Homeಕರ್ನಾಟಕನೆಲದ ಸೌಹಾರ್ದಕ್ಕೆ ಸರಣಿ ಕೊಲೆಗಳ ಕೊಡಲಿಯೇಟು; ಸಾಂಸ್ಕೃತಿಕ ಕ್ರಾಂತಿಗೆ ಓಗೊಡಬೇಕಿದೆ ಯುವಜನತೆ

ನೆಲದ ಸೌಹಾರ್ದಕ್ಕೆ ಸರಣಿ ಕೊಲೆಗಳ ಕೊಡಲಿಯೇಟು; ಸಾಂಸ್ಕೃತಿಕ ಕ್ರಾಂತಿಗೆ ಓಗೊಡಬೇಕಿದೆ ಯುವಜನತೆ

- Advertisement -
- Advertisement -

ಮಂಗಳೂರಿನ ಮಲ್ಲೂರು ಜುಮಾದಿ ದೈವದ ದೈವಸ್ಥಾನಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಬೇಟಿ ನೀಡಿದಾಗ ದೈವ ಅವರಿಗೆ ಹೂವಿನ ಹಾರವನ್ನು ಹಾಕಿ, ಪ್ರಸಾದ ನೀಡಿ ಗೌರವಿಸುತ್ತದೆ. ಇದಕ್ಕೆ ಕೆಲವು ಯುವಕರು ಆಕ್ಷೇಪ ಎತ್ತಿದಾಗ ದೈವಕ್ಕೆ ಕೋಪ ಬರುತ್ತದೆ. ದೈವ ತನ್ನ ಕಣ್ಣಲ್ಲಿ ಎಲ್ಲಾ ಧರ್ಮ, ಜಾತಿಯವರೂ ಸಮಾನರು ಎನ್ನುತ್ತಾ ತನ್ನ ಕೈಯಲ್ಲಿದ್ದ ಆಯುಧ ಕಡ್ಸಲೆಯನ್ನು ನೆಲಕ್ಕೆ ಮೂರು ಬಾರಿ ಊರಿ ಆಕ್ರೋಶ ವ್ಯಕ್ತಪಡಿಸುತ್ತದೆ.

ತುಳುನಾಡು ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣ ಕನ್ನಡವನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿನ ಶಾಲಾ ಕಾಲೇಜುಗಳು ಎಸ್.ಎಸ್.ಎಲ್.ಸಿ, ಪಿಯುಸಿಗಳಲ್ಲಿ ರಾಜ್ಯದಲ್ಲಿ ಟಾಪ್ ರ್‍ಯಾಂಕ್ ಬರುವ ಕಾರಣಕ್ಕಾಗಿ ಅಲ್ಲ ಅಥವಾ ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಕಾರಣಕ್ಕೂ ಅಲ್ಲ. ತುಳುನಾಡು ನೂರಾರು ಬುದ್ಧಿವಂತರಿಗೆ, ವಿದ್ವಾಂಸರಿಗೆ, ಸಾಹಿತಿಗಳಿಗೆ ಜನ್ಮ ನೀಡಿದೆ. ಕುದ್ಮಲ್ ರಂಗರಾವ್, ಪಂಜೆ ಮಂಗೇಶರಾಯರು, ಮುದ್ದಣ್ಣ, ಕುಶಿ ಹರಿದಾಸ ಭಟ್ಟರು, ಗೋವಿಂದ ಪೈ, ಪಾದೂರು ಗುರುರಾಜ ಭಟ್ಟರು, ಬಿಎ ಸಾಲೆತ್ತೂರು ಹೀಗೆ ಸಾಲುಸಾಲು ವಿದ್ವಾಂಸರು ಈ ನೆಲವನ್ನು ಬುದ್ಧಿವಂತರ ನೆಲವಾಗಿಸಲು ಕೆಲಸ ಮಾಡಿದ್ದಾರೆ. ಪ್ರಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರ ಕಾರ್ಯಕ್ಷೇತ್ರ ತುಳುನಾಡೇ ಆಗಿತ್ತು.

