Homeಮುಖಪುಟಯುಪಿ ಚುನಾವಣೆ: ಬದಲಾವಣೆ ಎದುರು ನೋಡುತ್ತಿರುವ ‘ದಲಿತ ರಾಜಧಾನಿ’ ಆಗ್ರಾ

ಯುಪಿ ಚುನಾವಣೆ: ಬದಲಾವಣೆ ಎದುರು ನೋಡುತ್ತಿರುವ ‘ದಲಿತ ರಾಜಧಾನಿ’ ಆಗ್ರಾ

- Advertisement -
- Advertisement -

ತಾಜ್‌ಮಹಲ್ ಸಿಟಿ ಎಂದು ಕರೆಸಿಕೊಳ್ಳುವ ನಗರ ಆಗ್ರಾ. ಈ ಜಿಲ್ಲೆಯಲ್ಲಿರುವ ಜನಸಂಖ್ಯೆಯಲ್ಲಿ 21% ದಲಿತರು. ಅವರೆಲ್ಲರೂ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ.

42 ವರ್ಷದ ಸೋಹನ್ ಸಿಂಗ್ ಅವರು ಮಾಯಾವತಿಯವರ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಕಟ್ಟಾ ಬೆಂಬಲಿಗರು. ಸೋಹನ್ ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಅವರು ಫತೇಹಾಬಾದ್ ಪ್ರದೇಶದಲ್ಲಿ ಸಣ್ಣ ವೀಳ್ಯದೆಲೆ ಅಂಗಡಿಯನ್ನು ನಡೆಸುತ್ತಿದ್ದಾರೆ. ಬಿಎಸ್‌ಪಿಗೆ ಮತ ಹಾಕುವ ವಿಚಾರದಲ್ಲಿ ಅವರು ಇತ್ತೀಚೆಗೆ ತಮ್ಮ ಅಂಗಡಿ ಬಂದ ಗ್ರಾಹಕರೊಂದಿಗೆ ವಾಗ್ವಾದ ನಡೆಸಿದ್ದರು.

ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ಯುಪಿ ರೈತರಿಗೆ ಎಸ್‌ಕೆಎಂ ಮನವಿ

ಗ್ರಾಹಕರು ತಮ್ಮ ವಾದದಲ್ಲಿ, “ಆಗ್ರಾ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದರೂ, ಮಾಯಾವತಿಯಾಗಲಿ ಅಥವಾ ಅವರ ಕಾರ್ಯಕರ್ತರಾಗಲಿ ಬಂದು ತಮ್ಮ ಜನರ ಸಮಸ್ಯೆಗಳನ್ನು ಆಲಿಸಲಿಲ್ಲ. ಆದ್ದರಿಂದ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದು ಉತ್ತಮ” ಎಂದು ಹೇಳಿದ್ದಾರೆ. ತನ್ನ ಗ್ರಾಹಕರ ಹೇಳಿಕೆಯಿಂದ ಕೆರಳಿದ ಸೋಹನ್‌, ಬಿಎಸ್‌ಪಿಗೆ ಪರ್ಯಾಯವಾಗಿ ಇತರ ಪಕ್ಷಗಳನ್ನು ಆಯ್ಕೆಯಾಗಿ ನೋಡುವ ಜನರ ಬೆಂಬಲದ ಅಗತ್ಯ ತಮ್ಮ ಪಕ್ಷಕ್ಕಿಲ್ಲ ಎಂದು ಕೂಗಾಡಿದರು.

ತಾಜ್ ಮಹಲ್ ನಗರ ಎಂದು ಕರೆಯುವುದರ ಹೊರತಾಗಿ, ಆಗ್ರಾವನ್ನು ಉತ್ತರ ಪ್ರದೇಶದ ದಲಿತ ರಾಜಧಾನಿ ಎಂದೂ ಕರೆಯಲಾಗುತ್ತದೆ. ಅದರ ಜನಸಂಖ್ಯೆಯ ಸುಮಾರು ಐದನೇ ಒಂದು ಭಾಗದಷ್ಟು ಪರಿಶಿಷ್ಟ ಜಾತಿಗೆ ಸೇರಿದ ಜನರಿದ್ದಾರೆ. ತಾಜ್ ಜಿಲ್ಲೆಯಲ್ಲಿ ಒಂಭತ್ತು ವಿಧಾನಸಭಾ ಕ್ಷೇತ್ರಗಳಿದ್ದು, ಇವೆಲ್ಲವೂ ಬಿಜೆಪಿಯ ವಶದಲ್ಲಿವೆ. 2017ರ ಮೊದಲು ಒಂಭತ್ತು ಕ್ಷೇತ್ರಗಳ ಪೈಕಿ ಆರರಲ್ಲಿ ಬಿಎಸ್‌ಪಿ ಪ್ರಾಬಲ್ಯ ಹೊಂದಿತ್ತು.

