Homeಮುಖಪುಟನಜತ್ ಓಝ್ಕಾಯಾನ ಆರು ಪದ್ಯಗಳು

ನಜತ್ ಓಝ್ಕಾಯಾನ ಆರು ಪದ್ಯಗಳು

- Advertisement -
- Advertisement -

1.ಪ್ರೇಮ ಹುಲಿಯ ಅವತಾರ

ಪ್ರೇಮ,
ಹುಲಿಯ ಅವತಾರ.
ಅಪರೂಪದ ಬೆಕ್ಕು, ಚೆಲುವಿನ ಬನಿ,
ಚರ್ಮದ ಕೆಳಗೆ ಹುರಿಗಟ್ಟಿರುವ
ಸ್ನಾಯುಗಳ ಮಾಯಗಾರ.
ಬದುಕು-ಸಾವಿನ ತಕ್ಕಡಿಯ
ತನ್ನ ನಿಷ್ಠುರ ದವಡೆಯಲ್ಲಿ ಸರಿದೂಗಿಸುವ
ಗಂಭೀರ ವ್ಯಾಪಾರಿ.

ಪ್ರೇಮ ಊಹಾತೀತ,
ಇನ್ನೇನು ಜಾಡು ಸಿಕ್ಕಿತು ಎನ್ನುವಾಗಲೇ
ಹೆಜ್ಜೆ ಅಳಿಸಿ ಹಾಕಿಬಿಡುವ ಚತುರ ಚೋರ
ಕಾಯುವ ನಾಟಕವಾಡುವ ವೇಷಧಾರಿ,
ಕೊಲ್ಲಲು ಹಾರುವ ತನಕ
ಸದ್ದು ಮಾಡದೇ ಸುಮ್ಮನಿದ್ದುಬಿಡುವ ತಂತ್ರಗಾರ,
ಎಂಥ ಕಾಡಿನ ಗರ್ಭದಲ್ಲೂ
ಬೇಟೆಯ ವಾಸನೆ
ಕ್ಷಣಮಾತ್ರದಲ್ಲಿ ಪತ್ತೆಹಚ್ಚಿಬಿಡುವ ಚಾಣಾಕ್ಷ ಗೂಢಚಾರ.

ಸ್ವರ್ಗ, ನರಕ ಎರಡರಲ್ಲೂ
ಪ್ರೇಮದ್ದೇ ಸರ್ಕಾರ.
ಬಿಸಿ ಉಸಿರಿನಿಂದ ಜೀವ ತುಂಬುತ್ತದೆಯಾದರೂ
ಗರ್ಜಿಸಿಯೇ ಅಸ್ತಿತ್ವ ಘೋಷಣೆ
ಹರಿತ ಉಗುರುಗಳ ನಡುವೆಯೇ ಲಲ್ಲೆವಾತು.

ಪ್ರೇಮ, ಭಯಂಕರ.
ಎಂಥ ಧೈರ್ಯಶಾಲಿಗಳೂ
ಒಂದರೆಘಳಿಗೆ ಬೆಚ್ಚಿ ಬೀಳುತ್ತಾರೆ.

ನನ್ನ ಮಾತು ಕೇಳಿ, ಈಗಲೇ ಮನೆಗೆ ಹೋಗಿ
ಆಯುಧಗಳನ್ನು ಹರಿತ ಮಾಡಿಟ್ಟುಕೊಳ್ಳಿ
ಇದು ಬೇಟೆಯಾಡಲೇ ಬೇಕಾದಂಥ ವ್ಯಾಘ್ರ.
(Love is a Tiger)

*****

2.ಹುಚ್ಚು ಹರಟೆ

ನನ್ನ ಪ್ರಾರ್ಥನೆ ಆಗಾಗ,
ತುಣುಕುಗಳಲ್ಲಿ, ದಿನವಿಡೀ,
ಅಂಥ ಮಹತ್ವದ್ದೇನಲ್ಲ, ಬಹುತೇಕ ಹರಟೆ.

