ಭಾರತೀಯ ಔಷಧ ನಿಯಂತ್ರಕ ಈಗಾಗಲೇ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಇದರ ಬೆನ್ನಿಗೆ ದೇಶಿಯವಾಗಿ ಅಭಿವೃದ್ಧಿ ಪಡಿಸಲಾಗಿರುವ ’ಕೊವ್ಯಾಕ್ಸಿನ್’ ಲಸಿಕೆಯ ಬಗ್ಗೆ ಹಲವಾರು ಅನುಮಾನಗಳು ಎದ್ದಿದೆ. ಕಾಂಗ್ರೆಸ್ ಪಕ್ಷವು ಕೋವ್ಯಾಕ್ಸಿನ್ ಲಸಿಕೆಯ 3 ನೇ ಹಂತದ ಪ್ರಯೋಗ ಇನ್ನೂ ಮುಗಿದಿಲ್ಲ. ಒಕ್ಕೂಟ ಸರ್ಕಾರದ ನಿರ್ಧಾರವು ಅಕಾಲಿಕವಾಗಿದ್ದು, ಅಪಾಯಕಾರಿ ಎನಿಸಿಕೊಳ್ಳಬಹುದು ಎಂದು ಎಚ್ಚರಿಸಿದೆ.
ಇದನ್ನೂ ಓದಿ: ಲಸಿಕೆಯ ಲಗುಬಗೆಯ ಲೋ ಪಾಲಿಟಿಕ್ಸ್? – ಏಕೈಕ ’ದೇಸಿ’ ಲಸಿಕೆ ಕೊವಾಕ್ಸಿನ್ ಎಷ್ಟು ಸುರಕ್ಷಿತ?
ಗೃಹ ಸಚಿವಾಲಯದ ಸಂಸದೀಯ ಸಮಿತಿಯ ಮುಖ್ಯಸ್ಥರಾಗಿರುವ, ಕಾಂಗ್ರೆಸ್ನ ಹಿರಿಯ ಮುಖಂಡ ಆನಂದ್ ಶರ್ಮಾ, “ತಜ್ಞರ ಸಮಿತಿಯ ಮುಂದೆ ಸಲ್ಲಿಸಿದ ವರದಿ ಪ್ರಕಾರ, ಮೂರನೇ ಹಂತದ ಪ್ರಯೋಗಗಳು ಪೂರ್ಣಗೊಂಡಿಲ್ಲ. ಸುರಕ್ಷತೆ, ಪರಿಣಾಮಕಾರಿತ್ವದ ಅಂಕಿಅಂಶವನ್ನು ಪರಿಶೀಲಿಸಲಾಗಿಲ್ಲ. ಕಡ್ಡಾಯ ಮೂರನೇ ಹಂತದ ಪ್ರಯೋಗಗಳು ಹಾಗೂ ದತ್ತಾಂಶ ಪರಿಶೀಲನೆಯನ್ನು ಯಾವುದೇ ದೇಶ ವಿತರಿಸದ ಕಾರಣ ಲಸಿಕೆ ಬಳಕೆಗೆ ಅನುಮತಿ ನೀಡುವ ವಿಷಯವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗಿದೆ” ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ಕಾಂಗ್ರೆಸ್ನ ಮತ್ತೊಬ್ಬ ನಾಯಕ ಶಶಿ ತರೂರ್ ಕೂಡಾ ಕೊವ್ಯಾಕ್ಸಿನ್ ಲಸಿಕಯ ತರ್ತು ಬಳಕೆಯ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದಾರೆ. “ಕೊವ್ಯಾಕ್ಸಿನ್ ಇನ್ನೂ 3ನೇ ಹಂತದ ಪ್ರಯೋಗವನ್ನು ಮುಗಿಸಿಲ್ಲ. ಈ ನಿರ್ಧಾರವು ಅಕಾಲಿಕವಾಗಿದ್ದು, ಅಪಾಯಕಾರಿ ಎನಿಸಿಕೊಳ್ಳಬಹುದು. ಸಂಪೂರ್ಣ ಕ್ಲಿನಿಕಲ್ ಪ್ರಯೋಗಗಳು ಮುಗಿಯುವವರೆಗೂ ಇದರ ಬಳಕೆಯನ್ನು ತಪ್ಪಿಸಬೇಕು. ಈ ಮಧ್ಯೆ ಆಸ್ಟ್ರಾಝೆನೆಕಾ ಲಸಿಕೆಯೊಂದಿಗೆ ಭಾರತ ಮುಂದುವರಿಯಬಹುದು” ಎಂದು ಹೇಳಿರುವ ಶಶಿ ತರೂರ್, ಇದರ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಂದಲೂ ಸ್ಪಷ್ಟನೆ ಕೇಳಿದ್ದಾರೆ.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಒಕ್ಕೂಟ ಸರ್ಕಾರ