ಒಕ್ಕೂಟ ಸರ್ಕಾರದ ಸಚಿವೆ, ಆಪ್ನಾ ದಳ (ಎಸ್) ನಾಯಕಿ ಅನುಪ್ರಿಯಾ ಪಟೇಲ್ ಅವರು, “ತಮ್ಮ ಪಕ್ಷವು ಮಿತ್ರ ಪಕ್ಷ ಬಿಜೆಪಿಗಿಂತ ಸೈದ್ಧಾಂತಿಕವಾಗಿ ಭಿನ್ನವಾಗಿದೆ ಮತ್ತು ‘ಹಿಂದುತ್ವ ಹಾಗೂ ಅದರ ಎಲ್ಲಾ ವಿಷಯಗಳೊಂದಿಗೆ’ ನಮಗೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ಮುಸ್ಲಿಂ ಅಭ್ಯರ್ಥಿಗಳು ತಮ್ಮ ಪಕ್ಷಕ್ಕೆ ಅಸ್ಪೃಶ್ಯರಲ್ಲ ಎಂದು ಹೇಳಿದ ಅವರು, ಅಪ್ನಾ ದಳ (ಎಸ್) ಸಾಮಾಜಿಕ ನ್ಯಾಯದ ಪರವಾಗಿ ನಿಂತಿದೆ ಎಂದು ಹೇಳಿದ್ದಾರೆ. ಫೆಬ್ರವರಿ 10 ರಂದು ಉತ್ತರ ಪ್ರದೇಶದಲ್ಲಿ ಏಳು ಹಂತಗಳ ವಿಧಾನಸಭೆ ಚುನಾವಣೆ ಆರಂಭವಾಗಲಿದೆ.
ಇದನ್ನೂ ಓದಿ: ಚುನಾವಣೆ- 2022: ಗೋವಾ-ಮಣಿಪುರಕ್ಕೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಯುಪಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮುಂದೂಡಿದ ಬಿಜೆಪಿ!
“ಹೌದು ನಾವು ಬಿಜೆಪಿಗಿಂತ ಸೈದ್ಧಾಂತಿಕವಾಗಿ ಭಿನ್ನರು. ಜನರು ನನಗೆ ಹಿಂದುತ್ವ ಮತ್ತು ಅದರ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸುತ್ತಿದ್ದಾರೆ. ನಾನು ಈ ಎಲ್ಲಾ ಸಮಸ್ಯೆಗಳಿಂದ ದೂರವಿರುತ್ತೇನೆ ಮತ್ತು ನನ್ನ ಪಕ್ಷವು ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ. ನಾವು ಸಾಮಾಜಿಕ ನ್ಯಾಯಕ್ಕಾಗಿ ನಿಲ್ಲುತ್ತೇವೆ. ಅದು ನಮ್ಮ ಸಿದ್ಧಾಂತ” ಎಂದು ಅನುಪ್ರಿಯಾ ಪಟೇಲ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
“ನಾವು ಬೀದಿಗಳಲ್ಲಿ ಅಥವಾ ಸಂಸತ್ತಿನಲ್ಲಿ ಯಾವಾಗಲೂ ಸಮಾಜದ ಅಂಚಿನಲ್ಲಿರುವ ವರ್ಗಗಳಿಗಾಗಿ ಕೆಲಸ ಮಾಡಿದ್ದೇವೆ. ಇದು ನಮ್ಮ ತತ್ವ ಮತ್ತು ಸ್ಥಾಪಕ ಸಿದ್ದಾಂತಗಳಾಗಿವೆ. ನಾವು ಅದಕ್ಕೆ ಅಂಟಿಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳು ಮತ್ತು 2017 ರ ವಿಧಾನಸಭಾ ಚುನಾವಣೆಗಳ ಸಮಯ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಅಪ್ನಾ ದಳ (ಎಸ್) ಮೊದಲ ಬಾರಿಗೆ ತನ್ನ ಪಟ್ಟಿಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹೊಂದಿದೆ.
ಇದನ್ನೂ ಓದಿ: ಯುಪಿ ಚುನಾವಣೆ: ಬದಲಾವಣೆ ಎದುರು ನೋಡುತ್ತಿರುವ ‘ದಲಿತ ರಾಜಧಾನಿ’ ಆಗ್ರಾ
ಕಾಂಗ್ರೆಸ್ ಹಿರಿಯ ನಾಯಕಿ ಬೇಗಂ ನೂರ್ ಬಾನೊ ಅವರ ಮೊಮ್ಮಗ ಹೈದರ್ ಅಲಿ ಅವರು ಅಪ್ನಾ ದಳ (ಎಸ್) ಘೋಷಿಸಿದ ಮೊದಲ ಅಭ್ಯರ್ಥಿಯಾಗಿದ್ದಾರೆ. ನೂರ್ ಬಾನೊ ಅವರು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ವಿರುದ್ಧ ಸುವಾರ್ನಿಂದ ಸ್ಪರ್ಧಿಸುತ್ತಿದ್ದಾರೆ.
