ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ ಅಪರಾಧಿಗಳಾದ ಎಲ್ಲಾ ಒಂಬತ್ತು ಪೊಲೀಸರಿಗೆ ಮರಣದಂಡನೆ ವಿಧಿಸಿ ಮಧುರೈನ ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ (ಏಪ್ರಿಲ್ 6) ಐತಿಹಾಸಿಕ ತೀರ್ಪು ನೀಡಿದೆ.
“ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಾಧ್ಯಸ್ಥರಾಗಿರುವ ಪೊಲೀಸ್ ಅಧಿಕಾರಿಗಳೇ ಕಾನೂನಿಗೆ ವಿರುದ್ಧವಾಗಿ ವರ್ತಿಸಿ, ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲದ ತಂದೆ- ಮಗನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಅಪರೂಪದ ಪ್ರಕರಣ ಇದಾಗಿದೆ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಮುತ್ತುಕುಮಾರನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಅಧಿಕಾರಿಗಳು ಒಟ್ಟು 1.40 ಕೋಟಿ ರೂ. ಪರಿಹಾರವನ್ನು ನೀಡುವಂತೆಯೂ ಆದೇಶಿಸಿದ್ದಾರೆ.
ಮಾರ್ಚ್ 23ರಂದು, ನ್ಯಾಯಾಲಯವು ಒಂಬತ್ತು ಪೊಲೀಸ್ ಅಧಿಕಾರಿಗಳನ್ನು ಐಪಿಸಿ ಸೆಕ್ಷನ್ 342, 195, 211, 218 ಮತ್ತು 302 ರ ಜೊತೆಗೆ ಸೆಕ್ಷನ್ 109 ಮತ್ತು 34 ರ ಅಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಿತ್ತು. ಅಪರಾಧಿಗಳ ಹಿಂದಿನ ಆಸ್ತಿ ವಿವರ ಮತ್ತು ಅವರ ಸಂಬಳದ ಪ್ರಮಾಣಪತ್ರದ ಬಗ್ಗೆ ವರದಿ ನೀಡುವಂತೆ ನ್ಯಾಯಾಲಯವು ಸೂಚಿಸಿತ್ತು. ಅಲ್ಲದೆ, ಶಿಕ್ಷೆಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಸಂದರ್ಭಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವರದಿಯನ್ನು ಕೇಳಿತ್ತು. ಇದರ ನಂತರ, ಏಪ್ರಿಲ್ 2ರಂದು ವರದಿಗಳನ್ನು ಸಲ್ಲಿಸಲಾಯಿತು ಮತ್ತು ಶಿಕ್ಷೆಯ ಪ್ರಮಾಣದ ಕುರಿತು ನ್ಯಾಯಾಲಯವು ವಾದ-ಪ್ರತಿವಾದಗಳನ್ನು ಆಲಿಸಿತು. ಸಿಬಿಐ ಗರಿಷ್ಠ ಶಿಕ್ಷೆಯಾಗಿ ಮರಣದಂಡನೆಗೆ ಒತ್ತಾಯಿಸಿದ್ದರೆ, ಆರೋಪಿಗಳ ಪರ ವಕೀಲರು ಕನಿಷ್ಠ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದರು.
ಘೋರ ಘಟನೆಯ ಆರು ವರ್ಷಗಳ ನಂತರ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಿದ್ದಿದೆ. 2020ರ ಜೂನ್ನಲ್ಲಿ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ರಾತ್ರಿ 9 ಗಂಟೆಯ ನಂತರವೂ ತಮ್ಮ ಅಂಗಡಿಯನ್ನು ತೆರೆದಿದ್ದರು ಎಂಬ ಆರೋಪದ ಮೇಲೆ ಸಾತನ್ಕುಳಂ ಪೊಲೀಸರು ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಅಕ್ರಮವಾಗಿ ಬಂಧಿಸಿಟ್ಟು ಹಲ್ಲೆ ನಡೆಸಿದ್ದರು. ಕಸ್ಟಡಿ ಹಲ್ಲೆಯಿಂದ ತಂದೆ-ಮಗ ಸಾವನ್ನಪ್ಪಿದ್ದರು.
ಜೂನ್ 19 ತಂದೆ-ಮಗನನ್ನು ಸಾತನ್ಕುಳಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪೊಲೀಸರು ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದರು. ನಂತರ ಐಪಿಸಿ ಸೆಕ್ಷನ್ 188, 269, 294(ಬಿ), 353 ಮತ್ತು 506(2) ರ ಅಡಿಯಲ್ಲಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಮಗ ಬೆನ್ನಿಕ್ಸ್ ಜೂನ್ 22ರಂದು ಗಾಯಗಳಿಗೆ ಕೊನೆಯುಸಿರೆಳೆದರೆ, ತಂದೆ ಜಯರಾಜ್ ಜೂನ್ 23ರಂದು ಸಾವಿಗೀಡಾದರು.
