ಪರಿಹಾರ ನೀಡದೆ ಭೂಮಿ ಕಿತ್ತುಕೊಂಡಿದ್ದರಿಂದಾಗಿ ಮನ ನೊಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಲು ಕಟ್ಟೆ ಗ್ರಾಮದ ರೈತ ರಂಗಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆದ್ದಾರಿ ಕಾಮಗಾರಿ ವೇಗಕ್ಕೆ ಪಡೆದಿರುವ ಬಲಿ ಇದೆಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಕೆ.ಬಿ.ಕ್ರಾಸ್ನಿಂದ ಹುಳಿಯಾರ್ವರೆಗೂ ರಸ್ತೆ ಕಾಮಗಾರಿ ನಡೆಸುವ ಉದ್ದೇಶಕ್ಕೆ ರಂಗಣ್ಣರವರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಪರಿಹಾರ ನೀಡಿರಲಿಲ್ಲ. ಪರಿಹಾರ ನೀಡದೆ ಭೂಮಿ ಬಿಡುವುದಿಲ್ಲ ಎಂದು ರಂಗಣ್ಣ ನ್ಯಾಯಯುತವಾಗಿ ಒತ್ತಾಯಿಸುತ್ತಿದ್ದರು. ಆದರೆ ರೈತನ ನ್ಯಾಯಬದ್ದವಾದ ಹಕ್ಕನ್ನು ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಲವಂತವಾಗಿ ಭೂಮಿ ಕಿತ್ತುಕೊಂಡಿದ್ದರು. ಇದರಿಂದ ಮನನೊಂದು ರೈತ ರಂಗಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರವೇ ಹೊಣೆ ಎಂದು ಸಮಿತಿ ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕರ್ನಾಟಕ ರಾಜ್ಯ ಸರ್ಕಾರವು 2019ರಲ್ಲಿ ಕರ್ನಾಟಕ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ತಂದಿತು. 10(ಎ) ಎನ್ನುವ ಹೊಸ ಪರಿಚ್ಛೇದವನ್ನು ಸೇರಿಸಿತು. ಆ ಮೂಲಕ ಭೂ ಸ್ವಾಧೀನಕ್ಕೆ ಬಾಧಿತ ರೈತ ಸಮುದಾಯದ ಒಪ್ಪಿಗೆ ಕಡ್ಡಾಯ ಎನ್ನುವ 2013ರ ಕಾಯ್ದೆಯ ಷರತ್ತನ್ನು ತೆಗೆದು ಹಾಕಿದೆ. ಪರಿಹಾರ ನೀಡದೇ ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಕೋರ್ಟ್ನ ತಡೆಯಾಜ್ಞೆಯೂ ಯಾವುದೇ ಪರಿಣಾಮ ಬೀರದಂತೆ ಪರಿಚ್ಛೇದ 24(ಎ) ಗೆ ತಿದ್ದುಪಡಿ ತರಲಾಗಿದೆ. ಹೀಗೆ ಯಾವುದೇ ಸಾಮಾಜಿಕ ಪರಿಶೋಧನೆ ಇಲ್ಲದೇ, ರೈತ ಸಮುದಾಯದ ಒಪ್ಪಿಗೆ ಇಲ್ಲದೆ, ಯಾವುದೇ ಪರಿಹಾರ ನೀಡದೆ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರಿ ಹಾಗೂ ಖಾಸಗಿ ಎಜೆನ್ಸಿಗಳಿಗೆ ಪರಮಾಧಿಕಾರ ನೀಡಿರುವ ಕರ್ನಾಟಕ ರಾಜ್ಯ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ 2019 ಅನ್ನು ರದ್ದುಪಡಿಸಬೇಕು ಕೆಪಿಆರ್ಎಸ್ ಒತ್ತಾಯಿಸಿದೆ.
ರೈತರನ್ನು ದಿವಾಳಿ ಮಾಡಿ ಅಭಿವೃದ್ಧಿ ಸಾಧಿಸುವ ಬಂಡವಾಳಶಾಹಿ ಅಭಿವೃದ್ಧಿ ಕಣ್ಣೋಟವನ್ನು ಕೈ ಬಿಟ್ಟು ಅಭಿವೃದ್ಧಿಯಲ್ಲಿ ರೈತ ಸಮುದಾಯದ ಉನ್ನತಿಯನ್ನು ಪ್ರಧಾನವಾಗಿ ಒಳಗೊಳ್ಳುವ ಸಂವಿಧಾನದ ಕಲ್ಯಾಣ ರಾಜ್ಯ ಕಣ್ಣೋಟವನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರ ಗಮನಕ್ಕೆ ತರದೇ, ರೈತರ ಒಪ್ಪಿಗೆ ಪಡೆಯದೇ, ರೈತರಿಗೆ ಪರಿಹಾರ ನೀಡದೇ ಭೂಮಿ ವಶಕ್ಕೆ ಪಡೆಯಬಾರದು ಎಂದು ಸಂಘಟನೆಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ಆಗ್ರಹಿಸಿದ್ದಾರೆ.
ಈಗಾಗಲೇ ಬೇಸಾಯ ನಷ್ಟ, ಸಾಲ ಬಾಧೆ ಕಾರಣಗಳಿಂದ ನಡೆಯುತ್ತಿರುವ ರೈತರ ಆತ್ಮಹತ್ಯೆ ಪಟ್ಟಿಗೆ ಸ್ವಾಧೀನದ ವಂಚನೆಯೂ ಸೇರ್ಪಡೆ ಆಗಿರುವುದು ಸರ್ಕಾರದ ಕ್ರೂರ ಮುಖವನ್ನು ಬಯಲುಗೊಳಿಸುತ್ತದೆ ಎಂದು ವಿಷಾದಿಸಿದ್ದಾರೆ.
ಬಲವಂತವಾಗಿ, ಯಾವುದೇ ಪರಿಹಾರ ನೀಡದೆ ಭೂ ಸ್ವಾಧೀನಕ್ಕೆ ಅವಕಾಶ ನೀಡಿರುವ ಕರ್ನಾಟಕ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ 2019 ರದ್ದಾಗಬೇಕು. ಈ ಕೂಡಲೇ ಹೆದ್ದಾರಿ ಕಾಮಗಾರಿಗೆ ಭೂಮಿ ಕಳೆದುಕೊಂಡಿರುವ ರೈತ ರಂಗಣ್ಣ ಕುಟುಂಬಕ್ಕೆ ಭೂ ಸ್ವಾಧೀನ ಪರಿಹಾರ ಹಣವನ್ನು 2013ರ ಕಾಯ್ದೆ ಪ್ರಕಾರ ಮಾರುಕಟ್ಟೆ ದರದ ನಾಲ್ಕು ಪಟ್ಟು ಪಾವತಿಸಬೇಕು. ಹೆದ್ದಾರಿ ಪ್ರಾಧಿಕಾರದ ಹಾಗೂ ರಾಜ್ಯ ಸರ್ಕಾರದ ಕಿರುಕುಳದಿಂದ ಪ್ರಾಣ ಕಳೆದುಕೊಂಡ ರಂಗಣ್ಣರವರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಖಾಯಂ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.


