ಎಐಎಂಐಎಂ ಮುಖ್ಯಸ್ಥ ಮತ್ತು ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಒಕ್ಕೂಟ ಸರ್ಕಾರ ‘Z’ ಶ್ರೇಣಿಯ ಭದ್ರತೆ ನೀಡುವುದಾಗಿ ತಿಳಿಸಿತ್ತು. ಭದ್ರತೆ ಬೇಡ ಎಂದಿರುವ ಓವೈಸಿ ಅವರಿಗೆ ಭದ್ರತೆ ಸ್ವೀಕರಿಸುವಂತೆ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.
ಕಳೆದ ವಾರ ಆರಂಭದಲ್ಲಿ ಉತ್ತರ ಪ್ರದೇಶದ ಚುನಾವಣೆ ಪ್ರಚಾರದಿಂದ ಹಿಂದಿರುಗುತ್ತಿದ್ದ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಬಳಿಕ ಒಕ್ಕೂಟ ಸರ್ಕಾರ ‘Z’ ಶ್ರೇಣಿಯ ಭದ್ರತೆಯನ್ನು ನೀಡುವುದಾಗಿ ಪ್ರಸ್ತಾಪಿಸಿತ್ತು. ಆದರೆ ನನಗೆ ಭದ್ರತೆ ಬೇಡ ಎಂದು ಓವೈಸಿ ತಿಳಿಸಿದ್ದರು. ಹೀಗಾಗಿ ಭದ್ರತೆಯನ್ನು ಸ್ವೀಕರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದ್ದಾರೆ.
“ಓವೈಸಿ ಅವರ ಭದ್ರತೆಗೆ ಬೆದರಿಕೆ ಇದೆ.ಸರ್ಕಾರವು ‘ಝಡ್’ ಕೆಟಗರಿ ಭದ್ರತೆ (ಬುಲೆಟ್ ಪ್ರೂಫ್ ಸಹಿತ) ಕಾರನ್ನು ನೀಡಲು ನಿರ್ಧರಿಸಿದೆ. ಆದರೆ ಅವರು ನಿರಾಕರಿಸಿದ್ದಾರೆ. ಅವರು ಈ ಭದ್ರತೆಯನ್ನು ಸ್ವೀಕರಿಸಲು ನಾನು ಸದನದ ಸದಸ್ಯರ ಮೂಲಕ ವಿನಂತಿಸುತ್ತೇನೆ” ಎಂದು ಅಮಿತ್ ಶಾ ಸಂಸತ್ತಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರ 10 ಎವರ್ಗ್ರೀನ್ ಹಾಡುಗಳು
ಉತ್ತರ ಪ್ರದೇಶದ ಮೀರತ್ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ಎಐಎಂಐಎಂ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡಿನ ದಾಳಿಯಾಗಿತ್ತು. ಪ್ರಕರಣದಲ್ಲಿ ಬಂಧಿತ ಇಬ್ಬರನ್ನು 14 ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದೆ.
“ಇಬ್ಬರು ಅಪರಿಚಿತರು ಗುಂಡು ಹಾರಿಸಿದ್ದರು. ಅವರು (ಓವೈಸಿ) ಅಪಾಯದಿಮದ ಪಾರಾದರು. ಆದರೆ ಅವರ ವಾಹನದಲ್ಲಿ ಮೂರು ಗುಂಡಿನ ಗುರುತುಗಳು ಇವೆ. ಘಟನೆಯಲ್ಲಿ ಮೂವರು ಸಾಕ್ಷಿಗಳು ಇದ್ದು, ಎಫ್ಐಆರ್ ದಾಖಲಾಗಿದೆ. ಇದುವರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಪೊಲೀಸರು ಎರಡು ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಮಾರುತಿ ಆಲ್ಟೊ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಯುಪಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದೆ” ಎಂದು ಗೃಹ ಸಚಿವರು ತಿಳಿಸಿದ್ದಾರೆ.
