| ನಹುಷ |
`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ’ ಎಂದು ಎದೆತುಂಬಿ ಪಂಪ ಮಹಾಕವಿ ಹಾಡಿದ್ದ ಐತಿಹಾಸಿಕ ಮಹತ್ವದ ಬನವಾಸಿಗೆ ಉತ್ತರ ಕನ್ನಡದೊಂದಿಗೆ, ಅದರಲ್ಲೂ ಮಲೆನಾಡಿನ ಸೆರಗಿನ ಶಿರಸಿ ಸೀಮೆಯೊಂದಿಗೆ ಅವಿನಾಭಾವ ಸಂಬಂಧ. ಶಿವಮೊಗ್ಗ ಜಿಲ್ಲೆಯ ಸೊರಬ-ಶಿಕಾರಿಪುರ ತಾಲ್ಲೂಕಿನ ಅಂಚಿನಲ್ಲಿರುವ ಕನ್ನಡದ ಈ ಮೊದಲ ರಾಜಧಾನಿ, ಯಡ್ಡಿ ಮುಖ್ಯಮಂತ್ರಿ ಆದಾಗೆಲ್ಲಾ ಕರುಳು ಸಂಬಂಧವೇ ಕಡಿದು ಹೋಗುವ ಆತಂಕಕ್ಕೆ ಬಿದ್ದು ಒದ್ದಾಡುತ್ತದೆ.
ಯಡ್ಡಿ ಈ ಹಿಂದೆ ಸಿಎಂ ಆಗಿದ್ದಾಗ ಬನವಾಸಿಯನ್ನು ಸೊರಬದ ಆನವಟ್ಟಿ ಹೋಬಳಿಗೆ ಸೇರಿಸುವ ಮಸಲತ್ತು ನಡೆದಿತ್ತು. ಆದರೆ ಯಡ್ಡಿ ಭಿನ್ನಮತಕ್ಕೆ ಬಲಿಯಾಗಿ ಅಧಿಕಾರ ಕಳಕೊಂಡು ಬಿಜೆಪಿ ಪಾಲಿಗೆ “ಕಾಫಿರ್” ಆಗಿಹೋಗಿದ್ದರು. ಹೀಗಾಗಿ ಬನವಾಸಿಯನ್ನು ಉತ್ತರ ಕನ್ನಡದಿಂದ ಹೊತ್ತೊಯ್ಯುವ ಯಡ್ಡಿ ಮತ್ತವರ ಮಗನೂ ಸಂಸದನೂ ಆಗಿರುವ ಬಸ್ಸ್ಟ್ಯಾಂಡ್ ರಾಘುನ ಪ್ಲಾನ್ ಫ್ಲಾಪ್ ಆಗಿತ್ತು. ಈಗ ಮತ್ತೆ ಶಿರಸಿಯ ಬನವಾಸಿ ಮೇಲೆ ಯಡ್ಡಿ ಕುಟುಂಬದ ಕಣ್ಣು ಬಿದ್ದಿದೆ. ಈ ರಹಸ್ಯ ಹುನ್ನಾರದ ಹೂರಣ ಹೊರಬರುತ್ತಲೇ ಬನವಾಸಿ ಭಾಗದ ಜನರು ಕೆರಳಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಅಷ್ಟಕ್ಕೂ ಈ ಅಪ್ಪ-ಮಗನಿಗೆ ಉತ್ತರ ಕನ್ನಡ ಸಂಸ್ಕøತಿ-ಸಂಸ್ಕಾರದ ಬನವಾಸಿ ಮತ್ತದರ ಸುತ್ತಲಿನ ಹಳ್ಳಿಗಳನ್ನು ಕಬಳಿಸುವ ಹಠವೇಕೆಂದು ಬಲ್ಲಿರಾ? ಶಿವಮೊಗ್ಗ ಜಿಲ್ಲೆಯನ್ನು ಒಡೆದು ಶಿಕಾರಿಪುರ ಜಿಲ್ಲೆ ರಚನೆ ಮಾಡಿ ರಾಜಕೀಯ ಫಾಯ್ದೆ ಹೊಡೆಯಲು ಯಡ್ಡಿ-ರಾಘು ಸ್ಕೆಚ್ ಹಾಕಿದ್ದಾರೆ. ಆದರೆ ಜಿಲ್ಲೆ ರಚನೆಗೆ ಬೇಕಾದ ಭೌಗೋಳಿಕ ಪ್ರದೇಶ ಮತ್ತು ಜನಸಂಖ್ಯೆಯ ಕೊರತೆಯಿದೆ. ಪಕ್ಕದ ಬನವಾಸಿ ಮತ್ತು ಅದರ ಆಚೀಚೆಯ ಹತ್ತು ಗ್ರಾಮ ಪಂಚಾಯತ್ ಏರಿಯಾ ಸೇರಿಸಿಕೊಂಡರೆ ಏಕ್ದಮ್ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯೂ ಸಿಗುತ್ತದೆ! ಈ ದೂ(ದು)ರಾಲೋಚನೆಯಿಂದ ಬನವಾಸಿ ಸೀಮೆ ಆಪೋಷನಕ್ಕೆ ಯಡ್ಡಿ-ರಾಘು ಸರ್ಕಸ್ ನಡೆಸಿದ್ದಾರೆ.