ಆಗ್ರಾದಲ್ಲಿರುವ ದಲಿತ ಸಮುದಾಯದ ಹೆಚ್ಚಿನ ಜನರು ದೊಡ್ಡ ಶೂ ಉದ್ಯಮ, ಶುಚಿಗೊಳಿಸುವ ಉದ್ಯಮ ಮತ್ತು ಚರ್ಮದ ಉದ್ಯಮವನ್ನು ಅವಲಂಭಿಸಿದ್ದಾರೆ. ಆದರೆ, ಇತ್ತೀಚೆಗೆ ಹತ್ರಾಸ್‌ನಲ್ಲಿ ಪೊಲೀಸ್ ವಶದಲ್ಲಿ ವಾಲ್ಮೀಕಿ ಸಮುದಾಯದ ಯುವಕನ ಸಾವು ಮತ್ತು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಜಿಲ್ಲೆಯ ದಲಿತರನ್ನು ಅಸಮಾಧಾನಗೊಳಿಸಿವೆ.

ಇದನ್ನೂ ಓದಿ: ಯುಪಿ ಚುನಾವಣೆ: ರೈತ ಆಕ್ರೋಶದ ಜಿಲ್ಲೆ ಲಖಿಂಪುರ್‌ ಖೇರಿಯಲ್ಲಿ ಪ್ರಚಾರ ನಡೆಸಲಿರುವ ರಾಜನಾಥ್ ಸಿಂಗ್

20,000 ಕ್ಕೂ ಹೆಚ್ಚು ದಲಿತರು ವಾಸಿಸುವ ಲೋಹಾ ಮಂಡಿಯ ವಾಲ್ಮೀಕಿ ನಗರದ ನಿವಾಸಿ ಸ್ವಚ್ಛತಾ ಕಾರ್ಮಿಕ ಸೌರಭ್ ಪ್ರಕಾರ, ತಮ್ಮ ಸಮುದಾಯಕ್ಕೆ ತಮ್ಮದೇ ನಾಯಕನ ಅಗತ್ಯವಿದೆ. “ನಮಗೆ ಶಿಕ್ಷಣ ಬೇಕು, ನಮಗೆ ಉತ್ತಮ ಸೌಲಭ್ಯಗಳು ಬೇಕು, ನಮಗೆ ಗೌರವ ಬೇಕು. ವಾಲ್ಮೀಕಿ ಸಮುದಾಯ ಅಥವಾ ಪರಿಶಿಷ್ಟ ಜಾತಿಗೆ ಸೇರಿದವರು ಎಂದರೆ ನಾವು ಕೇವಲ ಶುಚಿಗೊಳಿಸುವಿಕೆ ಅಥವಾ ನೈರ್ಮಲ್ಯ ಕಾರ್ಯಗಳನ್ನು ಮಾತ್ರ ಮಾಡುವ ಜನರು ಎಂದು ಅರ್ಥವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗ್ರಾದಲ್ಲಿ ಇತ್ತೀಚೆಗೆ ಪೊಲೀಸ್ ವಶದಲ್ಲಿದ್ದ ನೈರ್ಮಲ್ಯ ಕಾರ್ಯಕರ್ತನ ಸಾವಿನ ಬಗ್ಗೆ ಉಲ್ಲೇಖಿಸಿದ ಅವರು, “ನಮ್ಮ ಸಹೋದರ ಅರುಣ್ ವಾಲ್ಮೀಕಿ ಕೂಡ ನೈರ್ಮಲ್ಯ ಕಾರ್ಯಕರ್ತರಾಗಿದ್ದರು. ಅವರು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪೊಲೀಸರಿಂದ ಕೊಲ್ಲಲ್ಪಟ್ಟರು. ವಾಲ್ಮೀಕಿಗಳು ಮನುಷ್ಯರಲ್ಲವೇ ಅಥವಾ ನಮ್ಮ ಜೀವನ ಯಾರಿಗೂ ಮುಖ್ಯವಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.