ಮೊಯಿದ್ದೀನ್ ಬಾವ

ಆಳುವ ಧನಿಕ ವರ್ಗವನ್ನು ತೊಡೆತಟ್ಟಿ ಮಟ್ಟ ಹಾಕಿದ ಅವಳಿ ವೀರರಾದ ಕೋಟಿ-ಚೆನ್ನಯರು, ತನ್ನ ಗಂಡನನ್ನು ತಿರಸ್ಕರಿಸಿ ವಿಚ್ಛೇದನೆಗೊಂಡು ಪ್ರತಿಭಟಿಸಿದ ಅಕ್ಕೆರಸು ಸಿರಿ, ತನ್ನ ಊರಿನ ರಕ್ಷಣೆಗಾಗಿ ಪ್ರಾಣವನ್ನು ನೀಡಿದ ಮಮ್ಮಾಲಿ ಬ್ಯಾರಿ- ಇಂತಹ ಶೂರರಿಂದ ಹಿಡಿದು 1834ರಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ದ ದಂಡು ಕಟ್ಟಿ ಹೋರಾಡಿ, ಪ್ರಾಣ ನೀಡಿ ಮಂಗಳೂರನ್ನು ಸ್ವತಂತ್ರಗೊಳಿಸಿದ ಕಲ್ಯಾಣಸ್ವಾಮಿ, ಗುಡ್ಡೆಮನೆ ಅಪ್ಪಯ್ಯ ಗೌಡ, ಕೆದಂಬಾಡಿ ರಾಮೇಗೌಡ, ಚೌಟ ಅರಸರು, ಬಂಗಾಡಿಯ ಅರಸು ಲಕ್ಷ್ಮಪ್ಪ ಬಂಗರಸ ಮುಂತಾದವರ ಕ್ರಾಂತಿಯ ನೆತ್ತರು ಈ ನೆಲದಲ್ಲಿ ಹರಿದಿದೆ.

ಇಲ್ಲಿನ ದೈವಗಳು “ಪತ್ತ್ ಜನ ಕೂಡಿನಲ್ಪ ಮುತ್ತುಂಡು ಪನ್ಪಿ ಕಟ್ಟ್!” – ಹತ್ತು ಜನ ಕೂಡಿದ ಸ್ಥಳದಲ್ಲಿ ಮುತ್ತುಂಟು ಎಂದು ನುಡಿದು ಎಲ್ಲರನ್ನೂ ಒಳಗೊಂಡು ಸಲಹುತ್ತವೆ. ದೈವದ ಮುಂದೆ ಭಿನ್ನ ನಂಬಿಕೆಯ ಮೊಯಿದೀನ್ ಬಾವನನ್ನೂ ಗೌರವಿಸುವುದು ತುಳುನಾಡಿನ ಮಣ್ಣಿನ ಹಿರಿಮೆ. ಉದ್ಯಾವರದ ಅರಸು ದೈವಗಳು ಉದ್ಯಾವರದ ಮಾಡದಿಂದ ಪಕ್ಕದ ಮಸೀದಿಗೆ ಹೋಗಿ ಸೇಕಮಾರನನ್ನು ಭೇಟಿ ಮಾಡುವಾಗ ಮುಸ್ಲಿಂ ಬಾಂಧವರು ದೈವಗಳಿಗೆ ಗೌರವ ನೀಡುತ್ತಾರೆ.

ಇಂತಹ ತುಳುನಾಡು ದಿನೇದಿನೇ ತನ್ನ ಪರಂಪರೆ ಕಟ್ಟಿಕೊಟ್ಟ ಸೌಹಾರ್ದತೆಯ ಕೊಂಡಿಗಳನ್ನು ಕಳಚಿಕೊಂಡು ಪತನಮುಖಿಯಾಗುತ್ತಿರುವ ಸಂದರ್ಭದಲ್ಲಿ ಇಂದು ಬದುಕಿದ್ದೇವೆ. ಚುನಾವಣೆಗಳು ಸನ್ನಿಹಿತವಾಗುತ್ತಿದ್ದಂತೆ ಹಿಂದೂ-ಮುಸ್ಲಿಂ ಯುವಕರ ಹೆಣಗಳು ಬೀಳುತ್ತಿವೆ. ಒಂದು ಕಿಡಿಗೆ ಸ್ಫೋಟಗೊಳ್ಳಬಹುದಾದ ಕೋಮುದ್ವೇಷ ಇಂದು ತುಳುನಾಡಿನ ಮೂಲೆಮೂಲೆಗಳಲ್ಲಿ ಬೇರೂರಿದೆ.

