ಪ್ರಜಾಪ್ರಭುತ್ವದ ಕುರಿತು ಅಬ್ರಹಾಂ ಲಿಂಕನ್ ನೀಡಿದ ವ್ಯಾಖ್ಯಾನವಾಗಲೀ, ಭಾರತದ ಭವಿಷ್ಯದ ಕುರಿತು ಮಹಾತ್ಮಾಗಾಂಧಿಯವರು ಕಂಡಿದ್ದ ಕನಸಾಗಲೀ ಎರಡೂ ನಮ್ಮ ದೇಶದಲ್ಲಿಂದು ದೂರದ ಮಾತಾಗಿವೆ. ನಮ್ಮ ದೇಶದ ಸಂವಿಧಾನವು ಬಹಳ ಕೆಟ್ಟ ಸ್ಥಿತಿಯಲ್ಲಿವೆ ಎಂಬುದು ಸರ್ವವಿದಿತ.
ನಮ್ಮ ದೇಶದ ಪ್ರಜಾತಾಂತ್ರಿಕ ಮೌಲ್ಯಗಳೇ ಭ್ರಷ್ಟಗೊಂಡಿವೆ ಎಂದು ಹೇಳಬೇಕಾಗಿ ಬಂದಿರುವುದು ದುಃಖಕರವಾದ ಸಂಗತಿಯಾಗಿದೆ. ಈ ದೇಶದ ಮತದಾರರ ಅನಿಸಿಕೆಗಳಿಗೆ ಬೆಲೆಯಿಲ್ಲವಾಗಿದೆ. ಆಳುವ ಸರ್ಕಾರಗಳು ಸರ್ವಾಧಿಕಾರವನ್ನು ಹೇರುತ್ತಿವೆ. ಬ್ರಿಟಿಷರ ನಂತರ ಮತ್ತೊಮ್ಮೆ ಒಡೆದಾಳುವ ನೀತಿಯ ತಂತ್ರ ಹೂಡಿದ್ದಾರೆ. ದೇಶದ ಐಕ್ಯತೆಯು ಚೆದುರಿದೆ. ದೇಶದ ಪ್ರತಿಯೊಬ್ಬ ನಾಗರಿಕರ ಕಲ್ಯಾಣದ ಸುತ್ತ ಕೇಂದ್ರೀಕರಿಸಬೇಕಾದ ಸರ್ಕಾರವು ಅವರ ಗುರುತನ್ನೇ ಅಳಿಸಲು ಹೊರಟಿದೆ. ಬಿಜೆಪಿ ಆಳ್ವಿಕೆ ಶುರುವಾದ ನಂತರ ಏನಾಗುತ್ತಿದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಮೊದಲೈದು ವರ್ಷಗಳಲ್ಲಿ ಅವರ ಪ್ರಣಾಳಿಕೆ ನೀಡಿದ್ದ ಅಭಿವೃದ್ಧಿಯ ಆಶ್ವಾಸನೆಯನ್ನೂ ಮಣ್ಣುಗೂಡಿಸಿದವು. ಆದರೂ ಜನರು ಅದನ್ನು ಒಪ್ಪಿಕೊಂಡರು. ಇದೀಗ ಇಡೀ ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದು, ಹಿಂದೂ ರಾಷ್ಟ್ರವನ್ನು ಕಟ್ಟುವ ಅವರ ಕನಸಿನ ಸುತ್ತಲೇ ಕೆಲಸ ಮಾಡುತ್ತಿದ್ದಾರೆ.
ತ್ರಿವಳಿ ತಲಾಖ್, ಲವ್ ಜಿಹಾದ್, ಕಲಂ 370ರ ಹಿಂತೆಗೆತ ಮತ್ತು ಇದೀಗ ಅತ್ಯಂತ ಅಪಾಯಕಾರಿ ಸಿಎಎ, ಎನ್ಆರ್ಸಿ, ಎನ್ಪಿಆರ್ಗಳ ಮೂಲಕ ಸಾಧಿಸುತ್ತಿರುವುದು ಅದನ್ನೇ. ಅದರ ವಿವರಗಳು ಎಲ್ಲರಿಗೂ ಗೊತ್ತಿರುವುದರಿಂದ ಇಲ್ಲಿ ಪುನರಾವರ್ತಿಸುವುದಿಲ್ಲ.
ಇದುವರೆಗೆ ಜಾರಿಗೆ ತಂದಿರುವ ನೀತಿಗಳು ಮತ್ತು ಕಾಯ್ದೆಗಳೆಲ್ಲದರ ಉದ್ದೇಶ ಒಂದೇ ಆಗಿದೆ. ಅದು ಮುಸ್ಲಿಮರು, ಆದಿವಾಸಿಗಳು ಮತ್ತು ದಲಿತರುಗಳ ಸಾಂವಿಧಾನಿಕ ಹಕ್ಕುಗಳ ಅವಹೇಳನ. ಭವಿಷ್ಯದ ಭಾರತದಲ್ಲಿ ಜಾತಿ, ಧರ್ಮಗಳನ್ನು ಮೀರಿದ ನಾಗರಿಕತ್ವವು ಇಲ್ಲದಂತೆ ಮಾಡಲು ಹೊರಟಿರುವುದು ಎದ್ದು ಕಾಣುತ್ತಿದೆ.
