Homeಕರ್ನಾಟಕಕರ್ನಾಟಕ ಕೇಂದ್ರಿತ ಮಾದರಿ ರಾಷ್ಟ್ರೀಯತೆ ಮತ್ತು ರಾಜಕೀಯಕ್ಕೆ ಕಾಲ ಪಕ್ವವಾಗಿದೆ: ಎ.ನಾರಾಯಣ

ಕರ್ನಾಟಕ ಕೇಂದ್ರಿತ ಮಾದರಿ ರಾಷ್ಟ್ರೀಯತೆ ಮತ್ತು ರಾಜಕೀಯಕ್ಕೆ ಕಾಲ ಪಕ್ವವಾಗಿದೆ: ಎ.ನಾರಾಯಣ

ಹಿಂದೂಗಳೇ ಬಹುಸಂಖ್ಯೆಯಲ್ಲಿ ಇದ್ದರೂ ಹಿಂದೂ ಧರ್ಮದ ಹೆಸರಿನಲ್ಲಿ ಒಂದು ರಾಜಕೀಯ ಪಕ್ಷ ಕಟ್ಟಲು ಇಷ್ಟು ಸಮಯ ಬೇಕಾಯಿತು ಎಂದರೆ ಕನ್ನಡಿಗರೇ ಇದ್ದ ಒಂದು ರಾಜ್ಯದಲ್ಲಿ ಕನ್ನಡ ಭಾಷೆಯ ಸುತ್ತ ಒಂದು ರಾಜಕೀಯ ಕಟ್ಟಲು ಈವರೆಗೆ ಸಾಧ್ಯವಾಗಿಲ್ಲ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ.

- Advertisement -
- Advertisement -

ಕೆಲವೊಮ್ಮೆ ಕೆಲವು ವಾದಗಳು, ಆಗ್ರಹಗಳು, ಸಲಹೆಗಳು ಇತ್ಯಾದಿಗಳೆಲ್ಲಾ ಹಳಸಲು ಎನ್ನುವಷ್ಟು ಪುನಾರಾವರ್ತನೆ ಆಗಿರುತ್ತವೆ. ಹಾಗೆ ಹಳಸಲಾಗಿದೆಯೋ ಎನ್ನುವಷ್ಟರ ಮಟ್ಟಿಗೆ ಮತ್ತೆ ಮತ್ತೆ ಕಳೆದ ನಾಲ್ಕು ದಶಕಗಳಲ್ಲಿ ಕರ್ನಾಟಕದಲ್ಲಿ ಕೇಳಿಬಂದ ಒಂದು ಆಗ್ರಹವೆಂದರೆ ಕರ್ನಾಟಕಕ್ಕೆ ಕರ್ನಾಟಕದ್ದೇ ಆದ ಒಂದು ರಾಜಕೀಯ ಪಕ್ಷ ಬೇಕು ಎನ್ನುವುದು. ಅಥವಾ ಕನ್ನಡ ಭಾಷೆಯ ಆಧಾರದಲ್ಲಿ ಹೊಸ ರಾಷ್ಟ್ರೀಯತೆಯೊಂದನ್ನು ಸಂವಿಧಾನದ ಗೆರೆಮೀರದೇ ಬೆಳೆಸಬೇಕು ಎನ್ನುವುದು.