ಕನ್ನಡದ ಮೊದಲ ಪತ್ರಿಕೆ ’ಮಂಗಳೂರ ಸಮಾಚಾರ’ದ (1844) ಹದಿಮೂರನೇ ಸಂಚಿಕೆಯಲ್ಲಿ ಇರುವ ಮತಾಂತರದ ಒಂದು ವರದಿ ಅತ್ಯಂತ ಮುಖ್ಯವಾದದ್ದು. ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದ ಮೂವರು ಬ್ರಾಹ್ಮಣ ವಿದ್ಯಾರ್ಥಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ವಾಗುತ್ತಾರೆ. ಇದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗುತ್ತದೆ ಮತ್ತು ಮತಾಂತರ ಹೊಂದಿದ ವಿದ್ಯಾರ್ಥಿಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಬರಲು ಮನವೊಲಿಸಿದರೂ ಸಾಧ್ಯವಾಗುವುದಿಲ್ಲ.

ಇದರಿಂದ ಕ್ರೈಸ್ತರ ಹಾಗೂ ಮುಸಲ್ಮಾನರ ನಡುವೆ ಒಡಕುಂಟು ಮಾಡಲು ಮುಸಲ್ಮಾನ ಬ್ಯಾರಿಗಳ ಕೇರಿಯಲ್ಲಿ ಹಂದಿಯನ್ನು ಕೊಂದು ಹಾಕಲಾಗುತ್ತದೆ. ಇದನ್ನು ಮಂಗಳೂರ ಸಮಾಚಾರ ಹೀಗೆ ವರದಿ ಮಾಡಿದೆ.

“ಈ ದುಷ್ಟ ಜನರು ಊರಲ್ಲಿ ಏನಾದರೂ ಗುಬಾರು ಎಬ್ಬಿಸಬೇಕೆಂಬ ಉಮೇದಿನಿಂದ ಮುಸಲ್ಮಾನದವರಿಗೆ ಅತೀ ವಿರೋಧವಾಗಿರುವಂಥ ಹಂದಿಯನ್ನು ರಾತ್ರಿಯಲ್ಲಿ ಕೊಂದು ಹಾಕಿದರು. ಆಗ ಜಿಲ್ಲಾ ಮೆಜಿಸ್ಟ್ರೇಟ್ ಸಾಹೇಬನು ಕೂಡಲೇ ಈ ರೀತಿಯ ಪ್ರಕಟನೆಯನ್ನು ಹೊರಡಿಸಿದನು. ಮುಸಲ್ಮಾನ ಜನರಿಗೆ ಚಾಳಿಸುವ ಇರ್ಯಾದೆಯಿಂದ ಈ ಕೆಟ್ಟ ಕೃತ್ಯ ಮಾಡಿರುತ್ತಾರೆ ಎಂಬುದರಲ್ಲಿ ಏನೂ ಅನುಮಾನವಿಲ್ಲ. ಈ ವಿಷಯದಲ್ಲಿ ಕೂಲಂಕಷ ತನಿಖೆ ಕೂಡ್ಲೆ ಮಾಡಲಾದಿತ್ತು.”

“ಈ ದುಷ್ಕೃತ್ಯ ನಡೆಸಿದ ವಾ ತಲಾಕಿಗೆ ಸಾಕಾಗುವ ವರ್ತಮಾನ ಯಾರಾದರೂ ಕೊಟ್ಟಿದ್ದಾದರೆ, ಅಂಥ ಮನುಷ್ಯನಿಗೆ ಐದು ನೂರು ರೂಪಾಯಿ ಕೊಡಲಾದೀತು. ಆದುದರಿಂದ ಮುಸಲ್ಮಾನ ಯಾವುತ್ತೂ ಜನರು ದುರಾಲೋಚನೆ ಜನರ ದಗೆ ಬೋಧನೆಗೆ ಒಳಗಾಗದೆ ನಿಧಾನದಲ್ಲಿ ಇರಬೇಕು ಎಂತ ಅಪೇಕ್ಷಿಸುತ್ತೇವೆ, ಈ ಪ್ರಕಾರ ಸಮಾಧಾನ ಮಾಡದೆ ತಂಟೆ ಏನಾದರೂ ನಡೆಸಿದ್ದಾದರೆ ವ್ಯರ್ಥ ಬಹಳ ದಣಿಕೊಳ್ಳಬೇಕಾದೀತು.”