ಭಗವಂತನಿಗಾಗಿ
ನಾನು ಹಾಡುವ ಹಾಡುಗಳು
ನೂರಕ್ಕೆ ನೂರು ಸಿಲ್ಲಿ,
ಪ್ರಾರ್ಥನೆ, ಅಪ್ಪಟ ಗಾಸಿಪ್
ಹಾಸಿಗೆಯೊಳಗಿನ ಗುಸುಗುಸು.

ಗಂಭೀರವಾಗಿರಲೇಬೇಕೆ?
ಭಗವಂತನೊಡನೆಯ ನನ್ನ ವ್ಯವಹಾರ
ತಲೆಹಿಡುಕತನಕ್ಕಿಂತ ಕೀಳೆ?

ಪ್ರಾರ್ಥನೆ
ಗೆಳೆಯರ ನಡುವಿನ ಕಾಡು ಹರಟೆ
ಭಗವಂತನನ್ನು
ಬೋರು ಹೊಡೆಸುವುದಕ್ಕಿಂತ
ಸಿಟ್ಟಿಗೇಳಿಸುವುದೇ ಒಳ್ಳೆಯ ಚೌಕಾಸಿ.
(Silly chatter)

********

3. ಪ್ರೇಮದಲ್ಲಿ ಮುಳುಗಿರುವ ಮನುಷ್ಯ

ಪ್ರೇಮದಲ್ಲಿ ಮುಳುಗಿರುವ ಮನುಷ್ಯ
ತನ್ನ ಪ್ರೇಮವನ್ನು ಜಾಹೀರು ಮಾಡುವುದು
ಎರಡು ರೀತಿಯಲ್ಲಿ

ಹಾಡಿ ಹಾಡಿ ಹೇಳುತ್ತಾನೆ
ಮನೆಯ ಮಾಳಿಗೆ ಮೇಲೆ ನಿಂತು
ಊರಿಗೆಊರೇ ಹುಚ್ಚೆದ್ದು ಕುಣಿಯುವಂತೆ,
ಇಲ್ಲಾ
ಯಾರಿಗೂ ಕಾಣದಂತೆ
ಕದ್ದ ಒಡವೆಯ ಕಣ್ಣಿಗೊತ್ತಿಕೊಂಡು ಮುಚ್ಚಿಡುವಂತೆ ಕಳ್ಳ
ಬಚ್ಚಿಟ್ಟುಕೊಳ್ಳುತ್ತಾನೆ ಎದೆಯಲ್ಲಿ

ನಾನು ಹಾಗೆಲ್ಲ
ಮಾಳಿಗೆ ಏರಿ ಹಾಡುವುದಿಲ್ಲ
ಅದು ಜೈಲಿನ ಹಾದಿ, ಗೊತ್ತು ನನಗೆ
ಬದಲಾಗಿ
ಗಲ್ಲ ಉಬ್ಬಿಸಿ ಓಡಾಡುತ್ತೇನೆ
ಊರ ತುಂಬ
ಬಾಯಲ್ಲಿ ಉಂಡಿ ತುಂಬಿಕೊಂಡ
ತುಂಟ ಹುಡುಗನಂತೆ

ಸಿಕ್ಕಿಹಾಕಿಕೊಂಡರೆ ಮಾತ್ರ
ಉಸುರುತ್ತೇನೆ ಅವರ ಕಿವಿಯಲ್ಲಿ
ಕುಣಿದಾಡುತ್ತ, ಕಣ್ಣು ಮಿಟುಕಿಸುತ್ತ
ನನ್ನ ಪ್ರೇಮ.
(When a person falls in love)

******

4 ಭಗವಂತನ ಪರಿಪೂರ್ಣತೆ

ಇವತ್ತು
ಒಬ್ಬ ಮನುಷ್ಯ ಸಿಕ್ಕಿದ್ದ
ಭಗವಂತನ ಪರಿಪೂರ್ಣತೆಯ ಬಗ್ಗೆ
ಮಾತನಾಡುತ್ತಲೇ ಹೋದ.

ಹೇಗೆ ಆತ
ಅಪಾರ, ನಿರ್ವಿಕಾರ, ನಿರಾಕಾರ, ನಿರ್ಗುಣ
ಮುಂತಾಗಿ.
ಅವನ ಮಾತುಗಳಿಗೆ ಕಾವ್ಯದ ಸ್ಪರ್ಶವಿತ್ತು,
ಕೈಗೆ ನಿಲುಕಲಾರದ, ಕಲ್ಪನಾತೀತ ಭಾವವೊಂದನ್ನು
ವಿವರಿಸುವ ಉನ್ಮಾದವಿತ್ತು.

