ಇಂದು ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ಬಿಜ್ನೋರ್ನಲ್ಲಿ ನಡೆಸಬೇಕಿದ್ದ ತಮ್ಮ ಮೊದಲ ಚುನಾವಣಾ ರ್ಯಾಲಿಯನ್ನು ಹವಾಮಾನ ವೈಪರೀತ್ಯದ ಕಾರಣಕ್ಕಾಗಿ ರದ್ದುಗೊಳಿಸಿದ್ದಾರೆ. ಅದಕ್ಕೆ ಬದಲಾಗಿ ಆನ್ಲೈನ್ನಲ್ಲಿ ವರ್ಚುವಲ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಈ ಕುರಿತು ವ್ಯಂಗ್ಯವಾಡಿರುವ ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ, “ಬಿಜೆಪಿಯು ತಾನು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಹಾಗಾಗಿ ಯುಪಿ ಜನರನ್ನು ಎದುರಿಸಲು ಭಯಪಡುತ್ತಿದೆ. ಹಾಗಾಗಿಯೇ ಪ್ರಧಾನಿ ತಮ್ಮ ಚುನಾವಣಾ ರ್ಯಾಲಿ ರದ್ದುಗೊಳಿಸಿದ್ದಾರೆ” ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಬಿಜ್ನೋರ್ನಲ್ಲಿ ಬಿಸಿಲಿದೆ, ಆದರೆ ಬಿಜೆಪಿಯ ವಾತಾವರಣ ಕೆಟ್ಟಿದೆ!” ಎಂದಿದ್ದು, ಪ್ರಧಾನಿ ಮೋದಿ ಚುನಾವಣಾ ರ್ಯಾಲಿ ರದ್ದುಗೊಳಿಸಲು ಕೊಟ್ಟಿರುವ ಕಾರಣ ಮತ್ತು ಬಿಜ್ನೋರ್ನಲ್ಲಿ 17 ಡಿಗ್ರಿ ಸೆಲ್ಸಿಯಸ್ ಬಿಸಿಲಿರುವ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ.
बिजनौर में धूप खिल रही है, लेकिन भाजपा का मौसम ख़राब है! pic.twitter.com/7PYs4ceynu
— Jayant Singh (@jayantrld) February 7, 2022
ಪ್ರಧಾನಿಯವರು ಇಂದು ಬಿಜ್ನೋರ್ಗೆ ಆಗಮಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣದಿಂದ ಅವರ ಹೆಲಿಕ್ಯಾಪ್ಟರ್ ಇಳಿಯಲು ಸಾಧ್ಯವಿಲ್ಲ ಎಂಬ ಕಾರಣದಿಂದ ಆನ್ಲೈನ್ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ವಂಶವಾಹಿ ರಾಜಕಾರಣ ಮಾಡುವ ನಕಲಿ ಸಮಾಜವಾದಿಗಳು ಎಂದು ಟೀಕಿಸಿದ್ದಾರೆ. ಅದಕ್ಕೆ ಉತ್ತರವಾಗಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಆರ್ಎಲ್ಡಿಯ ಜಯಂತ್ ಚೌಧರಿ “ಯುಪಿಯ ಬಿಜ್ನೋರ್ನಲ್ಲಿ ಬಿಸಿಲಿದ್ದು, ಹವಾಮಾನ ಚೆನ್ನಾಗಿದೆ. ಆದರೆ ಬಿಜೆಪಿಯ ಹವಾಮಾನ ಕೆಟ್ಟಿದೆ. ಕೊಟ್ಟ ಮಾತು ತಪ್ಪಿಸಿಕೊಂಡಿರುವ ಬಿಜೆಪಿ ಮುಖಂಡರು ಜನರನ್ನು ನೇರವಾಗಿ ಭೇಟಿಯಾಗಲು ಹೆದರುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಭದ್ರ ನೆಲೆ ಜೊತೆಗೆ ಜಾಟ್ ಸಮುದಾಯ ಹಾಗೂ ರೈತರ ಬೆಂಬಲ ಪಡೆದಿರುವ ಆರ್ಎಲ್ಡಿ ಪಕ್ಷವು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಇಳಿದಿದೆ. ಆದರೆ ಬಿಜೆಪಿಯು ಜಯಂತ್ ಚೌಧರಿ ತಮ್ಮೊಡನೆ ಬರುವಂತೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಅದನ್ನು ಜಯಂತ್ ಚೌಧರಿ ತಿರಸ್ಕರಿಸಿದ್ದಾರೆ ಮಾತ್ರವಲ್ಲದೇ ಬಿಜೆಪಿ ವಿರುದ್ಧ ನಿರಂತರ ಟೀಕೆ ಮುಂದುವರೆಸಿದ್ದಾರೆ.
ಇದನ್ನೂ ಓದಿ; ತ್ರಿಪುರಾ: ಮಾಜಿ ಸಚಿವ ಸೇರಿದಂತೆ ಇಬ್ಬರು BJP ಶಾಸಕರು ರಾಜೀನಾಮೆ