“ಮೆಜಿಸ್ಟ್ರೇಟ್ ಬ್ಲೆಅರ್ ಸಾಹೇಬರು ಅಷ್ಟಕ್ಕೆ ಮುಗಿಸದೆ, ಮುಸಲ್ಮಾನರ ಹಾಗೂ ಮಾಪಿಳ್ಳೆಯವರ ಮುಖಂಡರನ್ನು ಕರೆದು, ಅಪರಾಧಿಯನ್ನು ಎಂತಿದ್ದರೂ ಹುಡುಕುವೂದಾಗಿಯೂ, ಆ ಕೆರೆಯನ್ನೂ ಸರಕಾರದ ವದಿಯಿಂದ, ಸಾಪು ಮಾಡಿಸಿ ಕೊಡುವುದಾಗಿಯೂ ಆಶ್ವಾಸನವಿತ್ತರು.”

ಇದೇ ತಂತ್ರ ಸ್ವಾತಂತ್ರೋತ್ತರ ತುಳುನಾಡಿನಲ್ಲಿಯೂ ನಡೆಯುತ್ತಿದೆ. ಕಾಟಿಪಳ್ಳದ ಕೋಮು ಗಲಭೆಯಲ್ಲಿ ಸತ್ತ ಉದಯ ಪೂಚಾರಿಯಿಂದ ಹಿಡಿದು ಇದೇ ತಿಂಗಳು ಕೊಲೆಯಾದ ಪ್ರವೀಣ್‌ವರೆಗೆ ಕೊಮುಗಲಭೆಗಳಲ್ಲಿ ಸತ್ತ ಬಹುತೇಕರು ಬಿಲ್ಲವರು. ಬಿಲ್ಲವರು ಶೌರ್ಯಕ್ಕೆ ಹೆಸರಾದವರು. ಬಹುಸಂಖ್ಯಾತರಾಗಿರುವ ಇವರನ್ನು ಬ್ಯಾರಿಗಳ ವಿರುದ್ಧ ಎತ್ತಿಕಟ್ಟಿದರೆ ಸುಲಭವಾಗಿ ಕೋಮುಗಲ ಭೆಯನ್ನು ಹುಟ್ಟಿಸಬಹುದು ಎಂಬ ತಂತ್ರ 1844ರಲ್ಲಿ ಮಂಗಳೂರ ಸಮಾಚಾರದಲ್ಲಿ ವರದಿಯಾದ ತಂತ್ರವೇ ಆಗಿದೆ.

ದಕ್ಷಿಣ ಕನ್ನಡದಲ್ಲಿ ದೀರ್ಘ ಕಾಲ ವರದಿ ಮಾಡಿರುವ ಪತ್ರಕರ್ತ ನವೀನ್ ಸೂರಿಂಜೆ ತಮ್ಮದೊಂದು ಬರಹದಲ್ಲಿ ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ. ’ಡಿಸೆಂಬರ್ 1, 2006ರಲ್ಲಿ ನಡೆದ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಸಂದರ್ಭದಲ್ಲಿ ನಾಗರಾಜ ಶೆಟ್ಟಿಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಶವದ ಮೆರವಣಿಗೆ ಮಾಡುವುದಕ್ಕೆ ಮಂಗಳೂರಿನ ಎಸ್ಪಿಯಾಗಿದ್ದ ದಯಾನಂದರವರು ನಿಷೇಧ ಹೇರಿದ್ದರು. ಆದರೆ ಇದನ್ನು ಲೆಕ್ಕಿಸದೆ ಮೆರವಣಿಗೆ ನಡೆಸಲಾಯಿತು. ಶವಯಾತ್ರೆ ಸುರತ್ಕಲ್ ದಾಟಿ ಮೂಲ್ಕಿಯನ್ನು ಪ್ರವೇಶಿಸುವಾಗ ಜನಸಂಖ್ಯೆ ಹೆಚ್ಚಾಯಿತು. ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಯಿತು. ಜನರು ಉದ್ವಿಗ್ನಗೊಂಡಿದ್ದರು. ಈ ಮಧ್ಯೆ ದಿನೇಶ್ ಪೂಜಾರಿ ಮತ್ತು ಪ್ರೇಮ್ ಕೋಟ್ಯಾನ್ ಎಂಬ ಬಿಲ್ಲವ ಹುಡುಗರ ಮೇಲೆ ಎಸ್ಪಿಯವರ ಗನ್ ಮ್ಯಾನ್ ಅರುಣ್ ಆಳ್ವ ಗುಂಡು ಹಾರಿಸಿದರು. ಒಂದು ಶವಯಾತ್ರೆಯಲ್ಲಿ ಇನ್ನೆರಡು ಶವಗಳು ಉದುರಿದವು. ಆದರೆ ಜನರು ಸುಖಾನಂದ ಶೆಟ್ಟಿಯನ್ನು ನೆನೆಸಿಕೊಳ್ಳುವಂತೆ ಈ ಇಬ್ಬರು ಬಿಲ್ಲವ ಹುಡುಗರನ್ನು ನೆನಸಿಕೊಳ್ಳುವುದಿಲ್ಲ.

