Homeಮುಖಪುಟನಜತ್ ಓಝ್ಕಾಯಾನ ಆರು ಪದ್ಯಗಳು

ನಜತ್ ಓಝ್ಕಾಯಾನ ಆರು ಪದ್ಯಗಳು

- Advertisement -
- Advertisement -

1.ಪ್ರೇಮ ಹುಲಿಯ ಅವತಾರ

ಪ್ರೇಮ,
ಹುಲಿಯ ಅವತಾರ.
ಅಪರೂಪದ ಬೆಕ್ಕು, ಚೆಲುವಿನ ಬನಿ,
ಚರ್ಮದ ಕೆಳಗೆ ಹುರಿಗಟ್ಟಿರುವ
ಸ್ನಾಯುಗಳ ಮಾಯಗಾರ.
ಬದುಕು-ಸಾವಿನ ತಕ್ಕಡಿಯ
ತನ್ನ ನಿಷ್ಠುರ ದವಡೆಯಲ್ಲಿ ಸರಿದೂಗಿಸುವ
ಗಂಭೀರ ವ್ಯಾಪಾರಿ.

ಪ್ರೇಮ ಊಹಾತೀತ,
ಇನ್ನೇನು ಜಾಡು ಸಿಕ್ಕಿತು ಎನ್ನುವಾಗಲೇ
ಹೆಜ್ಜೆ ಅಳಿಸಿ ಹಾಕಿಬಿಡುವ ಚತುರ ಚೋರ
ಕಾಯುವ ನಾಟಕವಾಡುವ ವೇಷಧಾರಿ,
ಕೊಲ್ಲಲು ಹಾರುವ ತನಕ
ಸದ್ದು ಮಾಡದೇ ಸುಮ್ಮನಿದ್ದುಬಿಡುವ ತಂತ್ರಗಾರ,
ಎಂಥ ಕಾಡಿನ ಗರ್ಭದಲ್ಲೂ
ಬೇಟೆಯ ವಾಸನೆ
ಕ್ಷಣಮಾತ್ರದಲ್ಲಿ ಪತ್ತೆಹಚ್ಚಿಬಿಡುವ ಚಾಣಾಕ್ಷ ಗೂಢಚಾರ.

ಸ್ವರ್ಗ, ನರಕ ಎರಡರಲ್ಲೂ
ಪ್ರೇಮದ್ದೇ ಸರ್ಕಾರ.
ಬಿಸಿ ಉಸಿರಿನಿಂದ ಜೀವ ತುಂಬುತ್ತದೆಯಾದರೂ
ಗರ್ಜಿಸಿಯೇ ಅಸ್ತಿತ್ವ ಘೋಷಣೆ
ಹರಿತ ಉಗುರುಗಳ ನಡುವೆಯೇ ಲಲ್ಲೆವಾತು.

ಪ್ರೇಮ, ಭಯಂಕರ.
ಎಂಥ ಧೈರ್ಯಶಾಲಿಗಳೂ
ಒಂದರೆಘಳಿಗೆ ಬೆಚ್ಚಿ ಬೀಳುತ್ತಾರೆ.

ನನ್ನ ಮಾತು ಕೇಳಿ, ಈಗಲೇ ಮನೆಗೆ ಹೋಗಿ
ಆಯುಧಗಳನ್ನು ಹರಿತ ಮಾಡಿಟ್ಟುಕೊಳ್ಳಿ
ಇದು ಬೇಟೆಯಾಡಲೇ ಬೇಕಾದಂಥ ವ್ಯಾಘ್ರ.
(Love is a Tiger)

*****

2.ಹುಚ್ಚು ಹರಟೆ

ನನ್ನ ಪ್ರಾರ್ಥನೆ ಆಗಾಗ,
ತುಣುಕುಗಳಲ್ಲಿ, ದಿನವಿಡೀ,
ಅಂಥ ಮಹತ್ವದ್ದೇನಲ್ಲ, ಬಹುತೇಕ ಹರಟೆ.