ಇವೆಲ್ಲವನ್ನೂ ಮಾಡಿದಾಗ ಯಾರೂ ಪರಿಣಾಮಕಾರಿಯಾಗಿ ದನಿಯೆತ್ತಲಿಲ್ಲ. ಆದರೆ ಯಾವಾಗ ಪೌರತ್ವವನ್ನೇ ಇಲ್ಲವಾಗಿಸುವ ಕಾನೂನು ಬಂದಿತೋ ಭವಿಷ್ಯದ ಕ್ರಾಂತಿಕಾರಿಗಳಾದ ವಿದ್ಯಾರ್ಥಿಗಳು ಮುಂದೆ ಬಂದು ಪ್ರತಿಭಟಿಸಿದರು; ಸಾಮಾನ್ಯ ಜನರು ಹೊರಬಂದರು. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು, ಅದರಲ್ಲೂ ಮುಸ್ಲಿಂ ಮಹಿಳೆಯರು ಹೊರಬಂದು ಈ ಹೊಸ ಕಾಯ್ದೆಯ ವಿರುದ್ಧ ದನಿಯೆತ್ತಿದರು. ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರೆಂದರೆ ‘ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾದ’ವರೆಂಬ ಚಿತ್ರಣವಷ್ಟೇ ಇರುತ್ತದೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಪ್ರತಿಭಟಿಸಿದವರು ಅವರು.
ದೆಹಲಿಯ ಶಾಹೀನ್ ಬಾಗ್ನಲ್ಲಿನ ಅತ್ಯಪೂರ್ವ ಹೋರಾಟವು ಸತತವಾಗಿ ಮುಂದುವರೆಯುತ್ತಲೇ ಇದ್ದು, ದೇಶದ ಎಲ್ಲೆಡೆಯ ಜನರನ್ನು ತಾರತಮ್ಯ ಪೂರಿತ ಕಾಯ್ದೆಯ ವಿರುದ್ಧದ ಹೋರಾಟಕ್ಕೆ ಸೆಳೆಯುತ್ತಿದೆ. ಈ ಹೋರಾಟಗಾರರಿಗೆ ಬೆಂಬಲ ಸೂಚಿಸಲು ವಿವಿಧೆಡೆಗಳಿಂದ ಜನರು ಆಹಾರ, ವಸ್ತುಗಳನ್ನು ಹೊತ್ತುಕೊಂಡು ಬರುತ್ತಿದ್ದಾರೆ. ಅವರೆಲ್ಲರೂ ಬಯಸಿರುವುದು, ಈ ಕಾಯ್ದೆ ಹೋಗಬೇಕೆಂದು ಅಷ್ಟೇ. ವಿದ್ಯಾರ್ಥಿಗಳು ಹೊರಬಂದ ಬಗೆಯು ನನ್ನನ್ನು ನಿಜಕ್ಕೂ ಮೂಕವಿಸ್ಮಿತಳನ್ನಾಗಿಸಿತು. ವಿದ್ಯಾರ್ಥಿ ಶಕ್ತಿ ಹಾಗೂ ಮಹಿಳೆಯರ ಸಂಕಲ್ಪವು ದೇಶ ಮತ್ತು ಪ್ರಜಾತಂತ್ರವನ್ನು ರಕ್ಷಿಸುತ್ತದೆಂಬ ಭರವಸೆ ಮೂಡಿಸಿದೆ.
ಇನ್ನೊಂದೆಡೆ ಈ ಪ್ರತಿಭಟನೆಯ ದನಿಯನ್ನು ಹತ್ತಿಕ್ಕಲು ಬಂದೂಕನ್ನು ಬಳಸಲಾಗುತ್ತಿದೆ ಮತ್ತು ಹಿಂಸೆಯ ಪ್ರಚೋದನೆಗೆ ಇಳಿದಿದ್ದಾರೆ. ಜಾಮಿಯಾ ಮಿಲಿಯಾ, ಜೆಎನ್ಯು ಮತ್ತು ಅಲಿಘರ್ ಮುಸ್ಲಿಂ ವಿವಿಯ ಮೇಲೆ ಹಾಗೂ ದೇಶದ ವಿವಿಧೆಡೆಗಳಲ್ಲಿ ಪ್ರತಿಭಟನಾಕಾರರ ಮೇಲೆ ನಡೆಸಿರುವ ದಾಳಿಯು ನಮಗೆಲ್ಲರಿಗೂ ಗೊತ್ತಿದೆ. ಉತ್ತರ ಪ್ರದೇಶ ಹಾಗೂ ಮಂಗಳೂರುಗಳಲ್ಲಿ ಅಮಾಯಕರನ್ನು ಪೊಲೀಸರು ಕೊಂದಿದ್ದಾರೆ. ಅವರಿಗೆ ಮೇಲಿನಿಂದ ಆದೇಶ ಇರುವುದು ಸ್ಪಷ್ಟವಾಗಿದೆ. ವಿವಿಧ ಸಂಘಟನೆಗಳ ಯುವಮುಖಗಳನ್ನೂ ಆಗಿಂದಾಗ್ಗೆ ಬಂಧಿಸುವುದು ನಡೆಯುತ್ತಲೇ ಇದೆ.