“ಮೀರತ್ನ ಕಿಥೌರ್ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ನಾನು ದೆಹಲಿಗೆ ಹೊರಟಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ನನ್ನ ವಾಹನದ ಮೇಲೆ ಮೂರರಿಂದ ನಾಲ್ಕು ಸುತ್ತಿನ ಬುಲೆಟ್ಗಳನ್ನು ಹಾರಿಸಿಸಲಾಗಿದೆ. ಒಟ್ಟು 3 ರಿಂದ 4 ಮಂದಿಯಿದ್ದರು. ನನ್ನ ವಾಹನದ ಟೈರ್ (ಚಿತ್ರದಲ್ಲಿ) ಪಂಕ್ಚರ್ ಆಗಿದೆ, ಹೀಗಾಗಿ ನಾನು ಇನ್ನೊಂದು ವಾಹನದಲ್ಲಿ ಹೊರಟೆ” ಎಂದು ಫೆಬ್ರವರಿ 3 ರಂದು ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದರು.
कुछ देर पहले छिजारसी टोल गेट पर मेरी गाड़ी पर गोलियाँ चलाई गयी। 4 राउंड फ़ायर हुए। 3-4 लोग थे, सब के सब भाग गए और हथियार वहीं छोड़ गए। मेरी गाड़ी पंक्चर हो गयी, लेकिन मैं दूसरी गाड़ी में बैठ कर वहाँ से निकल गया। हम सब महफ़ूज़ हैं। अलहमदु’लिलाह। pic.twitter.com/Q55qJbYRih
— Asaduddin Owaisi (@asadowaisi) February 3, 2022
ಬಳಿಕ ಒಕ್ಕೂಟ ಸರ್ಕಾರ ಭದ್ರತೆ ನೀಡುವುದಾಗಿ ತಿಳಿಸಿತ್ತು. “ನನಗೆ ‘Z’ ಶ್ರೇಣಿಯ ಭದ್ರತೆ ಬೇಡ. ನಾನು A ವರ್ಗದ ಪ್ರಜೆಯಾಗಲು ಬಯಸುತ್ತೇನೆ. ನನ್ನ ಮೇಲೆ ಗುಂಡು ಹಾರಿಸಿದವರ ವಿರುದ್ಧ UAPA ಏಕೆ ಜಾರಿ ಮಾಡಲಿಲ್ಲ?. ನಾನು ಬದುಕಲು ಬಯಸುತ್ತೇನೆ, ಮಾತನಾಡಲು ಬಯಸುತ್ತೇನೆ. ಬಡವರು ಸುರಕ್ಷಿತವಾಗಿದ್ದಾಗ ನನ್ನ ಜೀವನ ಸುರಕ್ಷಿತವಾಗಿರುತ್ತದೆ. ನನ್ನ ಕಾರಿಗೆ ಗುಂಡು ಹಾರಿಸಿದವರಿಂದ ನಾನು ಹೆದರುವುದಿಲ್ಲ” ಎಂದು ಓವೈಸಿ ಕಳೆದ ವಾರ ಸಂಸತ್ತಿನಲ್ಲಿ ಹೇಳಿದ್ದರು.
ಇತ್ತ, ಚುನಾವಣಾ ಅವಧಿಯಲ್ಲಿ ತಮ್ಮ ರಾಜ್ಯಗಳೊಳಗಿನ ಚುನಾವಣೆ ಪ್ರಚಾರಕ್ಕೆ ಬರುವ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.
ಇದನ್ನೂ ಓದಿ: ಓವೈಸಿ ಕಾರಿನ ಮೇಲೆ ದಾಳಿ ಬೆನ್ನಲ್ಲೇ ಸ್ಟಾರ್ ಪ್ರಚಾರಕರಿಗೆ ಭದ್ರತೆ ನೀಡಲು ಚುನಾವಣಾ ಆಯೋಗ ಸೂಚನೆ