ಭಗವಂತನಿಗಾಗಿ
ನಾನು ಹಾಡುವ ಹಾಡುಗಳು
ನೂರಕ್ಕೆ ನೂರು ಸಿಲ್ಲಿ,
ಪ್ರಾರ್ಥನೆ, ಅಪ್ಪಟ ಗಾಸಿಪ್
ಹಾಸಿಗೆಯೊಳಗಿನ ಗುಸುಗುಸು.

ಗಂಭೀರವಾಗಿರಲೇಬೇಕೆ?
ಭಗವಂತನೊಡನೆಯ ನನ್ನ ವ್ಯವಹಾರ
ತಲೆಹಿಡುಕತನಕ್ಕಿಂತ ಕೀಳೆ?

ಪ್ರಾರ್ಥನೆ
ಗೆಳೆಯರ ನಡುವಿನ ಕಾಡು ಹರಟೆ
ಭಗವಂತನನ್ನು
ಬೋರು ಹೊಡೆಸುವುದಕ್ಕಿಂತ
ಸಿಟ್ಟಿಗೇಳಿಸುವುದೇ ಒಳ್ಳೆಯ ಚೌಕಾಸಿ.
(Silly chatter)

********

3. ಪ್ರೇಮದಲ್ಲಿ ಮುಳುಗಿರುವ ಮನುಷ್ಯ

ಪ್ರೇಮದಲ್ಲಿ ಮುಳುಗಿರುವ ಮನುಷ್ಯ
ತನ್ನ ಪ್ರೇಮವನ್ನು ಜಾಹೀರು ಮಾಡುವುದು
ಎರಡು ರೀತಿಯಲ್ಲಿ

ಹಾಡಿ ಹಾಡಿ ಹೇಳುತ್ತಾನೆ
ಮನೆಯ ಮಾಳಿಗೆ ಮೇಲೆ ನಿಂತು
ಊರಿಗೆಊರೇ ಹುಚ್ಚೆದ್ದು ಕುಣಿಯುವಂತೆ,
ಇಲ್ಲಾ
ಯಾರಿಗೂ ಕಾಣದಂತೆ
ಕದ್ದ ಒಡವೆಯ ಕಣ್ಣಿಗೊತ್ತಿಕೊಂಡು ಮುಚ್ಚಿಡುವಂತೆ ಕಳ್ಳ
ಬಚ್ಚಿಟ್ಟುಕೊಳ್ಳುತ್ತಾನೆ ಎದೆಯಲ್ಲಿ

ನಾನು ಹಾಗೆಲ್ಲ
ಮಾಳಿಗೆ ಏರಿ ಹಾಡುವುದಿಲ್ಲ
ಅದು ಜೈಲಿನ ಹಾದಿ, ಗೊತ್ತು ನನಗೆ
ಬದಲಾಗಿ
ಗಲ್ಲ ಉಬ್ಬಿಸಿ ಓಡಾಡುತ್ತೇನೆ
ಊರ ತುಂಬ
ಬಾಯಲ್ಲಿ ಉಂಡಿ ತುಂಬಿಕೊಂಡ
ತುಂಟ ಹುಡುಗನಂತೆ

ಸಿಕ್ಕಿಹಾಕಿಕೊಂಡರೆ ಮಾತ್ರ
ಉಸುರುತ್ತೇನೆ ಅವರ ಕಿವಿಯಲ್ಲಿ
ಕುಣಿದಾಡುತ್ತ, ಕಣ್ಣು ಮಿಟುಕಿಸುತ್ತ
ನನ್ನ ಪ್ರೇಮ.
(When a person falls in love)

******

4 ಭಗವಂತನ ಪರಿಪೂರ್ಣತೆ

ಇವತ್ತು
ಒಬ್ಬ ಮನುಷ್ಯ ಸಿಕ್ಕಿದ್ದ
ಭಗವಂತನ ಪರಿಪೂರ್ಣತೆಯ ಬಗ್ಗೆ
ಮಾತನಾಡುತ್ತಲೇ ಹೋದ.

