ಸ್ಯಾಮ್ಸಂಗ್ ಇಂಡಿಯಾದ ಶ್ರೀಪೆರಂಬದೂರ್ ಘಟಕದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಸುತ್ತಿದ್ದ ಮುಷ್ಕರವನ್ನು ಕಾರ್ಮಿಕರು ಹಿಂಪಡೆದಿದ್ದಾರೆ ಎಂದು ತಮಿಳುನಾಡು ಸರ್ಕಾರದ ಕಾರ್ಮಿಕ ಇಲಾಖೆ ಅಕ್ಟೋಬರ್ 15 ಮಂಗಳವಾರ ಪ್ರಕಟಿಸಿದೆ.
ಕೆಲಸದ ಸ್ಥಳದ ವಾತಾವರಣ ಸುಧಾರಿಸಬೇಕು, ವೇತನ ಪರಿಷ್ಕರಣೆ ಮತ್ತು ಕಾರ್ಮಿಕ ಒಕ್ಕೂಟದ ನೋಂದಣಿಗೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ‘ಸ್ಯಾಮ್ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್’ (ಎಸ್ಐಡಬ್ಲ್ಯೂಯು) ಬ್ಯಾನರ್ ಅಡಿಯಲ್ಲಿ ಕಾರ್ಮಿಕರು ಪ್ರತಿಭಟಿಸುತ್ತಿದ್ದರು.
ಕಾರ್ಮಿಕರು ಮುಷ್ಕರವನ್ನು ಹಿಂಪಡೆದು ಕೆಲಸಕ್ಕೆ ಮರಳಲು ಒಪ್ಪಿಗೆ ನೀಡಿದ್ದಾರೆ ಎಂದು ಕಾರ್ಮಿಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. “ಕೆಲಸಕ್ಕೆ ಹಿಂದಿರುಗಿದ ನಂತರ, ಮುಷ್ಕರದಲ್ಲಿ ಭಾಗವಹಿಸಿದ್ದಕ್ಕಾಗಿ ಕಂಪನಿಯು ಕಾರ್ಮಿಕರನ್ನು ಗುರಿಯಾಗಿಸಬಾರದು. ಕಾರ್ಮಿಕರು ಕೂಡ ಕಂಪನಿಯೊಂದಿಗೆ ಸಹಕರಿಸಬೇಕು, ಕಂಪನಿಯ ಹಿತಾಸಕ್ತಿಗೆ ಹಾನಿಯುಂಟುಮಾಡುವ ಯಾವುದೇ ಕೃತ್ಯಗಳನ್ನು ಮಾಡಬಾರದು. ಸಂಧಾನ ಅಧಿಕಾರಿಯ ಮುಂದೆ ಕಾರ್ಮಿಕರು ಸಲ್ಲಿಸಿರುವ ಬೇಡಿಕೆಗಳ ಪಟ್ಟಿಗೆ ಕಂಪನಿಯ ಆಡಳಿತವು ಲಿಖಿತ ರೂಪದಲ್ಲಿ ಉತ್ತರ ಸಲ್ಲಿಸಬೇಕು ಎಂದು ಹೇಳಿದೆ.
“ಮಾತುಕತೆಗಳು ಉತ್ತಮವಾಗಿ ನಡೆದಿವೆ. ನಾವು ಅನುಕೂಲಕರ ಒಪ್ಪಂದಗಳಿಗೆ ಬಂದಿದ್ದೇವೆ. ನಾಳೆ ನಾವು ಕಾರ್ಮಿಕರೊಂದಿಗೆ ಕೌನ್ಸಿಲ್ ಸಭೆ ನಡೆಸಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇಂದಿನ ಸಭೆಯಲ್ಲಿ ಲೋಕಪಯೋಗಿ ಸಚಿವ ಇವಿ ವೇಲು, ಕಾರ್ಮಿಕ ಕಲ್ಯಾಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಿವಿ ಗಣೇಶನ್, ಕೈಗಾರಿಕಾ ಸಚಿವ ಟಿಆರ್ಬಿ ರಾಜಾ ಮತ್ತು ಎಂಎಸ್ಎಂಇ ಸಚಿವ ಟಿಎಂ ಅನ್ಬರಸನ್ ಉಪಸ್ಥಿತರಿದ್ದರು” ಎಂದು ಸಿಐಟಿಯು ಅಧ್ಯಕ್ಷ ಎ ಸೌಂದರರಾಜನ್ ತಿಳಿಸಿದ್ದಾರೆ.
ಮುಷ್ಕರ ನಿರತ ಕಾರ್ಮಿಕರು ಕೆಲಸಕ್ಕೆ ಮರಳುತ್ತಿರುವ ಬಗ್ಗೆ ಮಾತನಾಡಿರುವ ಸೌಂದರರಾಜನ್, ಅಕ್ಟೋಬರ್ 16ರ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬಂದರೆ, ಕಾರ್ಮಿಕರು ಮರುದಿನ ಕೆಲಸಕ್ಕೆ ಹಾಜರಾಗಲಿದ್ದಾರೆ. ನಮ್ಮೊಂದಿಗೆ ಮಾತನಾಡಲು ನಿರಾಕರಿಸಿದ್ದ ಸ್ಯಾಮ್ಸಂಗ್ ಕಂಪನಿ ಇಂದು ನಮ್ಮ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಿದ್ದು, ಸಚಿವರು ಮತ್ತು ರಾಜ್ಯ ಸರ್ಕಾರದ ಪ್ರಯತ್ನಗಳಿಂದಾಗಿ ಈ ಮಹತ್ವದ ಬೆಳವಣಿಗೆಯಾಗಿದೆ” ಎಂದಿದ್ದಾರೆ.
ಸೆಪ್ಟೆಂಬರ್ 9ರಿಂದ ಕೆಲಸ ಸ್ಥಗಿತಗೊಳಿಸಿದ್ದ ಕಾರ್ಮಿಕರು, ತಮ್ಮ ಒಕ್ಕೂಟ ‘ಸ್ಯಾಮ್ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್ (ಎಸ್ಐಡಬ್ಲ್ಯೂಯು) ಅನ್ನು ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಬೇಕು ಎಂಬ ಪ್ರಮುಖ ಬೇಡಿಕೆಯಿಟ್ಟಿದ್ದರು. ಸರ್ಕಾರ ಕಾನೂನಿನ ಪ್ರಕಾರ 45 ದಿನಗಳ ನಂತರವೂ ಒಕ್ಕೂಟವನ್ನು ನೋಂದಣಿ ಮಾಡದ ಕಾರಣ ಸಿಐಟಿಯು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ. ಸರ್ಕಾರದ ಮೂಲಗಳ ಪ್ರಕಾರ, ಒಕ್ಕೂಟದ ನೋಂದಣಿ ಶೀಘ್ರದಲ್ಲೇ ನಡೆಯಲಿದೆ.
ಈ ವರ್ಷದ ಜುಲೈನಲ್ಲಿ ಸ್ಯಾಮ್ಸಂಗ್ ಘಟಕದಲ್ಲಿ ಕೆಲಸ ಮಾಡುವ ಸುಮಾರು 1,700 ಉದ್ಯೋಗಿಗಳಲ್ಲಿ 1,500 ಉದ್ಯೋಗಿಗಳು ‘ಸ್ಯಾಮ್ಸಂಗ್ ಇಂಡಿಯಾ ಥೋಝಿಲಾಲರ್ ಸಂಗಮ್’ನ ಸದಸ್ಯರಾಗಲು ಸಹಿ ಹಾಕಿದ್ದರು. ಇದನ್ನು ಸ್ಯಾಮ್ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್ (SIWU)ಎಂದೂ ಕರೆಯಲಾಗುತ್ತದೆ. ಇದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಗೆ ಸಂಯೋಜಿತವಾಗಿದೆ. ತಮ್ಮ ಒಕ್ಕೂಟದ ನೋಂದಣಿಗಾಗಿ ಕಾರ್ಮಿಕರು ಜುಲೈ 25 ರಂದು ರಾಜ್ಯ ಕಾರ್ಮಿಕ ಇಲಾಖೆಗೆ ಆನ್ಲೈನ್ನಲ್ಲಿ ದಾಖಲೆಗಳನ್ನು ಸಲ್ಲಿಸಿದ್ದರು.
