೆ ಹೆಣೆಯಲಾಗಿದೆ.

ಸರಪಟ್ಟ ಸಿನಿಮಾವನ್ನು ಉತ್ತರ ಮದ್ರಾಸ್‌ನ ಶ್ರಮಿಕರ ಬದುಕಿನ ಕೊಲಾಜ್ ಎಂದೇ ಕರೆಯಬಹುದು. ಆ ಬಹುಸಂಸ್ಕೃತಿಯ ಜಗತ್ತಿನಲ್ಲಿ ಅಂಬೇಡ್ಕರ್, ಬುದ್ದ ಕಾಣಿಸಿಕೊಳ್ಳುತ್ತಾರೆ, ಬೀಫ್ ಬಿರಿಯಾನಿ, ಮೊಲ ಮಾಂಸದ ಆಹಾರ ಸಂಸ್ಕೃತಿಯಿದೆ. ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ. ‘ಪರಂಪರೆ ಮುಖ್ಯವಲ್ಲ, ನೀನು, ನಾನು, ಮುನುಷ್ಯರು ಮುಖ್ಯ’ ಎಂದು ಬದುಕಿನ ದೊಡ್ಡ ಪಾಠ ಹೇಳಿದ ಮಾರಿಯಮ್ಮಳ ಮಾನವೀಯತೆಯ ಒರತೆಯಿದೆ, ‘ಮಗ ಕೊಲೆಗಾರನಾಗಬಾರದು, ಕಳ್ಳನಾಗಬಾರದು, ಹಾಗೆಯೇ ಯಾರೂ ಸಹ’ ಎಂದು ಮುರಿದು ಬೀಳುತ್ತಿರುವ ಬದುಕನ್ನು ಮರಳಿ ಕಟ್ಟಲು ಹೆಣಗುತ್ತಿರುವ ಬಾಕಿಯಮ್ಮಳ ಛಲ, ದಿಟ್ಟತೆಯಿದೆ. ನಾವು ಬದುಕೋಣ, ಎಲ್ಲರೂ ಬದುಕೋಣ ಎನ್ನುವ ಡ್ಯಾಡಿಯ ಜೀವಪರತೆಯಿದೆ, ಶಕುನಿ ಮಾಮಾನನ್ನು ನೆನಪಿಸುವ ಕೋಣಿ ಚಂದನ್ ಇದ್ದರೆ ಕಾಯಕ ತತ್ವವನ್ನು ಉಸಿರಾಡುವ ಬೀಡಿ ರಾಯಪ್ಪನ್ ನಮ್ಮನ್ನು ಕಾಡುತ್ತಾನೆ. ಬಾಕ್ಸಿಂಗ್ ದೈತ್ಯ ವೆಂಬುಲಿಯ ಪೌರುಷದ ದುರಹಂಕಾರ ಒಂದೆಡೆಯಿದ್ದರೆ ಮತ್ತೊಂದೆಡೆ ಆಳುವ, ಗೋಳಾಡುವ, ಅಸಹಾಯಕನಾಗಿ ಕುಸಿದು ಹೋಗುವ ಈ ಸಿನಿಮಾದ ಪ್ರೊಟಗಾನಿಸ್ಟ್ ಕಬಿಲನ್ ನಮಗೆಲ್ಲ ಎಚ್ಚರಿಕೆಯ ಪಾಠದಂತಿದ್ದಾನೆ. ತಾನು ಬಾಕ್ಸರ್, ಆದರೆ ತನ್ನ ತಂದೆಯಿಂದಲೇ ತಿರಸ್ಕರಿಸ್ಪಡುವ ವೇಟ್ರಿಸೆಲ್ವನ್ ಬದುಕಿನ ಸಂಕೀರ್ಣತೆಯ ದುರಂತವಿದೆ. ಇವರೆಲ್ಲರ ಜೀವ ಮಿಡಿತದ ಸದ್ದು ‘ಸರಪಟ್ಟ’. ಇಲ್ಲಿ ಯಾರೂ ಅಮುಖ್ಯರಲ್ಲ. ಎಲ್ಲರೂ ಮುಖ್ಯ.