ಪ್ರತಿಭಟನೆಯು ನಮ್ಮ ಹಕ್ಕಾಗಿದ್ದು ಅದನ್ನು ಯಾರೂ ಕಿತ್ತುಕೊಳ್ಳುವುದು ಸಾಧ್ಯವಿಲ್ಲ. ಈ ರೀತಿಯ ಪ್ರತಿಭಟನೆಗಳು ಹೊಸದೊಂದು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಬಲ್ಲ ದಾರಿಯನ್ನು ತೋರಿಸುತ್ತಿದೆ. ಅದು ಮಹಾತ್ಮಾಗಾಂಧಿ ಮತ್ತು ಸಂವಿಧಾನವು ಆಶಿಸಿದ ಬದಲಾವಣೆಯಾಗಿರುತ್ತದೆ. ಗಾಂಧಿಯವರು ಕ್ವಿಟ್ ಇಂಡಿಯಾ ಕರೆ ಕೊಟ್ಟಿದ್ದು ಬ್ರಿಟಿಷರ ವಿರುದ್ಧ. ಇದೀಗ ದೇಶವನ್ನು ಒಡೆಯಲು ಹೊರಟಿರುವ ಶಕ್ತಿಗಳ ವಿರುದ್ಧ ಈ ಸ್ವಾತಂತ್ರ್ಯ ಸಂಗ್ರಾಮವು ನಡೆದು ಇತಿಹಾಸವನ್ನು ನಿರ್ಮಿಸಲಿದೆ. ಏಕೆಂದರೆ ಸಂವಿಧಾನದ ಮುನ್ನುಡಿಯು ದೇಶದ ಎಲ್ಲಾ ಜನರ ಸಂಕಲ್ಪ ಶಕ್ತಿಯ ಪ್ರತೀಕವಾಗಿರುವುದೇ ಆದಲ್ಲಿ, ಅದನ್ನು ರಕ್ಷಿಸಿಕೊಂಡು ತಮ್ಮದನ್ನಾಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ.
ಅದರ ಸೂಚನೆಗಳು ಈಗಾಗಲೇ ಸಿಕ್ಕಿವೆ. ಅಂದರೆ ಬಿಜೆಪಿ ಹಾಗೂ ಆರೆಸ್ಸೆಸ್ನ ಫ್ಯಾಸಿಸ್ಟ್ ಆಡಳಿತದ ಕುಸಿತದ ಲಕ್ಷಣಗಳು ದೆಹಲಿಯ ಚುನಾವಣೆಯ ಮೂಲಕವೂ ಕಂಡಿದೆ. ಅದು ಅಳವಡಿಸಿದ ಒಡೆದಾಳುವ ನೀತಿಯನ್ನು ಅಲ್ಲಿನ ಜನರು ಒಪ್ಪಿಲ್ಲ. ಕೋಮುಗಲಭೆ ಮತ್ತು ಹಿಂಸೆಗಳು ವೋಟ್ಬ್ಯಾಂಕನ್ನು ತುಂಬಲಿವೆ ಎಂದು ಭಾವಿಸಿದವರಿಗೆ ಅವರು ಸರಿಯಾದ ಪೆಟ್ಟನ್ನು ಕೊಟ್ಟಿದ್ದಾರೆ.
ಇದಕ್ಕೇನು ಕಾರಣ ಎಂದು ಯೋಚಿಸಬೇಕು. ವಿದ್ಯಾರ್ಥಿಗಳ ದನಿಯನ್ನು ಪ್ರಭುತ್ವವು ದಮನಿಸಲು ಹೊರಟಾಗ ಹೃದಯವಂತ ತಾಯಂದಿರು ಬೀದಿಗಿಳಿದರು. ನರಮೇಧವನ್ನು ನಾವು ತಡೆದು ನಿಲ್ಲಿಸುತ್ತೇವೆ, ನಮ್ಮ ನೆಲದಿಂದ ನಮ್ಮನ್ನು ಯಾರೂ ಕದಲಿಸಲಾಗದು ಎಂಬ ಧೀಶಕ್ತಿ ಅಲ್ಲಿ ಎದ್ದು ಕಾಣುತ್ತಿತ್ತು. ಇದು ಭಾರತದ ಭೂಮಿಯಲ್ಲಿ ಇತಿಹಾಸವೊಂದನ್ನು ನಿರ್ಮಿಸಲು ಹೊರಟಿರುವವರ ಹೋರಾಟ ಎಂಬುದರ ಸೂಚನೆಗಳು ಈಗ ಸ್ಪಷ್ಟವಾಗಿ ಸಿಕ್ಕಿವೆ.