ಕಳೆದ ಬಾರಿ ಬಿಜೆಪಿ ಮೈತ್ರಿ ಪಕ್ಷಗಳಿಂದ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿ ಯಾಕೆ ಇರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅನುಪ್ರಿಯ ಪಟೇಲ್ ತಮ್ಮ ಪಕ್ಷವು ಅಭ್ಯರ್ಥಿಗಳನ್ನು ಧರ್ಮದ ಚೌಕಟ್ಟಿನಿಂದ ನೋಡುವುದಿಲ್ಲ ಎಂದು ಹೇಳಿದ್ದಾರೆ. “ಪ್ರತಿಯೊಬ್ಬರೂ ಅಭ್ಯರ್ಥಿಯನ್ನು ಧರ್ಮದ ದೃಷ್ಟಿಕೋನದಿಂದ ಏಕೆ ನೋಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಅವರು ಉತ್ತಮ ಶಿಕ್ಷಣ ಪಡೆದಿರುವ ಭರವಸೆಯ ಯುವಕ” ಎಂದು ಪಟೇಲ್ ಹೇಳಿದ್ದಾರೆ.
“ಪಕ್ಷದ ಸಂಸ್ಥಾಪಕ ಸೋನೆಲಾಲ್ ಪಟೇಲ್ ಜೀವಂತವಾಗಿದ್ದಾಗ ಪಕ್ಷದ ಮೊದಲ ಶಾಸಕರು ಪ್ರತಾಪಗಢ ಸದರ್ ಕ್ಷೇತ್ರವನ್ನು ಗೆದ್ದ ಮುಸ್ಲಿಂ ಮತ್ತು ಅವರ ಹೆಸರು ಹಾಜಿ ಮುನ್ನಾ. ಅನೇಕ ಮುಸ್ಲಿಮರು ಅಪ್ನಾ ದಳದ ರಾಜ್ಯಾಧ್ಯಕ್ಷರಾಗಿದ್ದಾರೆ. ನನ್ನ ಪಕ್ಷಕ್ಕೆ ಮುಸ್ಲಿಮರು ಅಸ್ಪೃಶ್ಯರಲ್ಲ ಮತ್ತು ನಾನು ಅಭ್ಯರ್ಥಿಗಳನ್ನು ಅವರ ಧರ್ಮದ ಹಿನ್ನಲೆಯಲ್ಲಿ ನೋಡುವುದಿಲ್ಲ” ಎಂದು ಅನುಪ್ರಿಯ ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ಯುಪಿ ರೈತರಿಗೆ ಎಸ್ಕೆಎಂ ಮನವಿ
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಚಿವರಾಗಿರುವ ಅನುಪ್ರಿಯಾ ಪಟೇಲ್, ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಲ್ಲಿ ಅಪ್ನಾ ದಳ (ಎಸ್) ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ. ಪಕ್ಷವು ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ನೀಟ್ ಪರೀಕ್ಷೆಗಳಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯ ವಿಷಯವನ್ನು ಈ ಹಿಂದೆ ಎತ್ತಿತ್ತು.
ಉತ್ತರ ಪ್ರದೇಶದ ಚಿತ್ತವು ಎನ್ಡಿಎ ಪರವಾಗಿದ್ದು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಸರ್ಕಾರ ರಚಿಸಲಿದೆ ಎಂದು ಅವರು ಹೇಳಿದ್ದಾರೆ. “ಮೂಡ್ ತುಂಬಾ ಸ್ಪಷ್ಟವಾಗಿದೆ. ನಾವು ಉತ್ತರ ಪ್ರದೇಶದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ. ಉತ್ತರ ಪ್ರದೇಶದಲ್ಲಿ ಜನರು ಉತ್ತಮ ಆಡಳಿತ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಕಂಡಿದ್ದಾರೆ. ನಾವು ರಾಜ್ಯದ ಜನರ ನಿರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಯಿತು ಎಂದು ನಾನು ಭಾವಿಸುತ್ತೇನೆ. ಜನರು ರಾಜ್ಯದಲ್ಲಿ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಂತರ್ಗತ ಬೆಳವಣಿಗೆಯನ್ನು ಕಂಡಿದ್ದಾರೆ, ಹೀಗಾಗಿ ನಮಗೆ ಬೆಂಬಲ ನೀಡುತ್ತಾರೆ” ಎಂದು ಪಟೇಲ್ ಹೇಳಿದರು.
ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ತೊರೆದ ಹಲವು ಒಬಿಸಿ ಮುಖಂಡರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುಪ್ರಿಯ ಪಟೇಲ್, “ಚುನಾವಣೆಗೂ ಮುನ್ನ ಇದು ಸಾಮಾನ್ಯ ಪ್ರವೃತ್ತಿಯಾಗಿದೆ” ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ, ಅಪ್ನಾ ದಳವು 13 ಅಭ್ಯರ್ಥಿಗಳನ್ನು ಘೋಷಿಸಿದೆ ಮತ್ತು 403 ಸದಸ್ಯ ಬಲವಿರುವ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮತ್ತೇ ಐದು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ನಿರೀಕ್ಷೆಯಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 11 ಸ್ಥಾನಗಳಲ್ಲಿ ಸ್ಪರ್ಧಿಸಿ 9 ಸ್ಥಾನಗಳನ್ನು ಗೆದ್ದಿತ್ತು. ಅಪ್ನಾ ದಳ (ಎಸ್) ಲೋಕಸಭೆಯಲ್ಲಿ ಇಬ್ಬರು ಸಂಸದರನ್ನು ಹೊಂದಿದೆ.
ಇದನ್ನೂ ಓದಿ: ಯುಪಿ ಚುನಾವಣೆ: ಬಿಜೆಪಿ ಮೈತ್ರಿ ಆಹ್ವಾನ ತಿರಸ್ಕರಿಸಿದ RLD ಮುಖ್ಯಸ್ಥ ಜಯಂತ್ ಚೌಧರಿ


