ಜೀನ್ಸ್ ಧರಿಸಿದ ಕಾರಣಕ್ಕೆ ಮನೆಯ ಮಗಳನ್ನೇ ಅಜ್ಜ ಮತ್ತು ಬಾಲಕಿಯ ಚಿಕ್ಕಪ್ಪಂದಿರು ಕೊಲೆ ಮಾಡಿ ಮೃತದೇಹವನ್ನು ಸೇತುವೆಯಿಂದ ನದಿಗೆ ಎಸೆಯಲು ಪ್ರಯತ್ನಿಸಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ.
17 ವರ್ಷದ ಬಾಲಕಿಯ ಮೃತದೇಹ ಕಶ್ಯಾ-ಪಾಟ್ನಾ ಹೆದ್ದಾರಿಯಲ್ಲಿರುವ ಪತನ್ವಾ ಸೇತುವೆಯ ಕಂಬಿಗಳಲ್ಲಿ ನೇತಾಡುತ್ತಿರುವುದನ್ನು ಕಂಡು ದಾರಿಹೋಕರು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳಲ್ಲಿ ಬಾಲಕಿಯ ಅಜ್ಜನನ್ನು ಬಂಧಿಸಲಾಗಿದ್ದು, ಚಿಕ್ಕಪ್ಪಂದಿರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ ಅಥವಾ ಮಂಗಳವಾರ ರಾತ್ರಿ ನಡುವೆ ಬಾಲಕಿಯ ಕೊಲೆ ಮಾಡಲಾಗಿದ್ದು, ಬಳಿಕ ಶವವನ್ನು ನದಿಗೆ ಎಸೆಯಲಾಗಿದೆ. ಆದರೆ ಮೃತದೇಹ ನದಿಗೆ ಬೀಳದೆ ಸೇತುವೆಯ ಕಂಬಿಗಳಲ್ಲಿ ಸಿಲುಕಿಕೊಂಡಿದ್ದು, ದಾರಿಹೋಕರ ಗಮನ ಸೆಳೆದಿದೆ.ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.
ಮೃತ ಬಾಲಕಿ ಮತ್ತು ಆಕೆಯ ತಾಯಿ ಇತ್ತೀಚೆಗೆ ಡಿಯೋರಿಯಾದಲ್ಲಿರುವ ತಮ್ಮ ಮಾವನ ಮನೆಯಲ್ಲಿ ವಾಸಿಸಲು ಬಂದಿದ್ದರು ಎಂದು ವರದಿಗಳು ತಿಳಿಸಿವೆ. ಬಾಲಕಿಯ ತಂದೆ ಪಂಜಾಬ್ನ ಲೂಧಿಯಾನದಲ್ಲಿ ವಲಸೆ ಕೆಲಸಗಾರರಾಗಿದ್ದಾರೆ.
ಇದನ್ನೂ ಓದಿ: ದಲಿತ ಮಹಿಳೆಯ ಲಾಕಪ್ ಡೆತ್: ಮೂವರು ಪೊಲೀಸರು ಸೇವೆಯಿಂದ ವಜಾ
” ನನ್ನ ಮಗಳು ಅಂದು ಉಪವಾಸ ಮಾಡುತ್ತಿದ್ದಳು. ಸಂಜೆ ಸ್ನಾನದ ನಂತರ ಜೀನ್ಸ್ ಮತ್ತು ಟಾಪ್ ಧರಿಸಿ, ಪೂಜೆ ಮಾಡಲು ಹೋಗುತ್ತಿದ್ದಾಗ, ಉಡುಗೆ ಬದಲಿಸಲು ಅಜ್ಜ ತಿಳಿಸಿದರು. ಆಕೆ ನಿರಾಕರಿಸಿದಾಗ ಕೋಲುಗಳಿಂದ ಆಕೆಯ ಮೇಲೆ ಹಲ್ಲೆ ಮಾಡಿದರು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಅವಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದರು, ಆದರೆ, ಆಕೆಯನ್ನು ಸೇತುವೆಯಿಂದ ಎಸೆದಿದ್ದಾರೆ “ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
“ಈ ಜನರಿಗೆ ಯಾವಾಗಲೂ ಆ ಹುಡುಗಿಯ ಮತ್ತು ಆಕೆಯ ಕುಟುಂಬದ ಜೀವನಶೈಲಿಯೊಂದಿಗೆ ಸಮಸ್ಯೆ ಇತ್ತು. ಆ ಕುಟುಂಬದವರು ಏನು ತಿನ್ನುತ್ತಾರೆ, ಏನು ಧರಿಸಿದ್ದಾರೆ ಎಂಬ ಬಗ್ಗೆ ಇವರಲ್ಲಿ ಅಸೂಯೆ ತುಂಬಿಕೊಂಡಿತ್ತು. ಅವತ್ತು ಮೃತ ಬಾಲಕಿ ಮೇಲೆ ರಾಡ್ನಿಂದ ಹಲ್ಲೆ ಮಾಡಿದರು. ಆಕೆಯ ಪರಿಸ್ಥಿತಿ ಗಂಭೀರವಾದಾಗ, ಆಸ್ಪತ್ರೆಗೆ ಕರೆದೊಯ್ಯುವುದಾಗಿ ಬಾಲಕಿಯ ತಾಯಿಗೆ ತಿಳಿಸಿದ್ದರು. ಆದರೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಸೇತುವೆಯಿಂದ ಎಸೆದಿದ್ದಾರೆ” ಎಂದು ಬಾಲಕಿಯ ಚಿಕ್ಕಮ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಬಾಲಕಿ ಜಿನ್ಸ್ ವಿಷಯಕ್ಕೆ ತನ್ನ ಅಜ್ಜನೊಂದಿಗೆ ವಾಗ್ವಾದ ನಡೆಸಿ ಅವರನ್ನು ನಿಂದಿಸಿದ್ದಾರೆ. ಆಗ ಹುಡುಗಿಯ ಇಬ್ಬರು- ಮೂವರು ಚಿಕ್ಕಪ್ಪಂದಿರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಆಕೆ ಪ್ರಜ್ಞೆ ತಪ್ಪಿದ್ದಾರೆ. ನಂತರ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು, ಆದರೆ ದಾರಿಯಲ್ಲಿಯೇ ಆಕೆ ಮೃತಪಟ್ಟ ಕಾರಣ ನದಿಗೆ ಎಸೆಯಲು ನೋಡಿದ್ದಾರೆ. ಆದರೆ ಮೃತದೇಹ ನದಿ ಸೇತುವೆಯ ಮೇಲೆ ಸಿಲುಕಿಕೊಂಡಿದೆ ಎಂದು ಡಿಯೋರಿಯಾ ಪೊಲೀಸ್ ಮುಖ್ಯಸ್ಥ ಶ್ರೀಪತಿ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ಹರಿಯಾಣ: ದಲಿತ ಯುವತಿಯನ್ನು ಅಪಹರಿಸಿ ಸತತ 9 ದಿನ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು
ನಮ್ಮ ದೇಶದ ಹೆಣ್ಣು ಮಕ್ಕಳಿಗೆ, ಅವರಿಗೆ ಇಷ್ಟವಾದ ಬಟ್ಟೆಗಳನ್ನು ತೊಡುವ ಸ್ವಾತಂತ್ರ್ಯ ಸಹ ಇಲ್ಲದಿರುವುದು ದುರಂತ.