ಇದು ಹಳೆಯ ಬೇಡಿಕೆ ನಿಜ. ಆದರೆ, ತೀರಾ ಹಸಿದವರಿಗೆ ಹಳಸಲಾದದನ್ನು ಕೂಡಾ ತಿರಸ್ಕರಿಸುವಷ್ಟು ಸ್ವಾತಂತ್ರ್ಯ ಇರುವುದಿಲ್ಲ. ಕರ್ನಾಟಕಕ್ಕೆ ಈಗ ಅಂತಹ ಒಂದು ಹಸಿವಿನ ಅರಿವಾಗಬೇಕಾದ ಕಾಲ. ಯಾಕೆಂದರೆ, ಧರ್ಮಾಧಾರಿತ ರಾಷ್ಟ್ರೀಯತೆಯ ಹೆಸರಿನಲ್ಲಿ, ಪ್ರಬಲ ಕೇಂದ್ರ ಸರ್ಕಾರವೊಂದನ್ನು ಪ್ರತಿಷ್ಠಾಪಿಸುವ ಹೆಸರಿನಲ್ಲಿ ಕರ್ನಾಟಕದ ಅನ್ನದ ಬಟ್ಟಲನ್ನು ಹಲವು ರೀತಿಯಲ್ಲಿ ಬರಿದುಗೊಳಿಸುವ ಕೆಲಸ ಯಥೇಚ್ಛವಾಗಿ ಈಗ ನಡೆಯುತ್ತಿದೆ. ಹಲವು ವರ್ಷಗಳಿಂದ ಕಾಣಿಸುತ್ತಾ ಬಂದಿರುವ ಮಲತಾಯಿ ಧೋರಣೆ, ಕಡೆಗಣನೆ, ವಿವಿಧ ರೀತಿಯ ಹೇರಿಕೆಗಳು, ಅವಮಾನಗಳು ಇತ್ಯಾದಿಗಳೆಲ್ಲಾ ಇತ್ತೀಚೆಗಿನ ದಿನಗಳಲ್ಲಿ ಮತ್ತೂ ಮತ್ತೂ ಹೆಚ್ಚಾಗುತ್ತಿವೆ. ಹಾಗಿದ್ದರೂ, ಕರ್ನಾಟಕ ಕೇಂದ್ರಿತ ರಾಜಕೀಯ ಶಕ್ತಿಯೊಂದನ್ನು ಕಟ್ಟಬೇಕು ಅಂತ ಕರ್ನಾಟಕದ ಜನರಿಗೆ ಯಾಕೆ ಅನ್ನಿಸುತ್ತಿಲ್ಲ? ಹಸಿವು ಆಗಬೇಕಾದ ಕಾಲಕ್ಕೆ ಅದು ಅನುಭವಕ್ಕೆ ಬರುವುದಿಲ್ಲ ಎಂದಾದರೆ ಅದೊಂದು ರೋಗ ಲಕ್ಷಣ ಎಂದು ಅರ್ಥ. ಇದಕ್ಕೆ ಮದ್ದರೆಯದಿದ್ದರೆ, ಕರ್ನಾಟಕ ಇನ್ನಷ್ಟೂ ಕೃಶವಾಗಲಿದೆ. ಈ ಕ್ಷೀಣತೆ ಏಕಾಏಕಿ ರಾಜ್ಯದ ಭೌತಿಕ, ಆರ್ಥಿಕ ಸ್ಥಿತಿಯನ್ನು ಬಾಧಿಸದೆ ಇರಬಹುದು. ಸದ್ಯಕ್ಕೆ ಘಾಸಿಯಾಗುವುದು ರಾಜ್ಯದ ಸ್ವಾಭಿಮಾನಕ್ಕೆ. ಇಡೀ ದಕ್ಷಿಣ ಭಾರತದಲ್ಲೇ ದೆಹಲಿಯ ದೊರೆಗಳಿಗೆ ಹಲವು ರೀತಿಯಲ್ಲಿ ಕಪ್ಪ ಒಪ್ಪಿಸಿ ಕೈಕಟ್ಟಿ ನಿಲ್ಲುವ ದೈನೇಸಿ ಸಾಮಂತನ ಸ್ಥಿತಿಯನ್ನು ಕರ್ನಾಟಕ ಮನಸಾ ಒಪ್ಪಿಕೊಂಡು ಮುಂದುವರಿದದ್ದೇ ಆದರೆ ಅದರ ದುಷ್ಪರಿಣಾಮ ಜನಜೀವನದ ಎಲ್ಲಾ ಆಯಾಮಗಳಿಗೂ ತಟ್ಟಲಿದೆ. ಇವೆಲ್ಲವೂ ರಾಜ್ಯವನ್ನು ಬಹುಕಾಲ ಬಾಧಿಸಲಿವೆ.