ನನಗೆ ಗೊತ್ತಿಲ್ಲ ಈ ಮನುಷ್ಯ
ಯಾರ ಪ್ರೇಮದಲ್ಲಿ ಹೀಗೆ ಮಗ್ನನಾಗಿದ್ದಾನೆಂದು,
ಆದರೆ ಒಂದಂತೂ ನಿಜ
ಅದು ಖಂಡಿತ ಭಗವಂತನಂತೂ ಆಗಿರಲಾರ.

ನನಗೆ ಗೊತ್ತಿರುವ ಭಗವಂತ
ನೆಲದಿಂದ ಒಂದು ಹೆಜ್ಜೆಯನ್ನೂ ಮೇಲಿಟ್ಟವನಲ್ಲ,
ಅವ ಪ್ರತಿದಿನ ನಾನು ರಸ್ತೆಯಲ್ಲಿ ಒದೆಯುತ್ತ ಓಡಾಡುವ
ಮಣ್ಣಿನ ಗುಪ್ಪೆಗಳ ನಡುವೆ ಹಾಸು ಹೊಕ್ಕಾದವನು.
ನನ್ನ ಭಗವಂತ ಪರಿಪೂರ್ಣನಲ್ಲ,
ಜಗ ಮೊಂಡ, ಅಸಾಧ್ಯ ಹುಂಬ,
ಒಂದು ಮಾತಿಗೆ ಹತ್ತು ಮಾತನಾಡುವವ,
ಮಗ್ಗಲ ಮುಳ್ಳು.

ಪ್ರಾರ್ಥನೆಗಾಗಿ ಬಾಗಿದಾಗ
ನನ್ನ ಕತ್ತಿಗೆ ಮುತ್ತಿಡುವ ಭಗವಂತ
ನಿಲುಕಲಾರದವನೆನಲ್ಲ,
ತೋಳಿಗೆ ಸಿಕ್ಕರೆ ಮುರಿದು ಮುದ್ದೆ ಮಾಡುವುದಾಗಿ
ಹೆದರಿಸುವ ಭಯಂಕರ ಪೋಲಿ ಆಸಾಮಿ.
ನಿರ್ವಿಕಾರ? ಹಾಗೆಂದರೇನು?
ಬಹುಶಃ ಭಾವನೆಗಳಿಲ್ಲದವನು.

ಆದರೆ ನಮ್ಮ ಪ್ರೇಮ ಎಂಥದೆಂದರೆ

ನಾನು ಪಶ್ಚಿಮಕ್ಕೆ ಮುಖ ಮಾಡಿ
ತಲೆ ಬಾಗಿಸುವುದಷ್ಟೇ ತಡ
ಎಲ್ಲಿ ಈ ಭಗವಂತ ತನ್ನ ತುಟಿಗಳಿಂದ
ಕಚಗುಳಿ ಇಡಲು ಶುರು ಮಾಡುತ್ತಾನೋ
ಎಂದು ಹೆದರಿ
ಅವನನ್ನು ದೂರ ತಳ್ಳುತ್ತೇನೆ.
ನನ್ನ ಮಾತು ಕೇಳಿ.
ಇನ್ನೆಂದೂ ನನ್ನ ಮುಂದೆ
ಭಗವಂತನ ಪರಿಪೂರ್ಣತೆಯ ಬಗ್ಗೆ ಮಾತಾಡಬೇಡಿ,
ಭಗವಂತನ ಬಗ್ಗೆ ತಿಳಿದುಕೊಳ್ಳಲೇಬೇಕು ಎನಿಸಿದರೆ
ಎಚ್ಚರವಿದ್ದಾಗ ಅವನು ಸೃಷ್ಟಿಮಾಡುವ
ಫಜೀತಿಗಳಿಗೂ ತಯಾರಾಗಿ.
(The perfection of Allah)

