ರಾಜ್ಯದಲ್ಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದು ಸಂಪೂರ್ಣ ತಪ್ಪು ಮಾಹಿತಿ ಎಂದು ಹೇಳಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ‘ಅಪರಾಧ ಮತ್ತು ಸಿಸಿಬಿ ವಿಭಾಗ’ದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, “ನಮ್ಮಲ್ಲಿ ಇಂತಹ ಯಾವುದೇ ದೂರುಗಳು ದಾಖಲಾಗಿಲ್ಲ. ನಾವು ಯಾರನ್ನೂ ಬಂಧಿಸಿಲ್ಲ. ಇದು ತಪ್ಪು ಮಾಹಿತಿ” ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮಾಧ್ಯಮ ಪ್ರತಿನಿಧಿಯೊಬ್ಬರು, “ಇದು 2018 ರಲ್ಲಿ ಆರಂಭವಾಗಿದ್ದ ವಿಷಯ. ಆದರೆ ಈಗ ಇದನ್ನು ಯಾರೋ ಹರಿಯಬಿಟ್ಟಿದ್ದಾರೆ. ಎಲ್ಲಾ ಪ್ರಮುಖ ಮಾಧ್ಯಮಗಳಿಂದ ಬಂದ ಮಾಹಿತಿಯ ಪ್ರಕಾರ ಇದು ತಪ್ಪು ಮಾಹಿತಿಯಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಅರ್ನಾಬ್ ಜೊತೆಗಿನ ವಾಟ್ಸಾಪ್ ಚಾಟ್ ಲೀಕ್ ಬೆನ್ನಲ್ಲೆ ನಿರ್ಬಾರ್ಕ್ ಮಾಜಿ ಸಿಇಒ ದಾಸ್ಗುಪ್ತ ಐಸಿಯುಗೆ…
“ರಾಜ್ಯದಲ್ಲಿಯೂ ಟಿಆರ್ಪಿ ಹಗರಣದ ಜಾಲ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕನ್ನಡದ ಪ್ರಮುಖ ಚಾನೆಲ್ಗಳ ಮುಖ್ಯಸ್ಥರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ 4 ಜನರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಕಣ್ಮರೆಯಾಗಿದ್ದಾರೆ. ಕೆಲವು ಕಿರುತೆರೆ ನಿರ್ಮಾಪಕರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇನ್ನೂ 8 ಜನರ ವಿರುದ್ಧ ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ತಯಾರಿ ನಡೆಸುತ್ತಿದ್ದಾರೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿತ್ತು.
ಈ ಸುದ್ದಿಯು ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದನ್ನು ನಾನುಗೌರಿ.ಕಾಂ ಕೂಡ ವರದಿ ಮಾಡಿತ್ತು. ಆದರೆ ಈ ಸುದ್ದಿಯು ಸುಳ್ಳು ಎಂದು ತಿಳಿದ ಕೂಡಲೇ ಅದನ್ನು ತಡೆಹಿಡಿದಿದ್ದೇವೆ ಮತ್ತು ವಿಷಾದ ವ್ಯಕ್ತಪಡಿಸುತ್ತಿದ್ದೇವೆ.
ಇದನ್ನೂ ಓದಿ: ಕಂಗನಾ ಕುರಿತು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ಅರ್ನಾಬ್: ರಿಪಬ್ಲಿಕ್ ಟಿಆರ್ಪಿ ದಾಹಕ್ಕೆ ಕಂಗನಾ ಬಲಿಪಶು?


