ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿ ಬಂಧಿಸಲು ಪೊಲೀಸರಿಗೆ ನಿರ್ದೇಶಿಸಲಾಗುವುದು, ನ್ಯಾಯಾಂಗ ನಿಂದನೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿದ ಬಳಿಕ, ಸಾರಿಗೆ ನೌಕಕರು ತಮ್ಮ ಮುಷ್ಕರವನ್ನು ಮಂಗಳವಾರ ಸಂಜೆ (ಆ.5) ವಾಪಸ್ ಪಡೆದಿದ್ದಾರೆ.
ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಘೋಷಣೆ ಮಾಡಿದ್ದ ಅನಿರ್ಧಾಷ್ಟವಧಿ ಮುಷ್ಕರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೆಂಗಳೂರಿನ ಜೆ ಸುನೀಲ್ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ಮಂಗಳವಾರ ನಡೆಸಿತು.
ರಾಜ್ಯ ಸರ್ಕಾರ ಜುಲೈ 17ರಂದು ಎಸ್ಮಾ ಜಾರಿ ಮಾಡಿದ್ದು, ಕಾಯ್ದೆಯ ನಿಬಂಧನೆಯ ಪ್ರಕಾರ ಯೂನಿಯನ್ ಕರೆ ನೀಡಿರುವ ಮುಷ್ಕರವು ಅಕ್ರಮವಾಗಿದೆ. ಹೀಗಾಗಿ, ದಂಡನೀಯ ಕ್ರಮಕೈಗೊಳ್ಳಬಹುದಾಗಿದೆ. ನಿನ್ನೆ (ಸೋಮವಾರ) ಮುಷ್ಕರಕ್ಕೆ ತಡೆ ನೀಡಿರುವ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.
ಸಂಧಾನಕ್ಕೆ ಒಳಪಟ್ಟು ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಕೆಎಸ್ಆರ್ಟಿಸಿ ಸಿಬ್ಬಂದಿ, ಕೆಲಸಗಾರರ ಒಕ್ಕೂಟ (ಐಐಟಿಯುಸಿ) ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಖಿಲ ಕರ್ನಾಟಕ ರಾಜ್ಯ ರಸ್ತೆ ನೌಕರರ ಮಹಾಮಂಡಳಿ; ಉಳಿದ ಯೂನಿಯನ್ಗಳನ್ನು ಪ್ರತ್ಯೇಕವಾಗಿ ಪಕ್ಷಕಾರರನ್ನಾಗಿಸಲು ಅರ್ಜಿದಾರರಿಗೆ ಆದೇಶಿಸಿರುವ ನ್ಯಾಯಾಲಯವು, ಇಂದಿನ (ಮಂಗಳವಾರ) ಆದೇಶವನ್ನು ಅವರಿಗೆ ತಲುಪಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಪೀಠವು, ಮುಷ್ಕರಕ್ಕೆ ಕರೆ ನೀಡಿರುವ ಯೂನಿಯನ್ಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದೆ. ಎಸ್ಮಾ ಜಾರಿಯಾಗಿರುವಾಗ ಮುಷ್ಕರ ನಡೆಸಿರುವುದು ಕಾನೂನುಬಾಹಿರವಾಗಿದೆ. ಎಸ್ಮಾ ಅಡಿ ಮುಷ್ಕರಕ್ಕೆ ಬೆಂಬಲ ನೀಡುವ ಯಾರನ್ನು ಬೇಕಾದರೂ ಪೊಲೀಸರು ಬಂಧಿಸುವ ಅಧಿಕಾರ ಹೊಂದಲಿದ್ದಾರೆ ಎಂದಿದೆ.
ಈಗಾಗಲೇ ನಡೆಸಿರುವ ಮುಷ್ಕರವು ಕಾನೂನಿನ ಪ್ರಕಾರ ಅಕ್ರಮವಾಗಿದೆ. ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದಕ್ಕೆ ಯೂನಿಯನ್ಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕೈಗೊಳ್ಳಬೇಕಾಗುತ್ತದೆ. ನಾಳೆ (ಬುಧವಾರ) ಮುಷ್ಕರ ನಿಲ್ಲಬೇಕು. ಎಸ್ಮಾ ಕಾಯ್ದೆಯ ಸೆಕ್ಷನ್ 8ರ ಅಡಿ ಪೊಲೀಸರು ಬಂಧಿಸುವ ಅಧಿಕಾರ ಹೊಂದಲಿದ್ದು, ಪದಾಧಿಕಾರಿಗಳನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗುವುದು” ಎಂದು ಮೌಖಿಕವಾಗಿ ನ್ಯಾಯಾಲಯ ಹೇಳಿದೆ.