ಹೇಗೆ ಆತ
ಅಪಾರ, ನಿರ್ವಿಕಾರ, ನಿರಾಕಾರ, ನಿರ್ಗುಣ
ಮುಂತಾಗಿ.
ಅವನ ಮಾತುಗಳಿಗೆ ಕಾವ್ಯದ ಸ್ಪರ್ಶವಿತ್ತು,
ಕೈಗೆ ನಿಲುಕಲಾರದ, ಕಲ್ಪನಾತೀತ ಭಾವವೊಂದನ್ನು
ವಿವರಿಸುವ ಉನ್ಮಾದವಿತ್ತು.

ನನಗೆ ಗೊತ್ತಿಲ್ಲ ಈ ಮನುಷ್ಯ
ಯಾರ ಪ್ರೇಮದಲ್ಲಿ ಹೀಗೆ ಮಗ್ನನಾಗಿದ್ದಾನೆಂದು,
ಆದರೆ ಒಂದಂತೂ ನಿಜ
ಅದು ಖಂಡಿತ ಭಗವಂತನಂತೂ ಆಗಿರಲಾರ.

ನನಗೆ ಗೊತ್ತಿರುವ ಭಗವಂತ
ನೆಲದಿಂದ ಒಂದು ಹೆಜ್ಜೆಯನ್ನೂ ಮೇಲಿಟ್ಟವನಲ್ಲ,
ಅವ ಪ್ರತಿದಿನ ನಾನು ರಸ್ತೆಯಲ್ಲಿ ಒದೆಯುತ್ತ ಓಡಾಡುವ
ಮಣ್ಣಿನ ಗುಪ್ಪೆಗಳ ನಡುವೆ ಹಾಸು ಹೊಕ್ಕಾದವನು.
ನನ್ನ ಭಗವಂತ ಪರಿಪೂರ್ಣನಲ್ಲ,
ಜಗ ಮೊಂಡ, ಅಸಾಧ್ಯ ಹುಂಬ,
ಒಂದು ಮಾತಿಗೆ ಹತ್ತು ಮಾತನಾಡುವವ,
ಮಗ್ಗಲ ಮುಳ್ಳು.

ಪ್ರಾರ್ಥನೆಗಾಗಿ ಬಾಗಿದಾಗ
ನನ್ನ ಕತ್ತಿಗೆ ಮುತ್ತಿಡುವ ಭಗವಂತ
ನಿಲುಕಲಾರದವನೆನಲ್ಲ,
ತೋಳಿಗೆ ಸಿಕ್ಕರೆ ಮುರಿದು ಮುದ್ದೆ ಮಾಡುವುದಾಗಿ
ಹೆದರಿಸುವ ಭಯಂಕರ ಪೋಲಿ ಆಸಾಮಿ.
ನಿರ್ವಿಕಾರ? ಹಾಗೆಂದರೇನು?
ಬಹುಶಃ ಭಾವನೆಗಳಿಲ್ಲದವನು.

ಆದರೆ ನಮ್ಮ ಪ್ರೇಮ ಎಂಥದೆಂದರೆ

ನಾನು ಪಶ್ಚಿಮಕ್ಕೆ ಮುಖ ಮಾಡಿ
ತಲೆ ಬಾಗಿಸುವುದಷ್ಟೇ ತಡ
ಎಲ್ಲಿ ಈ ಭಗವಂತ ತನ್ನ ತುಟಿಗಳಿಂದ
ಕಚಗುಳಿ ಇಡಲು ಶುರು ಮಾಡುತ್ತಾನೋ
ಎಂದು ಹೆದರಿ
ಅವನನ್ನು ದೂರ ತಳ್ಳುತ್ತೇನೆ.
ನನ್ನ ಮಾತು ಕೇಳಿ.
ಇನ್ನೆಂದೂ ನನ್ನ ಮುಂದೆ
ಭಗವಂತನ ಪರಿಪೂರ್ಣತೆಯ ಬಗ್ಗೆ ಮಾತಾಡಬೇಡಿ,
ಭಗವಂತನ ಬಗ್ಗೆ ತಿಳಿದುಕೊಳ್ಳಲೇಬೇಕು ಎನಿಸಿದರೆ
ಎಚ್ಚರವಿದ್ದಾಗ ಅವನು ಸೃಷ್ಟಿಮಾಡುವ
ಫಜೀತಿಗಳಿಗೂ ತಯಾರಾಗಿ.
(The perfection of Allah)