ಯಡ್ಡಿ ಅಕ್ರಮ ಸರ್ಕಾರದ ಚಕ್ರವರ್ತಿಯಾಗುತ್ತಲೇ ಆತನ ತವರೂರು ಶಿಕಾರಿಪುರಕ್ಕೆ ಭರಪೂರ ಅನುದಾನ ಹರಿದುಬರುತ್ತಿದೆ. ಪಕ್ಕದ ಶಿಕಾರಿಪುರದ ಉದ್ಧಾರಕ್ಕೆ ಯಥೇಚ್ಛವಾಗಿ ಹಣ ಹರಿದು ಬರುತ್ತಿದ್ದರೆ ಉತ್ತರ ಕನ್ನಡಕ್ಕೆ ಅನ್ಯಾಯ-ಅತ್ಯಾಚಾರ ಆಗುತ್ತಿದೆ! ಅನುದಾನ ತರುವುದು ಸಾಯಲಿ, ಜಿಲ್ಲೆ ಬರಡಾಗದಂತೆ ತಡೆಯಬೇಕೆಂಬ ಕನಿಷ್ಟ ಕಾಳಜಿಯೂ ಉತ್ತರ ಕನ್ನಡದ ಹೇತ್ಲಾಂಡಿ ಶಾಸಕ-ಸಂಸದ-ಮಂತ್ರಿಗಳಿಗಿಲ್ಲ. ಲಾಗಾಯ್ತಿನಿಂದ ಉತ್ತರ ಕನ್ನಡದ ಪ್ರಗತಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಅಂಕೋಲಾ-ಹುಬ್ಬಳ್ಳಿ, ಹಾವೇರಿ-ಶಿರಸಿ ಮತ್ತು ತಾಳಗುಪ್ಪ-ಸಿದ್ಧಾಪುರ ರೈಲು ಮಾರ್ಗ ಹಲವು ವರ್ಷದಿಂದ ಬರೀ ಕನಸಾಗೇ ಕಾಡುತ್ತಿದೆ. ಉತ್ತರ ಕನ್ನಡಕ್ಕೆ ತೀರಾ ಹತ್ತಿರದಲ್ಲಿರುವ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ರೈಲು ಟರ್ಮಿನಲನ್ನು ಯಡ್ಡಿ ಪರ್ವದಲ್ಲಿ ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಕಿತಾಪತಿ ನಡೆಯುತ್ತಿದೆ. ತಾಳಗುಪ್ಪ ಜಂಕ್ಷನ್ ಆಗಿದ್ದರೆ ಈ ರೈಲು ಮಾರ್ಗ ಸಿದ್ಧಾಪುರದವರೆಗೆ ವಿಸ್ತರಿಸಲು ಅನುಕೂಲವಾಗುತ್ತಿತ್ತು.