ಸಾವಿನ ನಂತರ, 10 ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು ಮತ್ತು ಅವರ ವಿರುದ್ಧ ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಲಾಯಿತು. ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಈ ವಿಷಯದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತು. ವಿಚಾರಣೆಯ ಸಂದರ್ಭದಲ್ಲಿ, ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ಹೊರಿಸಲು ಮೇಲ್ನೋಟಕ್ಕೆ (prima facie) ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗಮನಿಸಿದ ನ್ಯಾಯಾಲಯವು, ತನಿಖೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಸಿಬಿ-ಸಿಐಡಿ ಡಿವೈಎಸ್ಪಿಯವರಿಗೆ ನಿರ್ದೇಶನ ನೀಡಿತ್ತು.
ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ವಿನಂತಿಯ ಮೇರೆಗೆ ರಾಜ್ಯ ಸರ್ಕಾರವು ಈ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತ್ತು. ಅಂದಿನ ಇನ್ಸ್ಪೆಕ್ಟರ್ ಎಸ್. ಶ್ರೀಧರ್, ಸಬ್ ಇನ್ಸ್ಪೆಕ್ಟರ್ಗಳಾದ ಪಿ. ರಘು ಗಣೇಶ್ ಮತ್ತು ಕೆ. ಬಾಲಕೃಷ್ಣನ್, ಹೆಡ್ ಕಾನ್ಸ್ಟೇಬಲ್ಗಳಾದ ಎಸ್. ಮುರುಗನ್ ಮತ್ತು ಎ. ಸಾಮಿ ದೊರೈ, ಹಾಗೂ ಕಾನ್ಸ್ಟೇಬಲ್ಗಳಾದ ಎಂ. ಮುತ್ತುರಾಜ್, ಎಸ್. ಚೆಲ್ಲದೊರೈ, ಎಕ್ಸ್. ಥಾಮಸ್ ಫ್ರಾನ್ಸಿಸ್, ಎಸ್. ವೈಲುಮುತ್ತು ಮತ್ತು ವಿಶೇಷ ಸಬ್ ಇನ್ಸ್ಪೆಕ್ಟರ್ ಪಾಲ್ದೊರೈ ಅವರ ವಿರುದ್ಧ ಐಪಿಸಿ ಸೆಕ್ಷನ್ 302, 342, 201, 182, 193, 211, 218, 120(B) ಮತ್ತು 34 ರ ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಆದರೆ, ವಿಚಾರಣೆ ಬಾಕಿ ಇರುವಾಗಲೇ ಪಾಲ್ದೊರೈ ಅವರು ಕೋವಿಡ್-19 ನಿಂದಾಗಿ ಮೃತಪಟ್ಟರು.
ಸೋಮವಾರ ತೀರ್ಪು ಓದಿದ ನ್ಯಾಯಾಧೀಶರು, ಜಯರಾಜ್ ಮತ್ತು ಬೆನ್ನಿಕ್ಸ್ ಅವರಿಗೆ ಉಂಟಾದ ಗಾಯಗಳು ಅಸಹಜವಾಗಿದ್ದವು ಮತ್ತು ಇವೇ ಅಂತಿಮವಾಗಿ ಅವರ ಸಾವಿಗೆ ಕಾರಣವಾದವು ಎಂದು ಹೇಳಿದ್ದಾರೆ. ಈ ಗಾಯಗಳು ಸ್ವಯಂ-ಪ್ರೇರಿತ (ತಮಗೆ ತಾವೇ ಮಾಡಿಕೊಂಡಿದ್ದು) ಎಂಬ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ. ಅಲ್ಲದೆ, ಮರಣೋತ್ತರ ಪರೀಕ್ಷೆಯ ವರದಿಗಳು ಈ ಗಾಯಗಳು ನಿರಂತರ ಹಲ್ಲೆಯ ಪರಿಣಾಮವಾಗಿ ಉಂಟಾದವು ಎಂದು ಬಹಿರಂಗಪಡಿಸಿವೆ ಎಂಬುದನ್ನು ನ್ಯಾಯಾಲಯವು ಉಲ್ಲೇಖಿಸಿದೆ.
ಜಯರಾಜ್ ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳಿತ್ತು. ಆದರೂ, ಅವರ ಸಾವು ಆ ಕಾಯಿಲೆಯಿಂದ ಸಂಭವಿಸಿದೆ ಎಂದು ಹೇಳಲು ಸಾಧ್ಯವಿಲ್ಲ ಮತ್ತು ವಾಸ್ತವವಾಗಿ ಪೊಲೀಸರ ಕೈಯಿಂದ ಅನುಭವಿಸಿದ ನಿರಂತರ ಹಲ್ಲೆ ಹಾಗೂ ಗಾಯಗಳೇ ಸಾವಿಗೆ ಕಾರಣ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮೂಲಕ, ಇದು ಕೊಲೆ ಪ್ರಕರಣವೆಂದು ನ್ಯಾಯಾಲಯವು ತೀರ್ಮಾನಿಸಿ, ಒಂಬತ್ತು ಪೊಲೀಸ್ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ.
Courtesy : livelaw.in