ಪ.ರಂಜಿತ್‌ಗೆ 1970ರ ದಶಕದ ‘ಉತ್ತರ ಮದ್ರಾಸ್’ನ ಆ ನಾಸ್ಟಾಲ್ಜಿಯಾದ ಕುರಿತು, ಆ ಕಾಲದ ಭೌಗೋಳಿಕತೆಯ ಕುರಿತು ಆಸಕ್ತಿಯಿಲ್ಲ. ಜನರು ಮಾತ್ರ ಮುಖ್ಯ ಎಂದು ನಂಬಿದ ನಿರ್ದೇಶಕ ಆ ಶೋಷಿತ ಜನರ ಬದುಕಿನ ಕಥನವನ್ನು ‘ಬಾಕ್ಸಿಂಗ್ ಕ್ರೀಡೆ’ಯ ಹಿನ್ನಲೆಯ ಮೂಲಕ ರೂಪಿಸುತ್ತಾ ಹೋಗುತ್ತಾರೆ. ಒಂದು ಕಾಲದಲ್ಲಿ ಕುಡಿತ ಮತ್ತು ಗೂಂಡಾಗಿರಿ ಮೇಲುಗೈ ಸಾಧಿಸಿ ಉತ್ತರ ಮದ್ರಾಸ್‌ನ ಬಾಕ್ಸಿಂಗ್ ಜಗತ್ತು ಕೊಳೆಯತೊಡಗಿತ್ತು, ಕುಟುಂಬಗಳ ಬದುಕು ಛಿದ್ರಗೊಳ್ಳತೊಡಗಿತ್ತು. ಇದನ್ನು ಎಲ್ಲಿಯೂ ಸಂಕೀರ್ಣಗೊಳಿಸದೆ ನೇರವಾಗಿ ಗತಕಾಲದ ವಾಸ್ತವವನ್ನು ಸಿನೀಮಿಯವಾಗಿ ಮುಂದಿಟ್ಟಿದ್ದಾರೆ. ಬಾಕ್ಸಿಂಗ್ ರಿಂಗ್‌ನ ಒಳಗೆ ನಡೆಯುವ ಎರಡು ವಂಶಗಳ ನಡುವಿನ ಹಣಾಹಣಿಯು ವೈಯಕ್ತಿಕವೂ ಹೌದು ಮತ್ತು ಸಾಮಾಜಿಕವೂ ಹೌದು. ಇದನ್ನು ಒಂದೇ ಸೂತ್ರದಲ್ಲಿ ಬೆಸಿದಿರುವ ನಿರ್ದೇಶಕ ಆ ಮೂಲಕ ಸಮುದಾಯದ ವಿಮೋಚನೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ಈ ಸಿನಿಮಾದ ಗೆಲುವು. ತಮ್ಮ ಬಡತನದ ನಡುವೆಯೂ ಬಾಕ್ಸಿಂಗ್ ಕ್ರೀಡೆಯ ಕಾಳಗದ ಮೂಲಕ ಬದುಕನ್ನು ವರ್ಣರಂಜಿತಗೊಳಸಿಕೊಳ್ಳಲು ತವಕಿಸುವ ‘ಉತ್ತರ ಮದ್ರಾಸ್‘ನ ಶ್ರಮಿಕರ ಜೀವನಪ್ರೇಮವೂ ಈ ಸಿನಿಮಾದ ಆತ್ಮದಂತಿದೆ. ಆದರೆ ಈ ವರ್ಗದೊಳಗೂ ಜಾತಿ ತಾರತಮ್ಯವಿದೆ. ದಲಿತ ಎನ್ನುವ ಕಾರಣಕ್ಕೆ ಕಬಿಲನ್ ಗೆಲ್ಲಬಾರದೆಂದು ಹೆಣಗಾಡುವ ರಮಣ್ ಮತ್ತವನ ಚಿಕ್ಕಪ್ಪ ತಣಿಗೈನ ವಿಕೃತಿಗಳು ಜಾತಿ ದೌರ್ಜನ್ಯವನ್ನು ಅನಾವರಣಗೊಳಿಸುತ್ತವೆ.

