ಪತ್ನಿಯ ಜಡೆಹಿಡಿದು ಹೊಲದೆಲ್ಲೆಡೆ ದರದರನೆ ಎಳೆದಾಡಿದ ದುಷ್ಕರ್ಮಿಗಳು
ಉತ್ತರಪ್ರದೇಶದ ಭದೋಹಿ ಜಿಲ್ಲೆಯಲ್ಲಿ ದನ ಮೇಯಿಸುವ ವಿವಾದದ ಹಿನ್ನೆಲೆಯಲ್ಲಿ ದಲಿತ ರೈತ ಮತ್ತು ಅವರ ಪತ್ನಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಊಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅನೈಚ್ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ದೀಪಕ್ ಎಂಬ ಸಂತ್ರಸ್ತ ದಲಿತನ ದೂರಿನ ಆಧಾರದ ಮೇಲೆ ರಾಜಾರಾಮ್ ಯಾದವ್, ದಿಲಜೀತ್ ಯಾದವ್, ಅರವಿಂದ್ ಯಾದವ್, ರಾಜೇಂದ್ರ ಯಾದವ್, ಪಾರ್ವತಿ ದೇವಿ ಮತ್ತು ತಾರಾ ದೇವಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ದಲಿತ ರೈತ ಮತ್ತು ಅವರ ಪತ್ನಿಯ ಮೇಲೆ ದೊಣ್ಣೆ, ಕಬ್ಬಿಣದ ರಾಡ್ಗಳಿಂದ ಹಲ್ಲೆ ಮಾಡಲಾಗಿದೆ ಮತ್ತು ಜಾತಿ ಆಧಾರಿತವಾಗಿ ಬೈಗುಳ ನಡೆಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇನ್ನೊಬ್ಬ ಗ್ರಾಮಸ್ಥರ ಹೊಲದಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ದಿನ ಬೇಳೆ ಬೆಳೆಯುವ ಭೂಹೀನ ದಲಿತ ರೈತ ದೀಪಕ್ ಕುಮಾರ್ ಪಾಸಿ, ಸ್ಥಳೀಯ ಗ್ರಾಮಸ್ಥರೊಬ್ಬರು ತಮ್ಮ ಬೆಳೆ ಪ್ರದೇಶದಲ್ಲಿ ದನ ಮೇಯಿಸುತ್ತಿದ್ದರು ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ದೂರಿನ ನಂತರ ದೀಪಕ್, ಅವರ ಪತ್ನಿ ಸುಮಿತ್ರಾ, ಅಣ್ಣ ಮತ್ತು ಅವರ ತಾಯಿಯ ಮೇಲೆ ಈ ವ್ಯಕ್ತಿಗಳು ಹಲ್ಲೆ ನಡೆಸಿದರು ಎಂದು ದೂರಲಾಗಿದೆ.
“ರಾಜಾರಾಮ್ ಯಾದವ್ ಅವರ ದನಗಳು ತಮ್ಮ ಹೊಲದಲ್ಲಿ ಮೇಯುತ್ತಿದ್ದವು ಎಂದು ದೀಪಕ್ ದೂರು ನೀಡಿದಾಗ, ರಾಜಾರಾಮ್ ಕೋಪಗೊಂಡರು. ಅವರು ನಮ್ಮನ್ನು ಜಾತಿ ಹಿಡಿದು ನಿಂದಿಸಿದರು ಮತ್ತು ಇತರರೊಂದಿಗೆ ದೀಪಕ್ ಅವರನ್ನು ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಹೊಡೆದರು” ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ಹೇಳಿದ್ದಾರೆ.
ದೂರದಾರರ ಪತ್ನಿ ಸುಮಿತ್ರಾ ಅವರ ಜಡೆ ಹಿಡಿದು ಹೊಲದಾದ್ಯಂತ ಎಳೆದುಕೊಂಡು ಹೋಗಿ, ಹೊಡೆದು, ಬಟ್ಟೆಗಳನ್ನು ಹರಿದು ಹಾಕಲಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ. ದೀಪಕ್ ಮತ್ತು ಸುಮಿತ್ರಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಟುಂಬದ ಇತರ ನಾಲ್ವರು ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ.
ಮಧ್ಯಪ್ರದೇಶ| ಸಾಮೂಹಿಕ ಅತ್ಯಾಚಾರದ ಬಳಿಕ ಬುಡಕಟ್ಟು ಮಹಿಳೆ ಸಾವು; ಇಬ್ಬರ ಬಂಧನ