*******

5. ಹೆಣ

ಇಂದು ಮುಂಜಾನೆ
ಶಹರದಲ್ಲಿ ಏನೋ ಕೋಲಾಹಲ.
ಗೇಟ್ ಹತ್ತಿರ ಒಂದು ಶವ ಪತ್ತೆಯಾಗಿದೆ.
ಹೆಣದ ತಪಾಸಣೆ ಮಾಡುತ್ತಿದ್ದಾನೆ
ಕಾವಲುಗಾರ.
ಅಳುಕಿನಿಂದಲೇ ಸೇರಿಕೊಳ್ಳುತ್ತೇನೆ
ಶವದ ಸುತ್ತ ನೆರೆದಿರುವ ಗುಂಪನ್ನು.

ದಿಗಿಲಾಯಿತು,
ಹೃದಯವೇ ಬಾಯಿಗೆ ಬಂದ ಹಾಗಾಯಿತು
ನನಗೆ ಗೊತ್ತು – ಇದು ಯಾರೆಂದು.

ಬಹುಶಃ
ಪೂರ್ವದ ತಣ್ಣನೆಯ ಗಾಳಿ
ಆವರಿಸಿಕೊಂಡು ಮೈ ಮರಗಟ್ಟುವ ಮುನ್ನ
ಒಳಗೆ ಸೇರಿಕೊಂಡು ಬಿಡಬೇಕೆಂದು
ಅವಸರದಿಂದ ಮುನ್ನುಗ್ಗುವಾಗ ಸತ್ತಿರಬಹುದು ಅಥವಾ

ಯಾರಿಗೂ ಹೇಳದೇ ಬಚ್ಚಿಟ್ಟುಕೊಂಡ
ಅಪಾರ ಪ್ರೇಮದ ಒತ್ತಡ ತಾಳಲಾರದೆ
ಎದೆಯೊಡೆದುಕೊಂಡು.

ಹೆಣದ ಹತ್ತಿರ ಹೋಗಲಿಲ್ಲ ನಾನು
ಹೆದರಿಕೆ, ಈ ಅಪರಾಧದಲ್ಲಿ
ನಾನೂ ಭಾಗಿಯಾಗಿರಬಹುದೆಂಬ
ಅನುಮಾನ.

ಯಾರ ಹೆಣ ಎಂದು ಗುರುತಿಸಲು
ಮುಖ ನೋಡುವ ಅಗತ್ಯ ನನಗಿಲ್ಲ,
ಅದು
ದೇವರ ಹೆಣ.

ನಾನೂ ಅವನ ಹಾಗೆಯೇ ಸೆಟೆದ
ತಣ್ಣನೆಯ ಶರೀರವಾಗಿಬಿಡುತ್ತಿದ್ದೆ
ಹಾಗೆಂದು ಹೇಳಿದ್ದರೆ
ಕೂಗಿ.
(The Corpse)

******

6. ಪ್ರೇಮಿಗಳ ಸಾವು

ಒಂದು ದಿನ
ಪುರಾತನ ಅರಮನೆಯ
ಪಾಳುಬಿದ್ದ ಅವಶೇಷಗಳ ನಡುವೆ
ಓಡಾಡುತ್ತ ದಣಿದು
ಖರ್ಜೂರದ ಮರವೊಂದರ ಕೆಳಗೆ
ಸ್ವಲ್ಪ ಹೊತ್ತು ಕಾಲು ಚಾಚಿದೆ ಹಾಯಾಗಿ

ಮನೆಯಿಂದ ಕಟ್ಟಿಕೊಂಡು ಬಂದಿದ್ದ
ಬುತ್ತಿ ಗಂಟು ಬಿಚ್ಚಿ, ಊಟ ಮುಗಿಸಿ
ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ
ಕಣ್ಣು ಮುಚ್ಚಿಕೊಳ್ಳುತ್ತಿದ್ದಂತೆಯೇ
ನನ್ನ ಕೈಗಳನ್ನು ನೆಕ್ಕತೊಡಗಿತು
ಜಿಂಕೆಯೊಂದು