ಕರ್ನಾಟಕಕ್ಕೇ ಕರ್ನಾಟಕದ್ದೇ ಆದ ರಾಜಕೀಯ ಶಕ್ತಿಯೊಂದು ಬೇಕು ಮತ್ತು ಅದನ್ನು ಕರ್ನಾಟಕದ ಪ್ರಾದೇಶಿಕ ಹಿತಾಸಕ್ತಿಯ ಸುತ್ತ ಕಟ್ಟಬೇಕು ಎನ್ನುವ ಹಳೆಯ ಆಗ್ರಹದ ವಿಷಯಕ್ಕೆ ಮತ್ತೆ ಬರೋಣ. ಈ ಆಗ್ರಹ ನ್ಯಾಯೋಚಿತವೂ, ಸಮಯೋಚಿತವೂ ಆಗಿದೆ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. ಹಾಗಿರುವಾಗ ಈ ಆಗ್ರಹ ಸಮಗ್ರ ಜನತೆಯ ಆಗ್ರಹವಾಗದೆ ಕೇವಲ ಕೆಲವೇ ಚಿಂತಕರ ಬರಹಗಳಲ್ಲಿ ಮಾತ್ರ ಯಾಕೆ ಉಳಿದಿದೆ? ರಾಜಕೀಯದ ಅಂಚಿನಲ್ಲಿ ವ್ಯವಹರಿಸುವ ಕೆಲವೇ ಕೆಲವು ಉತ್ಸಾಹಿಗಳ ಭಾಷಣಗಳಿಗಷ್ಟೇ ಯಾಕೆ ಈ ಆಗ್ರಹ ಸೀಮಿತವಾಗಿದೆ? ಇದು ಇಡೀ ಕನ್ನಡ ಸಮೂಹದ ಆಗ್ರಹವಾಗಿ ಯಾಕೆ ರೂಪುಗೊಂಡಿಲ್ಲ? ಎಷ್ಟು ಕಾಲ ಕರ್ನಾಟಕ ಕೇಂದ್ರಿತ ರಾಜಕೀಯದ ದಾಹ ಇಡೀ ಕನ್ನಡ ಜನಸಮೂಹದ ದಾಹ ಆಗುವುದಿಲ್ಲವೋ ಅಷ್ಟು ಕಾಲ ಈ ಆಗ್ರಹ ಕೇವಲ ಸೈದ್ಧಾಂತಿಕ ನೆಲೆಯಲ್ಲೇ ಉಳಿಯುತ್ತದೆ.

ಹಾಗಾದರೆ ಇಂತಹದ್ದೊಂದು ವ್ಯಾಪಕ ಜನಾಗ್ರಹವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವುದು ಕನ್ನಡಿಗರ ಮನಸ್ಥಿತಿಯೇ? ಹೌದು ಎಂದಾದಲ್ಲಿ ಈ ಮನಸ್ಥಿತಿಯನ್ನು ಬದಲಾಯಿಸಬೇಕಾದ ಕಾಲ ಬಂದಿದೆ. ಕರ್ನಾಟಕ ಕೇಂದ್ರಿತ ರಾಜಕೀಯ ಶಕ್ತಿಯೊಂದರ ಉಗಮಕ್ಕೆ ಸಾವಿರ ತೊಡಕುಗಳು ಇರಬಹುದು. ಹಾಗಂತ ಆ ತೊಡಕುಗಳನ್ನು ನಿವಾರಿಸಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯವನ್ನು ಯಾರಾದರೂ ಹೊಂದಿದ್ದರೆ ಅದೂ ಸರಿಯೆನಿಸುವುದಿಲ್ಲ. ಯಾರೋ ಹೇಳಿದ ಮಾತೊಂದು ನೆನಪಾಗುತ್ತಿದೆ. ‘ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ’ ಅಂತ. Politics is the Art of the Possible.