ಪ್ರವೀಣ್ ಹತ್ಯೆಯ ಸಂದರ್ಭದಲ್ಲಿ ಮುಖ್ಯವಾಗಿ ಎರಡು ಚರ್ಚೆಗಳು ನಡೆದವು.

1. ಕಾಂಗ್ರೆಸ್ ಸರ್ಕಾರದಲ್ಲಿ ನೆಡೆಯುತ್ತಿದ್ದ ಸಂಘಪರಿವಾರದ ಹುಡುಗರ ಹತ್ಯೆಯನ್ನೇ ಬಂಡವಾಳವಾಗಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯ ಬಗ್ಗೆ ಹಿಂದುತ್ವದ ಹುಡುಗರಲ್ಲಿ ವ್ಯಕ್ತವಾದ ಆಕ್ರೋಶ.

2. ಬಿಲ್ಲವ ಹಾಗೂ ಇತರ ಹಿಂದುಳಿದ ಸಮುದಾಯಗಳ ಹುಡುಗರನ್ನು ಕೋಮುಗಲಭೆಗೆ ಬಳಸಿಕೊಂಡು ಅವರ ಸಾವನ್ನೇ ಮತ್ತೆಮತ್ತೆ ಬಂಡವಾಳವಾಗಿಸಿಕೊಳ್ಳುತ್ತಿರುವ ಬಗ್ಗೆ ಆ ಸಮುದಾಯಗಳಲ್ಲಿ ಎದ್ದಿರುವ ಅಸಹನೆ.