ನಿಮ್ಮ ಬೇಡಿಕೆಗಳನ್ನು ಸರ್ಕಾರದ ಜೊತೆ ಚರ್ಚಿಸಿ ಬಗೆ ಹರಿಸಿಕೊಳ್ಳಿ. ಜನರಿಗೆ ತೊಂದೆರೆ ಉಂಟು ಮಾಡಲು ಸಾಧ್ಯವಿಲ್ಲ. ಯೂನಿಯನ್ ಅದನ್ನೇ ಮಾಡುತ್ತಿದೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಒಟ್ಟು ನಾಲ್ಕು ನಿಗಮಗಳಿದ್ದು, ನ್ಯಾಯಾಲಯದ ಮಧ್ಯಂತರ ಆದೇಶದ ಹೊರತಾಗಿಯೂ ಮೂರು ನಿಗಮಗಳ ಸಿಬ್ಬಂದಿ ಮುಷ್ಕರ ಮುಂದುವರಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದ ಶೇ.30-40 ಬಸ್ಗಳು ಮಾತ್ರ ಓಡಾಡುತ್ತಿವೆ. ಮುಖ್ಯಮಂತ್ರಿ ಸಾರಿಗೆ ಸಿಬ್ಬಂದಿಯ ಜಂಟಿ ಕ್ರಿಯಾ ಸಮಿತಿಯೊಂದಿಗೆ ಸಭೆ ನಡೆಸಿದ್ದಾರೆ. ಕೈಗಾರಿಕಾ ವಿವಾದ ಇತ್ಯರ್ಥ ಕಾಯ್ದೆ ಅಡಿ ಸಾರಿಗೆ ಆಯುಕ್ತರ ಜೊತೆ ಸಂಬಂಧಿತ ಸಂಧಾನ ಸಭೆ ನಡೆಸಲಾಗಿದೆ. ಇದರ ಮುಂದಿನ ಸಭೆಯು ಆಗಸ್ಟ್ 7ಕ್ಕೆ ನಿಗದಿಯಾಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಸಿಬ್ಬಂದಿ, ಕೆಲಸಗಾರರ ಒಕ್ಕೂಟದ ಪರ ವಕೀಲರು, “ಸೋಮವಾರ ಸಂಜೆ ಮುಷ್ಕರಕ್ಕೆ ತಡೆ ಕೋರಿರುವ ಅರ್ಜಿ ಕೊಟ್ಟಿದ್ದಾರೆ. ಇದಕ್ಕೆ ವಕಾಲತ್ತು ಹಾಕಲಾಗಿದೆ. ಬೆಂಗಳೂರಿನಲ್ಲಿ ಶೇ. 90ರಷ್ಟು ಬಿಎಂಟಿಸಿ ಬಸ್ಗಳು ಕಾರ್ಯನಿರ್ವಹಿಸುತ್ತಿವೆ. ಸಂಧಾನ ನಡೆಯುತ್ತಿದೆ. ಮುಷ್ಕರವನ್ನು ನಿಲ್ಲಿಸುತ್ತಿದ್ದೇವೆ” ಎಂದು ಪೀಠಕ್ಕೆ ವಾಗ್ದಾನ ನೀಡಿದ್ದಾರೆ ಎಂದು barandbench.com ವರದಿ ಮಾಡಿದೆ.
ಕರ್ನಾಟಕದಲ್ಲಿ 125 ಕೃಷಿ ಸಹಕಾರ ಸಂಘಗಳು ದಿವಾಳಿ ಹಂತದಲ್ಲಿವೆ: ಲೋಕಸಭೆಗೆ ಅಮಿತ್ ಶಾ ಮಾಹಿತಿ