“ವಾಲ್ಮೀಕಿನಗರದಲ್ಲಿ ಹಾದು ಹೋಗಿರುವ ದೊಡ್ಡ ಚರಂಡಿಯಿಂದ ದುರ್ನಾತ ಬರುತ್ತಿತ್ತು. ಆದರೂ, ತಮ್ಮ ಸಮಸ್ಯೆಯನ್ನು ಪಕ್ಕಕ್ಕಿಟ್ಟು, 2017ರಲ್ಲಿ ಹಿಂದುತ್ವದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಮತ ಹಾಕಿದ್ದೆವು. ಆದರೆ, ಈಗ ನಾವು ಎಚ್ಚೆತ್ತುಕೊಂಡಿದ್ದೇವೆ. ನಮಗೆ ಹಿಂದೂತ್ವ ಬೇಡ, ಸಮಸ್ಯೆಗೆ ಪರಿಹಾರ ಬೇಕು” ಎಂದು ಸೌರಭ್ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ: ಯಾವ ಪಕ್ಷಕ್ಕೂ ಇಲ್ಲ ರೈತರ ಮತ, ನೋಟಾದತ್ತ ಎಲ್ಲರ ಚಿತ್ತ

ಆಗ್ರಾದಿಂದ ಸುಮಾರು ನೂರು ಕಿ.ಮೀ. ದೂರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಅರುಣ್ ವಾಲ್ಮೀಕಿ ಮನೆ ಇದೆ. ಆದರೆ, ಅವರ ಸಾವು ಹೃದಯಾಘಾತವಲ್ಲ ಪೊಲೀಸ್ ವಶದಲ್ಲಿ ಅವರ ಹತ್ಯೆಯಾಗಿದೆ ಎಂದು ಕುಟುಂಬ ಮತ್ತು ಸಮುದಾಯದವರು ಆರೋಪಿಸಿದ್ದಾರೆ. 31 ವರ್ಷದ ಈ ನೈರ್ಮಲ್ಯ ಕಾರ್ಯಕರ್ತನ ಸಾವು ಜಿಲ್ಲೆಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಅರುಣ್ ವಾಲ್ಮೀಕಿ ಅವರ ಕುಟುಂಬ ಸದಸ್ಯರನ್ನು ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ ಮತ್ತು ಇತರ ರಾಜಕೀಯ ಪಕ್ಷದ ಮುಖಂಡರು ಭೇಟಿ ಮಾಡಿದ್ದರು. ಕಾಂಗ್ರೆಸ್ ಮತ್ತು ಎಸ್‌ಪಿಯಂತಹ ಪಕ್ಷಗಳು ಕುಟುಂಬಕ್ಕೆ ಆರ್ಥಿಕ ಪರಿಹಾರವನ್ನು ಸಹ ನೀಡಿವೆ. ಇದರಿಂದ ಸಮುದಾಯವು ಬಿಎಸ್‌ಪಿಗೆ ಪರ್ಯಾಯವಾಗಿ ಈ ಪಕ್ಷಗಳತ್ತ ಮುಖಮಾಡುವಂತೆ ಮಾಡಿದೆ.

ಅರುಣ್ ವಾಲ್ಮೀಕಿಯ ಹಿರಿಯ ಸಹೋದರ ಸೋನು ನರ್ವಾಲ್, “ತನ್ನ ಸಹೋದರ ಸಾವನ್ನಪ್ಪಿದ ಸಮಯದಲ್ಲಿ, ಬಿಎಸ್‌ಪಿ ಮುಖ್ಯಸ್ಥರು ಮತ್ತು ಅವರ ಕೇಡರ್‌ನ ಪ್ರಮುಖ ನಾಯಕರು ನಮ್ಮ ಸಮುದಾಯದೊಂದಿಗೆ (ಬಿಎಸ್ಪಿಗೆ ಮತಹಾಕುವ ಬೃಹತ್ ಸಮುದಾಯ) ಇರಬೇಕಿತ್ತು. ಬದಲಾಗಿ, ಅವರೆಲ್ಲರೂ ಬ್ರಾಹ್ಮಣರನ್ನು ಸಮಾಧಾನಪಡಿಸುವಲ್ಲಿ ನಿರತರಾಗಿದ್ದರು” ಎಂದು ದೂರಿದ್ದಾರೆ.

“ನಮಗಾಗಿ ನಿಲ್ಲುವ ಪಕ್ಷಕ್ಕೆ ನಾವು ಮತ ಹಾಕುತ್ತೇವೆ ಎಂಬುದು ಸ್ಪಷ್ಟವಾಗಿದೆ. ಆ ಪಟ್ಟಿಯಲ್ಲಿ ಬಿಜೆಪಿ ಇಲ್ಲ. ನಮ್ಮ ಸಮುದಾಯವು ಯಾವ ಪಕ್ಷದತ್ತ ಹೋಗುತ್ತದೆ ಎಂಬುದನ್ನು ಸಮಯ ನಿರ್ಧರಿಸುತ್ತದೆ” ಎಂದು ನರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ-2022: ಅಖಿಲೇಶ್‌ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾಂಗ್ರೆಸ್!