ರಾಜ್ಯ ಮಟ್ಟದಲ್ಲಿ, ಭಾಷಾ ಕೇಂದ್ರಿತ ರಾಷ್ಟ್ರೀಯತೆಯನ್ನು ಹುಟ್ಟುಹಾಕುವುದು ರಾಷ್ಟ್ರದ ಹಿತಾಸಕ್ತಿಗೆ ಮಾರಕ ಎಂದು ಒಂದು ಅಭಿಪ್ರಾಯವನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಹುಟ್ಟು ಹಾಕಲಾಗಿದೆ. ಕರ್ನಾಟಕದ ಜನ ಈ ಅಭಿಪ್ರಾಯವನ್ನು ಬೇರೆ ಬೇರೆ ಕಾರಣಗಳಿಗಾಗಿ ಹೆಚ್ಚು ನಂಬಿದ್ದು ಕೂಡಾ ದಕ್ಷಿಣ ರಾಜ್ಯಗಳ ಪೈಕಿ ಈ ರಾಜ್ಯದಲ್ಲಿ ಪ್ರಾದೇಶಿಕ ರಾಜಕೀಯವೊಂದು ನೆಲೆಗೊಳ್ಳದೆ ಇರಲು ಕಾರಣವಾಗಿರಬಹುದೋ ಏನೋ. ಸ್ಥಳೀಯ ರಾಷ್ಟ್ರೀಯತೆಯನ್ನು ಹುಟ್ಟುಹಾಕುವುದು ಭಾರತದ ಸಮಗ್ರ ರಾಷ್ಟ್ರೀಯತೆಗೆ ಮಾರಕ ಎನ್ನುವ ಅಭಿಪ್ರಾಯವೇ ತಪ್ಪು. ವಾಸ್ತವದಲ್ಲಿ ಇಂತಹ ವಿವಿಧ ರಾಷ್ಟ್ರೀಯತೆಗಳು ಸಮ್ಮಿಲನಗೊಂಡೇ ಭಾರತೀಯ ರಾಷ್ಟ್ರೀಯತೆ ಇರಬೇಕು ಎನ್ನುವುದು ಸಂವಿಧಾನದ ಆಶಯ. ಆದುದರಿಂದ ಯಾವುದೇ ಕಾರಣಕ್ಕೂ ಭಾಷಾ ಕೇಂದ್ರಿತ, ರಾಜ್ಯಮಟ್ಟದ ರಾಷ್ಟ್ರೀಯತೆ ಸಂವಿಧಾನಕ್ಕೆ ವಿರೋಧಿಯಲ್ಲ. ಬದಲಿಗೆ, ಈಗ ಆಗುತ್ತಿರುವಂತೆ ಒಂದು ದೇಶ, ಒಂದು ಭಾಷೆ, ಒಂದು ಪಕ್ಷ, ಒಂದು ಧರ್ಮ, ಒಂದು ರಾಷ್ಟ್ರ ಎನ್ನುವ ರೀತಿಯಲ್ಲಿ ರಾಷ್ಟ್ರೀಯತೆಯನ್ನು ಕಟ್ಟಲು ಕೆಲವರು ಹೊರಟಿರುವುದು ದೇಶವಿರೋಧಿಯೂ, ಸಂವಿಧಾನ ವಿರೋಧಿಯೂ, ಕನ್ನಡ ವಿರೋಧಿಯೂ ಆದ ನಡವಳಿಕೆ.