ಪ್ರವೀಣ್ ಅವರ ಶವಸಂಸ್ಕಾರದ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಇತರ ಬಿಜೆಪಿ ಮುಖಂಡರಿಗೆ ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಒಡ್ಡಿರುವ ಪ್ರತಿರೋಧ ಹಾಗೂ ಇದರ ನಂತರ ನಡೆಯುತ್ತಿರುವ ಸಾಲುಸಾಲು ರಾಜೀನಾಮೆಗಳಿಂದ ಬಿಜೆಪಿ ಕಂಗೆಟ್ಟಿದೆ. ಆದರೆ ಇದನ್ನು ಶಮನ ಮಾಡಿಕೊಳ್ಳುವ ಸಲುವಾಗಿ, ಕಾಂಗ್ರೆಸ್, ಎಡಪಕ್ಷಗಳು ಹಾಗೂ ಬುದ್ಧಿಜೀವಿಗಳು ಬಿಜೆಪಿಯ ಒಗ್ಗಟ್ಟನ್ನು ಮುರಿಯಲು ತಂತ್ರ ಮಾಡುತ್ತಿದ್ದಾರೆ ಎಂಬ ನರೆಟಿವ್ ಹಬ್ಬಿಸಲಾಯಿತು.
ಆದರೆ ಪದೇಪದೇ ಬಿಲ್ಲವ ಯುವಕರೇ ಕೋಮುಗಲಭೆಗಳಿಗೆ ತುತ್ತಾಗುತ್ತಿರುವ ಬಗ್ಗೆ ಬಿಲ್ಲವ ಸಮುದಾಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಗೋಚರಿಸುತ್ತದೆ. ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜೀತ್ ಸುರತ್ಕಲ್ ಮೊದಲಾದ ಹಿಂದುತ್ವದ ನಾಯಕರು ಮೈತುಂಬಾ ಕೇಸು ದಾಖಲಿಸಿಕೊಂಡು ಬಿಜೆಪಿ ಹಾಗೂ ಹಿಂದುತ್ವದ ಚಟುವಟಿಕೆಗಳಲ್ಲಿಯೇ ಮೂಲೆಗುಂಪಾಗಿದ್ದಾರೆ. ಸ್ವತಃ ಸತ್ಯಜೀತ್ ಸುರತ್ಕಲ್ ತಮ್ಮ ಒಂದು ಸಂದರ್ಶನದಲ್ಲಿ ಬಿಜೆಪಿ ತನ್ನ ರಾಜಕೀಯ ತಂತ್ರಗಳ ಅಂಗವಾಗಿ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐಗಳಿಗೆ ಹಣ ನೀಡಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಈ ನೇರಾನೇರ ಬಿಜೆಪಿ ಮೇಲಿನ ಆರೋಪಗಳ ಯಾವ ಮಟ್ಟಕ್ಕೆ ಬೆಳೆದಿವೆಯೆಂದರೆ ಈಗ ಬಿಜೆಪಿ ಸ್ವತಃ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐಗಳನ್ನು ಬೆಳೆಸಿದೆ ಎಂಬ ಚರ್ಚೆ ಕೂಡ ಬಿರುಸಾಗಿ ನಡೆಯುತ್ತಿದೆ. ಈ ಸಂಘಟನೆಗಳ ಮಧ್ಯೆ ಯಾವುದೇ ನೇರ ಸಂಪರ್ಕ ಇಲ್ಲವೆಂದೇ ಭಾವಿಸಿದರೂ ಹಿಂದುತ್ವವಾದಿ ಸಂಘಟನೆಗಳು ಹಾಗೂ ಪಿ.ಎಫ್.ಐನಂತಹ ಮುಸ್ಲಿಂ ಸಂಘಟನೆಗಳ ವೈರತ್ವ ಮತ್ತು ಘರ್ಷಣೆಯಿಂದ ಬಡ ಹಿಂದೂ ಹಾಗೂ ಮುಸಲ್ಮಾನ ಯುವಕರು ಬೀದಿ ಹೆಣಗಳಾಗುತ್ತಿರುವುದಂತೂ ಸತ್ಯ. ಇದರ ಮುಂದುವರಿದ ಭಾಗವೆಂಬಂತೆ ಒಂದು ಕೊಲೆಗೆ ಎರಡು ಕೊಲೆ ಎಂಬ ಅಮಾನವೀಯ ನಡೆಯನ್ನೂ ಇವು ನಡೆಸುತ್ತಿವೆ. ಈಗ ಹಿಂದುತ್ವವನ್ನು ಪೋಷಿಸಿ ಬೆಳೆಸುವ ಉಮೇದಿನಲ್ಲಿರುವ ಸರ್ಕಾರ ಅಧಿಕಾರದಲ್ಲಿರುವುದರಿಂದ- ಹಿಂದುತ್ವವನ್ನು ಪ್ರತಿಪಾದಿಸುವ ಸಂಘಟನೆಗಳಿಗೆ ಪರೋಕ್ಷ ಬೆಂಬಲ ನೀಡುವ, ಸಂವಿಧಾನದ ತತ್ವಾದರ್ಶಗಳು ಹಾಗೂ ನೆಲದ ಕಾನೂನುಗಳನ್ನು ಗಾಳಿಗೆ ತೂರಿ ಅಂತಹ ಸಂಘಟನೆಗಳನ್ನು ಓಲೈಸಿ ತುಷ್ಠೀಕರಿಸುವ ಕೆಲಸಕ್ಕೆ ನಿಂತಿರುವದರಿಂದ ಸಂಘರ್ಷಗಳು ತಾರಕಕ್ಕೇರುತ್ತಿವೆ.

ತುಳುನಾಡಿನ ಭವಿಷ್ಯವೇನು?

