ಸಾಂವಿಧಾನಿಕ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭಾತೃತ್ವವು ನಮ್ಮ ರಾಷ್ಟ್ರದ ಅಂತರ್ಗತ ಪ್ರಾಥಮಿಕ ಬುನಾದಿಯಾಗಿದ್ದು, ಒಳಗೊಳ್ಳುವ ಗುಣ, ವೈವಿಧ್ಯತೆ ಮತ್ತು ವಿವಿಧ ಭಾಷೆ, ಸಂಸ್ಕೃತಿ, ಪ್ರದೇಶಗಳ ಬಹುತ್ವವನ್ನು ಗೌರವಿಸೋಣ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಕುರಿಯನ್ ಜೋಸೆಫ್ ಕರೆ ನೀಡಿದ್ದಾರೆ.
ಇಂದು ಬೆಂಗಳೂರಿನ ಇಂಡಿಯನ್ ಸೋಷಿಯಲ್ ಇನ್ಸ್ಟಿಟ್ಯೂಟ್ನಲ್ಲಿ ನಡೆದ ‘ಭಾರತೀಯ ಸಂವಿಧಾನದ ಮುನ್ನಡಿ’ ಕುರಿತ ಆನ್ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂದು ನಾಗರಿಕರ ಹಕ್ಕುಗಳು ಕ್ಷೀಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಮುನ್ನಡಿಯು ಸಂವಿಧಾನ ಮತ್ತು ನ್ಯಾಯಾಂಗದ ರಕ್ಷಕನಾಗಿ ಕೆಲಸ ನಿರ್ವಹಿಸುತ್ತಿದೆ” ಎಂದರು.
ಭಾರತೀಯ ಸಮಾಜದಲ್ಲಿ ಮಹಿಳೆಯರನ್ನು ಸರಕುಗಳಂತೆ ಪರಿಗಣಿಸುವ ಮನೋಭಾವವನ್ನು ಟೀಕಿಸಿದ ಅವರು, “ಹೆಚ್ಚುತ್ತಿರುವ ಮಹಿಳಾ ಪ್ರತಿರೋಧವನ್ನು ಸಂಕಟವೆಂದು ನೋಡಬಾರದು. ಮಹಿಳಾ ಸುರಕ್ಷತೆಯ ವಿಶಾಲ ಪರಿಕಲ್ಪನೆಯ ದೃಷ್ಟಿಯಿಂದ ಸಮಾಜವು ಮಹಿಳೆಯರ ಹಕ್ಕುಗಳು ಮತ್ತು ಅವರ ಪ್ರತಿರೋಧವನ್ನು ಒಪ್ಪಿಕೊಳ್ಳಬೇಕು ಮತ್ತು ಅಂಗೀಕರಿಸಬೇಕು. ಈ ವಿಷಯದಲ್ಲಿ ಪುರುಷರ ಮನಸ್ಥಿತಿ ಬದಲಾಗಬೇಕು ಹಾಗೂ ಪ್ರಜಾಪ್ರಭುತ್ವದ ಮೌಲ್ಯದ ಭಾಗವಾಗಿ ಅವರ ದನಿಯನ್ನು ಆಲಿಸಬೇಕು ಎಂದಿದ್ದಾರೆ.
ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಮತ್ತು ಹೆಚ್ಚುತ್ತಿರುವ ಭಯದ ವಾತಾವರಣದ ಕುರಿತು ಉತ್ತರಿಸಿದ ಅವರು, ನ್ಯಾಯಾಂಗವು ಪಕ್ಷಪಾತರಹಿತ ಮತ್ತು ಪೂರ್ವಾಗ್ರಹ ರಹಿತವಾಗಿರಬೇಕು. ಅದು ಸಾಂವಿಧಾನಿಕ ನೈತಿಕತೆ ಮತ್ತು ಆತ್ಮಸಾಕ್ಷಿಯನ್ನು ಎತ್ತಿಹಿಡಿಯಬೇಕು. ವ್ಯಕ್ತಿಗಳ ಆತ್ಮಸಾಕ್ಷಿಯನ್ನು ಮೀರಿಸಬೇಕು ಎಂದರು.
ಒಂದು ಗಂಟಗೂ ಅಧಿಕ ಸಮಯ ನಡೆದ ಆನ್ಲೈನ್ ಕಾರ್ಯಕ್ರಮದಲ್ಲಿ ಸುಮರು 400 ಜನರು ಭಾಗವಹಿಸಿದ್ದರು ಎಂದು ಇಂಡಿಯನ್ ಸೋಷಿಯಲ್ ಇನ್ಸ್ಟಿಟ್ಯೂಟ್ನ ನಿರ್ದೇಶಕರು ತಿಳಿಸಿದರು.
ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವ ದೇಶ ಹಳ್ಳ ಹಿಡಿಯ ಹೊರಟಿರುವುದು ನಮ್ಮ ಜನರಿಗೆ ಗೋಚರಿಸುತ್ತಿಲ್ಲವೆ?