ಭಾರತ ದೇಶ ರಾಜ್ಯಗಳಿಂದ ಆಗಿರುವ ದೇಶವೇ ಹೊರತು ಇಲ್ಲಿ ದೇಶದಿಂದಾಗಿ ರಾಜ್ಯಗಳಾಗಿಲ್ಲ ಎನ್ನುವುದು ಚಾರಿತ್ರಿಕ ವಾಸ್ತವ. ಆದರೆ ಈ ಸತ್ಯಕ್ಕೆ ವಿರುದ್ಧವಾದ ಒಂದು ರಾಷ್ಟ್ರೀಯತೆಯನ್ನು ಹುಟ್ಟುಹಾಕಿ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಒಂದು ರೀತಿಯ ಗೌರವಯುತ ಹೊಂದಾಣಿಕೆ ಇದ್ದಷ್ಟು ಕಾಲ ಸ್ಥಳೀಯತೆಯನ್ನು ಬಿಟ್ಟು ಕಟ್ಟಿದ ರಾಷ್ಟ್ರೀಯತೆ ಒಂದು ದೊಡ್ಡ ಸಮಸ್ಯೆ ಅಂತ ಯಾರಿಗೂ ಅನ್ನಿಸಲಿಲ್ಲ. ಈಗ ಹಾಗಲ್ಲ. ರಾಷ್ಟ್ರೀಯ ಪಕ್ಷವೊಂದು ತನ್ನ ಸೈದ್ಧಾಂತಿಕ ಮೂಗಿನ ನೇರಕ್ಕೆ ಎಲ್ಲವನ್ನೂ ಮುರಿದು ಕಟ್ಟಲು ಹೊರಟಿರುವ ಸ್ಥಿತಿಯಲ್ಲಿ ಕರ್ನಾಟಕದಂತಹ ರಾಜ್ಯಗಳು ತೀವ್ರವಾದ ಅಸಡ್ಡೆಗೆ ಮತ್ತು ಅನ್ಯಾಯಕ್ಕೆ ಒಳಗಾಗಿವೆ. ಸಾಂವಿಧಾನಿಕವಾಗಿ ಬರಬೇಕಾಗಿರುವ ತೆರಿಗೆಯ ಪಾಲಿನ ನಿರಾಕರಣೆಯಿಂದ ಹಿಡಿದು, ಕನ್ನಡದ ಮೇಲೆ ಹಿಂದಿಯ ಪಾರಮ್ಯ ಹೇರುವಷ್ಟರ ಮಟ್ಟಿಗೆ ಈ ರಾಜ್ಯವಿರೋಧಿ ಧೋರಣೆ ಮುಂದುವರಿದಿದೆ. ಎಲ್ಲವನ್ನೂ ಇಲ್ಲಿ ಮತ್ತೊಮ್ಮೆ ಪುನರಾವರ್ತಿಸುವ ಅಗತ್ಯ ಇಲ್ಲ. ಇಷ್ಟೆಲ್ಲಾ ಆದರೂ ಕರ್ನಾಟಕ ಕೇಂದ್ರಿತ ರಾಜಕೀಯವೊಂದು ಜನಮನದಲ್ಲಿ ಯಾಕೆ ಜಾಗೃತವಾಗುವುದಿಲ್ಲ ಎನ್ನುವ ಪ್ರಶ್ನೆಯನ್ನು ಮಾತ್ರ ಈಗ ಗಂಭೀರವಾಗಿ ಮತ್ತೊಮೆ ಕೇಳಬೇಕಿದೆ.