ಒಂದು ಕಾಲದಲ್ಲಿ ಬಿಎಸ್‌ಪಿಯ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದ ಆಗ್ರಾದ ಹಿರಿಯ ಬಿಎಸ್‌ಪಿ ಕಾರ್ಯಕರ್ತರೊಬ್ಬರು ಮಾತನಾಡಿ, “ಈ ಬಾರಿ 2017 ರ ಚುನಾವಣೆಯಂತಲ್ಲ. ಮೋದಿ ಅಥವಾ ಯೋಗಿ ಅಲೆ ಇಲ್ಲ. ಜನರು ಈಗ ತಮ್ಮ ಸಮಸ್ಯೆಗಳ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಕಾರ್ಯಕರ್ತರಿಗೆ ಈ ಆಡಳಿತದಲ್ಲಿ ಎದುರಿಸಿದ ತಾರತಮ್ಯಗಳ ಬಗ್ಗೆ ತಿಳಿದಿದೆ. ಇಡೀ ಎಸ್‌ಸಿ, ಎಸ್‌ಟಿ ಸಮುದಾಯದ ಜನರು ತಮ್ಮ ಮೇಲಾದ ದೌರ್ಜನ್ಯ ಮತ್ತು ಅನ್ಯಾಯದ ಸಮಸ್ಯೆಯಿಂದ ಸಿಟ್ಟಿಗೆದ್ದಿದ್ದಾರೆ. ಬಿಎಸ್‌ಪಿ ತಮ್ಮ ಗೆಲುವನ್ನು ಖಾತ್ರಿ ಮಾಡಿಕೊಳ್ಳಲು ಈ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಪಕ್ಷವಾಗಿ ಸ್ಪರ್ಧಿಸಬೇಕು, ಅಭ್ಯರ್ಥಿಗಳಾಗಿ ಅಲ್ಲ” ಎಂದು ಹೇಳಿದ್ದಾರೆ.

ಫೆಬ್ರವರಿ 2 ರಂದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ರ್‍ಯಾಲಿಯಲ್ಲಿ ಆಗ್ರಾದಲ್ಲಿ ಮಾತನಾಡಿದ್ದ ಬಿಎಸ್‌ಪಿ ವರಿಷ್ಠೆ ಮಾಯಾವತಿ, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಿದ್ದರು. “ನಾವು ಅಧಿಕಾರದಲ್ಲಿದ್ದಾಗ ಅದ್ಭುತ ಕೆಲಸ ಮಾಡಿದ್ದೇವೆ. ನಮ್ಮ ಆಡಳಿತದಲ್ಲಿ ಕೈಗೊಂಡ ಕಾರ್ಯಗಳನ್ನು ನಮ್ಮ ನಂತರ ಅಧಿಕಾರಕ್ಕೆ ಬಂದ ಪಕ್ಷಗಳು ನಕಲು ಮಾಡಿವೆ. ಎಲ್ಲ ಜಾತಿ, ಸಮುದಾಯಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರವನ್ನು ಮರಳಿ ತರಬೇಕು” ಎಂದು ಹೇಳಿದ್ದರು.

ಬಿಜೆಪಿಯಿಂದ ರಾಮರಾಜ್ಯ ಅಥವಾ ಆದರ್ಶ ರಾಜ್ಯ ಎಂದು ಕರೆಯಲ್ಪಟ್ಟಿರುವ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯು ಹಲವಾರು ಘಟನೆಗಳಿಂದಾಗಿ ಪ್ರಶ್ನಾರ್ಹವಾಗಿದೆ. ಇದರಲ್ಲಿ ಆಪಾದಿತ ಕಸ್ಟಡಿ ಸಾವುಗಳು ಮತ್ತು ಪೊಲೀಸ್ ದೌರ್ಜನ್ಯಗಳೂ ಸೇರಿವೆ. ಇದೆಲ್ಲದರ ನಡುವೆ, ಸೋಹನ್ ಸಿಂಗ್ ಅವರಂತಹ ಬಿಎಸ್‌ಪಿ ಕಾರ್ಯಕರ್ತರು ನಿಂದನೆಗಳಿಗೆ ಒಳಗಾದರೂ, ನಿಷ್ಠಾವಂತ ಕಾರ್ಯಕರ್ತರಂತೆ ಜನರನ್ನು ಬಿಎಸ್‌ಪಿಗೆ ಮತ ಹಾಕಲು ಮನವೊಲಿಸಲು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಆದರೆ, ಜನರು ಬಿಎಸ್ಪಿ ಮತ್ತು ಬಿಜೆಪಿಗೆ ಪರ್ಯಾಯವನ್ನು ಹುಡುಕುತ್ತಿದ್ದಾರೆ.

ಕೃಪೆ: News Click

ಇದನ್ನೂ ಓದಿ: ಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...