ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದಿದ್ದ ಮುಸ್ಲಿ ಯುವಕ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಕಾಸ್ಗಂಜ್ನ 22 ವರ್ಷದ ಯುವಕನನ್ನು ಪೊಲೀಸ್ ಠಾಣೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿತ್ತು. ಬಳಿಕ ರಾಜಕೀಯ ನಾಯಕರು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕೂಡ ಈ ವಿಷಯದಲ್ಲಿ ಪ್ರವೇಶಿಸಿದ ಬಳಿಕ ಶನಿವಾರ (ನ.13) ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಯುವಕ ಅಲ್ತಾಫ್ನ ವಿರುದ್ಧ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ತಾಫ್ರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. 22 ವರ್ಷದ ಯುವಕ ಮಂಗಳವಾರ (ನ. 9) ರಂದು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು. ಯುವಕ ಶೌಚಾಲಯದ ಎರಡು ಅಡಿ ಎತ್ತರದ ನಲ್ಲಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ, ಪೊಲೀಸರು ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ. ಕರ್ತವ್ಯ ನಿರತ ಸಿಬ್ಬಂದಿಯೇ ಆತನನ್ನು ಕೊಂದಿದ್ದಾರೆ ಎಂದು ಮೃತನ ಕುಟುಂಬ ಆರೋಪಿಸಿತ್ತು.
ಇದನ್ನೂ ಓದಿ: ಕಾಸ್ಗಂಜ್ ಮುಸ್ಲಿಂ ಯುವಕನ ಲಾಕಪ್ ಡೆತ್: ಸರ್ಕಾರದಿಂದ ವರದಿ ಕೇಳಿದ ಅಲ್ಪಸಂಖ್ಯಾತರ ಆಯೋಗ
ಕಾಸ್ಗಂಜ್ನಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಅಪರಿಚಿತ ಪೊಲೀಸರನ್ನು ಉಲ್ಲೇಖಿಸಲಾಗಿದೆ. ಹೊಸ ದೂರು ಪತ್ರದಲ್ಲಿ ಅವರ ಹೆಸರನ್ನು ನಮೂದಿಸಿ ನಂತರ ನವೀಕರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
“ನನ್ನ ಮಗನನ್ನು ಪೋಲೀಸ್ ಠಾಣೆಯಲ್ಲಿ ಕೊಲ್ಲಲಾಗಿದೆ. ಶೌಚಾಲಯದಲ್ಲಿನ ಟ್ಯಾಪ್ ಸುಮಾರು ಎರಡು ಅಡಿ ಎತ್ತರ ಇದೆ. ನನ್ನ ಮಗ 5 ಅಡಿಗಿಂತ ಹೆಚ್ಚು ಎತ್ತರವಿದ್ದ. ನಾನು ಯಾವುದೇ ಅಧಿಕಾರಿಯೊಂದಿಗೆ ರಾಜಿ ಮಾಡಿಕೊಂಡಿಲ್ಲ. ಒತ್ತಡದಲ್ಲಿ ನನ್ನ ಹೆಬ್ಬೆರಳಿನ ಗುರುತು ನೀಡುವಂತೆ ಮಾಡಲಾಯಿತು. ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಮೃತ ಯುವಕನ ತಂದೆ ಚಂದ್ ಮಿಯಾ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಮೃತ ಅಲ್ತಾಫ್ಗೆ ನ್ಯಾಯ ಕೋರಿ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭಾನುವಾರ ಕಾಸ್ಗಂಜ್ನಲ್ಲಿ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಕಾಸ್ಗಂಜ್ ಎಸ್ಎಸ್ಪಿ ಅವರನ್ನು ಭೇಟಿ ಮಾಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜೊತೆಗೆ ಸ್ಥಳೀಯ ಆಡಳಿತವು ಮೃತನ ಕುಟುಂಬಕ್ಕೆ ಸೂಕ್ತ ಭದ್ರತೆ, ಸರ್ಕಾರಿ ಉದ್ಯೋಗ ಮತ್ತು ಕುಟುಂಬಕ್ಕೆ ನ್ಯಾಯಯುತ ಪರಿಹಾರವನ್ನು ನೀಡುವ ಭರವಸೆ ನೀಡಿದೆ ಎಂದು ಚಂದ್ರಶೇಖರ್ ಆಜಾದ್ ಟ್ವೀಟ್ ಮಾಡಿದ್ದಾರೆ.
आज कासगंज में अल्ताफ़ के परिवार से मिलकर उनसे अपनी संवेदनाएं व्यक्त की। फिर SSP कासगंज से मुलाकात कर आरोपियों पर मुकदमा दर्ज कराया। जिला प्रशासन ने परिवार को सुरक्षा, एक सरकारी नौकरी एवं उचित मुआवजा देने का आश्वासन दिया है। अल्ताफ़ भाई को न्याय दिलाना हम सबकी जिम्मेदारी है। pic.twitter.com/706sndovzW
— Chandra Shekhar Aazad (@BhimArmyChief) November 13, 2021
ಇನ್ನು ಪ್ರಕರಣ ಕುರಿತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿದೆ.
ಇದನ್ನೂ ಓದಿ: ಲಾಕಪ್ ಡೆತ್: ’ಉತ್ತರ ಪ್ರದೇಶದಲ್ಲಿ ಮಾನವ ಹಕ್ಕುಗಳು ಉಳಿದಿವೆಯೇ?’- ರಾಹುಲ್ ಗಾಂಧಿ