*******

5. ಹೆಣ

ಇಂದು ಮುಂಜಾನೆ
ಶಹರದಲ್ಲಿ ಏನೋ ಕೋಲಾಹಲ.
ಗೇಟ್ ಹತ್ತಿರ ಒಂದು ಶವ ಪತ್ತೆಯಾಗಿದೆ.
ಹೆಣದ ತಪಾಸಣೆ ಮಾಡುತ್ತಿದ್ದಾನೆ
ಕಾವಲುಗಾರ.
ಅಳುಕಿನಿಂದಲೇ ಸೇರಿಕೊಳ್ಳುತ್ತೇನೆ
ಶವದ ಸುತ್ತ ನೆರೆದಿರುವ ಗುಂಪನ್ನು.

ದಿಗಿಲಾಯಿತು,
ಹೃದಯವೇ ಬಾಯಿಗೆ ಬಂದ ಹಾಗಾಯಿತು
ನನಗೆ ಗೊತ್ತು – ಇದು ಯಾರೆಂದು.

ಬಹುಶಃ
ಪೂರ್ವದ ತಣ್ಣನೆಯ ಗಾಳಿ
ಆವರಿಸಿಕೊಂಡು ಮೈ ಮರಗಟ್ಟುವ ಮುನ್ನ
ಒಳಗೆ ಸೇರಿಕೊಂಡು ಬಿಡಬೇಕೆಂದು
ಅವಸರದಿಂದ ಮುನ್ನುಗ್ಗುವಾಗ ಸತ್ತಿರಬಹುದು ಅಥವಾ

ಯಾರಿಗೂ ಹೇಳದೇ ಬಚ್ಚಿಟ್ಟುಕೊಂಡ
ಅಪಾರ ಪ್ರೇಮದ ಒತ್ತಡ ತಾಳಲಾರದೆ
ಎದೆಯೊಡೆದುಕೊಂಡು.

ಹೆಣದ ಹತ್ತಿರ ಹೋಗಲಿಲ್ಲ ನಾನು
ಹೆದರಿಕೆ, ಈ ಅಪರಾಧದಲ್ಲಿ
ನಾನೂ ಭಾಗಿಯಾಗಿರಬಹುದೆಂಬ
ಅನುಮಾನ.

ಯಾರ ಹೆಣ ಎಂದು ಗುರುತಿಸಲು
ಮುಖ ನೋಡುವ ಅಗತ್ಯ ನನಗಿಲ್ಲ,
ಅದು
ದೇವರ ಹೆಣ.

ನಾನೂ ಅವನ ಹಾಗೆಯೇ ಸೆಟೆದ
ತಣ್ಣನೆಯ ಶರೀರವಾಗಿಬಿಡುತ್ತಿದ್ದೆ
ಹಾಗೆಂದು ಹೇಳಿದ್ದರೆ
ಕೂಗಿ.
(The Corpse)

******

6. ಪ್ರೇಮಿಗಳ ಸಾವು

ಒಂದು ದಿನ
ಪುರಾತನ ಅರಮನೆಯ
ಪಾಳುಬಿದ್ದ ಅವಶೇಷಗಳ ನಡುವೆ
ಓಡಾಡುತ್ತ ದಣಿದು
ಖರ್ಜೂರದ ಮರವೊಂದರ ಕೆಳಗೆ
ಸ್ವಲ್ಪ ಹೊತ್ತು ಕಾಲು ಚಾಚಿದೆ ಹಾಯಾಗಿ

ಮನೆಯಿಂದ ಕಟ್ಟಿಕೊಂಡು ಬಂದಿದ್ದ
ಬುತ್ತಿ ಗಂಟು ಬಿಚ್ಚಿ, ಊಟ ಮುಗಿಸಿ
ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ
ಕಣ್ಣು ಮುಚ್ಚಿಕೊಳ್ಳುತ್ತಿದ್ದಂತೆಯೇ
ನನ್ನ ಕೈಗಳನ್ನು ನೆಕ್ಕತೊಡಗಿತು
ಜಿಂಕೆಯೊಂದು