ಪ ರಂಜಿತ್

ಮುಖ್ಯವಾಗಿ ಅನಾದಿ ಕಾಲದಿಂದಲೂ ವೈಭವೀಕರಿಸಲ್ಪಟ್ಟ ದ್ರೋಣಾಚಾರ್ಯ-ಅರ್ಜುನ ಪರಂಪರೆಯನ್ನು ಸಂಪೂರ್ಣವಾಗಿ ಒಡೆದು ಹಾಕುವ ಪ.ರಂಜಿತ್ ಸರಪಟ್ಟು ಸಿನಿಮಾದ ಮೂಲಕ ಏಕಲವ್ಯನಿಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ಇಲ್ಲಿ ಆತ ಹೆಬ್ಬೆರೆಳು ಕತ್ತರಿಸಿಕೊಡುವ ಅಗತ್ಯವಿಲ್ಲ. ಜಾತಿ ಕಾರಣಕ್ಕೆ ತಿರಸ್ಕೃತನಾದರೂ ಮತ್ತೆ ಮತ್ತೆ ಪುಟಿದೆದ್ದು ಗೆಲುವು ಸಾದಿಸುವ ಏಕಲವ್ಯನ ಹೊಸ ನಿರೂಪಣೆಯ ಮೂಲಕ ರಂಜಿತ್ ದಲಿತರ assertion ನ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ನಾಂದಿ ಹಾಡುತ್ತಾರೆ. ಹೀಗಾಗಿ ಇದನ್ನು ಕೇವಲ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಮಾತ್ರವಲ್ಲ, ಜೊತೆಗೆ ಬಾಕ್ಸಿಂಗ್ ಕ್ರೀಡೆಯನ್ನು ಹಿನ್ನಲೆಯಾಗುಳ್ಳ ಸಮಾಜೋ-ರಾಜಕೀಯ-ಸಾಂಸ್ಕೃತಿಕ ಕಥನ.

ಇದನ್ನೂ ಓದಿ; ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ಈ ಸಿನಿಮಾದ ಕಡೆಯ ಒಂದು ತಾಸು ನಿರ್ದೇಶಕರ ಬತ್ತಳಿಕೆಯ ಸರಕು ಖಾಲಿಯಾಗಿ ಪರದಾಡುವಂತಾಗಿರುವುದೂ ಸಹ ಇಲ್ಲಿನ ಮಿತಿ ಎನ್ನಬಹುದು. ಆದರೆ ಬಾಕ್ಸಿಂಗ್ ಕ್ರೀಡೆಯನ್ನು ಅದರ ವೃತಿಪರತೆಯಲ್ಲಿ ಮೈಗೂಡಿಸಿಕೊಂಡು ಚಿತ್ರಕತೆಗೆ ಅದ್ಭುತವಾಗಿ ಒಗ್ಗಿಸಿಕೊಂಡಿರುವುದು ಈ ಮಿತಿಗಳನ್ನು ಗೌಣಗೊಳಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಅಗತ್ಯವಾದ ಲಿಂಕ್‌ಗಳನ್ನು ಎಲ್ಲಿಯೂ ಸಡಿಲಗೊಳಿಸದೆ ನಿರಂತರತೆಯನ್ನು ಕಾಪಾಡಿಕೊಂಡಿರುವುದು ಸಣ್ಣ ಪುಟ್ಟ ದೋಶಗಳನ್ನು ಮರೆ ಮಾಚುತ್ತದೆ.

‘ಇದು ನಮ್ಮ ಕಾಲಂ, ಏಳಂದು ವಾ’ ಎಂಬ ಆತ್ಮವಿಶ್ವಾಸದ ಹಾಡಿನ ಮೂಲಕ ಶೋಷಿತ ಸಮುದಾಯಗಳ ಮೇಲ್ಮುಖ ಚಲನೆಯ, ಸಬಲೀಕರಣದ ದಿನಗಳು ಪ್ರಾರಂಭವಾಗಿದೆ ಎನ್ನುವ ಹೇಳಿಕೆ ಕೊಡುವ ‘ಸರಪಟ್ಟ’ ಸಿನಿಮಾವನ್ನು ಮತ್ತೆ ಮತ್ತೆ ನಿರ್ವಚಿಸಬೇಕಾಗುತ್ತದೆ.

  • ಶ್ರೀಪಾದ್ ಭಟ್

(ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ; ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...