ಕಳೆದ ಒಂದು ದಶಕದಿಂದ ತುಳುನಾಡು ಪಥನಮುಖಿ ಲಕ್ಷಣಗಳನ್ನು ತೋರಿಸುತ್ತಿದೆ. ಇಲ್ಲಿಂದ ಆರಂಭವಾಗುವ ಕೋಮು ಸಂಘರ್ಷ ಇಡೀ ಕರ್ನಾಟಕವನ್ನು ವ್ಯಾಪಿಸಲು ಆರಂಭವಾಗಿದೆ. ತುಳುನಾಡಿಗೆ ಎಷ್ಟೇ ಹೋರಾಟದ ಚರಿತ್ರೆ ಇದ್ದರೂ ವಚನ ಚಳುವಳಿಯಂತಹ ಒಂದು ಪರಿಣಾಮಕಾರಿಯಾದ ಕ್ರಾಂತಿ ಆ ನೆಲದಲ್ಲಿ ನಡೆದಿಲ್ಲ. ವಿಷಕಾರಿಯಾದ ಚಿಂತನೆಯನ್ನು, ಜಾತೀವಾದವನ್ನು, ಕೋಮುವಾದವನ್ನು ಪ್ರಶ್ನಿಸುವ ಕ್ರಾಂತಿಕಾರಿ ನಡೆಗಳು ತುಳುವಿನ ಸಂಸ್ಕೃತಿಯಲ್ಲಿ ಬೆಳೆದುಬಂದಿಲ್ಲ. ಬಹುಶಃ ಈ ಕಾರಣದಿಂದಾಗಿ ಕೋಮುವಾದದ ಬೀಜ ಈ ನೆಲದಲ್ಲಿ ಸಮೃದ್ಧವಾಗಿ ಬೆಳೆಯಿತು ಮತ್ತಿಂದು ಫಲನೀಡುವ ಮರವಾಗಿದೆ.

ತುಳುನಾಡಿಗೆ ಇದ್ದ ಒಂದು ಬೌದ್ಧಿಕ ಪರಂಪರೆ ಈ ಕೋಮುವಾದದಿಂದಾಗಿ ನಶಿಸಿ ಹೋಗುತ್ತಿದೆ. ಕಳೆದ ಒಂದು ದಶಕಗಳಿಂದೀಚೆಗೆ ತುಳುನಾಡಿನಲ್ಲಿ ಒಂದೊಳ್ಳೆ ಗಂಭೀರ ಎನ್ನಬಹುದಾದ ಅಧ್ಯಯನ ಅಥವಾ ಚರ್ಚೆ ನಡೆಯುತ್ತಿಲ್ಲ. ಐದಾರು ದಶಕಗಳಿಂದ ಹೆಚ್ಚೆಚ್ಚು ವಿದ್ವಾಂಸರನ್ನು ಸೃಷ್ಟಿ ಮಾಡುವಲ್ಲಿ ತುಳುನಾಡು ಸೋತಿದೆ. ಇದರ ನೇರ ಹೊಣೆಯನ್ನು ಹಿಂದುತ್ವದ ಚಟುವಟಿಕೆಗಳು ಹೊರುತ್ತವೆ.

ಸದ್ಯ ಕೋಮುವಾದವನ್ನು ಎದುರಿಸಲು ಪ್ರಜ್ಞಾವಂತ ತುಳುವರು ತಮ್ಮ ಪರಂಪರೆ, ಸಂಸ್ಕೃತಿಯನ್ನೇ ಆಯುಧವಾಗಿ ಬಳಸುತ್ತಿದ್ದಾರೆ. ದೈವದ ಕಣ್ಣಲ್ಲಿ ಎಲ್ಲಾ ಧರ್ಮದವರೂ ಒಂದೇ ಎಂದಾದರೆ ಕೋಮುದ್ವೇಷ ದೈವಗಳಿಗೆ ಮಾಡಿದ ಅವಮಾನ ಎಂದೇ ಬಗೆಯಬೇಕಾಗುತ್ತದೆ. ತುಳುನಾಡಿನ ದೈವಗಳಿಗೆ ಮಸೀದಿಗಳಲ್ಲಿ ಗೌರವ ಸಿಗುತ್ತದೆ, ಬೊಬ್ಬರ್ಯ, ಆಲಿಭೂತ ಮೊದಲಾದ ಮುಸ್ಲಿಂ ಮೂಲದ ದೈವಗಳನ್ನು ಹಿಂದೂಗಳು ಆರಾಧಿಸುತ್ತಾರೆ. ಜುಮಾದಿಗೆ ಮುಸಲ್ಮಾನರೂ ಹರಕೆ ಹೊರುತ್ತಾರೆ. ಹೀಗೆ ಸಾಲುಸಾಲು ಸೌಹಾರ್ದತೆಯ ಕಥನಗಳು ತುಳುನಾಡನ್ನು ಉಳಿಸಿವೆ. ಕೋಮುವಾದವನ್ನು ಎದುರಿಸಲು ಸೌಹಾರ್ದತೆಯ ಗುರಾಣಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಿಡಿದು ಬಳಸಬೇಕಿದೆ.

