ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ಆರೋಪಗಳ ಮೇಲೆ ತ್ರಿಪುರಾದಲ್ಲಿ ಬಂಧಿಸಲಾಗಿದ್ದ ದೆಹಲಿ ಮೂಲದ ಇಬ್ಬರು ಪತ್ರಕರ್ತೆಯರಿಗೆ ಸ್ಥಳೀಯ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ.
ಸಮೃದ್ಧಿ ಕೆ ಸಕುನಿಯಾ ಮತ್ತು ಸ್ವರ್ಣ ಝಾ ಅವರಿಗೆ ತ್ರಿಪುರಾದ ಗೋಮತಿ ಜಿಲ್ಲೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ತ್ರಿಪುರಾ ರಾಜ್ಯದಲ್ಲಿ ನಡೆದ ಕೋಮು ಹಿಂಸಾಚಾರದ ಕುರಿತು ಗ್ರೌಂಡ್ ರಿಪೋರ್ಟ್ ಮಾಡಲು ತೆರಳಿದ್ದ ಸುದ್ದಿ ವೆಬ್ಸೈಟ್ ಎಚ್ಡಬ್ಲೂ ನ್ಯೂಸ್ನ ಇಬ್ಬರು ಪತ್ರಕರ್ತೆಯರನ್ನು ಅಸ್ಸಾಂ ಪೊಲೀಸರು ಬಂಧಿಸಿ, ತ್ರಿಪುರಾ ಪೊಲೀಸರಿಗೆ ಒಪ್ಪಿಸಿದ್ದರು.
ಜಾಮೀನು ನೀಡಿದ ನ್ಯಾಯಾಲಯವು ಪತ್ರಕರ್ತೆಯರಿಗೆ ಮಂಗಳವಾರ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದೆ.
ಇದನ್ನೂ ಓದಿ: ತ್ರಿಪುರಾ ಹಿಂಸಾಚಾರ ವರದಿ ಮಾಡಿದ ಪತ್ರಕರ್ತೆಯರನ್ನು ಬಂಧಿಸಿದ ಅಸ್ಸಾಂ ಪೊಲೀಸರು
ಪತ್ರಕರ್ತೆಯರನ್ನು ಬಂಧಿಸಿದ್ದ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ’ಬಿಜೆಪಿ ವ್ಯವಸ್ಥೆಯು ಪತ್ರಿಕೋದ್ಯಮವನ್ನು ಕೊಲ್ಲುವುದರಲ್ಲಿ ನಿರತವಾಗಿದೆ. ಆದರೆ ಸುಳ್ಳಿನ ಮುಂದೆ ಸತ್ಯ ಯಾವಾಗ ಸುಮ್ಮನೆ ನಿಂತಿದೆ..?” ಎಂದು ಪ್ರಶ್ನಿಸುವ ಮೂಲಕ ಸತ್ಯ ಒಂದಲ್ಲ ಒಂದು ದಿನ ಹೊರ ಬರುತ್ತದೆ ಎಂದಿದ್ದರು.
ಮಾಧ್ಯಮ ಸಂಸ್ಥೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು Indian Women’s Press Corps ಪತ್ರಕರ್ತೆಯರ ಬಂಧನ ಖಂಡಿಸಿ, ಅವರನ್ನು ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿದ್ದವು.
ತ್ರಿಪುರಾದಲ್ಲಿ ಅಕ್ಟೋಬರ್ನಲ್ಲಿ ನಡೆದ ಕೋಮು ಘರ್ಷಣೆಗಳ ಕುರಿತು ಗ್ರೌಂಡ್ ರಿಪೋರ್ಟ್ ಮಾಡಲು ತ್ರಿಪುರಾಕ್ಕೆ ಬಂದಿದ್ದ ಸುದ್ದಿ ವೆಬ್ಸೈಟ್ ಎಚ್ಡಬ್ಲೂ ನ್ಯೂಸ್ನ (@hwnewsnetwork) ಇಬ್ಬರು ಮಹಿಳಾ ಪತ್ರಕರ್ತರನ್ನು ಅಸ್ಸಾಂ ಪೊಲೀಸರು ಭಾನುವಾರ ಅಸ್ಸಾಂ-ತ್ರಿಪುರಾ ಗಡಿಗೆ ಸಮೀಪವಿರುವ ಕರೀಂಗಂಜ್ನ ನೀಲಂ ಬಜಾರ್ನಲ್ಲಿ ಬಂಧಿಸಿದ್ದರು.
ಇದಕ್ಕೂ ಮೊದಲು ವಿಶ್ವ ಹಿಂದೂ ಪರಿಷತ್ತಿನ ದೂರಿನ ಮೇಲೆ ಶನಿವಾರ ಉನಕೋಟಿ ಜಿಲ್ಲೆಯ ಫಾಟಿಕ್ರೋಯ್ ಪೊಲೀಸ್ ಠಾಣೆಯಲ್ಲಿ 21 ವರ್ಷದ ಸಮೃದ್ಧಿ ಸಕುನಿಯಾ ಮತ್ತು 25 ವರ್ಷದ ಸ್ವರ್ಣ ಝಾ ವಿರುದ್ಧ ಭಾರತೀಯ ದಂಡ ಸಂಹಿತೆಯ 120B (ಕ್ರಿಮಿನಲ್ ಪಿತೂರಿ), 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 504 ಸೆಕ್ಷನ್ ಅಡಿಗಳಲ್ಲಿ ಪ್ರಕರಣ ದಾಖಲಾಗಿತ್ತು.
ನವೆಂಬರ್ 13 ರಂದು ಫಾಟಿಕ್ರೋಯ್ನಲ್ಲಿರುವ ಮುಸ್ಲಿಂ ಮನೆಗಳಿಗೆ ಭೇಟಿ ನೀಡಿದಾಗ ಇಬ್ಬರು ಪತ್ರಕರ್ತರು “ಹಿಂದೂಗಳು ಮತ್ತು ತ್ರಿಪುರಾ ಸರ್ಕಾರದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ” ಎಂದು ಆರೋಪಿಸಿ ಕಾಂಚನ್ ದಾಸ್ ಎಂಬವರು ದೂರು ದಾಖಲಿಸಿದ್ದಾರೆ.
ಪತ್ರಕರ್ತೆ ಸಕುನಿಯಾ, ಅಕ್ಟೋಬರ್ 24 ರಂದು ಉನಕೋಟಿಯ ಪೌಲ್ ಬಜಾರ್ನಲ್ಲಿ ಮಸೀದಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಚ್ಪಿ ಮತ್ತು ಬಜರಂಗದಳ ಸಂಘಟನೆ ಹೆಸರನ್ನು ಸೇರಿಸಿದ್ದಾರೆ. ಇದು ತ್ರಿಪುರಾದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡುವ “ಅಪರಾಧದ ಪಿತೂರಿ”ಯ ಭಾಗವಾಗಿದೆ ಎಂದು ಕಾಂಚನ್ ದಾಸ್ ಆರೋಪಿಸಿದ್ದಾರೆ.
ಇದನ್ನೂ ಓದಿ: ತ್ರಿಪುರಾ ಹಿಂಸಾಚಾರ ವರದಿ ಮಾಡಿದ ಪತ್ರಕರ್ತೆಯರ ಬಂಧನ: ರಾಹುಲ್ ಗಾಂಧಿ, ಮಾಧ್ಯಮ ಸಂಸ್ಥೆಗಳಿಂದ ಖಂಡನೆ