ಬಿಳಚಿಕೊಂಡಿತ್ತು ಅದರ ಮೂಗು ಮುಖ
ಏನೋ ಒಂದು ಬಿಗಿತ ಕತ್ತಿನ ಚಲನೆಯಲ್ಲಿ

ಕಣ್ಣು ಬಿಟ್ಟರೆ ಜಿಂಕೆ ಅಂಜಬಹುದೆಂದು
ಎಲ್ಲ ಗಮನಿಸುತ್ತಿದ್ದೆ

ಹಾಗೆ ಅಲ್ಲಾಡದೇ ಕಿರುಗಣ್ಣಿನಲ್ಲಿಯೇ
ನನ್ನ ದೇಹವನ್ನೊಮ್ಮೆ ಮೂಸಿ ನೋಡಿ
ಮೊಣಕಾಲ ಮೇಲೆ ಬಗ್ಗಿ
ತನ್ನ ತಲೆಯನ್ನ ನನ್ನ ತೊಡೆಗಳ ಮೇಲಿಟ್ಟು
ಒರಗಿಕೊಂಡಿತು ಜಿಂಕೆ

ಒಂದು ಜೊತೆ ಕಪ್ಪುಕಣ್ಣುಗಳು
ನನ್ನ ಕಣ್ಣುಗಳೊಡನೆ ಮಾತಿಗಿಳಿದವು,
ನಿಧಾನವಾಗಿ ಆ ಕಣ್ಣೊಳಗಿನ ಬೆಳಕು ಮಾಯವಾಗುತ್ತ, ತೀರಿಯೇ ಹೋದಳು
ಆ ಕಪ್ಪು ಕಣ್ಣಿನ ಒಡತಿ.

ಒಂದಿಷ್ಟು ಅದ್ಭುತ ದಿನಗಳ ಪ್ರೇಮದ ನಂತರ
ಪ್ರೇಮಿಗಳು ಸಾಯಲು ಬಯಸೋದು ಹೀಗೆ,
ಪ್ರೇಮಿಯ ಕೈ
ತನ್ನ ಗಲ್ಲ ನೇವರಿಸುತ್ತಿರುವಾಗ
ಕಣ್ಣೊಳಗಿನ ಬೆಳಕು ನಿಧಾನವಾಗಿ
ಆರಿ ಹೋಗುವಂತೆ.
ನಜತ್ ಹೇಳುತ್ತಾನೆ….

ಆದರೆ ನೀವು ಹಾಗೆ
ಪ್ರೇಮಿಯ ತೊಡೆಯ ಮೇಲೆ ತಲೆಯಿಟ್ಟು
ಕಣ್ಣು ಮುಚ್ಚಿಕೊಳ್ಳಲು ಕಾಯಬೇಕಿಲ್ಲ
ಸಾವು ಬರುವ ತನಕ.
(How lovers long to die)

*********

ನಜತ್ ಓಝ್ಕಾಯಾ 14 ನೇ ಶತಮಾನದ ಸೂಫಿ ಕವಿ. ಜಲಾಲುದ್ದೀನ್ ರೂಮಿಯ ಊರು ಕೋನ್ಯಾದಲ್ಲಿಯೇ ಇದ್ದವನು. ಜಾನ್ ಮಾರ್ಬಿ ಎನ್ನುವ ಇಂಗ್ಲೀಷ್ ಕವಿ, ಅನುವಾದಕ ನಜತ್‌ನ ಕವಿತೆಗಳನ್ನ Salvation of the true rock ಎನ್ನುವ ಅಂಥಾಲಜಿಯಲ್ಲಿ ಸಂಗ್ರಹಿಸಿದ್ದಾನೆ.

(ಕನ್ನಡಕ್ಕೆ): ಚಿದಂಬರ ನರೇಂದ್ರ

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...