ನಟ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ತಂಡಕ್ಕೆ ಎದುರಾಗಿದ್ದ ಸಂಕಷ್ಟ ನಿವಾರಣೆಯಾಗಿದೆ. ಚಿತ್ರದ ಶೂಟಿಂಗ್ ಗೆಂದು ಪೊಲ್ಯಾಂಡ್ ಗೆ ಹೋಗಿದ್ದ ವೇಳೆ ಕ್ಯಾಷಿಯರ್ ಬಾಲಚಂದ್ರ, ಸಹ ನಿರ್ದೇಶಕ ಪ್ರಸನ್ನ ಅವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಮುಂಬೈ ಮೂಲದ ಏಜೆಂಟ್ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟು ಇಬ್ಬರನ್ನೂ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈಗ ಇಬ್ಬರನ್ನು ಬಿಡುಗಡೆ ಮಾಡಲಾಗಿದ್ದು, ಇಬ್ಬರೂ ರಾಜ್ಯಕ್ಕೆ ವಾಪಸ್ಸಾಗುತ್ತಿದ್ದಾರೆ.
ಬಾಲಚಂದ್ರ ಮತ್ತು ಪ್ರಸನ್ನ ಅವರನ್ನು ಒತ್ತೆಯಾಳಾಗಿರಿಸಿಕೊಂಡಿರುವ ಬಗ್ಗೆ ನಿರ್ಮಾಪಕ ಸೂರಪ್ಪ ಬಾಬು, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರು ಹಿನ್ನಲೆ ಪೊಲ್ಯಾಂಡ್ ಇಂಟರ್ ಫೊಲ್ ಅಧಿಕಾರಿಗಳ ಜತೆ ಕಮೀಷನರ್ ಚರ್ಚೆ ನಡೆಸಿ, ಬಿಡುಗಡೆಗೊಳಿಸುವಂತೆ ಪತ್ರ ರವಾನಿಸಿದ್ದರು. ಪತ್ರ ತಲುಪುತ್ತಿದ್ದಂತೆ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ.
ಮುಂಬೈ ಮೂಲದ ಏಜೆಂಟ್, ಒಟ್ಟು 95 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಹೆಚ್ಚು ಹಣ ಕೊಡಲು ನಿರಾಕರಿಸಿದ್ದಕ್ಕೆ ಚಿತ್ರತಂಡ ಉಳಿದುಕೊಂಡಿದ್ದ ಹೋಟೆಲ್ ಬಳಿ ಬಂದಿದ್ದ ಏಜೆನ್ಸಿ, ಕ್ಯಾಷಿಯರ್ ಬಾಲಚಂದ್ರ ಮತ್ತು ಸಹ ನಿರ್ದೇಶಕ ಪ್ರಸನ್ನ ಅವರನ್ನು ಕರೆದುಕೊಂಡು ಹೋಗಿ, ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಚಿತ್ರೀಕರಣ ಮುಗಿಸಿದ ದಿನ 50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಚಿತ್ರತಂಡ, ನಂತರ ನಿರ್ಮಾಪಕರಿಗೆ ಕರೆ ಮಾಡಿ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತಿದ್ದ ನಿರ್ಮಾಪಕ ಸೂರಪ್ಪ ಬಾಬು, ಪೊಲೀಸರಿಗೆ ದೂರು ನೀಡಿದ್ದರು. ಈಗ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ.