Homeಮುಖಪುಟಇಂದು ಬಿ.ವಿ.ಕಾರಂತರ ಜನ್ಮದಿನ: 'ಭಾರತೀಯ ರಂಗಸಂಗೀತ ದಿನ'ವನ್ನಾಗಿ ಆಚರಿಸಲು ಆಗ್ರಹ

ಇಂದು ಬಿ.ವಿ.ಕಾರಂತರ ಜನ್ಮದಿನ: ‘ಭಾರತೀಯ ರಂಗಸಂಗೀತ ದಿನ’ವನ್ನಾಗಿ ಆಚರಿಸಲು ಆಗ್ರಹ

ಕಾರಂತರು, ಮಾತುಗಳನ್ನೂ ಕೂಡ ಸಂಗೀತದ ಚೌಕಟ್ಟಿಗೆ ಅಳವಡಿಸಿದರು. ಉದ್ಗಾರಗಳನ್ನೂ ಕೂಡ ಸಂಗೀತಕ್ಕೆ ಅಳವಡಿಸಿ, ಎಂಥವರೂ ಹಾಡುವಂತೆ ಮಾಡಿದರು. ಅವರು ಸಂಯೋಜಿಸಿದ ಹಾಡುಗಳನ್ನು ಕೇಳಿದರೆ ಅದು ಹಾಡು ಎನಿಸುವುದಿಲ್ಲ. ಆದರೂ ಅದರೊಳಗೆ ಸಂಗೀತದ ಎಲ್ಲಾ ಅಂಶಗಳೂ ಅಡಕವಾಗಿರುತ್ತವೆ- ಚೀನಿ

- Advertisement -
- Advertisement -

ರಂಗಭೀಷ್ಮ ಎಂದೇ ಪ್ರಖ್ಯಾತವಾಗಿರುವ, ಭಾರತೀಯ ಮತ್ತು ಕನ್ನಡ ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣರಾದ ಬಿ.ವಿ.ಕಾರಂತರ ಜನ್ಮದಿನ ಇಂದು. ಈ ದಿನವನ್ನು “ಭಾರತೀಯ ರಂಗಸಂಗೀತ ದಿನ” ಎಂದು ಘೋಷಿಸಬೇಕೆಂದು ಮೈಸೂರು ರಂಗಾಯಣದ ಮುಂದಾಳತ್ವದಲ್ಲಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ.

ರಂಗಸಂಗೀತಕ್ಕೆ ಕಾರಂತರ ಕೊಡುಗೆ ಅನನ್ಯವಾದದ್ದು. ಭಾರತೀಯ ರಂಗಸಂಗೀತಕ್ಕೆ ಮಾಂತ್ರಿಕ ಸ್ಪರ್ಶ ನೀಡಿ, ಶಾಸ್ತ್ರೀಯ ಸಂಗೀತದ ಚೌಕಟ್ಟನ್ನು ಮೀರಿ “ಆನ್ವಯಿಕ ಸಂಗೀತ” ಎಂಬ ಹೊಸ ಪ್ರಕಾರವನ್ನೇ ಹುಟ್ಟುಹಾಕಿದರು. ಇದಕ್ಕೆ ಸಾಕ್ಷಿ ಇವರು ನಿರ್ದೇಶಿಸಿದ ನಾಟಕಗಳು.

ಕಾರಂತರು ನಿರ್ದೇಶಿಸಿರುವ ಎಲ್ಲಾ ನಾಟಕಗಳಿಗೂ ಸ್ವತಃ ತಾವೇ ಸಂಗೀತ ನಿರ್ದೇಶನವನ್ನೂ ಮಾಡುತ್ತಿದ್ದರು. ಕರ್ನಾಟಕದ ಮೈಸೂರಿನಿಂದ ಹಿಡಿದು ಮಧ್ಯಪ್ರದೇಶದ ಭೂಪಾಲ್, ಮುಂಬೈ, ದೆಹಲಿ ಹಾಗೂ ವಿದೇಶಗಳಲ್ಲಿಯೂ ಸಹ ರಂಗಭೂಮಿಯ ಕೆಲಸ ಮಾಡಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಮಕಾಲೀನ ರಾಜಕೀಯ ಸಂದರ್ಭಕ್ಕೆ ಸಿನೆಮಾ ಮತ್ತು ರಂಗಭೂಮಿಯ ಪ್ರತಿಕ್ರಿಯೆ: ಬಿ.ಸುರೇಶ್

1977-81ರ ಅವಧಿಯಲ್ಲಿ ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರೂ ಆಗಿದ್ದರು. ನಂತರ ಮೈಸೂರಿಗೆ ಬಂದು, 1989ರಲ್ಲಿ, ಸರ್ಕಾರದ ಅಧೀನದಲ್ಲಿ ರಂಗಾಯಣ ಎಂಬ ರೆಪರ್ಟರಿಯನ್ನು ಸ್ಥಾಪಿಸುವುದರೊಂದಿಗೆ ಕರ್ನಾಟಕದ ಆಧುನಿಕ ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದರು. ಹಾಗಾಗಿ ಪದ್ಮಶ್ರೀ ಬಿ.ವಿ.ಕಾರಂತರ ಜನ್ಮದಿನವನ್ನು “ಭಾರತೀಯ ರಂಗಸಂಗೀತ ದಿನ”ವನ್ನಾಗಿ ಆಚರಿಸಬೇಕೆಂದು ಮೈಸೂರು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅವರು ಪತ್ರಬರೆದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕಾರಂತರು, “ಏವಂ ಇಂದ್ರಜಿತ್, ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ, ಪಂಜರಶಾಲೆ, ಗೋಕುಲ ನಿರ್ಗಮನ, ಸತ್ತವರ ನೆರಳು ಸೇರಿ 52 ನಾಟಕಗಳ ನಿರ್ದೇಶನ ಮಾಡಿದ್ದಾರೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಚಲನಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಸ್ವತಃ ಚೋಮನದುಡಿ ಚಿತ್ರವನ್ನು ನಿರ್ದೇಶಿಸಿ ರಾಷ್ಟ್ರೀಯ ಸ್ವರ್ಣಪದಕ ಪ್ರಶಸ್ತಿಯನ್ನು ಪಡೆದಿದ್ದರು. ಹಂಸಗೀತೆ, ಚೋಮನದುಡಿ, ಆದಿಶಂಕರ, ಫಣಿಯಮ್ಮ ಸೇರಿದಂತೆ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಈ ಮಹತ್ತರ ಸಾಧನೆಗಾಗಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸರಕಾರದ ಪದ್ಮಶ್ರೀ, ಮಧ್ಯ ಪ್ರದೇಶದ ಕಾಳಿದಾಸ ಸಮ್ಮಾನ್, ರಾಜ್ಯ ಸರಕಾರದ ಗುಬ್ಬಿ ವೀರಣ್ಣ ಪ್ರಶಸ್ತಿಗಳು ಲಭಿಸಿವೆ.”

ರಂಗಸಂಗೀತದ ಕುರಿತಂತೆ ಕಾರಂತರ ಕೆಲವು ಮಾತುಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ.

ಭಾರತದ ಉದ್ದಗಲಕ್ಕೂ ಕಾರಂತರ ಆನ್ವಯಿಕ ಸಂಗೀತದ ಹೊಸ ಪ್ರಕಾರವನ್ನು ಅವರ ಶಿಷ್ಯರು ಮುಂದುವರಿಸಿದ್ದಾರೆ. ಕಾರಂತರ ಕೊನೆಯ ಕಾಲದವರೆಗೂ ಅವರ ಜೊತೆಗಿದ್ದ ಮತ್ತು ಅವರು ಸಂಗೀತ ನಿರ್ದೇಶನ ಮಾಡಿರುವ ಎಲ್ಲಾ ನಾಟಕಗಳಲ್ಲಿಯೂ ಅವರಿಗೆ ಸಹಾಯಕರಾಗಿದ್ದುಕೊಂಡಿದ್ದ ಮತ್ತು ಇಂದು ಸ್ವತಃ ಕರ್ನಾಟಕದ ಪ್ರಮುಖ ಸಂಗೀತ ನಿರ್ದೇಶಕರುಗಳಲ್ಲಿ ಒಬ್ಬರೆನಿಸಿರುವ ಶ್ರೀನಿವಾಸ್ ಭಟ್ (ಚೀನಿ)ರವರು ನಾನುಗೌರಿ.ಕಾಂನೊಂದಿಗೆ ಮಾತನಾಡಿ ಕಾರಂತರೊಂದಿಗಿನ ನೆನಪುಗಳನ್ನು ಹಂಚಿಕೊಂಡರು.