ಪ್ರತಿಭಟನೆಯ ಒಂದು ತಿಂಗಳ ನಂತರ, ಸ್ಯಾಮ್ಸಂಗ್ ಕೆಲವು ಉದ್ಯೋಗಿಗಳೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿತ್ತು. ಆದರೆ, ಅದನ್ನು ಸಿಐಟಿಯು ತಿರಸ್ಕರಿಸಿತ್ತು. “ಮುಷ್ಕರಕ್ಕೆ ಹಾಜರಾಗದ ಸುಮಾರು 200 ಮಂದಿಯನ್ನು ಆಯ್ಕೆ ಮಾಡಿ ಸೆಕ್ರೆಟರಿಯೇಟ್ಗೆ ಕರೆದೊಯ್ದು ಮೂವರು ಮಂತ್ರಿಗಳ ಮುಂದೆ ಕುಳಿತುಕೊಳ್ಳಲು ಹೇಳಿದ್ದಾರೆ. ಕಂಪನಿಯು ಕೆಲವು ನಿಯಮಗಳನ್ನು ನಿರ್ದೇಶಿಸಿದೆ. ಅದನ್ನೇ ಎಂಒಯು ಎಂದು ಕರೆಯುತ್ತಿದ್ದಾರೆ. ಆದ್ದರಿಂದ ಮುಷ್ಕರ ನಿರತ ಕಾರ್ಮಿಕರಿಗೂ ಆ ಎಂಒಯುಗೂ ಯಾವುದೇ ಸಂಬಂಧವಿಲ್ಲ. ಪ್ರತಿಭಟನೆ ಮುಂದುವರಿಯಲಿದೆ” ಎಂದು ಸಿಐಟಿಯು ತಿಳಿಸಿತ್ತು.
ಈ ಬೆಳವಣಿಗೆಯ ನಂತರ, ನೌಕರರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಇದರಿಂದಾಗಿ ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಯಿತು. ಮಧ್ಯರಾತ್ರಿಯ ಸಮಯದಲ್ಲಿ ಹಲವಾರು ಯೂನಿಯನ್ ಮುಖಂಡರನ್ನು ಬಂಧಿಸಲಾಯಿತು ಮತ್ತು ಪ್ರತಿಭಟನಾ ಸ್ಥಳದಲ್ಲಿದ್ದ ಪೆಂಡಾಲ್ ಅನ್ನು ತೆಗೆದುಹಾಕಲಾಯಿತು. ಕಾರ್ಮಿಕರಿಗೆ ಶಾಂತಿಯುತ ಪ್ರತಿಭಟನೆಗೆ ಹಕ್ಕಿದೆ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ ನಂತರವೂ ಪೊಲೀಸ್ ಸಿಬ್ಬಂದಿ ಕಾರ್ಮಿಕರನ್ನು ಬಂಧಿಸಿದ್ದರು. ಇದರ ವಿರುದ್ದ ಸಿಐಟಿಯು ಈಗಾಗಲೇ ನ್ಯಾಯಾಲಯಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ಒಟ್ಟಿನಲ್ಲಿ ಒಂದು ತಿಂಗಳ ಬಳಿಕ ಸರ್ಕಾರ ಮತ್ತು ಕಂಪನಿ ಕನಿಷ್ಠ ಪಕ್ಷ ಕಾರ್ಮಿಕರ ಬೇಡಿಕೆ ಅಳಿಸಲು ಮುಂದಾಗಿದೆ. ಕಾರ್ಮಿಕರ ಬೇಡಿಕೆಗೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರೆ ಪ್ರತಿಭಟನೆ ಅಂತ್ಯಗೊಳ್ಳಬಹುದು. ಪ್ರಸ್ತುತ ಸರ್ಕಾರ ಮುಷ್ಕರ ಕೈ ಬಿಟ್ಟಿದ್ದಾರೆ ಎಂದು ಘೋಷಣೆ ಮಾಡಿದೆ. ಆದರೆ, ಕಾರ್ಮಿಕರು ಇಂದು ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.
ಇದನ್ನೂ ಓದಿ : ವಯನಾಡ್ ಕ್ಷೇತ್ರದ ಉಪಚುನಾವಣೆ ಘೋಷಣೆ | ಪ್ರಿಯಾಂಕಾ ಸ್ಪರ್ಧೆಗೆ ಅಖಾಡ ರೆಡಿ


