ಪೊಲೀಸರು ತನ್ನ ಬೈಕ್ ವಶಪಡಿಸಿಕೊಂಡ ನಂತರ 32 ವರ್ಷದ ಗಿಗ್ ಕಾರ್ಮಿಕನೊಬ್ಬ ಠಾಣೆಯ ಹೊರಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಅಕ್ಷಯ್ ಕಶ್ಯಪ್ ಎಂದು ಗುರುತಿಸಲ್ಪಟ್ಟ ಯುವಕನಿಗೆ ದೇಹದ ಮೇಲ್ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 23 ರ ಸೋಮವಾರ ರಾತ್ರಿ, ಕಶ್ಯಪ್ ಡೆಲಿವರಿಗಾಗಿ ಗಂಗಾಪುರಕ್ಕೆ ಬಂದು ಅಂಗಡಿಯ ಹೊರಗೆ ತನ್ನ ಮೋಟಾರ್ ಸೈಕಲ್ ನಿಲ್ಲಿಸಿ, ಕೀಲಿಯನ್ನು ವಾಹನದಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ಮೋಟಾರ್ ಸೈಕಲ್ನೊಂದಿಗೆ ಪರಾರಿಯಾಗಲು ಯತ್ನಿಸಿ ಇನ್ನೊಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾನೆ, ನಂತರ ಪೊಲೀಸರು ಅದನ್ನು ವಶಪಡಿಸಿಕೊಳ್ಳಲಾಯಿತು.
ಬಲಿಪಶುವಿನ ಪ್ರಕಾರ, ಅವರು ತಮ್ಮ ಮೋಟಾರ್ ಸೈಕಲ್ ಅನ್ನು ಮರಳಿ ಪಡೆಯಲು ಪೊಲೀಸ್ ಠಾಣೆಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಆದರೆ, ಅದನ್ನು ಬಿಡುಗಡೆ ಮಾಡಿಲ್ಲ, ಇದರಿಂದ ಅವರ ‘ವಿತರಣಾ’ ಕೆಲಸಕ್ಕೆ ತೊಂದರೆಯಾಯಿತು
ಫೆಬ್ರವರಿ 24, ಮಂಗಳವಾರ ರಾತ್ರಿ 10:30 ರ ಸುಮಾರಿಗೆ, ಕಶ್ಯಪ್ ಬರಾದರಿ ಪೊಲೀಸ್ ಠಾಣೆ ಆವರಣದ ಹೊರಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ನಗರ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಮನುಷ್ ಪರೀಕ್ ಮಾತನಾಡಿ, ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಬೆಂಕಿ ನಂದಿಸಲು ಧಾವಿಸಿ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದರು ಎಂದು ಹೇಳಿದರು.
ಯಾವುದೇ ದೂರು ದಾಖಲಾಗದಿದ್ದರೆ ಒಂದು ಅಥವಾ ಎರಡು ದಿನಗಳಲ್ಲಿ ವಾಹನವನ್ನು ಬಿಡುಗಡೆ ಮಾಡಲಾಗುವುದು; ಇಲ್ಲದಿದ್ದರೆ, ನ್ಯಾಯಾಲಯದ ಕಾರ್ಯವಿಧಾನಗಳ ಮೂಲಕ ಅದನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಕಶ್ಯಪ್ಗೆ ತಿಳಿಸಲಾಗಿದೆ ಎಂದು ಪರೀಕ್ ಹೇಳಿದರು.
ತನಿಖೆಗೆ ಆದೇಶಿಸಲಾಗಿದೆ, ತಪ್ಪಿತಸ್ಥರೆಂದು ಕಂಡುಬಂದ ಯಾವುದೇ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.