ಈಗ ಅದಕ್ಕೂ ಕಲ್ಲು ಹಾಕಲಾಗುತ್ತಿದೆ. ಜಂಕ್ಷನ್ ಸ್ಥಳಾಂತರಕ್ಕೆ ಸಾಕ್ಷಾತ್ ಸಿಎಂ ಸಾಹೇಬರೇ ಒಪ್ಪಿಗೆ ಕೊಟ್ಟಿದ್ದಾರೆ. ತಾಳಗುಪ್ಪ-ಸಿದ್ಧಾಪುರ ರೈಲು ಮಾರ್ಗಕ್ಕೆಂದು ಅಂದಿನ ರೈಲು ಮಂತ್ರಿ ಸುರೇಶ್ ಪ್ರಭು 320 ಕೋಟಿ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಈ ಹಣ ಎಲ್ಲಿ ಹೋಯಿತೆಂದು ಸಂಸದ ಅನಂತ್ಮಾಣಿಗೂ ಗೊತ್ತಾಗಿಲ್ಲ. ಉತ್ತರ ಕನ್ನಡದ ಅಭಿವೃದ್ಧಿಗಾಗೇ ಅವತಾರ ಎತ್ತಿದ್ದೇನೆಂದು ಒಣ ಘರ್ಜನೆ ಮಾಡುವ ಮಾಣಿ ಮೋದಿ ಮಂತ್ರಿಗಿರಿಯಿಂದ ತೆಗೆದುಹಾಕಿದ ಕ್ಷಣದಿಂದಲೇ ಬಿಲ ಸೇರಿಕೊಂಡಿದ್ದಾನೆ. ಬನವಾಸಿ ಅಪಹರಿಸುವ ಸುದ್ಧಿ ಕೇಳಿ ಜನರು ಬೀದಿಗಿಯಲು ಅಣಿಯಾದರೂ ಶಿರಸಿ ಶಾಸಕ ಕಂ ಸ್ಪೀಕರ್ ಕಾಗೇರಿಯಾಗಲಿ, ಬನವಾಸಿಯ ‘ಅನರ್ಹ’ ಶಾಸಕ ಶಿವರಾಮ ಹೆಬ್ಬಾರನಾಗಲಿ, ಶಿರಸಿಯಲ್ಲೇ ಐಷಾರಾಮಿ ಬಂಗಲೆ ಕಟ್ಟಿಕೊಂಡು ವಾಸಿಸುತ್ತಿರುವ ಸ್ವಯಂ ಘೋಷಿತ ದೇಶಭಕ್ತ ಅನಂತ್ಮಾಣಿಯಾಗಲಿ ತುಟಿಪಿಟಿಕ್ ಅಂದಿಲ್ಲ.
ಗುರುವಾರ 10ನೇ ತಾರೀಖಿನಂದು ಬನವಾಸಿ ಮತ್ತು ಸುತ್ತಲಿನ ಹಳ್ಳಿಗರು ಸಹಸ್ರಾರು ಸಂಖ್ಯೆಯಲ್ಲಿ ಮಧುಕೇಶ್ವರ ದೇವಾಲಯದ ಅಂಗಳದಲ್ಲಿ ಜಮೆಯಾಗಿ ಬನವಾಸಿ ಹೈಜಾಕ್ ಮಾಡದಂತೆ ಎಚ್ಚರಿಕೆಯ ರ್ಯಾಲಿ ನಡೆಸಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದಿರುವ ಅನರ್ಹ ಶಾಸಕ ಹೆಬ್ಬಾರ್ `ಬನವಾಸಿ ಶಿಕಾರಿಪುರಕ್ಕೆ ಸೇರಿಸುವ ಸುದ್ದಿ ಸುಳ್ಳೆಂದು’ ತಿಪ್ಪರಲಾಗ ಹೊಡೆದಿದ್ದಾನೆ. ಉಪಚುನಾವಣೆಯಲ್ಲಿ ಬನವಾಸಿ ಭಾನ್ಗಡಿ ತನಗೆ ದುಬಾರಿ ಆಗಬಾರದೆಂಬ ಭಯವೇ ಹೊರತು ಕ್ಷೇತ್ರದ ಬಗ್ಗೆ ಪ್ರಾಮಾಣಿಕ ಕಾಳಜಿಯೇನಿಲ್ಲ ಈ ರಾಜಕಾರಣಿಗೆ.
ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ವರ್ಷಗಳು ಉರುಳಿದರೂ ಹೆಬ್ಬಾರ್ನ ಅಯೋಗ್ಯತೆಯಿಂದಾಗಿ ಅರ್ಧಕಾಸಿನ ಪ್ರಯೋಜನವಾಗಿಲ್ಲ. ಬನವಾಸಿಯನ್ನು ತಾಲ್ಲೂಕು ಮಾಡಿಯೆಂದು ಜನ ಬೊಬ್ಬೆ ಹೊಡೆಯುತ್ತಿದ್ದರೂ ಶಾಸಕನಾಗಿದ್ದ ಹೆಬ್ಬಾರ್ಗೆ ಅಡ್ಡದಾರಿಯಲ್ಲಿ ಮಂತ್ರಿಯಾಗುವುದೇ ಮುಖ್ಯವಾಗಿತ್ತು.


