TRP ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕೆಂದು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. “ಸಾಮಾನ್ಯ ನಾಗರೀಕನಂತೆ ನೀವೂ ಹೈಕೋರ್ಟ್ಗೆ ಹೊಗಿ” ಎಂದು ಸುಪ್ರೀಂ ಹೇಳಿದೆ.
“ಹೈಕೋರ್ಟ್ ಈಗಾಗಲೇ ಈ ಪ್ರಕರಣವನ್ನು ತೆಗೆದುಕೊಂಡಿದೆ. ಹೈಕೋರ್ಟ್ ಸೂಚಿಸದೇ ಈ ಪ್ರಕರಣವನ್ನು ನಾವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಸಾಮಾನ್ಯ ನಾಗರಿಕರಂತೆ ಸಿಆರ್ಪಿಸಿ ಅಡಿಯಲ್ಲಿ ತನಿಖೆ ಎದುರಿಸುತ್ತಿರುವವರು ಹೈಕೋರ್ಟ್ಗೆ ಹೋಗಬೇಕು. ನಿಮ್ಮ ಎರಡು ಕಛೇರಿಗಳು ವರ್ಲಿಯಲ್ಲಿದೆ. ನೀವು ಅಲ್ಲಿಗೆ ಹೋಗಿ” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: TRP ತಿರುಚಿದ ಆರೋಪ; ರಿಪಬ್ಲಿಕ್ ಸೇರಿ 3 ಚಾನೆಲ್ಗಳ ಮೇಲೆ ತನಿಖೆ!
“ತನಿಖೆಯನ್ನು ವರ್ಗಾಯಿಸಬೇಕೆಂಬ ರಿಪಬ್ಲಿಕ್ ಟಿವಿಯ ಬೇಡಿಕೆ ತಪ್ಪಾಗಿದ್ದು, ಈ ಪ್ರಕರಣದಲ್ಲಿ, ಅರ್ನಾಬ್ ಗೋಸ್ವಾಮಿ (ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ) ಕಾರ್ಯಕ್ರಮಗಳನ್ನು ನಡೆಸಿ ಸಾಕ್ಷಿಯನ್ನು ಬೆದರಿಸುವ ಮೂಲಕ ರಿಪಬ್ಲಿಕ್ ಟಿವಿ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಕೊಳ್ಳುತ್ತಿದೆ. TRP ಹಗರಣದ ಕುರಿತ ಪೊಲೀಸ್ ತನಿಖೆಯನ್ನು ತಡೆಯಲು ರಿಪಬ್ಲಿಕ್ ಟಿವಿ ಈ ಅರ್ಜಿ ಸಲ್ಲಿಸಿದೆ. ಮಾಧ್ಯಮದ ಈ ನಡೆ, ಮುಕ್ತ ಮತ್ತು ನ್ಯಾಯಯುತ ತನಿಖೆಗೆ ವಿರುದ್ಧವಾಗಿದೆ” ಎಂದು ಮುಂಬೈ ಪೊಲೀಸರು ಕಳೆದ ರಾತ್ರಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಮುಂಗಡ ಅರ್ಜಿಯ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: “ದಿ ಕಪಿಲ್ ಶರ್ಮಾ ಶೋ” ಬಾಯ್ಕಾಟ್: ಸಿಡಿದೆದ್ದ ಅರ್ನಾಬ್ ಅಭಿಮಾನಿಗಳು?
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಇಂದೂ ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರ ಮೂವರು ನ್ಯಾಯಾಧೀಶರ ಪೀಠವು ರಿಪಬ್ಲಿಕ್ ಟಿವಿಯ ಅರ್ಜಿಯನ್ನು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಲಿಸಲಿದೆ.
ವಾಕ್ಸ್ವಾತಂತ್ರ್ಯದ ಹರಣಕ್ಕೆ ಸಂಬಂಧಿಸಿದಂತೆ ಚಾನೆಲ್ ಹೇಳಿಕೆಯನ್ನು ವಿರೋಧಿಸಿದ ಮುಂಬೈ ಪೊಲೀಸರು, ಸುಪ್ರೀಂಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ, “ಆರೋಪಿಸಲ್ಪಟ್ಟ ಅಪರಾಧದ ಸಂದರ್ಭದಲ್ಲಿ ವಾಕ್ಸ್ವಾತಂತ್ರ್ಯದ ಹಕ್ಕನ್ನು ಬಳಸಲು ಸಾಧ್ಯವಿಲ್ಲ. ಸಂವಿಧಾನದ ಕಲಂ 19(1)ರ ಅಡಿಯಲ್ಲಿನ ವಾಕ್ಸ್ವಾತಂತ್ರ್ಯವು ತನಿಖೆಯ ವಿರುದ್ಧದ ಅಸ್ತ್ರವಾಗಲು ಸಾಧ್ಯವಿಲ್ಲ” ಎಂದು ಹೇಳಿದೆ.
ಇದನ್ನೂ ಓದಿ: ನಿಮ್ಮದು ಬನಾನಾ ರಿಪಬ್ಲಿಕ್ ಚಾನೆಲ್: ಅರ್ನಾಬ್ ಗೋಸ್ವಾಮಿ ವಿರುದ್ಧ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಆಕ್ರೋಶ
ಈ ಪ್ರಕರಣದಲ್ಲಿ ಬೇರೆ-ಬೇರೆ ಚಾನೆಲ್ಗಳ ಹಲವಾರು ಅಧಿಕಾರಿಗಳನ್ನು ಕರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀಕ್ಷಕರ ಸಂಖ್ಯೆಯನ್ನು ನಿರ್ವಹಿಸುವ ಖಾಸಗಿ ಕಂಪನಿಯಾದ ಹನ್ಸಾ ನೀಡಿದ ದೂರಿನ ಆಧಾರದ ಮೇಲೆ, TRP ಯನ್ನು ತಿರುಚಿದ್ದಾರೆ ಎನ್ನುವ ಪ್ರಕರಣದ ತನಿಖೆ ನಡೆಯುತ್ತಿದೆ.
ಚಾನೆಲ್ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಮುಂಬೈ ಪೊಲೀಸರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದ್ದು, “ರಿಪಬ್ಲಿಕ್ ಟಿವಿಯನ್ನು ಉಲ್ಲೇಖಿಸಿರುವ ಒಂದೇ ಒಂದು ಬಾರ್ಕ್ (ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ವರದಿಯೂ ಇಲ್ಲ. ಭಾರತದ ಜನರಿಗೆ ಸತ್ಯ ತಿಳಿದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಷಕಾರುವ ಚಾನೆಲ್ಗಳಿಗೆ ಜಾಹೀರಾತು ನೀಡುವುದಿಲ್ಲ: ಪಾರ್ಲೆ-ಜಿ ನಿರ್ಧಾರಕ್ಕೆ ನೆಟ್ಟಿಗರ ಮೆಚ್ಚುಗೆ