ಇತಿಹಾಸವನ್ನು ನೋಡಿದರೆ ಒಂದಂಶ ಸ್ಪಷ್ಟವಾಗುತ್ತದೆ. ಈ ದೇಶದಲ್ಲಿ ಯಾವ ಪ್ರಜ್ಞೆಯೂ ತನ್ನಿಂದ ತಾನೇ ಜಾಗೃತವಾಗಿದ್ದು ಅಂತ ಇಲ್ಲ. ಈಗಿನ ಹಿಂದೂ ರಾಷ್ಟ್ರೀಯತೆಯ ತತ್ವವನ್ನು ಜನಮನದಲ್ಲಿ ಬಿತ್ತಲು ಸ್ವಾತಂತ್ರ್ಯ ಬಂದು ಸುಮಾರು ಏಳು ದಶಕಗಳಷ್ಟು ಕಾಲಾವಧಿ ಬೇಕಾಯಿತು ಎನ್ನುವುದನ್ನು ಮರೆಯಬಾರದು. ಹಿಂದೂಗಳೇ ಬಹುಸಂಖ್ಯೆಯಲ್ಲಿ ಇದ್ದರೂ ಹಿಂದೂ ಧರ್ಮದ ಹೆಸರಿನಲ್ಲಿ ಒಂದು ರಾಜಕೀಯ ಪಕ್ಷ ಕಟ್ಟಲು ಇಷ್ಟು ಸಮಯ ಬೇಕಾಯಿತು ಎಂದರೆ ಕನ್ನಡಿಗರೇ ಇದ್ದ ಒಂದು ರಾಜ್ಯದಲ್ಲಿ ಕನ್ನಡ ಭಾಷೆಯ ಸುತ್ತ ಒಂದು ರಾಜಕೀಯ ಕಟ್ಟಲು ಈವರೆಗೆ ಸಾಧ್ಯವಾಗಿಲ್ಲ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಕೊನೆಗೂ ಹಿಂದೂ ರಾಷ್ಟ್ರೀಯತೆಯನ್ನು ಈ ದೇಶದಲ್ಲಿ ನೇರಾನೇರವಾದ ಮಾರ್ಗದಲ್ಲಿ ಸಾಗಿ ಕಟ್ಟಿದ್ದಲ್ಲ. ಏನೇನೋ ಮುರಿದು ಅದನ್ನು ಕಟ್ಟಲಾಯಿತು. ಹಲವಾರು ಸುಳ್ಳು-ಮಿಥ್ಯೆಗಳನ್ನು ಹುಟ್ಟುಕಾಕುವ ಮೂಲಕ ಅದನ್ನು ಕಟ್ಟಲಾಯಿತು. ಕೃತಕವಾದ ವೈರಿ ಸಮೂಹವೊಂದನ್ನು ಸೃಷ್ಟಿಸುವ ಮೂಲಕ ಅದನ್ನು ಕಟ್ಟಲಾಯಿತು. ಎಲ್ಲದಕ್ಕಿಂತ ಮುಖ್ಯವಾಗಿ ಅಪಾರವಾದ ತಾಳ್ಮೆಯ ಮೂಲಕ ಅದನ್ನು ಕಟ್ಟಲಾಯಿತು. ಇದನ್ನೆಲ್ಲಾ ಇಲ್ಲಿ ಹೇಳಿದ್ದು ಕನ್ನಡ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವುದಕ್ಕೂ ಈ ರೀತಿಯ ವಾಮಮಾರ್ಗ ಹಿಡಿಯಬೇಕು ಎಂದು ಸೂಚಿಸುವುದಕ್ಕಲ್ಲ. ಬದಲಾಗಿ ಹಿಂದೂ ರಾಷ್ಟ್ರೀಯತೆಯನ್ನು ದೇಶವ್ಯಾಪಿಯಾಗಿ ಈಗಿನ ಪ್ರಮಾಣಕ್ಕಾದರೂ ಹರಡುವ ಕೆಲಸ ಸಂಬಂಧಪಟ್ಟವರಿಗೆ ಸಲೀಸಾಗಿ ಏನೂ ಇರಲಿಲ್ಲ ಎನ್ನುವ ವಿಷಯವನ್ನು ಮನಗಾಣಿಸಲು.