“ಭಾರತೀಯ ರಂಗ ಸಂಗೀತದ ಇತಿಹಾಸದಲ್ಲಿ ಕಾರಂತರ ಹೆಸರು ಯಾಕೆ ಪ್ರಮುಖ ಎಂದರೆ, ಕಾರಂತರು, ಮಾತುಗಳನ್ನೂ ಕೂಡ ಸಂಗೀತದ ಚೌಕಟ್ಟಿಗೆ ಅಳವಡಿಸಿದರು. ಉದ್ಗಾರಗಳನ್ನೂ ಕೂಡ ಸಂಗೀತಕ್ಕೆ ಅಳವಡಿಸಿ, ಎಂಥವರೂ ಹಾಡುವಂತೆ ಮಾಡಿದರು. ಅವರು ಸಂಯೋಜಿಸಿದ ಹಾಡುಗಳನ್ನು ಕೇಳಿದರೆ ಅದು ಹಾಡು ಎನಿಸುವುದಿಲ್ಲ. ಆದರೂ ಅದರೊಳಗೆ ಸಂಗೀತದ ಎಲ್ಲಾ ಅಂಶಗಳೂ ಅಡಕವಾಗಿರುತ್ತವೆ” ಎಂದು ಹೇಳಿದರು.

ಇದನ್ನೂ ಓದಿ: ಕನ್ನಡ್ ಸುದ್ದಿಗ್ ಏನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲ; ‘ರಸೋಕಿನ’ ತಂಡದಿಂದ ವಿಶಿಷ್ಟ ಪ್ರತಿರೋಧ

“ಕಾರಂತರು ತುಂಬಾ ಪ್ರಾಯೋಗಿಕವಾದ ಮನೋಭಾವವುಳ್ಳವರು. ನಾಟಕ ಮಾಡುವವರು ಮೊದಲು ಸಮಾಜದಲ್ಲಿ ಸಕಲೆಂಟು ಅನುಭವಗಳನ್ನೂ ಪಡೆದುಕೊಂಡಿರಬೇಕು, ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎನ್ನುತ್ತಿದ್ದರು. ನಿಜವಾದ ಪಾಠಶಾಲೆ ಸಮಾಜ ಎಂದು ನಟರನ್ನೆಲ್ಲಾ ಕ್ಷೇತ್ರಾನುಭವ ಪಡೆಯಲು ಕಳುಹಿಸುತ್ತಿದ್ದರು” ಎಂದು ಹೇಳಿದರು.

ಚೀನಿಯರವರು ಕಾರಂತರ ಬಗ್ಗೆ ಕೆಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಈ ವೀಡಿಯೋದಲ್ಲಿ ನೋಡಬಹುದು.

ಕಾರಂತರ ಶಿಷ್ಯ ಪರಂಪರೆಯಲ್ಲಿ ಕರ್ನಾಟಕದಲ್ಲಿರುವವರು ಇವರೊಬ್ಬರೇ. ಹಾಗಾಗಿ ಇಂದು ಸಂಜೆ ಮೈಸೂರಿನ ರಂಗಾಯಣದಲ್ಲಿ ಭಾರತೀಯ ರಂಗ ಸಂಗೀತ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಚೀನಿಯವರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.


ಇದನ್ನೂ ಓದಿ: ಬಾದಲ್ ಸರ್ಕಾರ್‌ರವರ ‘ಏವಂ ಇಂದ್ರಜಿತ್’: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...