ಬಿಳಚಿಕೊಂಡಿತ್ತು ಅದರ ಮೂಗು ಮುಖ
ಏನೋ ಒಂದು ಬಿಗಿತ ಕತ್ತಿನ ಚಲನೆಯಲ್ಲಿ

ಕಣ್ಣು ಬಿಟ್ಟರೆ ಜಿಂಕೆ ಅಂಜಬಹುದೆಂದು
ಎಲ್ಲ ಗಮನಿಸುತ್ತಿದ್ದೆ

ಹಾಗೆ ಅಲ್ಲಾಡದೇ ಕಿರುಗಣ್ಣಿನಲ್ಲಿಯೇ
ನನ್ನ ದೇಹವನ್ನೊಮ್ಮೆ ಮೂಸಿ ನೋಡಿ
ಮೊಣಕಾಲ ಮೇಲೆ ಬಗ್ಗಿ
ತನ್ನ ತಲೆಯನ್ನ ನನ್ನ ತೊಡೆಗಳ ಮೇಲಿಟ್ಟು
ಒರಗಿಕೊಂಡಿತು ಜಿಂಕೆ

ಒಂದು ಜೊತೆ ಕಪ್ಪುಕಣ್ಣುಗಳು
ನನ್ನ ಕಣ್ಣುಗಳೊಡನೆ ಮಾತಿಗಿಳಿದವು,
ನಿಧಾನವಾಗಿ ಆ ಕಣ್ಣೊಳಗಿನ ಬೆಳಕು ಮಾಯವಾಗುತ್ತ, ತೀರಿಯೇ ಹೋದಳು
ಆ ಕಪ್ಪು ಕಣ್ಣಿನ ಒಡತಿ.

ಒಂದಿಷ್ಟು ಅದ್ಭುತ ದಿನಗಳ ಪ್ರೇಮದ ನಂತರ
ಪ್ರೇಮಿಗಳು ಸಾಯಲು ಬಯಸೋದು ಹೀಗೆ,
ಪ್ರೇಮಿಯ ಕೈ
ತನ್ನ ಗಲ್ಲ ನೇವರಿಸುತ್ತಿರುವಾಗ
ಕಣ್ಣೊಳಗಿನ ಬೆಳಕು ನಿಧಾನವಾಗಿ
ಆರಿ ಹೋಗುವಂತೆ.
ನಜತ್ ಹೇಳುತ್ತಾನೆ….

ಆದರೆ ನೀವು ಹಾಗೆ
ಪ್ರೇಮಿಯ ತೊಡೆಯ ಮೇಲೆ ತಲೆಯಿಟ್ಟು
ಕಣ್ಣು ಮುಚ್ಚಿಕೊಳ್ಳಲು ಕಾಯಬೇಕಿಲ್ಲ
ಸಾವು ಬರುವ ತನಕ.
(How lovers long to die)

*********

ನಜತ್ ಓಝ್ಕಾಯಾ 14 ನೇ ಶತಮಾನದ ಸೂಫಿ ಕವಿ. ಜಲಾಲುದ್ದೀನ್ ರೂಮಿಯ ಊರು ಕೋನ್ಯಾದಲ್ಲಿಯೇ ಇದ್ದವನು. ಜಾನ್ ಮಾರ್ಬಿ ಎನ್ನುವ ಇಂಗ್ಲೀಷ್ ಕವಿ, ಅನುವಾದಕ ನಜತ್‌ನ ಕವಿತೆಗಳನ್ನ Salvation of the true rock ಎನ್ನುವ ಅಂಥಾಲಜಿಯಲ್ಲಿ ಸಂಗ್ರಹಿಸಿದ್ದಾನೆ.

(ಕನ್ನಡಕ್ಕೆ): ಚಿದಂಬರ ನರೇಂದ್ರ

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...

ಮುಂಬೈ| ಬುರ್ಖಾ ಧರಿಸಿ ಲೋಕಲ್‌ ಟ್ರೈನ್‌ನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸಿದ ವ್ಯಕ್ತಿ ಬಂಧನ

ಮುಂಬೈನ ಉಪನಗರ ರೈಲಿನ ಮಹಿಳಾ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ನಾಸಿಕ್‌ನ 57 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಘಟನೆ ಫೆಬ್ರವರಿ 6 ರಂದು ಘಾಟ್ಕೋಪರ್...

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...