ಕನ್ನಡದ ಸುತ್ತ ರಾಷ್ಟ್ರೀಯತೆಯನ್ನು ಕಟ್ಟುವ ಕೆಲಸವೂ ಇಂತಹಾ ಅಪಾರ ಪರಿಶ್ರಮವನ್ನು ಬೇಡುತ್ತದೆ. ಮಾತ್ರವಲ್ಲ ಅದಕ್ಕೊಂದು ಕಾರ್ಯತಂತ್ರವನ್ನು ಆವಿಷ್ಕರಿಸುವ ಅಗತ್ಯವೂ ಇದೆ. ಹಾಗಂತ ಹಿಂದೂ ರಾಷ್ಟ್ರೀಯವಾದಿಗಳು ಮಾಡಿದಂತೆ ಮಿಥ್ಯೆಗಳನ್ನು, ಸುಳ್ಳುಗಳನ್ನು ಮತ್ತು ಹಿಂಸೆಯನ್ನು ಬೆರೆಸಿ ಹೆಣೆದ ಕಾರ್ಯತಂತ್ರ ಕರ್ನಾಟಕದಲ್ಲಿ ಭಾಷಾ ಕೇಂದ್ರಿತ ರಾಷ್ಟ್ರೀಯತೆ ಕಟ್ಟಲು ಮಾದರಿಯಾಗಬಾರದು. ಸುಳ್ಳಿನಿಂದ ಕಟ್ಟಿದ ಯಾವುದೂ ಸುದೀರ್ಘವಾಗಿ ಬಾಳಲಾರದು. ಕನ್ನಡ-ಕರ್ನಾಟಕದ ಪರಿಕಲ್ಪನೆಯ ಸುತ್ತ ಹುಟ್ಟುಹಾಕಬೇಕಾದ ರಾಷ್ಟ್ರೀಯತೆ ಮತ್ತು ರಾಜಕೀಯ ಶಕ್ತಿಯನ್ನು 21ನೆಯ ಶತಮಾನದ ಅಗತ್ಯಗಳಿಗೆ ತಕ್ಕಂತೆ, ಮಾನವೀಯ ಮಾರ್ಗಗಳ ಮೂಲಕ ರೂಪಿಸುವ ತಂತ್ರಗಾರಿಕೆಯೊಂದನ್ನು ಹೆಣೆಯಬೇಕು. ಇಂತಹ ಹೃದಯ ಮತ್ತು ಮಿದುಳುಗಳಿಗಾಗಿ ಕನ್ನಡದ ಮಣ್ಣು ಕಾಯುತ್ತಿದೆ. ಈ ಹಿಂದೆ ಕರ್ನಾಟಕದಲ್ಲಿ ಮಾಡಿದ ಇಂತಹ ಪ್ರಯತ್ನಗಳೆಲ್ಲಾ ವಿಫಲವಾಗಿದೆ ಅಂತ ಕೆಲವರು ಆಗಾಗ ಹೇಳುವುದಿದೆ. ಇದು ಕೂಡಾ ತಪ್ಪು ಅಭಿಪ್ರಾಯ. ಹಿಂದೆ ಯಾವತ್ತೂ ಪ್ರಾದೇಶಿಕ ರಾಷ್ಟ್ರೀಯತೆಯೊಂದನ್ನು ಹುಟ್ಟುಹಾಕುವ ಕೆಲಸ ಕರ್ನಾಟಕದಲ್ಲಿ ಗಂಭೀರವಾಗಿ ನಡೆಯಲೇ ಇಲ್ಲ. ಇದನ್ನು ಈಗಾಗಲೇ ಹಲವರು ಹಲವು ವೇದಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ನೆರೆಯ ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಗಳ ಮೂಲಕ ಹುಟ್ಟಿಕೊಂಡ ಯಶಸ್ವಿ ಪ್ರಾದೇಶಿಕ ರಾಜಕೀಯ, ಆಮೇಲೆ ಜಾತೀಯತೆ ಜಾಡಿನಲ್ಲಿ ಸಾಗಿ, ಸಿನೆಮಾ ತಾರೆಯರ ವರ್ಚಸ್ಸನ್ನು ಅವಲಂಬಿಸಿ ಈಗ ಕವಲು ದಾರಿಯಲ್ಲಿ ನಿಂತಿದೆ. ಆಂಧ್ರಪ್ರದೇಶದಲ್ಲೂ ವರ್ಚಸ್ವೀ ಸಿನೆಮಾ ನಟನೊಬ್ಬ ರಾಷ್ಟ್ರೀಯ ಪಕ್ಷಗಳಿಂದ ತೆಲುಗು ಅಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಸಂಗತಿಯನ್ನು ಮುಂದಿರಿಸಿ ಪ್ರಾದೇಶಿಕ ರಾಜಕೀಯವನ್ನು ಹುಟ್ಟುಹಾಕಿ ಯಶಸ್ವಿಯಾದರೂ ಅದೂ ಈಗ ಕವಲು ದಾರಿಯಲ್ಲಿದೆ. ಕಾರಣ ಅದು ಅತ್ತ ಸಂಪೂರ್ಣ ಪ್ರಾದೇಶಿಕ ರಾಜಕಾರಣವೂ ಆಗದೆ ಇತ್ತ ಪೂರ್ತಿ ವ್ಯಕ್ತಿ ಕೇಂದ್ರಿತ ರಾಜಕಾರಣವೂ ಆಗದೆ ಬೆಳೆದದ್ದು. ಹುಟ್ಟುಹಾಕಿದ ವ್ಯಕ್ತಿಯ ಆಚೆಗೆ ಅಲ್ಲಿನ ಪ್ರಾದೇಶಿಕ ರಾಜಕೀಯ ಉಳಿಯಿತಾದರೂ ಈಗ ಅದು ಹೆಚ್ಚು ವ್ಯಕ್ತಿ ಕೇಂದ್ರಿತವಾಗುವ ಹಾದಿಯಲ್ಲಿದೆ. ಪ್ರಾದೇಶಿಕ ರಾಷ್ಟ್ರೀಯ ಪ್ರಜ್ಞೆ ಎನ್ನುವುದು ಅಲ್ಲಿ ಗೌಣವಾಗುತ್ತಿದೆ.

