ಉತ್ತರ ಕನ್ನಡದ ಬಿಜೆಪಿ ಪಲ್ಲಕ್ಕಿಯಲ್ಲಿ ಮೇಲ್ವರ್ಗದ ಹವ್ಯಕ ಹಾಗೂ ಕೊಂಕಣಿ ಕಂಠೀರವರೇ ವಿಜೃಂಭಿಸುತ್ತಿದ್ದಾರೆ! ಆ “ಪವಿತ್ರ” ಪಲ್ಲಕ್ಕಿಯನ್ನು ಹಿಂದುಳಿದ ವರ್ಗದ ಕಾಲಾಳುಗಳು ಹೊತ್ತು ಮೆರೆಸುತ್ತಿದ್ದಾರೆ. ಜಿಲ್ಲೆಯ ಹವ್ಯಕ ಹಾಗೂ ಜಿಎಸ್ಬಿ ಸೇರಿದಂತೆ ಒಟ್ಟೂ ಜನಸಂಖ್ಯೆ ಅಬ್ಬಬ್ಬಾ ಎಂದರೆ ಶೇಕಡಾ ಹತ್ತು ದಾಟುವುದಿಲ್ಲ. ಆದರೆ ಬಿಜೆಪಿ ದರ್ಬಾರಿನಲ್ಲಿ ಈ “ಅಲ್ಪಸಂಖ್ಯಾತರಿಗೆ” ಆಯಕಟ್ಟಿನ ಅಧಿಕಾರ ಒಂದೊಂದಾಗಿ ಸಂದಾಯವಾಗುತ್ತಿದೆ. ಹಿಂದುಳಿದವರು- ದಲಿತರು-ಅಲ್ಪಸಂಖ್ಯಾತರು ದಿಕ್ಕು ದೆಸೆಯಿಲ್ಲದ ಅಬ್ಬೇಪಾರಿಗಳಾಗಿದ್ದಾರೆ.
ಮುಸಲರು, ಕ್ರೈಸ್ತರ ಬಿಡಿ, ಆ ಜನಾಂಗ ಕಂಡರೆ ಬಿಜೆಪಿಗೆ ಆಗಬರುವುದಿಲ್ಲ. ಆದರೆ ಹಿಂದೂತ್ವದ ಆವಹನೆ ಮಾಡಿಕೊಂಡು ಕುಣಿಯುವ ಹಿಂದುಳಿದವರ-ದಲಿತರ ಪಾಲಿಗೆ ಗೆರಟೆಯ ಗತಿಯಾಗಿದೆ! ಹಿಂದೂ ನಾವೆಲ್ಲ ಒಂದು ಎಂದು ಸುಳ್ಳು ಸ್ಲೋಗನ್ ಹೊಡೆಯುತ್ತ ಬಂದಿರುವ ಬಿಜೆಪಿ ಪರಿವಾರ ಶೋಷಿತರಿಗೆ ಅಧಿಕಾರ ಕೊಡುತ್ತಿಲ್ಲ.
ಬಿಜೆಪಿ ಸ್ಥಾಪನೆಯಾದ ನಂತರ ನಡೆದ ಎಲ್ಲ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೇಸರಿ ಪಾರ್ಟಿಯ ಹುರಿಯಾಳಾಗಿದ್ದು ಹವ್ಯಕ ಬ್ರಾಹ್ಮಣ ಬಹಾದ್ದೂರರೇ! ಸತತವಾಗಿ ಸಂಸದನಾಗುತ್ತಿರುವ ಅನಂತ್ಮಾಣಿ ಹವ್ಯಕ ಕಣ್ಮಣಿ. ಈ ಬಾರಿ ಅನಂತ್ಮಾಣಿಗೆ ಟಿಕೆಟ್ ತಪ್ಪಿಸಲು ಹವಣಿಸಿದ್ದ ಹವ್ಯಕರ ತಂಡವೂ ಹುಡುಕುತ್ತಿದ್ದು ರಕ್ತ ಬಾಂಧವರನ್ನೇ. ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕಳಕೊಂಡಿದ್ದ ಕುಮಟೆಯ ಡಾ| ಜಿ.ಜಿ.ಹೆಗಡೆ, ಸಿದ್ಧಾಪುರದ ವಕೀಲ ರವಿ ಹೆಗಡೆ ಹೂವಿನಮನೆ, ಪತ್ರಕರ್ತ ವಿಶ್ವೇಶ್ವರ ಭಟ್ಟ, ಹಾಲಿ ಸ್ಪೀಕರ್ ಕಾಗೇರಿ… ವಗೈರೆ ಮಾಣಿಗಳೆ ಟಿಕೆಟ್ ಟ್ಯಾಕ್ಟಿಸ್ನಲ್ಲಿದ್ದರು.
ಹವ್ಯಕ ಪ್ರಾಬಲ್ಯದ ಈ ಹಿಂದಿನ ಅಂಕೋಲ ಹಾಗೂ ಈಗಿನ ಶಿರಸಿ ಕ್ಷೇತ್ರದಲ್ಲಿ ಸ್ವಜಾತಿ ಸ್ವಾಮೀಜಿಗಳ ಮಂತ್ರಾಕ್ಷತೆಯಿಂದ ಗೆಲ್ಲುತ್ತಿರುವ ಕಾಗೇರಿ ಸತತ ಆರು ಬಾರಿ ಎಮ್ಮೆಲ್ಲೆಯಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಬಿವಿಪಿ ಕೇಡರಿನ ಕಾಗೇರಿಗೆ ದೊಡ್ಡ ಪೀಠ ಖಂಡಿತ! ಹಿಂದೆ ಕ್ಯಾಬಿನೆಟ್ ಮಂತ್ರಿಯಾಗಿದ್ದ ಕಾಗೇರಿ ಈಗ ಮಹತ್ವದ ವಿಧಾನಸಭಾಧ್ಯಕ್ಷರಾಗಿ ಪ್ರತಿಷ್ಟಾಪನೆಗೊಂಡಿದ್ದಾರೆ. ಮಂತ್ರಿಯಾಗಿ ಜೀವನ ಕೊನೆಯ ಆಸೆ ಈಡೇರಿಸಿಕೊಳ್ಳುವ ತೆವಲಿಂದ ಕಾಂಗ್ರೆಸ್ ಶಾಸಕತ್ವಕ್ಕೆ ಅನರ್ಹತೆ ತಂದುಕೊಂಡಿದ್ದ ಯಲ್ಲಾಪುರದ ಕಳ್ಳ ಅದಿರು ಉದ್ಯಮಿ ಶಿವರಾಮ ಹೆಬ್ಬಾರ್ ಎಂಬ ಹವ್ಯಕ ಹಿರೇಮಣಿಗೆ ಕ್ಯಾಬಿನೆಟ್ ಮಂತ್ರಿ ಮಾಡಲಾಗಿದೆ.
ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲಾ ಕಾಡನ್ನು ಅತಿಕ್ರಮಣ ಮಾಡಿ ತೋಟ ಮಾಡಿಕೊಂಡಿರುವ ಪರಿಸರವ್ಯಾಧಿ ಅನಂತ ಹೆಗಡೆ ಆಶೀಸರ್ಗೆ ನಿಗಮ ಒಂದು ಗ್ಯಾರಂಟಿ. ಕೇಶವಕೃಪಾದಲ್ಲಿ ಆಶ್ರಯದಾತರ ಸಂಪಾದಿಸಿರುವ ಆಶೀಸರ್ಗೆ ಜೀವ ವೈವಿಧ್ಯ ಮಂಡಳಿ ಇನಾಮಾಗಿ ಸಿಕ್ಕಿದೆ. ಸಿದ್ದು ಸರ್ಕಾರವಿದ್ಧಾಗ ಪ್ರೊ. ಎಂ.ಎ.ಹೆಗಡೆಗೆ ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷನಾಗಿ ನೇಮಿಸಲಾಗಿತ್ತು. ಈ “ಯಕ್ಷತಜ್ಞ” ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸ್ವಜಾತಿ ಲಾಬಿ ಪ್ರಯೋಗಿಸಿ ಅಲ್ಲೇ ಹಾಯಾಗಿ ಮುಂದುವರಿದಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಗೆ ದಕ್ಕಿರುವ ಐದೂ ಸರ್ಕಾರಿ ಕಾರಿನ ಭಾಗ್ಯ ಹವ್ಯಕರಿಗೇ ಖುಲಾಯಿಸಿದೆ. ಇದು ಕಾಕತಾಳೀಯವಲ್ಲ; ಜನಿವಾರ ಜಾದೂ!! ಈ ಹವ್ಯಕ ವೈಭವ ಪ್ರಸಂಗ ಕಂಡು ಹಾಲಕ್ಕಿ ಒಕ್ಕಲಿಗರು, ದೀವರು, ಮೀನುಗಾರರು, ಕೋಮಾರಪಂತ, ಮರಾಠರೇ ಮುಂತಾದ ಹಿಂದುಳಿದವರು ಬಲವಂತದ “ಖುಷಿ”ಪಡುತ್ತಿದ್ದಾರೆ.
ಹವ್ಯಕರು ಸಿಕ್ಕ-ಸಿಕ್ಕ ಅಧಿಕಾರ ಗದ್ದುಗೆ ಬರುತ್ತಿದ್ದರೂ ಕೊಂಕಣಿಗರಿಗೇನೂ ಬೇಸರವಿಲ್ಲ. ಯಾಕೆಂದರೆ, ಜಿಲ್ಲಾ ಬಿಜೆಪಿ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಸಂತೃಪ್ತಿ ಕೊಂಕಣಿಗರದು!! ಪಕ್ಷಕ್ಕೆ ಪ್ರಯೋಜನವಿಲ್ಲದ ರಾಜಕೀಯ ದಂಧೆದಾರ ವಿನೋದ ಪ್ರಭು ರಾಜ್ಯ ಬಿಜೆಪಿಯ ಪ್ರಮುಖ ಪದಾಧಿಕಾರಿ. ಕುಮಟೆಯ ಡಿಂಗ್ಡಾಂಗ್ ಶಾಸಕ ದಿನಕರ ಶೆಟ್ಟಿಯ ವಿರೋಧ ಲೆಕ್ಕಿಸದೆ ಕೊಂಕಣಿ ಕುವರ ವೆಂಕಟೇಶ್ ನಾಯಕ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಆರೆಸೆಸ್ ದೀಕ್ಷೆಕೊಟ್ಟಿದೆ. ಹಳಿಯಾಳ ಮೂಲದ ಸಂಘಿ ಸರದಾರ ಮಂಗೇಶ್ ಬೆಂಡೆ ಜಿಲ್ಲಾ ಬಿಜೆಪಿ ಹೈಕಮಾಂಡ್, ಕುಮಟಾದ “ಕಲ್ಲಡ್ಕ” ಹನ್ಮಂತ ಶಾನಭೋಗ್ ಸುಪ್ರೀಂ ಕಮಾಂಡರ್. ಅನಂತ್ಮಾಣಿ ಈ ರಿಂಗ್ ಮಾಸ್ಟರ್ಗಳ ಕಣ್ಸನ್ನೆಗೆ ಬಾಲ ಅಲ್ಲಾಡಿಸುವ ಕಮಾಂಡರ್. ಕೊಂಕಣಿಗರ ಈಶಾರೆ ಇಲ್ಲದೆ ಪಕ್ಷದಲ್ಲಿ ಏನೂ ಆಗುವುದಿಲ್ಲ. ಸೀನಿಯರ್ ಕಾಗೇರಿ ಆದಿಯಾಗಿ ಜಿಲ್ಲೆಯ ಅಷ್ಟೂ ಬಿಜೆಪಿ ಶಾಸಕರು ಕೊಂಕಣಿ ಕಮಾಂಡ್ನ ಅಡಿಯಾಳುಗಳು.
ಬಿಜೆಪಿ ಭೂಪರು ಕರಾವಳಿಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದವರನ್ನು ಎಮ್ಮೆಲ್ಲೆ ಮಾಡಿದ್ದೇವೆಂದು ಸಾಮಾಜಿಕ ನ್ಯಾಯದ ಸಬೂಬು ಹೇಳುತ್ತಿದೆ. ವಾಸ್ತವವೆಂದರೆ, ಈ ಹಿಂದುಳಿದವರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಜನಿವಾರಿಗಳು ಸ್ಪರ್ಧಿಸಿದರೆ ಠೇವಣಿಯೂ ಉಳಿಯುವುದಿಲ್ಲ. ಹೀಗಾಗಿ ತಮ್ಮ ಗುಲಾಮಗಿರಿ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶೂದ್ರರನ್ನು ಶಾಸಕರಾಗಿ ಮಾಡಿಕೊಂಡಿದ್ದಾರೆ. ತಮಗೆ ಸೆಡ್ಡು ಹೊಡೆಯಬಹುದಾದ ಸೂರಜ್ ನಾಯ್ಕನ ಹೊರತಳ್ಳಿದ್ದಾರೆ. ಮಾಜಿ ಮಂತ್ರಿ ಶಿವಾನಂದ ನಾಯ್ಕರನ್ನು ಜನಿವಾರ ಲಾಬಿ ಬರ್ಬರವಾಗಿ ಹಣಿದ ದೊಡ್ಡ ಇತಿಹಾಸವೇ ಇದೆ. ಸಿದ್ಧಾಪುರದ ಕೆ.ಜಿ.ನಾಯ್ಕ, ಕಾರವಾರದ ನಾಗರಾಜ್ ನಾಯಕ್, ಗಣಪತಿ ಉಳ್ವೇಕರ್….. ಮುಂತಾದ ಶೂದ್ರರು ಬಿಜೆಪಿಯ ಪಹರೆ ಕಾಯುವುದಕ್ಕμÉ್ಟೀ ಸೀಮಿತರಾಗಿದ್ದಾರೆ, ಪಾಪ! ತಾವು ವೈದಿಕ ಬಾಸ್ಗಳ ಕೃಪಾಶೀರ್ವಾದದಿಂದಲೇ ಗೆದ್ದಿದ್ದೇವೆಂದು ದೈನೇಸಿಯಾಗಿ ಹೇಳುತ್ತಿರುವ ಕರಾವಳಿಯ ಕೇಸರಿ ಶಾಸಕರು – “ಕುಲಕ್ಕೆ ಮೃತ್ಯು ಕೊಡಲಿ ಕಾವು” – ಎಂಬಂತಾಗಿದ್ದಾರೆ ಹಿಂದುಳಿದ ಸಮುದಾಯಕ್ಕೆ!!
ಕಾರವಾರದ ರೂಪಾಲಿ ನಾಯ್ಕ್, ಕುಮಟೆಯ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನೀಲ್ ನಾಯ್ಕ್ ಹೆಸರಿಗಷ್ಟೇ ಶಾಸಕರು. ಈ ಶಾಸಕರ ಚಲನವಲನದ ಮೇಲೆ ರಹಸ್ಯ ಕಣ್ಣಿಟ್ಟಿದೆ! ರೂಪಾಲಿಯಮ್ಮನ ಸರ್ಕಾರಿ ಪಿಎಸ್ ಸಂಸದ ಮಾಣಿಯ ಖಾಸಾ ಆದ್ಮಿ. ಜಿಲ್ಲಾ ಬಿಜೆಪಿ ವಕ್ತಾರ ರಾಜೇಶ್ ನಾಯಕ್ನ ಅಣತಿಯಾಚೆ ರೂಪಾಲಿ ಹೆಜ್ಜೆ ಹಾಕುವಂತಿಲ್ಲ. ಕುಮಟೆಯ ದಿನಕರ ಶೆಟ್ಟಿಯನ್ನು ಸರ್ಕಾರಿ ಕಂಟ್ರಾಕ್ಟರ್ ಲಾಬಿಯ ಗಜುಪೈ ಮತ್ತು ಸುಧೀರ್ ಪಂಡಿತ್ ಎಂಬ “ಬಿಲ್ವಿದ್ಯಾ” ಪಂಡಿತರು ನಿಯಂತ್ರಿಸುತ್ತಿದ್ದಾರೆ. ಭಟ್ಕಳದ ಸುನೀಲ್ ನಾಯ್ಕನಿಗೆ ಆರೆಸ್ಸೆಸ್ನ ಪ್ರಮೋದ್ ಜೋಶಿ ಮೂಗುದಾರ ಹಾಕಿ ಕುಂತಿದ್ದಾನೆ. ಜನಿವಾರದ ಬಿಗಿ ಬಂಧನದಲ್ಲಿ ಹಿಂದುಳಿದ ವರ್ಗದ ಶಾಸಕರು ಏದುಸಿರು ಬಿಡುತ್ತಿದ್ದಾರೆ. ಅಬ್ರಾಹ್ಮಣರು “ಒಡೆದೀರು” ಮೊಣಕೈಗೆ ಸವರಿದ ತುಪ್ಪದ ಪರಿಮಳಕ್ಕೆ ಬಲಿಬೀಳುತ್ತಲೇ ಇದ್ದಾರೆ…..