ಆದರೆ ಕೋಮುವಾದಿ ಶಕ್ತಿಗಳು ಇದಕ್ಕೂ ಒಂದು ಹೆಜ್ಜೆ ಮುಂದೆಹೋಗಿವೆ. ಯಾವ ಸಂಕೋಚವೂ ಇಲ್ಲದೆ ನಿರ್ಭಯವಾಗಿ ತುಳುನಾಡಿನ ಕಥನಗಳನ್ನು ತಿರುಚಿ ದ್ವೇಷದ ಕಥನಗಳನ್ನು ಹರಡುತ್ತಿದ್ದಾರೆ. ಓರ್ವ ವೈದಿಕ ತಂತ್ರಿ ಬೊಬ್ಬರ್ಯನನ್ನು ಮಹಾಭಾರತದ ಅರ್ಜುನನ ಮಗ ಬಬ್ರುವಾಹನ ಎಂದು ಕರೆದು ಸುಳ್ಳು ಕತೆಗಳನ್ನು ಕಟ್ಟಿದ. ಇಂತಹ ತಂತ್ರಗಳು ಮುಂದೆ ಹೆಚ್ಚುತ್ತಲೇ ಹೋಗುತ್ತವೆ. ಇಂತಹ ತಂತ್ರದಿಂದ ನಿಧಾನವಾಗಿ ಬಹುಮುಖಿ ಸಂಸ್ಕೃತಿಯ ತುಳುನಾಡು ಏಕರೂಪದ ಹಿಂದುತ್ವದ ಶಕ್ತಿಗಳ ಮೂಲಕ ನಾಶವಾಗುತ್ತಾ ಹೋಗುತ್ತದೆ. ಇದಕ್ಕೆ ಪೂರಕವೆಂಬಂತೆ ಒಂದು ವರ್ಗದ ಎಲೀಟ್ ಮುಸಲ್ಮಾನ ಸಮುದಾಯದಿಂದ ಇಸ್ಲಾಂ ಕೋಮುವಾದ ರಾಜಕೀಯ ಭೂಮಿಕೆಯನ್ನು ಸಿದ್ಧಪಡಿಸಿಕೊಡುತ್ತದೆ.

ಇರುವುದು ಒಂದೇ ಮಾರ್ಗ. ತುಳುನಾಡಿನ ಎಲ್ಲಾ ಧರ್ಮದ ಪ್ರಜ್ಞಾವಂತ ಮನಸ್ಸುಗಳು ಒಂದಾಗಿ ಕೋಮುವಾದವನ್ನು ಎದುರಿಸುವುದು. ತುಳುನಾಡಿನ ಪ್ರತಿಯೊಬ್ಬ ಯುವಕನೂ ತನ್ನ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳಲು, ಸೃಜನಶೀಲವಾಗಿ ಯೋಚಿಸಿ ಸೌಹಾರ್ದದ ಭೂಮಿಕೆಗಳನ್ನು ಸಿದ್ಧಪಡಿಸುವುದು. ಇದಕ್ಕಾಗಿ ತುಳುನಾಡಿನ ಒಳಗಡೆ ಒಂದು ಸಾಂಸ್ಕೃತಿಕ ಕ್ರಾಂತಿಯೇ ನಡೆಯಬೇಕಿದೆ.

ಚರಣ್ ಐವರ್ನಾಡು

ಚರಣ್ ಐವರ್ನಾಡು
ಯುವ ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು ಇವರ ಬರವಣಿಗೆಯ ಕ್ಷೇತ್ರಗಳು.


ಇದನ್ನೂ ಓದಿ: “ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು…” ಸ್ವೀಕರಿಸಿದ ಪ್ರಮಾಣವಚನ ಮರೆತುಹೋಯಿತೇ ಮುಖ್ಯಮಂತ್ರಿಗಳಿಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...