ಇನ್ನು ತೆಲಂಗಾಣದ ಕತೆಯೂ ಅಷ್ಟೇ. ಅಲ್ಲಿ ಪ್ರಾದೇಶಿಕ ಪಕ್ಷ ಹುಟ್ಟಿಕೊಂಡದ್ದು ಮತ್ತು ಅಧಿಕಾರ ಹಿಡಿದದ್ದು ಪ್ರತ್ಯೇಕ ತೆಲಂಗಾಣದ ಬೇಡಿಕೆಯೊಂದಿಗೆ. ಹೊಸ ರಾಜ್ಯ ಉದಯವಾದ ನಂತರ ಇನ್ನೆಷ್ಟು ಕಾಲ ಆ ಪಕ್ಷ ಬಾಳಲಿದೆ ಎನ್ನುವ ಪ್ರಶ್ನೆ ಅಲ್ಲಿಯೂ ಇದೆ. ಯಾಕೆಂದರೆ, ಅಲ್ಲೂ ಪ್ರಾದೇಶಿಕ ರಾಜಕೀಯ ಒಂದು ಸಮಗ್ರ ಪ್ರಜ್ಞೆಯಾಗದೆ ಒಬ್ಬ ವ್ಯಕ್ತಿಯ ಸುತ್ತ ಗಿರಕಿಹೊಡೆಯುತ್ತಿದೆ. ಮೂರೂ ಕಡೆ ಬಿಜೆಪಿ ಹೊಂಚು ಹಾಕುತ್ತಿದೆ. ತನ್ನ ಸುತ್ತಣ ರಾಜ್ಯಗಳಲ್ಲಿ ಹೀಗೆಲ್ಲಾ ಆಗುತ್ತಿರುವುದನ್ನು ಕರ್ನಾಟಕ ಸುಮ್ಮನಿದ್ದು ಸಂಯಮದಿಂದ ಗಮನಿಸುತ್ತಿದೆ. ಈ ಎಲ್ಲಾ ಪ್ರಯೋಗಗಳಿಂದ ಪಾಠ ಕಲಿತು, ತನ್ನದೇ ಆದ ಮಾದರಿ ಪ್ರಾದೇಶಿಕ ರಾಜಕೀಯದ ಉಗಮಕ್ಕೆ ಕರ್ನಾಟಕ ಈಗಲಾದರೂ ಸಾಕ್ಷಿಯಾಗುವುದು ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಹೇಗೆ ಅಗತ್ಯವೋ ಹಾಗೆಯೇ ದೇಶದ ಸಂವಿಧಾನವನ್ನು ಸಂರಕ್ಷಿಸುವ ದೃಷ್ಟಿಯಿಂದಲೂ ಅಗತ್ಯವಾಗಿದೆ.

ಎ ನಾರಾಯಣ

(ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.)


ಇದನ್ನೂ ಓದಿ: ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ: ಮಾತು ತಪ್ಪಿದ ಕೇಂದ್ರ ಸರ್ಕಾರ – ಟಿ.ಎಸ್.ನಾಗಾಭರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...